Advertisement

Koratagere ಕುಡಿಯುವ ನೀರಿನ ಕೆರೆಗೆ ಡಾಬಾ ತ್ಯಾಜ್ಯ ; ತೀವ್ರ ವಾಗ್ವಾದ

03:32 PM Aug 20, 2023 | Team Udayavani |

ಕೊರಟಗೆರೆ: ಪಟ್ಟಣಕ್ಕೆ ಸರಬರಾಜು ಆಗುವ ಕುಡಿಯುವ ನೀರಿನ ಜಂಪೇನಹಳ್ಳಿ ಕೆರೆಗೆ ಡಾಬಾಗಳ ತ್ಯಾಜ್ಯ, ಕಲುಷಿತ ನೀರು ಬಿಡುವುದನ್ನು ತಡೆಗಟ್ಟಲು ಹೋದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಡಾಬಾ ಮಾಲಕರ ನಡುವೆ ಸುರಿವ ಮಳೆಯಲ್ಲೇ ವಾಗ್ವಾದದ ಬಳಿಕ ಕಾಮಗಾರಿಗೆ ತಡೆ ನಡೆಸಿದ ಘಟನೆ ನಡೆದಿದೆ.

Advertisement

ಜಂಪೇನಹಳ್ಳಿ ಕೆರೆಯ ದಂಡೆಯ ಮೇಲಿರುವ ಕೆಲವು ಡಾಬಾಗಳು ಮತ್ತು ಲಾಡ್ಜ್ ಗಳಿಂದ ಹೊರಬರುವ ಕಲುಷಿತ ನೀರು ಮತ್ತು ಮಲೀನ ತ್ಯಾಜ್ಯ ಬಿಡುವುದನ್ನು ತಡೆಗಟ್ಟಲು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಭಾಗ್ಯಮ್ಮ, ಆರೋಗ್ಯಾಧಿಕಾರಿ ಮಹಮದ್ ಹುಸೇನ್ ಸೇರಿದಂತೆ ಸಿಬಂದಿಗಳು ಸಾರ್ವಜನಿಕರ ದೂರಿನ ಮೇಲೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆಗೆ ಮುಂದಾದರು, ಆಗ ಡಾಬಾಗಳ ಮಾಲಕರು ಈ ಕೆರೆಯ ಜಾಗ ನಮ್ಮದು. ಇದಕ್ಕೆ ಸರ್ಕಾರದಿಂದ ಪರಿಹಾರ ಬಂದಿಲ್ಲ. ನಮ್ಮ ಜಮೀನಿನಲ್ಲಿ ಡಾಬಾ ಕಟ್ಟಿಕೊಂಡಿದ್ದೇವೆ. ನಮಗೆ ಸೇರಿದ ಜಮೀನಿಗೆ ಬರಲು ನೀವು ಯಾರು ಎಂದು ಪ್ರಶ್ನಿಸಿದರು.

ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೆರೆಯ ಜಾಗ ಸಾರ್ವಜನಿಕರ ಹಿತಾಸಕ್ತಿಗೆ ಸೇರಿದ್ದು, ನಿಮಗೆ ಪರಿಹಾರ ದೊರೆಯುವುದಿಲ್ಲ ಎಂದರೆ ಸರ್ಕಾರವನ್ನು ಕೇಳಬೇಕು, ಕೆರೆ ಮತ್ತು ಕೋಡಿಯನ್ನು ಮುಚ್ಚಿದ್ದು ಮೊದಲ ತಪ್ಪಾದರೆ, ನಿಮ್ಮ ಡಾಬಾ ಮತ್ತು ಹೋಟೆಲ್‌ಗಳ ಕಲುಷಿತ ನೀರನ್ನು ಕೆರೆಗೆ ಬಿಡುತ್ತಿದ್ದೀರಿ, ಡಾಬಾದಲ್ಲಿನ ಉಪಯೋಗಿಸುವ ಮದ್ಯದ ಖಾಲಿ ಬಾಟಲ್ ಮತ್ತುಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯವನ್ನು ಕೆರೆಗೆ ಹಾಕಿದ್ದೀರಿ, ಇದು ಕಾನೂನು ರೀತಿಯಲ್ಲಿ ಅಪರಾದ. ಈ ಕೆರೆಯ ನೀರನ್ನು ಪಟ್ಟಣದ ಸಾರ್ವಜನಿಕರ ಕುಡಿಯುವ ನೀರಿಗೆ ಬಳಸಲಾಗುತ್ತಿದ್ದು ನೀವು ತ್ಯಾಜ್ಯ ಬಿಟ್ಟರೆ ಜನರ ಆರೋಗ್ಯದ ಗತಿ ಏನು? ಕೂಡಲೆ ಇದನ್ನು ನಿಲ್ಲಿಸಬೇಕು. ತಪ್ಪಿದರೆ ನಮ್ಮ ಕರ್ತವ್ಯ ಮಾಡುತ್ತೇವೆ ಎಂದರು.

