Advertisement

ಶಾಪ ಕೊಡುವುದೆ? ಪಡೆಯುವುದೆ?

10:53 PM Oct 19, 2019 | mahesh |

ಸುಮಾರು 20 ವರ್ಷಗಳ ಹಿಂದಿನ ಘಟನೆ. ಒಬ್ಬರು ವೈದ್ಯರಿಗೆ ಪೂರ್ವಿಕರ ಆಸ್ತಿಯ ಪಾಲಲ್ಲಿ ಹಳೆಯ ಮನೆಯೊಂದು ಬಂದಿತ್ತು. ಆ ಮನೆಯನ್ನು ಏನು ಮಾಡುವುದೆಂದು ಚಿಂತಿಸುತ್ತಿದ್ದಾಗ ಮಹಿಳಾ ಹಾಸ್ಟೆಲ್‌ ಮಾಡುತ್ತೇನೆಂದು ಒಬ್ಬ ಬಂದ. ಆತ ಮಹಿಳೆಯರ ಹೆಸರಿನಲ್ಲಿ ಏನೋ ಎಡವಟ್ಟು ಮಾಡುತ್ತಿದ್ದಾನೆಂದು ಒಂದೆರಡು ತಿಂಗಳಲ್ಲಿ ವೈದ್ಯರಿಗೆ ಗೊತ್ತಾಯಿತು. ಕೂಡಲೇ ಆತನನ್ನು ಬಿಡಿಸಿದರು. ಕೆಲವೇ ದಿನಗಳಲ್ಲಿ ಒಬ್ಬ ಬ್ಲ್ಯಾಕ್‌ ಮೇಲ್‌ ಮಾಡುವ ಪತ್ರಕರ್ತ ಬಂದು ವೈದ್ಯರಲ್ಲಿ 25,000 ರೂ. ಜಾಹೀರಾತು ಕೇಳಿದ. “ವೈದ್ಯಕೀಯ ನಿಯಮದಂತೆ ಜಾಹೀರಾತು ಕೊಡುವಂತಿಲ್ಲ’ ಎಂದು ವೈದ್ಯರು ಉತ್ತರಿಸಿದರು. ಕೂಡಲೇ ಆತ ಹಾಸ್ಟೆಲ್‌ನಲ್ಲಿದ್ದ ಅರೆಬೆತ್ತಲೆ ಮಹಿಳೆಯರ ಚಿತ್ರ ತೋರಿಸಿ “ವೈದ್ಯರು ವೇಶ್ಯಾಗೃಹವನ್ನು ನಡೆಸಬಹುದೆ?’ ಎಂದು ಬೆದರಿಸಿದ. ಬೇರೆಯವರಿಗೆ ಔಷಧಿ ಕೊಟ್ಟು “ನಡುಕ’ ನಿಲ್ಲಿಸಲು ಮಾತ್ರ ಗೊತ್ತಿದ್ದ ವೈದ್ಯರಿಗೆ ಈತ ಏನೂ ಇಲ್ಲದೆ “ನಡುಕ’ ಹುಟ್ಟಿಸಿದ್ದ. ವೈದ್ಯರಿಗೆ ನಿದ್ರೆ ಬರಲಾರದಾಯಿತು. ಮನೋರೋಗಕ್ಕೆ ಒಳಗಾದ ಈ ವೈದ್ಯ ಮನೋವೈದ್ಯ ಉಡುಪಿಯ
ಡಾ|ಪಿ.ವಿ.ಭಂಡಾರಿಯವರನ್ನು ಸಂಪರ್ಕಿಸಿದರು. ಎಲ್ಲ ಮಾತ್ರೆಗಳೂ ಇವರಿಗೆ ನಿದ್ರೆ ಬರಿಸಲು ವಿಫ‌ಲವಾದವು. ಡಾ|ಭಂಡಾರಿಯವರು ಬಳಕೆದಾರರ ಹೋರಾಟಗಾರ
ಡಾ|ರವೀಂದ್ರನಾಥ ಶ್ಯಾನು ಭೋಗರನ್ನು ಸಂಪರ್ಕಿಸಿ ಏನಾದರೂ ಸಲಹೆ ನೀಡಿರೆಂದರು.

