Advertisement

ಕುತೂಹಲ ಕೆರಳಿಸಿದ ಘಟಾನುಘಟಿಗಳ ಸ್ಪರ್ಧೆ

11:19 AM Apr 09, 2018 | Team Udayavani |

ಕಲಬುರಗಿ: ಜಿಲ್ಲೆಯ ಆಳಂದ ವಿಧಾನಸಭೆ ಕ್ಷೇತ್ರ ರಾಜಕೀಯವಾಗಿ ಚುರುಕಾಗಿರುವ ಹಾಗೂ ರಾಜಕೀಯ ಕ್ಷೇತ್ರಕ್ಕೆ ಹಲವು ಗಣ್ಯರನ್ನು ನೀಡಿದ ತಾಲೂಕಾಗಿದೆ. ಈ ಸಲವಂತೂ ಚುನಾವಣಾ ದೃಷ್ಟಿಯಿಂದ ಆಳಂದ ಕ್ಷೇತ್ರ ತೀವ್ರವಾಗಿ ಗಮನ ಸೆಳೆಯುತ್ತಿದೆ. ಹಾಲಿ ಶಾಸಕ ಬಿ.ಆರ್‌. ಪಾಟೀಲ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ಬಯಸಿ ಚುನಾವಣಾ ಅಖಾಡಕ್ಕೆ ಇಳಿದಿದ್ದರೆ ಸಾಂಪ್ರದಾಯಿಕ ಎದುರಾಳಿ ಬಿಜೆ‌ಪಿಯಿಂದ ಮಾಜಿ ಶಾಸಕ ಸುಭಾಷ ಆರ್‌. ಗುತ್ತೇದಾರ ಪ್ರತಿಷ್ಠೆ ಪಣಕ್ಕಿಟ್ಟಿರುವುದರಿಂದ ಚುನಾವಣೆಗೆ ಎಲ್ಲಿಲ್ಲದ ರಂಗೇರಿದೆ.

Advertisement

ಇನ್ನುಳಿದಂತೆ ಜೆಡಿಯುದಿಂದ ಉದ್ಯಮಿ ಅರುಣಕುಮಾರ ಪಾಟೀಲ ಹಳ್ಳಿ ಸಲಗರ, ಜೆಡಿಎಸ್‌ದಿಂದ ಸೂರ್ಯಕಾಂತ ಕೊರಳ್ಳಿ ಸಹ ಸ್ಪರ್ಧೆ ಬಯಸಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗೆ ಘಟನಾನುಘಟಿಗಳು ಚುನಾವಣಾ ಕಣಕ್ಕೆ ಧುಮುಕಿದ್ದರಿಂದ ಚುನಾವಣೆ ಕಾವು ಎದುರು ನೋಡುವಂತಾಗಿದೆ.

ಆಳಂದ ಕ್ಷೇತ್ರ ಮೂರು ದಶಕದಿಂದ ಶಾಸಕ ಬಿ.ಆರ್‌. ಪಾಟೀಲ ಹಾಗೂ ಮಾಜಿ ಶಾಸಕ ಸುಭಾಷ ಆರ್‌. ಗುತ್ತೇದಾರ ಹಿಡಿತದಲ್ಲಿದೆ. ಇವರಿಬ್ಬರು ತಲಾ ಮೂವರು ಸಲ ಆಯ್ಕೆಯಾಗಿದ್ದಾರೆ. ಇವರಿಬ್ಬರು ರಾಷ್ಟ್ರೀಯ ಪಕ್ಷಗಳಿಂದ ಆಯ್ಕೆಯಾಗದಿರುವುದು ಮತ್ತೂಂದು ಗಮನಾರ್ಹ ಸಂಗತಿ. ಇದನ್ನು ನೋಡಿದರೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂಬುದನ್ನು ನಿರೂಪಿಸುತ್ತದೆ. 

