Advertisement

ಅಪ್ಪನ ಲೋಟ ಮತ್ತು ಇತರ ಸಂಗತಿಗಳು

07:08 PM Dec 05, 2019 | mahesh |

ಹಾಲು ಕುಡಿಯುತ್ತಿದ್ದ ಲೋಟ ಖಾಲಿ ಆದ ಕೂಡಲೇ ತಿರುಗಿಸಿ ಮುರುಗಿಸಿ ನೋಡಿದ್ದರು ಅಪ್ಪ. “”ಇದು ನನ್ನ ಲೋಟ ಅಲ್ವಾ? ಈ ಲೋಟದಲ್ಲಿ ಕುಡಿದರೆ ಗಂಟಲು ಕೂಡ ಪಸೆ ಆಗುವುದಿಲ್ಲ?”
“”ನಿಮ್ಮದೇ ಲೋಟ ಅದು. ಅದರಲ್ಲಿ ನಿಮ್ಮ ಹೆಸರು ಕೂಡ ಇದೆ ನೋಡಿ”  ನಮ್ಮ ಮನೆಯಲ್ಲಿ ನಾವು ಉಪಯೋಗಿಸುತ್ತಿದ್ದ ಸ್ಟೀಲ್‌ ಲೋಟಗಳಿಗೆ ನಮ್ಮ ನಾಲ್ವರ ಹೆಸರು ಬರೆಸಿದ್ದ ಸ್ಟೀಲಿನ ಯುಗವಿನ್ನೂ ಅಡುಗೆ ಮನೆಯೊಳಗಿಳಿಯುತ್ತಿದ್ದ ಕಾಲವದು.  ಮತ್ತೂಮ್ಮೆ ನೋಡಿದರು. “”ಹೌದು ಹೆಸರು ನನ್ನದೇ ಇದೆ” ಬಗೆಹರಿಯಲಾರದ ಸಮಸ್ಯೆಯೆಂಬಂತೆ ಲೊಚಗುಟ್ಟುತ್ತ ಹೇಳಿದರು.

Advertisement

“”ಈಗೇನು? ಇನ್ನೊಂದು ಲೋಟ ಕುಡೀಲಿಕ್ಕೆ ಬೇಕಾ?”  “”ಬೇಡ, ಬೇಡ, ಸಾಕು. ಒಂದೇ ಲೋಟ ಒಂದು ಹೊತ್ತಿಗೆ” ಅಪ್ಪ ಮಾತನಾಡುತ್ತಲೇ ಕ್ಲಿನಿಕ್ಕಿಗೆ ನಡೆದರು. ವಾರ ಪೂರ್ತಿಯೂ ಕ್ಲಿನಿಕ್ಕಿನ ಬಾಗಿಲು ತೆಗೆದೇ ಇರುತ್ತಿತ್ತು. ನಮಗೋ ಆದಿತ್ಯವಾರದ ರಜೆ. ಅಮ್ಮ ತಿಂಡಿ ತಿಂದ ತಟ್ಟೆ ಲೋಟ, ಪಾತ್ರೆ ಎಲ್ಲವನ್ನು ದೊಡ್ಡದೊಂದು ಬುಟ್ಟಿಗೆ ಹಾಕಿ ಮನೆಯ ಹೊರಗಿಟ್ಟಳು. ಮತ್ತೂಂದರಲ್ಲಿ ಕೊಳೆಯಾದ ಬಟ್ಟೆಗಳು. ಆಗಿನ್ನೂ ಅವಳು ತನ್ನ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದಳಷ್ಟೇ. ಹಾಗಾಗಿ, ಎರಡು ತಿಂಗಳಿನಿಂದ ಮನೆ ಕೆಲಸಕ್ಕೊಬ್ಬರು ಬಂದಿದ್ದರು. ಬಟ್ಟೆಯ ಬುಟ್ಟಿ ತಲೆಗೆ, ಪಾತ್ರೆಗಳದ್ದು ಸೊಂಟದಲ್ಲಿಟ್ಟು ಬ್ಯಾಲೆನ್ಸ್‌ ಮಾಡುತ್ತ ಅವರು ನಡೆದರೆ ನಮ್ಮ ಸೈನ್ಯ ಅವರ ಹಿಂದೆಯೇ. ಮನೆಯ ಪಕ್ಕದಲ್ಲೇ ಹರಿಯುತ್ತಿದ್ದ ಹೊಳೆ. ಹೊಳೆಯ ಬದಿಯಲ್ಲಿ ಸಾಲಾಗಿ ಇದ್ದ ಬಟ್ಟೆ ಒಗೆಯುವ ಮೂರ್ನಾಲ್ಕು ಕಲ್ಲುಗಳು. ಒಂದೆರಡರಲ್ಲಾಗಲೇ ಅಕ್ಕಪಕ್ಕದವರು ಬಟ್ಟೆ ಹರಡಿ ಒಗೆಯಲು ಶುರುವಾಗಿತ್ತು.