Advertisement

ಡಾ|ಶ್ಯಾನುಭೋಗರು ಮನೋರೋಗಕ್ಕೆ ಒಳಗಾದ ವೈದ್ಯರಿಗೆ 1 ಲ.ರೂ. ಚೆಕ್‌ ತೋರಿಸಿ “ನಾಳೆ ಸಂಜೆಯೊಳಗೆ ನೀವು ಏನಾದರೂ ಮಾಡಿ ನನ್ನ ಮರ್ಯಾದೆ ತೆಗೆಯಬೇಕು. ಏನು ಬೇಕಾದರೂ ಮಾಡಿ. ಎಷ್ಟು ಬೇಕಾದರೂ ಬಯ್ದುಕೊಳ್ಳಿ. ಆದರೆ ನನ್ನ ಮರ್ಯಾದೆ ಮಾತ್ರ ತೆಗೆಯಬೇಕು. ಈ ಚೆಕ್‌ನ್ನು ಡಾ|ಭಂಡಾರಿಯವರಿಗೆ ಕೊಡುತ್ತೇನೆ. ನನ್ನ ಮರ್ಯಾದೆ ತೆಗೆದ ತತ್‌ಕ್ಷಣ ಹಣವನ್ನು ಡಾ|ಭಂಡಾರಿ ಕೊಡುತ್ತಾರೆ’ ಎಂದರು. ಘನಘೋರ ಅಪರಾಧಿಗಳ ತಲೆಗೆ ಪೊಲೀಸ್‌ ಇಲಾಖೆ ನಗದು ಬಹುಮಾನ ಘೋಷಣೆ ಮಾಡುವಂತೆ ಶ್ಯಾನುಭೋಗರು ತನ್ನದೇ ಮರ್ಯಾದೆ ತೆಗೆದವರಿಗೆ ನಗದು ಬಹುಮಾನ ಘೋಷಿಸಿದ್ದರು. ಮನೋರೋಗಿಯಾಗಿದ್ದ ವೈದ್ಯರಿಗೆ ಆಶ್ಚರ್ಯವಾಯಿತು. “ನಾನು ಏನಾದರೂ ತಪ್ಪು ಮಾಡಿದರಲ್ಲವೆ ನೀವು ನನ್ನ ಮರ್ಯಾದೆ ತೆಗೆಯುವುದು? ಇಲ್ಲವಾದರೆ ಹೇಗೆ ಸಾಧ್ಯ?’ ಎಂದು ಡಾ|ಶ್ಯಾನುಭೋಗರು ಹೇಳಿದ್ದೇ ತಡ ಮನೋರೋಗಿಯಾಗಿದ್ದ ವೈದ್ಯರಿಗೆ ತತ್‌ಕ್ಷಣ ಜ್ಞಾನೋದಯವಾಯಿತು. ಆಗ ಟಚ್‌ಸ್ಕ್ರೀನ್‌ ಮೊಬೈಲ್‌ ಸೆಟ್‌ ಬಂದದ್ದಷ್ಟೆ. ಕೂಡಲೇ ಆ ಪತ್ರಕರ್ತನಿಗೆ ದೂರವಾಣಿ ಕರೆ ನೀಡಿ “ನೀನು ಏನು ಬರೆದುಕೊಳ್ಳುತ್ತಿಯೋ ಬರೆದುಕೊಳ್ಳು. ನಾನು ಏನೂ ತಪ್ಪು ಮಾಡಿಲ್ಲ’ ಎಂದು ಗದರಿಸಿದರು. ಮನೋರೋಗಿಯಾಗಿದ್ದ ವೈದ್ಯರು ನಾರ್ಮಲ್‌ ಸ್ಥಿತಿಗೆ ಬಂದರು.