ಪ್ರಮುಖವಾಗಿ ಆಳಂದ ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕದಿಂದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಗೆದ್ದಿಲ್ಲ. ಕಳೆದ ವರ್ಷವಂತೂ ಠೇವಣಿ ನಷ್ಟವಾಗಿತ್ತು. ಭಾರತೀಯ ಜನತಾ ಪಕ್ಷವಂತೂ ಒಮ್ಮೆಯೂ ಗೆದ್ದಿಲ್ಲ. ಈ ಸಲ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೋ ಇಲ್ಲವೇ ಪ್ರಾದೇಶಿಕ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೋ ಎನ್ನುವ ಕುತೂಹಲ ಮೂಡಿದೆ. ಆಳಂದ ಕ್ಷೇತ್ರದಲ್ಲಿ 229638 ಮತದಾರರಿದ್ದು, ಇದರಲ್ಲಿ 119328 ಪುರುಷರು, 110276 ಮಹಿಳೆಯರು ಸೇರಿದ್ದಾರೆ. 2013ರಕ್ಕಿಂತ 36767 ಮತದಾರರು ಹೆಚ್ಚಳವಾಗಿದ್ದಾರೆ.

ಕ್ಷೇತ್ರದ ಬೆಸ್ಟ್‌ ಏನು?
ಭೀಮಾ ನದಿಯಿಂದ ಅಮರ್ಜಾ ಜಲಾಶಯಕ್ಕೆ ನೀರು ಹರಿಸುವ ಕಾಮಗಾರಿಗೆ ಚಾಲನೆ, ಹಳ್ಳಿ ಸಲಗರದಲ್ಲಿ ಗ್ರಾಪಂ ಸಂಪೂರ್ಣ ಕಟ್ಟಡ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಾಣವಾಗಿರುವುದು, ಗುಲಬರ್ಗಾ ವಿಶ್ವವಿದ್ಯಾಲಯದ ಪಿಜಿ ಕೇಂದ್ರ ಆರಂಭ, ಸರ್ಕಾರಿ ಐಟಿಐ ಕಾಲೇಜು ಸ್ಥಾಪನೆ, ಹಾಲು ಶೀಥಲೀಕರಣ ಘಟಕ, ವೇರ್‌ಹೌಸ್‌ ನಿರ್ಮಾಣ, ಸಿರಪುರ ಮಾದರಿಯಲ್ಲಿ ಅಂತರ್ಜಲ ಹೆಚ್ಚಳ ಕೆಲಸಕ್ಕೆ
ಚಾಲನೆ, ಎಪಿಎಂಸಿ ವಿಂಗಡಣೆ, ಅರಣ್ಯೀಕರಣ ಹೆಚ್ಚಳಕ್ಕೆ ವಿಶೇಷ ಯೋಜನೆ ಸೇರಿದಂತೆ ಕಾರ್ಯಗಳು ಕ್ಷೇತ್ರದಲ್ಲಿನ ಉತ್ತಮ ಕಾರ್ಯಗಳಾಗಿವೆ.

Advertisement

ಕ್ಷೇತ್ರದ ದೊಡ್ಡ  ಸಮಸ್ಯೆ?
ಅಮರ್ಜಾ ಅಣೆಕಟ್ಟೆಯಿಂದ ವ್ಯರ್ಥವಾಗಿ ಹರಿಯುತ್ತಿರುವ ನೀರು ತಡೆಯದಿರುವುದು, ಆಳಂದ ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗದಿರುವುದು, ಹೊಸ್‌ ಬಸ್‌ ನಿಲ್ದಾಣ ಪ್ರಸ್ತಾವನೆ ಸಾಕಾರಗೊಳ್ಳದಿರುವುದು, 400 ಕೆರೆಗಳ ಕನಸು ಭಗ್ನ, ಕೇಂದ್ರೀಯ ವಿವಿನಲ್ಲಿ ಜಮೀನು ಕೊಟ್ಟವರಿಗೆ ಮತ್ತು ಸ್ಥಳೀಯರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗ ದೊರೆಯದಿರುವುದು ಸೇರಿದಂತೆ ಇತರ ಸಮಸ್ಯೆಗಳು ಕ್ಷೇತ್ರದ ದೊಡ್ಡ ಸಮಸ್ಯೆಗಳಾಗಿವೆ.

