Advertisement

ನಮೋ ಎನ್ನಿ:ಡ್ಯಾಂ ಕಲ್ಲೇಶ್ವರನಿಗೆ 

02:47 PM Dec 02, 2017 | |

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಗಡಿ ಪ್ರದೇಶದ ಡ್ಯಾಂ ಹೊಸೂರಿನ ಜಲಾಶಯದ ದಡದಲ್ಲಿರುವ ಶ್ರೀಕಲ್ಲೇಶ್ವರ ದೇವಾಲಯ ಅತ್ಯಂತ ಅಕರ್ಷಕವಾಗಿದೆ. ನಿತ್ಯ ಪ್ರವಾಸಿಗರನ್ನು, ಭಕ್ತರನ್ನು ಸೆಳೆಯುತ್ತಿದೆ.

Advertisement

 ಗೌತಮಪುರ ಗ್ರಾಮದ  ಹೊಳೆಗೆ ಅಡ್ಡಲಾಗಿ ಡ್ಯಾಂ ನಿರ್ಮಾಣವಾದ  ಕಾರಣ ಈ ಊರಿಗೆ ಡ್ಯಾಂ ಹೊಸೂರು ಎಂಬ ಹೆಸರು ಬಂದಿದೆ. ಪ್ರಾಚೀನ ಕಾಲದಲ್ಲಿ ಕಣ್ಣೂರಿನ ಕಣೆÌàಶ್ವರ,ಗೌತಮಪುರದ ಗೌತಮೇಶ್ವರ, ಭೈರಾಪುರದ ಬೀರೇಶ್ವರ ಮತ್ತು ಸಿದ್ದೇಶ್ವರ ಹಾಗೂ ಡ್ಯಾಂ ಹೊಸೂರಿನ ಶ್ರೀಕಲ್ಲೇಶ್ವರ ಇವು ಪಂಚಲಿಂಗ ಕ್ಷೇತ್ರಗಳಾಗಿ ಪ್ರಸಿದ್ಧವಾಗಿದ್ದವು. 

ಅಷ್ಟ ಮಂಗಲ ಪ್ರಶ್ನಾ ಚಿಂತನದ ಪ್ರಕಾರ ಸುಮಾರು 2000 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಶ್ರೀಮಚ್ಚೇಂದ್ರನಾಥ ಯೋಗಿಗಳು   ಮೂಲ ದುರ್ಗೆಯನ್ನು ತಮ್ಮ ಮನೋಸಂಕಲ್ಪದಲ್ಲಿ ಪ್ರತಿಷ್ಠಾಪಿಸಿ ತಪಸ್ಸು ಗೈದ ಸ್ಥಳವಾಗಿತ್ತು. ಕದಂಬ ವಂಶ ಸ್ಥಾಪಕ ಮಯೂರವರ್ಮನ ಆಡಳಿತದ ಕಾಲದಲ್ಲಿ ಈ ಸ್ಥಳದಲ್ಲಿ ನೀಲಾಂಜನ ಶಿವಲಿಂಗವಿರುವ ಅಪರೂಪದ ಶಿವ ದೇವಾಲಯ ನಿರ್ಮಿಸಲಾಗಿತ್ತು. ಕಾಲಾಂತರದಲ್ಲಿ ಕಳ್ಳರಿಂದ ಈ ಲಿಂಗ ಅಪಹರಿಸಿದ ಪರಿಣಾಮ, ಹಲವು ದುರಂತಗಳು ಸಂಭವಿಸಿತಂತೆ. 

ಸುಮಾರು 500 -600  ವರ್ಷಗಳ ಹಿಂದೆ ವಿಜಯನಗರದ ಸಾಮಂತ ರಾಜರ ಆಳ್ವಿಕೆ ಮತ್ತು ನಂತರ ಕೆಳದಿ ಅರಸರ ಕಾಲದಲ್ಲೂ ಈ ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುತ್ತಿತ್ತು ಎನ್ನಲಾಗುತ್ತದೆ.  ನಂತರ ಈ ಸ್ಥಳದಲ್ಲಿ ಆಳರಸರ ನಡುವೆ ನಡೆದ ಕಾಳಗದಲ್ಲಿ ಹೊಸೂರಿನ ಜನವಸತಿ ಪ್ರದೇಶ, ಕಲ್ಲೇಶ್ವರ ದೇವಾಲಯ ಸಂಪೂರ್ಣ ನಾಶವಾಗಿತ್ತು  ಎನ್ನುತ್ತಾರೆ ಇತಿಹಾಸಕಾರರು. ಇದರಿಂದಾಗಿ ಈ ದೇವರಿಗೆ ಪೂಜೆ ಪುನಸ್ಕಾರಗಳಿಲ್ಲದೆ ದೇವರ ಶಕ್ತಿ ಉಗ್ರ ಸ್ವರೂಪ ಪಡೆದಿತ್ತು. ಸುಮಾರು 60 ವರ್ಷಗಳ ಹಿಂದೆ ಇಲ್ಲಿ ಅಣೆಕಟ್ಟು ಕಟ್ಟುವಾಗ ಶ್ರೀಕಲ್ಲೇಶ್ವರ ದೇವರ ಗುಡಿ ನೀರಿನಲ್ಲಿ ಮುಳುಗಿತು. ದೇವರ ವಿಗ್ರಹವನ್ನು ಅಣೆಕಟ್ಟಿನ ಎಡದಂಡೆಯಲ್ಲಿ ಇಡಲಾಗಿತ್ತು. ಡ್ಯಾಂ ಹೊಸೂರು ಮತ್ತು ಸುತ್ತ ಮುತ್ತಲ ವ್ಯಾಪ್ತಿಯ ಹಲವು ಕುಟುಂಬಗಳು ಪದೇ ಪದೇ ಕಷ್ಟ-ನಷ್ಟ ಮತ್ತು ಹಲವು ಮಾರಣಾಂತಿಕ ರೋಗಗಳಿಗೆ ತುತ್ತಾಗಿದ್ದರು.