ಈಗ ನಾವು ನಿತ್ಯವೂ ಅನಗತ್ಯವಾಗಿ ಮನೋರೋಗಿಗಳಾಗುತ್ತಿದ್ದೇವೆ. “ಅವರು ಶಾಪ ಕೊಟ್ಟರು, ಇವರು ಶಾಪ ಕೊಟ್ಟರು’, “ಅವರ ಕೆಟ್ಟ ಬಾಯಿಂದ ನಾವು ಸರ್ವಸ್ವ ಕಳೆದುಕೊಂಡೆವು’ ಹೀಗೆಲ್ಲ ಅಂದುಕೊಳ್ಳುವುದು ಇದೆ. ಶಾಪವನ್ನು ಯಾರಾದರೂ ಕೊಡುವುದು ಸಾಧ್ಯವೋ? ಅಥವಾ ನಾವು ಶಾಪವನ್ನು ಪಡೆದುಕೊಳ್ಳುವುದೋ? ಎಂಬ ಜಿಜ್ಞಾಸೆ ಮೂಡುತ್ತದೆ. “ಶಾಪ ಕೊಟ್ಟರು’ ಎಂಬಷ್ಟು ಪ್ರಮಾಣದಲ್ಲಿ “ವರ ಕೊಟ್ಟರು’ ಎಂದು ಹೇಳುವುದನ್ನು ಕೇಳುವುದಿಲ್ಲ. ಶಾಪದಷ್ಟೆ ವರ ಕೊಡುವವರೂ ಇರಬೇಕಲ್ಲವೆ? ಹೀಗಿಲ್ಲದಿದ್ದರೆ ಸಮಾಜದಲ್ಲಿ ಏನೋ ಎಡವಟ್ಟು ಆಗಿದೆ ಎನ್ನಬೇಕಾಗುತ್ತದೆ. ಶಾಪವಾದರೂ ಅಷ್ಟೆ, ವರವಾದರೂ ಅಷ್ಟೆ ಅದು ಒಂಥರ ರೇಡಿಯೋ, ಟಿವಿ ತರಂಗಗಳು ಇದ್ದಂತಲ್ಲವೆ? ರೇಡಿಯೋ, ಟಿವಿಗಳಲ್ಲಿ ಆಯಾ ಕೇಂದ್ರ/ ಚಾನೆಲ್‌ಗ‌ಳನ್ನು ತಿರುವಿದರೆ ಮಾತ್ರವೇ ಆ ಬಾನುಲಿ ಕೇಂದ್ರ/ ಚಾನೆಲ್‌ಗ‌ಳನ್ನು ಕೇಳಲು ಸಾಧ್ಯವಾಗುವುದು. ಅದೇ ರೀತಿ ಶಾಪವಿರಲಿ, ವರವಿರಲಿ ವಾತಾವರಣದಲ್ಲಿ ಸದಾ ಇರುತ್ತವೆ. ಅದನ್ನು ಸ್ವೀಕರಿಸಲು ನಮ್ಮ ವರ್ತನೆ, ಮನಸ್ಸೆಂಬ ಬಾನುಲಿ ಕೇಂದ್ರ/ ಚಾನೆಲ್‌ಗ‌ಳು ಅರ್ಹವಿದ್ದರೆ ಸಹಜವಾಗಿ ಅವು ಬಂದು ಕುಳಿತುಕೊಳ್ಳುತ್ತವೆ. ಪಾಸಿಟಿವ್‌ ಎನರ್ಜಿ ಇರಲಿ, ನೆಗೆಟಿವ್‌ ಎನರ್ಜಿ ಇರಲಿ ಅವು ವಾತಾ ವರಣ ದಲ್ಲಿರುತ್ತವೆ ಎಂದು ಭೌತ ವಿಜ್ಞಾನ ಹೇಳುತ್ತದೆ. ಅದನ್ನು ಸ್ವೀಕರಿಸಬೇಕಾದದ್ದು ನಾವಲ್ಲವೆ?

ಕೆಲವು ಬಾರಿ ತಪ್ಪಾಗಿ ತಿಳಿದು ಚಾನೆಲ್‌/ ರೇಡಿಯೋ ಸ್ಟೇಶನ್‌ ಹಾಕುವುದಿದೆ. ಆಗ ಅದು ತತ್‌ಕ್ಷಣ ವಕ್ಕರಿಸುತ್ತದೆ. ಕೂಡಲೇ ನಾವು ನಮಗೆ ಬೇಕಾದ ಚಾನೆಲ್‌ಗ‌ಳ ಗುಂಡಿ ಅದುಮುತ್ತೇವೆ. ಹೀಗೆ ಜೀವನಾನುಭವದಲ್ಲಿ ತಪ್ಪಾಗಿ ಎಡ ವಟ್ಟು ಆಗುವುದಿದೆ. ಇದಕ್ಕೆ ಜಾಗೃತ ಹೆಜ್ಜೆ ಅಗತ್ಯ. ಒಂದು ವೇಳೆ ತಪ್ಪು ಹೆಜ್ಜೆ ಇರಿಸಿ ಗೊತ್ತಾದ ತತ್‌ಕ್ಷಣ ಸರಿಯಾದ ಪಥದಲ್ಲಿ ನಡೆಯಬೇಕಾಗುತ್ತದೆ. ಕೆಲವು ತಲೆನೋವುಗಳನ್ನು ಅಥವಾ ತಲೆನೋವು ಸೃಷ್ಟಿಸುವವರನ್ನು ಸಾಗ ಹಾಕುವ ಕಲೆಯನ್ನೂ ರೂಢಿಸಿಕೊಳ್ಳಬೇಕಾಗುತ್ತದೆ. ವೈದ್ಯರ ಪ್ರಕರಣ ದಲ್ಲಿ ಅವರು ತನ್ನಿಂದ ತಪ್ಪಾಯಿತೆಂದು ತಪ್ಪು ತಿಳಿದಿದ್ದರು. ಸರಿಯಾದ ತಿಳಿವಳಿಕೆ ಬಂದಾಕ್ಷಣವೇ ಸರಿಯಾದರು.