ಕೈಯಲ್ಲಿದ್ದ ಬುಟ್ಟಿಯನ್ನು ಕಲ್ಲಿನ ಪಕ್ಕದಲ್ಲಿರಿಸಿ ಒಂದೊಂದೇ ಪಾತ್ರೆಗಳನ್ನು ಹೊರಗಿಟ್ಟರು. ದೊಡ್ಡ ಪಾತ್ರೆಯಿಂದ ಹಿಡಿದು ಚಮಚದವರೆಗೆ ಎಲ್ಲವೂ ಹೊಳೆಯ ಮರಳಿಗೆ ಒಲೆಯ ಬೂದಿ ಸೇರಿಸಿದ ಮಿಶ್ರಣದಿಂದ ಆವೃತವಾಯಿತು. ಪ್ರತಿ ಪಾತ್ರೆಯೂ ಕಲ್ಲಿನ ಮೇಲೆ ಮಲಗಿಸಲ್ಪಟ್ಟು ಕೈಯಲ್ಲಿದ್ದ ತೆಂಗಿನ ನಾರಿನಿಂದ ಬಲವಾಗಿ ತಿಕ್ಕಿಸಿಕೊಳ್ಳುತ್ತಿತ್ತು. ಪಾತ್ರೆಗಳನ್ನು ತಿರುಗಿಸುವಾಗ ಎತ್ತಿ ಎತ್ತಿ ಕಲ್ಲಿಗೆ ಅಪ್ಪಳಿಸುವುದರಿಂದಾಗಿ ಒಂದೊಂದು ಸಲಕ್ಕೂ ಒಂದೊಂದು ಹೊಸ ಆಕಾರವನ್ನು ಪಾತ್ರೆಗಳು ಪಡೆಯುತ್ತಿದ್ದವು. ಇದುವೇ ಅಪ್ಪನ ಲೋಟದಲ್ಲಿ ಹಾಲು ಕಡಿಮೆಯಾಗಲು ಕಾರಣವೆಂದು ಆಗ ಗೊತ್ತೇ ಆಗಿರಲಿಲ್ಲ.

ಲೋಟಗಳು ಈ ರೀತಿಯ ತೊಳೆಯುವಿಕೆ ಎಂಬ ಶಿಕ್ಷೆಯ ಶಿಕಾರಿಗಳಾಗಿ ನೆಟ್ಟಗೆ ನಿಲ್ಲುತ್ತಲೂ ಇರಲಿಲ್ಲ. ಅದರಲ್ಲಿ ಕಾಫಿಯೋ, ಚಹಾವೋ ಕೊಟ್ಟರೆ ಅದು ಖಾಲಿ ಆಗುವವರೆಗೆ ಕೈಯಲ್ಲಿ ಹಿಡಿದೇ ಇರಬೇಕಿತ್ತು. ಬಿಸಿ ಇದೆ ಎಂದೇನಾದರೂ ಪಕ್ಕದಲ್ಲಿಡಲು ಹೊರಟರೆ ಲೋಟ ಬಿದ್ದು ಒಳಗಿದ್ದದ್ದೆಲ್ಲ ಹರಡಿಕೊಳ್ಳುತ್ತಿತ್ತು. ಈ ಕಾರಣಕ್ಕಾಗಿಯೇ ನೆಂಟರು ಬಂದರೆ ಅವರಿಗೆ ಕೊಡಲೆಂದೇ ಸರಿಯಾದ ಆಕಾರ ಹೊಂದಿದ ಕೆಲವು ಲೋಟಗಳಿರುತ್ತಿದ್ದವು. ಅವುಗಳು ಉಳಿದ ಲೋಟದೊಂದಿಗೆ ಬೆರೆಯದೇ ಬೇರೆಯಾಗಿಯೇ ಇಡಲ್ಪಡುತ್ತಿದ್ದವು. ಅವರು ಕುಡಿಯುವುದನ್ನೇ ಕಾದಿದ್ದು ಒಳ ತೆಗೆದುಕೊಂಡು ಹೋಗಿ ಗಲಬರಿಸಿ, ಒಣಗಿದ ಬಟ್ಟೆಯಲ್ಲಿ ಒರೆಸಿ ಒಳಗಿಟ್ಟಾಗುತ್ತಿತ್ತು. ನಮಗೆಲ್ಲ ಅಂತಹ ಲೋಟದಲ್ಲಿ ಕುಡಿಯುವ ಅದೃಷ್ಟ ಸಿಗುತ್ತಿದ್ದುದು ನಾವು ಇನ್ನೊಂದು ಮನೆಗೆ ಹೋದಾಗಲೇ.