 ಈ ಬಗ್ಗೆ ಹಲವೆಡೆ ಭವಿಷ್ಯ ಕೇಳಿಸಿದಾಗ ಗ್ರಾಮ ದೇವತೆ ಶ್ರೀಕಲ್ಲೇಶ್ವರನು ಮುನಿದಿರುವ ಕಾರಣದಿಂದಲೇ ತೊಂದರೆಗಳು ಎದುರಾಗುತ್ತಿವೆ. ದೇವಾಲಯ ನಿರ್ಮಾಣ ಮತ್ತು ನಿತ್ಯ ಪೂಜೆಯ ವ್ಯವಸ್ಥೆಯಾದರೆ ಎಲ್ಲಾ ಕಷ್ಟ ನಿವಾರಣೆಯಾಗುವುದಾಗಿ ತಿಳಿದು ಬಂದಿತು. ಇದಕ್ಕಾಗಿ 2009ರ ಸುಮಾರಿನಲ್ಲಿ ವರ್ಷಗಳಿಂದ ಸ್ಥಳೀಯ ಗ್ರಾಮಸ್ಥರು ಜೀರ್ಣೋದ್ಧಾರ ಸಮಿತಿ ರಚಿಸಿ ಅತ್ಯಂತ ಶಾಸ್ತ್ರ ಬದ್ಧವಾಗಿ ಸಂಫ‌ೂರ್ಣ ಶಿಲಾಮಯ ದೇಗುಲ ನಿರ್ಮಿಸಿದರು. 2014 ರ ಫೆಬ್ರವರಿಯಲ್ಲಿ  ದೇವರ ವಿಗ್ರಹದ ಪುನರ್‌ ಪ್ರತಿಷ್ಠಾಪನಾ ಕಾರ್ಯಗಳು ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆದವು.

Advertisement

ಈ ದೇವಾಲಯದ ಮುಂಭಾಗದಲ್ಲಿ ಅಣೆಕಟ್ಟಿನ ಏರಿ ಇದೆ. ಎಡ ಭಾಗದಲ್ಲಿ ತಿಳಿನೀರಿನ ಅಣೆಕಟ್ಟಿನ ಜಲ ರಾಶಿಯಿದೆ. ಜಲ ರಾಶಿಗೆ ತಾಗಿಕೊಂಡಂತೆ ಮರವೊಂದರ ಬುಡದಲ್ಲಿ ಜಲದುರ್ಗೆ, ಬಲ ಭಾಗದ ಕಾಡಿನ ಮರಗಳ ನಡುವಿನ ಆಲದ ಮರದ ಬುಡದಲ್ಲಿ ವನದುರ್ಗೆ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಹಿಂಭಾಗ, ಎಡಭಾಗಗಳಲ್ಲಿ ಅಣೆ ಕಟ್ಟಿನ ನೀರು, ಗುಡ್ಡದಲ್ಲಿ ನಿಸರ್ಗ ರಮಣೀಯ ಹಚ್ಚ ಹಸಿರಿನ ಕಾಡು ಕಣ್ಣನ್ನು ತಂಪು ಮಾಡುತ್ತದೆ. 

 ದೇವರಿಗೆ ನಿತ್ಯವೂ ಬೆಳಗ್ಗೆ ಮತ್ತು ಸಂಜೆ ಪೂಜೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ನಿತ್ಯ  ರುದ್ರಾಭಿಷೇಕ, ಕಾರ್ತಿಕ ಮಾಸದಲ್ಲಿ ಭಕ್ತರಿಂದ ಸಂಜೆ ದೀಪೋತ್ಸವ ಪೂಜೆ ನೆರವೇರುತ್ತದೆ.
 ರೈತರು ತಮ್ಮ ಜಮೀನಿನಲ್ಲಿ ಸಮೃದ್ಧ ಫ‌ಸಲು ಬರಲಿ, ಕಾಡು ಪ್ರಾಣಿಗಳಿಂದ ರಕ್ಷಣೆ ಬೇಕು ಎಂದು ಇಲ್ಲಿನ ದೇವರಿಗೆ ವಿಶೇಷ ಹರಕೆ ಹೊರುತ್ತಾರೆ. 

ಫೋಟೋ ಮತ್ತು ಲೇಖನ- ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next