Advertisement

ಸೈಬರ್‌ ಅಪರಾಧ ತಡೆಗೆ ಡಿಜಿಟಲ್‌ ಸಾಕ್ಷ್ಯ ಅವಶ್ಯ

09:16 PM Nov 17, 2019 | mahesh |

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಆಧುನಿಕವಾಗಿ ಮಾಹಿತಿ ಹಾಗೂ ತಂತ್ರಜ್ಞಾನದ ಆವಿಷ್ಕಾರ ಹಾಗೂ ಬೆಳವಣಿಗೆಯಿಂದ ಸೈಬರ್‌ ಕೇಂದ್ರೀಕೃತ ಅಪರಾಧಗಳ ಸಂಖ್ಯೆ ಸಮಾಜದಲ್ಲಿ ಹೆಚ್ಚುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಬೇಕಾದರೆ ತನಿಖಾಧಿಕಾರಿಗಳು ಡಿಜಿಟಲ್‌ ಸಾಕ್ಷ್ಯ ಸಂಗ್ರಹಕ್ಕೆ ಒತ್ತು ಕೊಡಬೇಕು. ಇಲ್ಲದಿದ್ದರೆ ನ್ಯಾಯಾಂಗ ವ್ಯವಸ್ಥೆಗೆ ತೊಂದರೆ ಆಗುತ್ತದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಎನ್‌.ಫ‌ಣೀಂದ್ರ ಎಚ್ಚರಿಸಿದರು.

Advertisement

ನಗರದ ಜಿಪಂ ಸಂಭಾಗಣದಲ್ಲಿ ಭಾನುವಾರ ರಾಜ್ಯ ನ್ಯಾಯಾಂಗ ಅಕಾಡೆಮಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪೊಲೀಸ್‌ ಇಲಾಖೆ ವತಿಯಿಂದ ನ್ಯಾಯಾಂಗ, ಪೊಲೀಸ್‌ ಅಧಿಕಾರಿಗಳು ಹಾಗೂ ಸರ್ಕಾರಿ ವಕೀಲರಿಗೆ ಹಮ್ಮಿಕೊಂಡಿದ್ದ ವಿದ್ಯುನ್ಮಾನ ಸಾಕ್ಷ್ಯಾಧಾರಗಳ ಬಳಕೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾಕ್ಷಿ ಹೇಗೆ ಸಂಗ್ರಹಿಸಬೇಕು?: ಮೊಬೈಲ್‌, ಇಂಟರ್‌ನೆಟ್‌ ಬಳಸಿ ಇತ್ತೀಚಿನ ಘನಘೋರ ಅಪರಾಧ ಕೃತ್ಯಗಳನ್ನು ಎಸೆಯಲಾಗುತ್ತಿದೆ. ಈ ಬಗ್ಗೆ ತನಿಖಾಧಿಕಾರಿಗಳು ಸಾಮಾನ್ಯ ತಿಳುವಳಿಕೆ ಇರಬೇಕು. ಸೈಬರ್‌ ಅಪರಾಧಗಳು ಹೇಗೆ ನಡೆಯುತ್ತವೆ, ಪ್ರಕರಣಗಳನ್ನು ಹೇಗೆ ದಾಖಲಿಸಬೇಕು, ಯಾವ ರೀತಿ ತನಿಖೆ ನಡೆಸಬೇಕು, ಸಾಕ್ಷಿಗಳನ್ನು ಹೇಗೆ ಸಂಗ್ರಹಿಸಬೇಕು ಹಾಗೂ ಹೇಗೆ ಸಂರಕ್ಷಿಸಬೇಕು ಎಂಬ ಬಗ್ಗೆ ತನಿಖಾಧಿಕಾರಿಗಳು ಗಂಭೀರವಾಗಿ ಆಲೋಚಿಸಬೇಕು ಎಂದರು.

ಹೈಕೋರ್ಟ್‌ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಮಾತನಾಡಿ, ಮೊಬೈಲ್‌ ಮಾರುಕಟ್ಟೆ ದೇಶದಲ್ಲಿಂದು ಎರಡನೇ ಅತಿ ದೊಡ್ಡ ಮಾರುಕಟ್ಟೆ ಆಗಿದೆ. ಹೀಗಾಗಿ ಮಾಹಿತಿ ತಂತ್ರಜ್ಞಾನ ಬೆಳೆದಂತೆಲ್ಲ ಕಳವು, ರಾಬರಿ, ಕೊಲೆ, ಅತ್ಯಾಚಾರ ಮತ್ತಿತರ ಅಪರಾಧ ಪ್ರಕರಣಗಳು ಹೊಸ ರೂಪದಲ್ಲಿ ನಡೆಯುತ್ತಿವೆ. ವೈಟ್‌ ಕಾಲರ್‌ ಅಪರಾಧಗಳೇ ಹೆಚ್ಚಾಗುತ್ತಿವೆ ಎಂದರು.

