Advertisement

ಹೈನುಗಾರರಲ್ಲಿ ಕೋಟಿ ಕನಸು ಬಿತ್ತಿದ ಹಾಲು ವಹಿವಾಟು

01:45 AM Feb 11, 2020 | Team Udayavani |

ಹಾಲು ಉತ್ಪಾದನೆ ಹಾಗೂ ಮಾರಾಟ ಪ್ರಮುಖವಾಗಿ ನಡೆಯುತ್ತಿದ್ದ ಕಾಲ ಘಟ್ಟದಲ್ಲಿ ಪಡುಬಿದ್ರಿ ನಡ್ಸಾಲು ಹಾಲು ಉತ್ಪಾದ‌ಕರ ಸಂಘ ಸ್ಥಾಪನೆಯಾಯಿತು. ಹೈನುಗಾರಿಕೆಯನ್ನು ಲಾಭದಾಯಕವನ್ನಾಗಿಸುವ ನಿಟ್ಟಿನಲ್ಲಿ ಈ ಸಂಘದ ಪಾತ್ರ ಮಹತ್ವದ್ದು.

Advertisement

ಪಡುಬಿದ್ರಿ: ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಥಳೀಯ ಹಾಲು ಮಾರಾಟ ಉತ್ತಮ ವ್ಯವಹಾರ ನಡೆಸುತ್ತಿದ್ದ ಕಾಲದಲ್ಲಿ ಜನ್ಮ ತಳೆದಿದ್ದು ನಡ್ಸಾಲು ಹಾಲು ಉತ್ಪಾದಕರ ಸಂಘ. ಸ್ಥಳೀಯ ಹಾಲು ಮಾರಾಟ ಇಲ್ಲಿನ ಹೈನುಗಾರರಿಗೆ ಉತ್ತೇಜನ ನೀಡಿದ್ದು 17 ಮಂದಿ ಹೈನುಗಾರರು ಸೇರಿಕೊಂಡು ಸಂಘ ಸ್ಥಾಪಿಸಲು ಕಾರಣವಾಯಿತು.

1987ರಲ್ಲಿ ಆರಂಭ
1987ರಲ್ಲಿ ದಿನಕ್ಕೆ 6 ಲೀಟರ್‌ ಹಾಲಿನ ವಹಿವಾಟಿನೊಂದಿಗೆ ಶುರುವಾದ ಸಂಘ ಈಗ 193 ಸದಸ್ಯರನ್ನು ಹೊಂದಿದ್ದು ದಿನಕ್ಕೆ 380 ಲೀ. ಹಾಲಿನ ವಹಿವಾಟು ಮಾಡುತ್ತಿದೆ. ಸಾಮಾಜಿಕ ಚಟುವಟಿಕೆಗಳಲ್ಲೂ ಸಂಘ ಮುಂಚೂಣಿಯಲ್ಲಿದೆ.

ಈಗಿನ ಪಡುಬಿದ್ರಿ ಬೀಡಿನ ಅರಸರಾದ ರತ್ನಾಕರ ರಾಜ್‌ ಅರಸ್‌ ಕಿನ್ಯಕ್ಕ ಬಲ್ಲಾಳರು ಸ್ಥಾಪಕಾಧ್ಯಕ್ಷರಾಗಿದ್ದರು. ನಂತರದಲ್ಲಿ ಪಿ. ಸದಾಶಿವ ಆಚಾರ್ಯ, ವಿಠಲ ರಾವ್‌ ಗುಡ್ಡೆ ಅಂಗಡಿ, ದಿವಾಕರ ಅಂಚನ್‌ ಹಾಗೂ ಈಗ ಅಧ್ಯಕ್ಷರಾಗಿ ಉಮಾನಾಥ್‌ ಸಂಘವನ್ನು ಮುನ್ನಡೆಸುತ್ತಿದ್ದಾರೆ. ಕಾರ್ಯದರ್ಶಿಯಾಗಿ ಶಶಿಧರ ಶೆಟ್ಟಿ, ಈಗ ಪಿ.ವಿ. ಯಶೋಧರ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಪ್ರತೀ ವರ್ಷವೂ ಹಾಲು ದಿನಾಚರಣೆ, ಸಹಕಾರಿ ಸಪ್ತಾಹ ಆಚರಣೆಗಳನ್ನು ಸಂಘವು ನಡೆಸುತ್ತಿದೆ. ಸಂಘವು ತಳಿ ಅಭಿವೃದ್ಧಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ.

ಹೈನುಗಾರರಿಗೆ
ಪ್ರೋತ್ಸಾಹ
ಅತ್ಯಧಿಕ ಹಾಲು ಹಾಕುತ್ತಿರುವ ಸದಸ್ಯರನ್ನು ಗುರುತಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವರ್ಷವೂ ನೀಡಲಾಗುತ್ತಿದೆ. ಸುಜ್ಲಾನ್‌ ಫೌಂಡೇಶನ್‌ನ ನೆರವು ಮತ್ತು ಸಹಕಾರಗಳೊಂದಿಗೆ ಹೈನುಗಾರರಿಗೆ ಹಾಲಿನ ಗುಣಮಟ್ಟ ಧಾರಣೆಗೆ ಸ್ಟೀಲ್‌ ಕ್ಯಾನ್‌ ನೀಡಿಕೆ, ಇಬ್ಬರು ರೈತರಿಗೆ ಎರಡು ಉತ್ತಮ ತಳಿಯ ರಾಸುಗಳನ್ನು ಒದಗಿಸಲಾಗಿದೆ. ಈಗ ಸಂಘದ ಸದಸ್ಯರ ವ್ಯಾಪ್ತಿಯಲ್ಲಿ 300ಕ್ಕೂ ಅಧಿಕ ಹಾಲನ್ನೀಯುವ ಹಸುಗಳು ಇದ್ದು ಮಾರಾಟವಾಗಿ ಉಳಿದ ಹಾಲನ್ನು ದ. ಕ. ಹಾಲು ಉತ್ಪಾದಕರ ಒಕ್ಕೂಟಕ್ಕೆ ನೀಡಲಾಗುತ್ತಿದೆ. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನೂ ಸಂಘ ನೀಡುತ್ತಿದೆ. ನಡ್ಸಾಲು ಗ್ರಾಮ ವ್ಯಾಪ್ತಿಯಲ್ಲಿರುವ ಸದಸ್ಯರ ಸಾಮಾಜಿಕ ಬೆಳವಣಿಗೆಯಲ್ಲೂ ಸಂಘ ಉತ್ತಮ ಪಾತ್ರ ವಹಿಸಿದೆ.