ಶಾಸಕರು ಏನಂತಾರೆ?
ಭೀಮಾ ನದಿಯಿಂದ ಅಮರ್ಜಾ ಜಲಾಶಯಕ್ಕೆ ನೀರು ಹರಿಸುವ ಯೋಜನೆಗೆ ಚಾಲನೆ ದೊರೆತಿರುವುದು, ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಅರಣ್ಯೀಕರಣ ಹೆಚ್ಚಳಕ್ಕೆ ಚಾಲನೆ ದೊರಕಿರುವುದು, ವಿಧಾನಸಭೆ ಕಟ್ಟಡಕ್ಕೆ ಚಾಲನೆ ದೊರೆತಿರುವುದು, ಎಪಿಎಂಸಿ ವಿಂಗಡಣೆ ಆಗಿರುವುದು, ಗುಲಬರ್ಗಾ ವಿಶ್ವವಿದ್ಯಾಲಯದ ಪಿಜಿ ಕೇಂದ್ರ ಆರಂಭವಾಗಿರುವುದು ಉತ್ತಮ ಕಾರ್ಯಗಳಾಗಿವೆ.
ಬಿ.ಆರ್‌. ಪಾಟೀಲ, ಶಾಸಕರು, ಆಳಂದ

ಕ್ಷೇತ್ರ ಮಹಿಮೆ
ಪಟ್ಟಣದಲ್ಲಿ ಲಾಡ್ಲೆ ಮಶಾಕ್‌ ದರ್ಗಾ ಇದ್ದು, ಇದು ಹಿಂದೂ-ಮುಸ್ಲಿಂರ ಭಾವೈಕ್ಯಸಾರುತ್ತದೆ. ಖಜೂರಿ ಕೋರಣೇಶ್ವರ ಹಾಗೂ ಮಾದನಹಿಪ್ಪರಗಾ ಶಿವಲಿಂಗೇಶ್ವರ ವಿರಕ್ತಮಠ, ಚಿಂಚನಸೂರ ಮಹಾಪುರ ಜಾತ್ರೆ, ಗೋಳಾ ಗ್ರಾಮದ ಲಕ್ಕಮ್ಮ ದೇವಿ ದೇವಸ್ಥಾನ, ಜಿಡಗಾದ ಶಿವಯೋಗಿ ಸಿದ್ಧರಾಮೇಶ್ವರ ಮಠ ಇಲ್ಲಿನ ವಿಶೇಷಗಳು. ಲಕ್ಕಮ್ಮ ದೇವಿ ದೇಗುಲದಲ್ಲಿ ಹರಕೆ ಹೊತ್ತವರು ಇಲ್ಲಿನ ಗಿಡಗಳಿಗೆ ಹೊಸ ಚಪ್ಪಲಿ ತಂದು ಕಟ್ಟುವ ಸಂಪ್ರದಾಯವಿದೆ. ಐತಿಹಾಸಿಕ ನರೋಣಾ ಕ್ಷೇಮಲಿಂಗೇಶ್ವರ ದೇವಸ್ಥಾನವೂ ಇಲ್ಲಿದೆ