ಕಾರ್ಯಾಗಾರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ್‌, ರಾಜ್ಯ ನ್ಯಾಯಾಂಗ ಅಕಾಡೆಮಿ ನಿರ್ದೇಶಕಿ ಪ್ರಭಾವತಿ ಎಂ ಹಿರೇಮಠ, ಅಪರ ಜಿಲ್ಲಾಧಿಕಾರಿ ಆರತಿ, ಎಸ್ಪಿ ಅಭಿನವ್‌ ಖರೆ, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಜಿಲ್ಲಾ ಹಾಗೂ ಪ್ರಧಾನ ಸತ್ರ ನ್ಯಾಯಾಧೀಶ ಎಸ್‌.ಆರ್‌.ಸೋಮಶೇಖರ್‌, ಸರ್ಕಾರಿ ವಕೀಲೆ ಬಿ.ಜಿ.ನಮಿತಾ, ಸೈಬರ್‌ ಭದ್ರತಾ ತಜ್ಞ ಡಾ.ಅನಂತ ಪ್ರಭು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹೆಚ್‌.ದೇವರಾಜ್‌, ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಎಸ್‌.ನಟರಾಜ್‌, ಭಾನುಮತಿ, ರೂಪಾ, ಲೋಕೇಶ್‌ ಉಪಸ್ಥಿತರಿದ್ದರು.

Advertisement

ತನಿಖಾಧಿಕಾರಿಗಳಲ್ಲಿ ಬದ್ಧತೆ, ಪ್ರಾಮಾಣಿಕತೆ ಅಗತ್ಯ: ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎಸ್‌.ಸುನೀಲ್‌ ದತ್‌ ಯಾದವ್‌ ಮಾತನಾಡಿ, ಸೈಬರ್‌ ಅಪರಾಧಿ ಎಷ್ಟೇ ಜಾಣ್ಮೆಯಿಂದ ಕೃತ್ಯ ಎಸೆಗಿದರೂ ಕಂಡು ಹಿಡಿಯುವುದು ಕಷ್ಟಕರವಲ್ಲ. ಆದರೆ ತನಿಖಾಧಿಕಾರಿಗಳು ಬದ್ಧತೆ, ಪ್ರಾಮಾಣಿಕತೆಯಿಂದ ಶ್ರಮ ವಹಿಸಬೇಕಾಗುತ್ತದೆ ಎಂದು ಹೇಳಿದರು.

ಮಾಹಿತಿ ತಂತ್ರಜ್ಞಾನದ ನೈಪುಣ್ಯತೆ, ಕೌಶಲ ತನಿಖಾಧಿಕಾರಿಗಳಿಗೆ ಇದ್ದರೆ, ಬಹುಬೇಗ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಬಹುದು. ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲಬೇಕಾದರೆ ಅಥವಾ ಆರೋಪಿಗಳಿಗೆ ಶಿಕ್ಷೆ ಆಗಬೇಕಾದರೆ ಸಾಕ್ಷ್ಯ ಮುಖ್ಯ. ಉತ್ತಮ ನಾಗರಿಕ ಸಮಾಜ ನಿರ್ಮಾಣ ಆಗಬೇಕಾದರೆ ಡಿಜಿಟಲ್‌ ಸಾಕ್ಷ್ಯಗಳ ಸಂಗ್ರಹಕ್ಕೆ ಒತ್ತು ಕೊಡಬೇಕೆಂದರು.

ದೋಷಾರೋಪ ಪಟ್ಟಿ ಸಲ್ಲಿಸುವುದಷ್ಟೇ ಪೊಲೀಸರ ಕರ್ತವ್ಯ ಸೀಮಿತವಾಗಬಾರದು. ಸೈಬರ್‌ ಅಪರಾಧ ಪ್ರಕರಣಗಳಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ವರೆಗೂ ಹೋಗಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರಗಳನ್ನು ಪರಿಣಾಮಕಾರಿಯಾಗಿ ಹಾಜರುಪಡಿಸುವ ಹೊಣೆ ತನಿಖಾಧಿಕಾರಿಗಳದ್ದು ಎಂದರು.
-ಕೆ.ಎನ್‌.ಫ‌ಣೀಂದ್ರ, ಹೈಕೋರ್ಟ್‌ ನ್ಯಾಯಮೂರ್ತಿ

ಸಾಕಷ್ಟು ಪ್ರಕರಣಗಳಲ್ಲಿ ತಂತ್ರಜ್ಞಾನ ಬಳಸಿಯೇ ಅಪರಾಧ ನಡೆಸುತ್ತಿರುವುದರಿಂದ ಪತ್ತೆ ಕಾರ್ಯ ಕೂಡ ತನಿಖಾಧಿಖಾರಿಗಳಿಗೆ ಸವಾಲಾಗಿದೆ. ಭವಿಷ್ಯದಲ್ಲಿ ಅಪರಾಧ ಕೃತ್ಯಗಳು ಹೆಚ್ಚು ಸೂಕ್ಷ್ಮತೆ ಹಾಗೂ ಯಾರಿಗೂ ಅರಿವು ಆಗದಂತೆ ನಡೆಯುವುದರಿಂದ ಅವುಗಳ ಪತ್ತೆಗೆ ತನಿಖಾಧಿಕಾರಿಗಳು ತಂತ್ರಜ್ಞಾನ ಬಳಸಿ ಸಾಕ್ಷಿ ಸಂಗ್ರಹಿಸುವುದರಿಂದ ಆರೋಪಿಗಳನ್ನು ಸುಲಭವಾಗಿ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬಹು.
-ಸೂರಜ್‌ ಗೋವಿಂದರಾಜ್‌, ಹೈಕೋರ್ಟ್‌ ನ್ಯಾಯಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next