ಸಾಧ್ಯವಾದಷ್ಟು ಆಸೆಗಳನ್ನು ನಿಯಂತ್ರಿಸಿ ಸರಳ ಬದುಕು ಸಾಗಿಸಿದರೆ ಅನೇಕ ತಲೆನೋವುಗಳು ನಾಪತ್ತೆಯಾಗಿ ಆ ತಲೆ ನೋವು (ತಲೆನೋವು ಸೃಷ್ಟಿಸುವವರ ಮೂಲಕ) ಆಸೆ ಬುರು ಕರನ್ನು ಹುಡುಕಿ ಅವರನ್ನು ಅಪ್ಪಿಕೊಳ್ಳುತ್ತವೆ. ಆಸೆಗ ಳನ್ನು ನಿಯಂತ್ರಿಸಿ ಸರಳವಾಗಿ ಬದುಕಿದರೆ ಕೇವಲ ಇಷ್ಟೇ ಲಾಭವಲ್ಲ, ದಾರಿದ್ರ್ಯ ತಂತಾನೇ ಓಡಿಹೋಗುತ್ತದೆ ಮತ್ತು ಆಸೆಗಳನ್ನು ಹೆಚ್ಚಿಸಿದಷ್ಟೂ ದಾರಿದ್ರ್ಯ ತಂತಾನೆ ಅಡರಿಕೊಳ್ಳು ತ್ತದೆ ಎಂದು ಬಹುತೇಕರಿಗೆ ಗೊತ್ತಿಲ್ಲ. ದಾರಿದ್ರ್ಯವೆಂದಾಕ್ಷಣ ಆರ್ಥಿಕ ಎಂದು ತತ್‌ಕ್ಷಣ ತಿಳಿಯುವ ಶಿಕ್ಷಣವನ್ನು ಮಾತ್ರ ಕೊಡಲಾಗುತ್ತಿದೆ, ಮಾನಸಿಕ ದಾರಿದ್ರ್ಯವೂ ಇರುತ್ತದೆ ಎಂಬ ಅರಿವು ಇರಬೇಕು. ಆರ್ಥಿಕ ದಾರಿದ್ರ್ಯಕ್ಕಿಂತ ಹಿಂದಿನ ಸ್ಥಿತಿ ಮಾನಸಿಕ ದಾರಿದ್ರ್ಯ. ಅನಗತ್ಯವಾದ ತಲೆ ಹರಟೆ, ಸಭ್ಯತೆ ಇಲ್ಲದ ಒರಟಾದ ಮಾತುಗಳೂ ಅನೇಕ ಕೃತಕ ಶಾಪಗ ಳೊಂದಿಗೆ ಪರ್ಯವಸಾನವಾಗುತ್ತವೆ. ಇಂತಹ ಮಾತುಗ ಳಿಂದ ಉತ್ಪತ್ತಿಯಾಗುವ ಶಾಪ ತಟ್ಟುತ್ತದೋ ಇಲ್ಲವೋ, ಆದರೆ ಅಕ್ಕಪಕ್ಕದವರಿಗೆ ತಲೆನೋವಾಗುವುದಂತೂ ಖಚಿತ. ಆದ ಕಾರಣ ಇಂತಹ ಮಾತುಗಳಿಗೂ ಕಡಿವಾಣ ಹಾಕಬೇಕಾಗುತ್ತದೆ.