Advertisement

ಸುಮಾರು 14ವರ್ಷಗಳ ಹಿಂದೆ ಸಂಘವು ಸ್ವಂತ ಜಾಗದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿಕೊಂಡಿದೆ. ದ.ಕ.ಹಾಲು ಉತ್ಪಾದಕರ ಒಕ್ಕೂಟದ ಮೂಲಕ ಹೈನುಗಳಿಗೆ ಗುಣ ಮಟ್ಟದ ಪಶು ಆಹಾರ ಪೂರೈಕೆ, ಪಶುಗಳಿಗಾಗಿ ಹಸಿರು ಹುಲ್ಲುಗಳನ್ನು ಬೆಳೆಸುವ ಹೈನುಗಾರರಿಗೆ ಪ್ರೋತ್ಸಾಹಧನ, ಹಾಲು ಹಿಂಡುವ ಯಂತ್ರವನ್ನು ನೀಡಲಾಗುತ್ತಿದೆ. ರೈತ ಕಲ್ಯಾಣ ನಿಧಿ ಟ್ರಸ್ಟ್‌ ಮೂಲಕವೂ ಹೈನುಗಾರರಿಗೆ ಪಶುಗಳ ವಿಮಾ ಪಾಲಿಸಿ ನೀಡಿಕೆ ಮತ್ತು ಪಾಲಿಸಿ ವಿತರಣೆಗಳ ಮೇಲುಸ್ತುವಾರಿಯೂ ನಡೆಯುತ್ತಿದೆ.

ಪ್ರಶಸ್ತಿ ಗರಿ
2018-19ನೇ ಸಾಲಿನಲ್ಲಿ ಒಕ್ಕೂಟದ ವತಿಯಿಂದ ನೀಡಲಾದ ಪ್ರಶಸ್ತಿಯಲ್ಲಿ ಹಾಲಿನ ಗುಣಮಟ್ಟ ಕಾಪಾಡಿಕೊಂಡದ್ದಕ್ಕಾಗಿ ಚೊಚ್ಚಲ ಪ್ರಶಸ್ತಿಯನ್ನು ನಡಾÕಲು ಹಾಲು ಉತ್ಪಾದಕರ ಸಹಕಾರ ಸಂಘವು ಗಳಿಸಿದೆ. ಕಳೆದ ಆರೇಳು ವರ್ಷಗಳಿಂದ ಸಂಘವು ಅಸಾಧಾರಣ ಪ್ರಗತಿಯನ್ನು ಕಂಡಿದ್ದು ವಾರ್ಷಿಕ ಸುಮಾರು 50 ಲಕ್ಷ ರೂ. ವಹಿವಾಟನ್ನೂ ದಾಖಲಿಸಿದೆ.

ಹೈನುಗಾರರಿಗೆ ಉತ್ತಮ ಬೋನಸ್‌, ಒಕ್ಕೂಟದಿಂದ ಸದಸ್ಯರಿಗೆ ಬೇಕಾದಂತೆ ಸಹಕಾರಗಳನ್ನು ಒದಗಿಸುತ್ತ ವೈಯಕ್ತಿಕ ಬಹುಮಾನಗಳನ್ನು ಹೆಚ್ಚಿನ ಹಾಲು ಹಾಕಿದವರಿಗೆ, ಉತ್ತಮ ರಾಸು ಹೊಂದಿದವರಿಗೆ ನೀಡುತ್ತ ಬರುತ್ತಿದ್ದೇವೆ. ಒಕ್ಕೂಟದಿಂದ ಪ್ರಶಂಸೆಗೆ ಪಾತ್ರವಾಗಿರುವ ಸಂಘ ಸದಸ್ಯರ ಏಳ್ಗೆಗೆ ಬೆಂಬಲವಾಗಿದೆ.
– ಉಮಾನಾಥ್‌ ನುಡಿನಡ್ಸಾಲು,
ಅಧ್ಯಕ್ಷ

ಅಧ್ಯಕ್ಷರು:
ರತ್ನಾಕರ ರಾಜ್‌ ಅರಸ್‌ ಕಿನ್ಯಕ್ಕ ಬಲ್ಲಾಳರು , ಪಿ. ಸದಾಶಿವ ಆಚಾರ್ಯ, ವಿಠಲ ರಾವ್‌ ಗುಡ್ಡೆ ಅಂಗಡಿ, ದಿವಾಕರ ಅಂಚನ್‌ ಹಾಗೂ ಪ್ರಸ್ತುತ ಉಮಾನಾಥ್‌
ಕಾರ್ಯದರ್ಶಿಗಳು:
ಶಶಿಧರ ಶೆಟ್ಟಿ, ಪ್ರಸ್ತುತ‌ ಪಿ.ವಿ. ಯಶೋಧರ

- ಆರಾಮ

Advertisement

Udayavani is now on Telegram. Click here to join our channel and stay updated with the latest news.

Next