Advertisement

ವೀರಯ್ಯಗೆ ಸಚಿವ ಸ್ಥಾನ ನೀಡಲು ದಲಿತ ಮುಖಂಡರ ಒತ್ತಾಯ

03:57 PM Nov 16, 2019 | Suhan S |

ರಾಮನಗರ: ರಾಜ್ಯದಲ್ಲಿ ಬಿಜೆಪಿ ಪಕ್ಷದ ಏಳಿಗೆ ಯಲ್ಲಿ ಹಿರಿಯ ದಲಿತ ಮುಖಂಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಎಸ್‌.ವೀರಯ್ಯಅವರ ಪಾತ್ರವಿದ್ದು, ಅವರಿಗೆ ಸಚಿವ ಸ್ಥಾನ ಅಥವಾ ಅದಕ್ಕೆ ಸಮನಾದ ಸ್ಥಾನಮಾನ ನೀಡಬೇಕು ಎಂದು ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಎಂ.ನಾಗರಾಜು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

Advertisement

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಡಿ.ಎಸ್‌.ವೀರಯ್ಯ ಅವರು ನಾಲ್ಕು ಬಾರಿ ಬಿಜೆಪಿ ಎಸ್‌.ಸಿ.ಮೋರ್ಚಾದ ಅಧ್ಯಕ್ಷರಾಗಿ, ರಾಜ್ಯ ಕಾರ್ಯದರ್ಶಿಯಾಗಿ, ಪಕ್ಷದ ವಕ್ತಾರರಾಗಿ, 2008ರ ವಿಧಾನಸಭಾ ಚುನಾವಣೆ ಯಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಸಂಚಾಲಕ ರಾಗಿ ಕೆಲಸ ಮಾಡಿದ್ದಾರೆ. ಅಂಬೇಡ್ಕರ್‌ ಅಭಿವೃದ್ದಿ ನಿಗಮದಲ್ಲಿ ಅಧ್ಯಕ್ಷರಾಗಿ ಎಸ್‌.ಸಿ.ಸಮುದಾಯದ ಪ್ರಗತಿಗೆ ಶ್ರಮಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಹಾಗೂ ಆ ಪಕ್ಷದ ವರಿಷ್ಠರು ವೀರಯ್ಯ ಅವರ ಸೇವಾ ಜ್ಯೇಷ್ಠತೆಯನ್ನು ಪರಿಗಣಿಸಿ ಸೂಕ್ತ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಗೋವಿಂದ ಕಾರಜೋಳ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಿಸಿರುವ ಸಿಎಂ ಬಿ.ಎಸ್‌.ಯಡಿಯೂರಪ್ಪ ಬಲಗೈ ಸಮುದಾಯವನ್ನು ಕಡೆಗಣಿಸಿದ್ದಾರೆ. 2008ರಲ್ಲಿ ಡಿ.ಎಸ್‌. ವೀರಯ್ಯ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದ ಬಿಜೆಪಿ ಭರವಸೆಯನ್ನು ಈಡೇರಿಸಿಲ್ಲ. ಈಗಲಾದರು ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿ ಎಂದು ಮನವಿ ಮಾಡಿದರು.

ಡಿ.ಎಸ್‌.ವೀರಯ್ಯ ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ, ಕರ್ನಾಟಕದ ಸಮಸ್ತ ದಲಿತರ ಧ್ವನಿಯಾಗಿ ಪರಿಷತ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ಎರಡು ಬಾರಿ ಅಧಿಕಾರಕ್ಕೆ ಬಂದಾಗಲೂ ಸಚಿವರಾಗುವ ಎಲ್ಲಾ ಅರ್ಹತೆ ಹೊಂದಿರುವ ವೀರಯ್ಯ ಅವರನ್ನು ಕಡೆಗಣಿಸುತ್ತಾ ಬಂದಿರುವುದನ್ನು ದಲಿತ ಸಮುದಾಯ ಸಹಿಸುತ್ತಿಲ್ಲ. ಇನ್ನೂ ಮುಂದಾದರೂ ಬಿಜೆಪಿ ವರಿಷ್ಠರು ತಮ್ಮ ತಪ್ಪನ್ನು ಅರಿತುಕೊಂಡು ವೀರಯ್ಯ ಅವರಿಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದರು.

ಪ್ರತಿಭಟನೆಯ ಎಚ್ಚರಿಕೆ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಸಂಘಟನೆಗಳ ಒಕ್ಕೂಟದ ರಾಮನಗರ ಜಿಲ್ಲಾಧ್ಯಕ್ಷ ಚಲುವರಾಜು ಮಾತನಾಡಿ, ಸ್ವಂತ ವರ್ಚಸ್ಸು ಹಾಗೂ ಸಂಘಟನಾ ಶಕ್ತಿಯಿಂದ ರಾಜಕೀಯವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಡಿ.ಎಸ್‌.ವೀರಯ್ಯ ಆರಂಭದಿಂದಲೂ ದಲಿತ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಂಘಟನೆ, ರಾಜ್ಯದ ದಲಿತ ಸಮುಯದಾಯಗಳ ಸೌಲಭ್ಯಗಳಿಗಾಗಿ ಹೋರಾಟ ಮಾಡಿದವರು.

Advertisement

ಇಂತಹ ಉತ್ತಮ ನಾಯಕತ್ವವುಳ್ಳ ಅವರನ್ನು ಬಿಜೆಪಿ ಪಕ್ಷ ರಾಜಕೀಯವಾಗಿ ಕಡೆಗಣಸುತ್ತಿರುವುದು ದಲಿತ ಬಹುಜನ ಸಮಾಜದಲ್ಲಿ ನೋವು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪ.ಜಾತಿ. ಪ.ವರ್ಗಗಳ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ಶಿವಶಂಕರ್‌, ಎನ್‌.ಗೋಪಿ, ಶಿವಪ್ರಕಾಶ್‌, ವಿ. ರಾಜು, ರಂಗಸ್ವಾಮಿ, ಶಿವಲಿಂಗಯ್ಯ ಕೇತೋಹಳ್ಳಿ, ಶಿವರಾಜ್‌ ಭರಣಿ, ಡಿಪೋ ಸೂರಿ, ಚಂದ್ರು ಮತ್ತಿತರರು ಸೇರಿದಂತೆ ದಲಿತಪ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next