Advertisement

ಬೆಳಗ್ಗೆ 4 ಗಂಟೆಗೆದ್ದು ಯೋಗಾಸನ – ಪ್ರಾಣಾಯಾಮ ಮಾಡಿದರೆ, ವಾಕಿಂಗ್‌/ ಸೈಕ್ಲಿಂಗ್‌ ಮಾಡಿದರೆ ಉತ್ತಮ. ಆದರೆ ಇದು ಯಾರಿಗೆ? ಹೀಗೆ ಮಾಡುವವರಿಗೆ ಮಾತ್ರ. ಹಾಗೆಯೇ ಸ್ವಾರ್ಥ, ಹೊಟ್ಟೆಕಿಚ್ಚು, ಹೆಣ್ಣು-ಹೊನ್ನು (ಕಾಂಚನ ) - ಮಣ್ಣಿನ ಪರಿಧಿ ದಾಟಿದ ಕಾಮನೆ ಇತ್ಯಾದಿ ಕೆಟ್ಟ ಅಭಿರುಚಿಗಳನ್ನು ಬೆಳೆಸಿಕೊಂಡರೆ ಕೆಟ್ಟದ್ದು. ಯಾರಿಗೆ? ಹೀಗೆ ಮಾಡುವವರಿಗೆ ಮಾತ್ರ, ಜತೆಗೆ ಪಕ್ಕದಲ್ಲಿರುವ ವರಿಗೂ. ಇಂತಹವರನ್ನು ಸಾಗ ಹಾಕುವ ಕಲೆ ಬೇಕಾಗುತ್ತದೆ. ಇದೇ ತಣ್ತೀವನ್ನು ಶಾಪ/ ವರಕ್ಕೆ ಅನ್ವಯಿಸಿದರೂ ಉತ್ತರ ವಿಷ್ಟೆ. ಶಾಪ / ವರವನ್ನು ಸ್ವೀಕರಿಸಲು ನಾವು ಅರ್ಹರೇ? ಅರ್ಹರಾದರೆ ಯಾರಾದರೊಬ್ಬ ಅಸಾಮಿ ಇವುಗಳನ್ನು ಕೊಡಲು ತಯಾರಾಗಿರುತ್ತಾನೆ, ಆಗ ಅವು ಬಂದು ವಕ್ಕರಿ ಸುತ್ತವೆ. ಅಂತಹವರನ್ನು ಸ್ವಾಗತಿಸಿ “ಆತ ಶಾಪ ಕೊಡುವಂತೆ ನಾನು ವರ್ತಿಸಿದೆ’ ಎಂದು ಹೇಳುವವರನ್ನು ನೋಡುತ್ತಿಲ್ಲ.

“ಉಂಡವ ಹರಸುವುದು ಬೇಡ, ಹಸಿದವ ಶಪಿಸುವುದು ಬೇಡ’ ಎಂಬ ಗಾದೆ ಮಾತಿಲ್ಲವೆ? ಉಂಡರೆ ಪ್ರತ್ಯೇಕವಾಗಿ ಹರಸುವ ಅಗತ್ಯವಿದೆಯೆ? ಹಸಿದ ನೋವೇ ಸಾಕಲ್ಲವೆ? ಪ್ರತ್ಯೇಕ ಶಾಪ ಕೊಡುವ ಅಗತ್ಯವಿದೆಯೆ ಎಂದು ಇದರ ತಾತ್ಪರ್ಯ. ಇಷ್ಟು ಸರಳ ಗಾದೆಯಾದರೂ, ಇದನ್ನು ಕೇಳಿದ ಬಳಿಕವೂ ನಾವು ತೀರಾ ಅಗತ್ಯವಿರುವವರಿಗೆ ಅಂದರೆ ತಿಂದು ಜೀರ್ಣಿಸಿಕೊಳ್ಳು ವವರಿಗೆ (ಅರ್ಹರಿಗೆ) ಊಟ ಹಾಕಲು ತಯಾರಿರುವುದಿಲ್ಲ, ಬದಲಾಗಿ ತಿಂದು ಜೀರ್ಣಿಸಿಕೊಳ್ಳಲಾಗದೆ 300-400 ಶುಗರ್‌ ಲೆವೆಲ್‌ ಏರಿಸಿಕೊಂಡವರಿಗೇ ಕೇವಲ ಒಣಪ್ರತಿಷ್ಠೆಗಾಗಿ ಊಟ ಹಾಕಲು ಮುಂದಾಗುತ್ತೇವೆ. ಈ ಒಣಪ್ರತಿಷ್ಠೆ ಎಂಬ ಅಸ್ಥಿಪಂಜರಕ್ಕೆ ಜಾತಿ, ಸಂಬಂಧ, ಆರ್ಥಿಕ ಬಲಾಡ್ಯತನ, ಉದ್ಯೋಗ ತಾರತಮ್ಯ, ಅಂತಸ್ತು ಎಂಬಿತ್ಯಾದಿ ಮಾಂಸ, ಮಜ್ಜೆಗಳಂತಹ ಕವಚ ಇರುತ್ತವೆ.