ಕಲುಷಿತ ನೀರಿನ ಪೈಪ್‌ಗಳನ್ನು ಮುಚ್ಚಿಸಿ ಕೆಲವು ಕಡೆ ತೆರೆವುಗೊಳಿಸಿದರು. ಸ್ಥಳಕ್ಕೆ ಕೊರಟಗೆರೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸುರಿಯ ಮಳೆಯಲ್ಲೇ ಕಾರ್ಯನಿರ್ವಹಿಸಿದ ಆಧಿಕಾರಿ

Advertisement

ಕೆರೆಯ ಕಲುಷಿತ ನೀರಿನ ಪೈಪ್‌ಗಳನ್ನು ಮುಚ್ಚಿಸುವ ಕಾರ್ಯದಲ್ಲಿ ಮಳೆಯು ಜೋರಾಗಿ ಸುರಿಯುತ್ತಿತ್ತು. ಡಾಬಾದ ಮಾಲಕ ಕೊಡೆ ಹಿಡಿದುಕೊಂಡು ತಡೆ ಒಡ್ಡುತ್ತಿದ್ದರೆ ಮುಖ್ಯಾಧಿಕಾರಿ ಭಾಗ್ಯಮ್ಮ ಮತ್ತು ಅಧಿಕಾರಿ ವರ್ಗ ಸುರಿವ ಮಳೆಯಲ್ಲೇ ನೆನೆದು ಕೊಂಡು ಪೈಪ್ ಮುಚ್ಚಿಸುವ ಕೆಲಸ ಮಾಡಿದರು.

‘ಕೆರೆಯನ್ನು ಮುಚ್ಚುವ ಅಧಿಕಾರ ಯಾರಿಗೂ ಇಲ್ಲ, ಆದರೆ ಇಲ್ಲಿ ಕೆಲವರು ಪರಿಹಾರ ಬಂದಿಲ್ಲ ಎಂಬ ನೆಪ ಇಟ್ಟುಕೊಂಡು ಕೆರೆಯನ್ನು ಮುಚ್ಚಿ ಡಾಬಾ ನಿರ್ಮಾಣ ಮಾಡಿ ಅದರ ಕಲುಷಿತ ನೀರು ಮತ್ತು ತ್ಯಾಜ್ಯವನ್ನು ಪಟ್ಟಣದ ಸಾರ್ವಜನಿರು ಕುಡಿಯುವ ನೀರಿನ ಕೆರೆ ಬಿಡುತ್ತಿದ್ದಾರೆ, ಈ ಬಗ್ಗೆ ಡಾಬಾದವರಿಗೆ ಹಲವು ಬಾರಿ ಮೌಖಿಕ ಮತ್ತು ಲಿಖಿತ ನೋಟಿಸ್ ನೀಡಿದ್ದೇವೆ ಅದರೂ ಅವರು ಕೆರೆಯನ್ನು ಕಲುಶುತ ಮಾಡುತ್ತಿದ್ದಾರೆ ಇದು ಕಾನೂನಿನ ರೀತಿಯಲ್ಲಿ ಅಪರಾಧ’ ಎಂದು ಪ.ಪಂ.ಮುಖ್ಯಾಧಿಕಾರಿ ಭಾಗ್ಯಮ್ಮ ಹೇಳಿದರು.

”ಕೆರೆಯ ಜಾಗ ನಮ್ಮ ಪೂರ್ವಿಕರದು ನಮ್ಮಗಳಿಗೆ ಪರಿಹಾರ ಬಂದಿಲ್ಲ ಅದಕ್ಕೆ ನಾವು ನಮ್ಮ ಜಮೀನಿಲ್ಲಿ ಡಾಬಾ ನಿರ್ಮಿಸಿ ಜೀವನ ನಡೆಸುತ್ತಿದ್ದೇವೆ, ಎತ್ತಿನಹೊಳೆ ಕಾಮಗಾರಿಯಿಂದ ಇಷ್ಟೆಲ್ಲಾ ಅವಾಂತರವಾಗಿದೆ, ತ್ಯಾಜ್ಯಗಳನ್ನು ಇನ್ನು ಮುಂದೆ ಹಾಕದೆ ಬೇರೆಡೆ ಹಾಕುತ್ತೇವೆ, ಕೆರೆ ಕೊಡಿ ಸಹ ನಮ್ಮದೇ’ಎಂದು ಡಾಬಾ ಮಾಲಿಕ ಶಿವಕುಮಾರ್ ಹೇಳಿದ್ದಾರೆ.