ಊರಿಂದ ಮನೆಗೆ ನೆಂಟರು ಬಂದಿದ್ದರು. ಆಗೆಲ್ಲ ದೂರದೂರಿನಲ್ಲಿದ್ದ ನಮ್ಮಲ್ಲಿಗೆ ನೆಂಟರು ಬರುವುದೆಂದರೆ ಒಂದೆರಡು ದಿನ ನಮ್ಮನೆಯಲ್ಲೇ ಉಳಿದುಕೊಳ್ಳುವ ಕ್ರಮ. ಮಕ್ಕಳಾದ ನಮಗೆ ನೆಂಟರು ಮನೆಗೆ ಬರುವುದೆಂದರೆ ಸಂಭ್ರಮ. ಆ ದಿನಗಳಲ್ಲಿ ನಮ್ಮ ಮಂಗಾಟಕ್ಕೆ ಹೆಚ್ಚು ಮಹತ್ವವಿದ್ದು ಶಾಲೆಯ ಓದು-ಬರಹಗಳಂತಹ ಗಂಭೀರ ಕೆಲಸಗಳಿಂದ ಒಂದಿಷ್ಟು ಮುಕ್ತಿ ಸಿಗುತ್ತಿತ್ತು. ಜೋರಾದ ನಗು, ಗೌಜಿ, ಬೊಬ್ಬೆಯ ಸಡಗರಗಳೊಂದಿಗೇ ಊಟ ಮುಗಿಯಿತು. ನೆಂಟರೆದ್ದು ಕೈ ತೊಳೆಯಲು ಹೋದರು. ಯಾವಾಗಿನಿಂದ ಕೊಂಚ ಹೆಚ್ಚೇ ಇದ್ದ ಪಾತ್ರೆಪಡಗಗಳ ರಾಶಿ ನೋಡಿ, “ಮಕ್ಕಳೇ, ಸ್ವಲ್ಪ ಪಾತ್ರೆ ಒಳಗೆ ತನ್ನಿ’ ಎಂದಿದ್ದಳು ಅಮ್ಮ. “ನೀನು ಮಾಡು ನಿಂಗೇ ಹೇಳಿದ್ದು’ ಎಂಬ ನೋಟ ಅಣ್ಣನದ್ದು. “ನಾನು ಮಾತ್ರ ಯಾಕೆ ಮಾಡಲಿ, ನೀನು ಊಟ ಮಾಡಿಲ್ವಾ… ನೀನೂ ತೆಗಿ’ ಎಂಬ ಕೋಪ ನನ್ನದು. ಇಬ್ಬರೂ ಒಳಗೆ ಬಾರದ್ದು ನೋಡಿ ಅಮ್ಮನ ಬಿಪಿ ಮೇಲೇರಿತ್ತು. “ಹೆಣ್ಣುಮಕ್ಕಳು ಇದನ್ನೆಲ್ಲ ಈಗಲೇ ಕಲಿತರೆ ಒಳ್ಳೆಯದು ನೋಡು’ ಎನ್ನುವ ಉಪದೇಶ ತೂರಿದ ನೆಂಟರಿಂದಾಗಿ ಅಣ್ಣ ಪಾರಾಗಿ ಆಟದ ಬಯಲಿಗೆ ಓಡಿದ.

Advertisement

ಮರುದಿನದಿಂದಲೇ ಮನೆಯಲ್ಲಿ ಹೊಸ ಕಾನೂನು ಜಾರಿಗೆ ಬಂದಿತ್ತು. ಮಕ್ಕಳಾದ ನಾವಿಬ್ಬರೂ ನಮ್ಮ-ನಮ್ಮ ಲೋಟ ಬಟ್ಟಲುಗಳನ್ನು ನಾವು ನಾವೇ ತೊಳೆಯತಕ್ಕದ್ದು. ನಮ್ಮ ಕೆಲಸ ನಾವೇ ಮಾಡಿಕೊಳ್ಳುವ ಮುನ್ನುಡಿಯೊಂದು ಬಾಳಪುಸ್ತಕದಲ್ಲಿ ಮೂಡಿದ್ದು ಹೀಗೇ. ಅವರಿವರ ಮನೆಗೆ ಹೋದಾಗಲೆಲ್ಲ ಅಮ್ಮ ತನ್ನ ಮಕ್ಕಳ ಈ ಕೆಲಸವನ್ನು ಹೊಗಳುವುದು ಕೇಳಿದಾಗ, ಅವರೂ ಅದಕ್ಕೆ ಅಚ್ಚರಿ ಸೂಚಿಸುತ್ತ ತಲೆಯಾಡಿಸಿದಾಗ ಏನೋ ಸಾಧನೆ ಮಾಡುತ್ತಿದ್ದೇವೆ ನಾವು ಎಂಬ ಭಾವ ಮೂಡಿಸಿತ್ತು, ಈ ಪಾತ್ರೆ ತೊಳೆಯುವಿಕೆ. ಅಯ್ಯೋ ಕೆಲಸ ಮಾಡಬೇಕಲ್ಲ ಎಂಬ ಸ್ವಮರುಕಕ್ಕಿಂತ, ನನಗೂ ಮಾಡಲು ಬರುತ್ತದೆ ಎಂಬ ಹೆಮ್ಮೆಯೇ ಹೆಚ್ಚಿನದಾಗಿತ್ತು ಆಗ.