ಶಾಸಕರು ಗ್ರಾಮೀಣ ಭಾಗದ ಸಮಸ್ಯೆಗಳತ್ತ ಗಮನ ಹರಿಸಿ ಸಾಧ್ಯವಾದ ಮಟ್ಟಿಗೆ ಕೆಲಸಗಳನ್ನು ಮಾಡಿದ್ದಾರೆ. ಶಾಸಕರು ಜನರ ವೈಯಕ್ತಿಕ ಕೆಲಸಗಳಿಗಿಂತ ಸಮುದಾಯಕ್ಕೆ ಸ್ಪಂದಿಸುವ ಕಾರ್ಯ ಕೈಗೊಂಡಿರುವುದು ಮೆಚ್ಚುವಂತಿದೆ. ಮುಂದಿನ ದಿನಗಳಲ್ಲಿ ಉದ್ಯೋಗ ಕಲ್ಪಿಸುವ ಕಾರ್ಯಗಳಾದಲ್ಲಿ ಉತ್ತಮವಾಗುತ್ತದೆ.
ಮಲ್ಲಿನಾಥ ಶಿರಗಣಿ, ನಿಂಬಾಳ

ಶಾಸಕರು ಕೆರೆ ತುಂಬಿಸುವ ಯೋಜನೆ ಕಾರ್ಯ ಸಂಪೂರ್ಣ ಠುಸ್ಸಾಗಿರುವುದು, ಜನಸಂಪರ್ಕಕ್ಕೆ ಸರಳವಾಗಿ ಸಿಗದೇ ಇರುವುದು ಹಾಗೂ ಕೆಲವು ಕಾರ್ಯಗಳಿಗೆ ಗುದ್ದಲಿಗೆ ಮಾತ್ರ ಸಿಮೀತ ವಾಗಿರುವುದನ್ನು ನಾವು ಪ್ರಮುಖವಾಗಿ ಕಂಡಿದ್ದೇವೆ. ಗುದ್ದಲಿ ಪೂಜೆ ಹಾಗೂ ಘೋಷಣಾ ಕಾರ್ಯಗಳು ಕಾರ್ಯರೂಪಕ್ಕೆ ಬಂದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಪೂರಕವಾಗುತ್ತದೆ.
ಮಲ್ಲಿನಾಥ ಪಾಗಾ, ನಿಂಬಾಳ

ಆಳಂದ ತಾಲೂಕಿನ ಬಹುತೇಕ ಕಡೆ ರಸ್ತೆ, ಕಟ್ಟಡ ಕಾಮಗಾರಿಗಳು ನಡೆದಿವೆ. ಇದು ಒಳ್ಳೆಯ ಕೆಲಸ. ಆದರೆ ಜನರು ಕೂಡ ಸುಧಾರಣೆ ಆಗಬೇಕು. ಅಭಿವೃದ್ಧಿಯಲ್ಲಿ ನಮ್ಮ ಪಾತ್ರ ಸಹ ನಿರ್ವಹಿಸಬೇಕು. ಜನ ಇನ್ನಷ್ಟು ಬುದ್ಧಿವಂತರಾಗಬೇಕು. ಒಂದೇ ಕೈಯಿಂದ ಎಲ್ಲವೂ ಆಗಲು ಸಾಧ್ಯವಿಲ್ಲ. ಅದಕ್ಕೆ ಎಲ್ಲರ ಸಹಕಾರ ದೊರಕಬೇಕು.
ವೀರೇಶ ಶರಣರು, ರೇವಣಸಿದ್ಧೇಶ್ವರ ಮಠ, ಹಳ್ಳಿಸಲಗರ

ಕಿಣ್ಣಿಸುಲ್ತಾನ ಮಾರ್ಗವಾಗಿ ಸದಾ ಶಿವಗಡ ಅವರಾದ ರಸ್ತೆ ಕಾಮಗಾರಿ ಒಳ್ಳೆಯದಾಗಿದೆ. ತೊಗರಿ ಖರೀದಿಸಿರುವುದು ರೈತರಿಗೆ ಅನುಕೂಲವಾಗಿದೆ. ಗ್ರಾಮದ ಕೆರೆ ನಿರ್ಮಾಣ ಮಾಡದೆ ಅನುದಾನ ಏನಾಗಿದೆ ಗೊತ್ತಿಲ್ಲ.
ಕಲ್ಯಾಣರಾವ್‌ ದೇಸಾಯಿ, ಕಿಣ್ಣಿಸುಲ್ತಾನ

 ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next