ಇಚ್ಚಾಶಕ್ತಿ ಕೊರತೆ
ಕೊರಟಗೆರೆ ಪಟ್ಟಣದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ನಗರ ಬೆಳೆಯುತ್ತಿದೆ, ಕುಡಿಯುವ ನೀರಿಗೆ ಅಗ್ರಹಾರ ಮತ್ತು ಜಂಪೇನಹಳ್ಳಿ ಕೆರೆಯನ್ನು ಅವಲಂಬಿಸಿದೆ, ಅದರೆ ಕೆರೆಯ ಒತ್ತುವರಿ ಮತ್ತು ಜಮೀನು ಮಾಲಿಕರ ಪರಿಹಾರ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ ಇನ್ನಾದರೂ ಜನಪ್ರತಿನಿಧಿಗಳು ಇದನ್ನು ಪರಿಹರಿಸ ಬೇಕಿದೆ.

ಭೂಸ್ವಾದೀನ ಕಡತದ ಗಂಟೇ ಮಾಯ
ಕೆಲವು ಮಾಹಿತಿಗಳ ಪ್ರಕಾರ ಕಳೆದ 8-9 ವರ್ಷಗಳ ಹಿಂದೆ ಮಧುಗಿರಿ ಉಪವಿಭಾಗಾಧಿಕರಿಗಳ ಕಛೇರಿಯಿಂದ ಕೊರಟಗೆರೆ ತಾಲೂಕು ಕಛೇರಿಗೆ ಜಂಪೇನಹಳ್ಳಿ ಕೆರೆಯ ಭೂ ಸ್ವಾದೀನದ ಕಡತಗಳ ಗಂಟು ಬಂದಿದ್ದು ಕೆಲವು ರಾಜಕೀಯ ಪಟ್ಟ ಭದ್ರ ಹಿತಾಶಕ್ತಿಗಳಿಂದ ಗಂಟು ಕಾಣೆಯಾಗಿದೆ ಎಂದು ಹೇಳಲಾಗುತ್ತಿದೆ, ಇದರ ಸತ್ಯಾಸತ್ಯೆಗಳನ್ನು ಅಧಿಕಾರಿಗಳು ಪರಿಶೀಲಿಸಬೇಕಿದೆ.

ಅಬಕಾರಿ ಇಲಾಖೆಯ ಕೊಡುಗೆ
ಜಂಪೇನಹಳ್ಳಿ ಕೆರೆಯಲ್ಲಿ ಮೂಟೆಗಟ್ಟಲೆ ಅಬಕಾರಿಯ ಪ್ಲಾಸ್ಟಿಕ್ ಮತ್ತು ಖಾಲಿ ಬಾಟಲ್‌ನ ತ್ಯಾಜ್ಯಗಳು ಬಿದ್ದಿದ್ದು ಈ ಫ್ಯಾಮಿಲಿ ಡಾಬಾ ಗಳಲ್ಲಿ ಮದ್ಯ ಸೇವಿಸಲು ಅವಕಾಶ ವಿಲ್ಲದಿದ್ದರೂ ಹಲವು ವರ್ಷಗಳಿಂದ ಇಲ್ಲಿ ಮಧ್ಯಮಾರಾಟವಾಗುತ್ತಿದೆ, ಈ ಸಂಗತಿಯು ಕೊರಟಗೆರೆ ತಾಲೂಕಿನ ಅಬಕಾರಿ ಅಧಿಕಾರಿ ಶ್ರೀಲತಾ ರವರಿಗೆ ತಿಳಿದಿದ್ದರೂ ಎಲ್ಲವು ಮಾಮೂಲಿಯಲ್ಲಿ ನಡೆದುಕೊಂಡು ಹೋಗುತ್ತಿತ್ತೇ ಎಂದು ಸಾರ್ವಜನಿಕರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಕೆರೆಯ ಕಲುಷಿತಕ್ಕೆ ಅಬಕಾರಿ ಇಲಾಖೆಯು ಕಾರಣವಾಗಿದೆ ಎನ್ನಲಾಗಿದೆ ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.

ಈ ಘಟನೆ ಗಂಭೀರ ವಿಷಯವಾಗಿದ್ದು ಜನರ ಆರೋಗ್ಯ ಮತ್ತು ಮುಂದಿನ ಕುಡಿಯುವ ನೀರಿನ ಭವಿಷ್ಯವಾಗಿದೆ, ಅದೇ ರೀತಿ ಡಾಬಾ ಮಾಲಕರಿಗೆ ಪರಿಹಾರ ಚಿಂತೆಯಾಗಿದೆ ಇದನ್ನು ಕ್ಷೇತ್ರದ ಶಾಸಕರು, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ತುಮಕೂರು ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಬಗೆ ಹರಿಸ ಬೇಕಿದೆ, ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ತೋರಿಸಿ ತ್ವರಿತ ಗತಿಯಲ್ಲಿ ಕಾರ್ಯ ಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next