ಒಂದಿಷ್ಟು ನೀರು, ಒಂದಿಷ್ಟು ಸೋಪಿನಪುಡಿ, ಕೊಳೆ ತಿಕ್ಕಿ ತೊಳೆದರೆಲ್ಲÉ ಫ‌‌ಳಫ‌‌ಳ ಇದು ನಿತ್ಯವೂ ಆಗದು ಬಿಡಿ. ಅಲ್ಲೊಂದು ಚೂರು ಇಲ್ಲೊಂದು ಚೂರು ಬಾಕಿ ಉಳಿದರೆ ನಮ್ಮನ್ನು ಬಚಾವ್‌ ಮಾಡಿಕೊಳ್ಳಲು ಪುರಾಣದ ಸಹಾಯ ನಮ್ಮಲ್ಲೇ ಇದೆ. ದ್ರೌಪದಿಯ ಅಕ್ಷಯ ಪಾತ್ರೆ ಯೊಳಗುಳಿದಿದ್ದ ಒಂದಗುಳು ಅನ್ನ ಶ್ರೀಕೃಷ್ಣನ ಹೊಟ್ಟೆ ಸೇರಿ ದೂರ್ವಾಸನ ಕೋಪಕ್ಕೆ ಸಿಲುಕಬೇಕಿದ್ದ ಪಾಂಡವರನ್ನು ಉಳಿಸಲಿಲ್ಲವೆ? ಹಾಗೆಯೇ ಇದು ಎಂದು ರಾಗ ಎಳೆದದ್ದುಂಟು.

ಎಲ್ಲಿಯವರೆಗೆ ಮನುಷ್ಯನಿಗೆ ಹೊಟ್ಟೆ ಹಸಿವು ಇರುತ್ತದೋ ಅಲ್ಲಿಯ ವರೆಗೆ ಪಾತ್ರೆ ತೊಳೆಯುವ ಕೆಲಸವೂ ಇದ್ದೇ ಇರುತ್ತದೆ. ಕಾಲ ಬದಲಾದಂತೆ ಪಾತ್ರೆಗಳ ಆಕಾರ, ಗಾತ್ರ, ಅಂದಚೆಂದಗಳು ಬದಲಾಗಬಹುದು. ಪಾತ್ರೆಗಳು ಪ್ರತಿಷ್ಠೆಯ ಸಂಕೇತಗಳೂ ಆಗಬಹುದು. ಆದರೆ, ತೊಳೆಯುವಿಕೆ ನಿಲ್ಲದು.

ಏನೇ ಆದರೂ ಮನೆಯ ಸಿಂಕ್‌ ಖಾಲಿ ಇರುವಂತೆ ನೋಡಿಕೊಳ್ಳುವುದು ಸ್ವತ್ಛ ಮನೆಯ ಲಕ್ಷಣ ಎಂದೇ ನನ್ನ ಅಭಿಮತ. ಬಹುಶಃ ಇದು ಮನದೊಳಗಿನ ಕಲ್ಮಷಕ್ಕೂ ಅನ್ವಯವೇ. ಎಲ್ಲವನ್ನೂ ಒಳಗೇ ಇರಿಸಿಕೊಂಡು ಅದು ಕೊಳೆತು ನಾರುವವರೆಗೆ ಬಿಡುವ ಬದಲು ಆಗಾಗ ಕೊಳೆಯಾಗಿದ್ದನ್ನು ಆಗಾಗಲೇ ಸ್ವತ್ಛಗೊಳಿಸಿ ಎಲ್ಲಿ ಬೇಕೋ ಅಲ್ಲಿಟ್ಟುಬಿಟ್ಟರೆ ಮನೆಗೂ ನೆಮ್ಮದಿ. ಮನಕ್ಕೂ…!

ಅನಿತಾ ನರೇಶ ಮಂಚಿ

Advertisement

Udayavani is now on Telegram. Click here to join our channel and stay updated with the latest news.

Next