ಗಾದೆ ಮಾತು ಈಗ ಇನ್ನೂ ವಿಚಿತ್ರ ಸ್ಥಿತಿಗೆ ತಲುಪುತ್ತದೆ: “ಉಂಡರೂ ಹರಸಲಾಗದವರಿಗೆ ಊಟ’, “ವರ ಪಡೆ ಯುವ ತಾಕತ್ತಿದ್ದರೂ ಊಟ ಕೊಡದ ಕಾರಣ ತಪ್ಪುತ್ತಿರುವ ವರ’. ಕೇವಲ ಊಟ ಮಾತ್ರವಲ್ಲ ಬಟ್ಟೆ, ಮನೆಗಳ ಸ್ಥಿತಿಯೂ ಹೀಗೆಯೇ. ಲೋಕದಲ್ಲಿ ಹಲವರಿಗೆ ಒಂದು ಬಟ್ಟೆ ಇಲ್ಲದಿದ್ದರೂ ಚಿಂತೆ ಇಲ್ಲ, ತಮಗೆ ಮಾತ್ರ ಶೋಕೇಸ್‌ ತುಂಬ ಬಟ್ಟೆ ಬೇಕು. ನಿವೇಶನ ಇಲ್ಲದವರು, ಮನೆ ಇಲ್ಲದವರು ಎಷ್ಟೇ ಜನರು ಇರಲಿ, ನಮಗೆ ಮಾತ್ರ ಇರುವ ಇಬ್ಬರಿಗೋ, ಮೂವರಿಗೋ ಆಸುಪಾಸಿನ “ಎಲ್ಲಾ’ರನ್ನು ತುಂಬಬಹುದಾದ “ವಿಲ್ಲಾ’ಗಳು ಬೇಕು ಎಂಬ ಮನಃಸ್ಥಿತಿ ಇದೆ. ಹೀಗೆ ಮಾಡಿದರೆ ಯಾರೂ ಶಾಪ ಕೊಡುವುದೇ ಬೇಡ, ಅವು ಯಾರನ್ನಾದರೂ ನಿಮಿತ್ತ ಮಾಡಿಕೊಂಡು ಬಂದು ವಕ್ಕರಿಸುತ್ತವೆ. ವಕ್ಕರಿಸುವಾಗ ಯಾರಾದರೂ ನೆಪ ಮಾತ್ರಕ್ಕೆ ಸೃಷ್ಟಿಯಾಗುತ್ತಾನೆ/ಳೆ. ನಾವು ಮೂಲವನ್ನು ಹುಡುಕದೆ ನೆಪ ಮಾತ್ರಕ್ಕೆ ಸಿಕ್ಕಿದವನ(ಳ)ನ್ನು ಜರೆಯುತ್ತೇವೆ. ಒಟ್ಟಾರೆ ಶಾಪ ಪಡೆಯಲು ನಾವು ಅರ್ಹತೆ ಪಡೆದರೆ ಮಾತ್ರ ಶಾಪ, ಇಲ್ಲವಾದರೆ ಅದಕ್ಕೆ ಗಿರಾಕಿಗಳೇ ಸಿಗದು. ವರದ ಕಥೆಯೂ ಇಷ್ಟೆ…. ನಾವು ಶಾಪ ಪಡೆಯಲು ಅನ್‌ಫಿಟ್‌ ಆಗಿ ವರವನ್ನು ಪಡೆ ಯಲು ಫಿಟ್‌ ಆದರೆ ರಾಮರಾಜ್ಯ, ಇಲ್ಲವಾದರೆ ರಾವಣ ರಾಜ್ಯ! ಎರಡೂ ಬಗೆಯ ರಾಜ್ಯಗಳಿವೆ, ಪಡೆಯುವವರಿಗೆ.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next