Advertisement

ಸೈಬರ್‌ ವಂಚಕರಿಂದ ವಾಟ್ಸ್‌ ಆ್ಯಪ್‌ ದಂಡ ಪಾವತಿ ಸಂದೇಶ: ಪೊಲೀಸರಿಂದ ಎಚ್ಚರಿಕೆ

02:33 PM Oct 26, 2022 | Team Udayavani |

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಪಾವತಿಸಬೇಕಾದ ವಾಹನ ಸವಾರರೇ ಎಚ್ಚರ. ವಾಟ್ಸ್‌ಆ್ಯಪ್‌ ಮೂಲಕ ದಂಡ ಪಾವತಿ ಮಾಡುವಂತೆ ಸಂದೇಶ ಕಳುಹಿಸಿ ಸುಲಿಗೆ ಮಾಡುವ ಸೈಬರ್‌ ವಂಚಕರ ಜಾಲವೊಂದು ಸಕ್ರಿಯವಾಗಿದೆ.

Advertisement

ಇತ್ತೀಚೆಗೆ ರೋಷನ್‌ ಶರ್ಮಾ ಎಂಬುವರ ಕಾರಿನ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ದಂಡ ವಿಧಿಸಲಾಗಿತ್ತು. ಕೆಲ ದಿನಗಳ ಹಿಂದೆ ರೋಷನ್‌ ಶರ್ಮಾಗೆ ವಾಟ್ಸ್‌ ಆ್ಯಪ್‌ ಸಂದೇಶವೊಂದು ಬಂದಿದ್ದು, ನಿಮ್ಮ ಕಾರಿನ ಮೇಲೆ ಸಂಚಾರ ನಿಯಮ ಉಲ್ಲಂಘನೆ ದಂಡ ವಿಧಿಸಲಾಗಿದೆ ಎಂದು ಫೋಟೋ ಸಮೇತ ಕಳುಹಿಸಿ, ಇದೇ ನಿಮ್ಮ ಕಾರು? ಎಂದು ಪ್ರಶ್ನಿಸಿದ್ದಾರೆ. ರೋಷನ್‌ ಹೌದು ಎಂದು ಉತ್ತರ ನೀಡಿದ್ದಾರೆ. ಬಳಿಕ ಕಾರಿನ ಮೇಲೆ 800 ರೂ. ದಂಡ ಇದ್ದು, ಕೂಡಲೇ ಪಾವತಿ ಮಾಡುವಂತೆ ಲಿಂಕ್‌ ಕೂಡ ಕಳುಹಿಸಿದ್ದಾರೆ. ಅಲ್ಲದೆ, ದಂಡ ಪಾವತಿ ಮಾಡಿದ ಬಳಿಕ ಪ್ರಕರಣ ಇತ್ಯರ್ಥ ಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಅದರಿಂದ ಅನುಮಾನಗೊಂಡ ರೋಷನ್‌ ಟ್ರೂಕಾಲರ್‌ ಮೂಲಕ ಅಪರಿಚಿತ ನಂಬರ್‌ ಬಗ್ಗೆ ಪರಿಶೀಲಿಸಿದಾಗ “ಶಾಕೇತ್‌ ಲಾಯರ್‌’ ಎಂದು ಬಂದಿದೆ. ಈ ವಿಚಾರವನ್ನು ರೋಷನ್‌ ಶರ್ಮಾ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್‌ ಮಾಡಿ, ಸಂಚಾರಪೊಲೀಸರಿಗೆ ಟ್ಯಾಗ್‌ ಮಾಡಿ, ಇದು ಅಸಲಿಯೋ? ಎಂದು ಪ್ರಶ್ನಿಸಿದ್ದಾರೆ.

ಅದಕ್ಕೆ ಉತ್ತರಿಸಿರುವ ಕೆ.ಆರ್‌.ಪುರ ಸಂಚಾರ ಠಾಣೆ ಪೊಲೀಸರು, ಮೋಸಗಾರರು ಇದ್ದಾರೆ ಎಚ್ಚರದಿಂದಿರಿ. ದಂಡ ಪಾವತಿ ಬಗ್ಗೆ ಸಂಚಾರ ಪೊಲೀಸರು ವಾಟ್ಸ್‌ಆ್ಯಪ್‌ ಮೂಲಕ ಯಾರಿಗೂ ಸಂದೇಶ ಕಳುಹಿಸುವುದಿಲ್ಲ. ಯಾರಾದರೂ ಆ ರೀತಿ ಲಿಂಕ್‌ ಸೇರಿ ಸಂದೇಶ ಕಳುಹಿಸಿದರೆ ಅದು ಸೈಬರ್‌ ವಂಚಕರು. ಹೀಗಾಗಿ ವಾಹನ ಸವಾರರು/ಸಾರ್ವಜನಿಕರು ದಂಡ ಪಾವತಿ ಹಾಗೂ ಸಂಚಾರ ಪೊಲೀಸರ ವಿಭಾಗದಿಂದ ಎಂದು ವಾಟ್ಸ್‌ಆ್ಯಪ್‌ ಅಥವಾ ಇತರೆ ಮಾರ್ಗದ ಮೂಲಕ ಬರುವ ಅಪರಿಚಿತ ಸಂದೇಶ ಕಳುಹಿಸಿದರೆ ನಂಬಬೇಡಿ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next