ಜಮ್ಮು : ಹಿರಿಯ ಬಿಜೆಪಿ ನಾಯಕ ಮತ್ತು ಅವರ ಸಹೋದರರನ್ನು ಶಂಕಿತ ಉಗ್ರರು ಕೊಂದ ಘಟನೆಯನ್ನು ಅನುಸರಿಸಿ ಜಮ್ಮು ಕಾಶ್ಮೀರದ ಕಿಶ್ತ್ವಾರ್ ನಲ್ಲಿ ಹೇರಲಾಗಿದ್ದ ಕರ್ಫ್ಯೂ ಇದೀಗ ಇಂದು ಸೋಮವಾರ ನಿರಂತರ ಐದನೇ ದಿನಕೆ ಕಾಲಿಟ್ಟಿದೆ.
ಹಾಗಿದ್ದರೂ ಕರ್ಫ್ಯೂ ವನ್ನು ಮೊನ್ನೆ ಶನಿವಾರ ಮತ್ತು ನಿನ್ನೆ ಭಾನುವಾರ ಅನುಕ್ರಮವಾಗಿ 2 ಮತ್ತು 4 ತಾಸುಗಳ ಮಟ್ಟಿಗೆ ಸಡಿಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಸೋಮವಾರ ಕೂಡ ಕರ್ಫ್ಯೂ ಮುಂದುವರಿಯಲಿದ್ದು ಅದರಲ್ಲಿನ ಯಾವುದೇ ಸಡಿಲಿಕೆ ಬಗ್ಗೆ ಬಳಿಕ ನಿರ್ಧರಿಸಲಾಗುವುದು ಎಂದು ಕಿಶ್ತ್ ವಾರ್ ಜಿಲ್ಲಾಭಿವೃದ್ಧಿ ಆಯುಕ್ತ ಅಂಗ್ರೇಜ್ ಸಿಂಗ್ ರಾಣಾ ತಿಳಿಸಿದ್ದಾರೆ.
ಜಿಲ್ಲೆಯಲ್ಲೀಗ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಗತಿ ಮಾಮೂಲಿಯಾಗಿದ್ದು ಎಲ್ಲಿಯೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದವರು ಹೇಳಿದರು.
ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಇಂದು ಸೋಮವಾರ “ರಾಜ್ಯ ಬಿಜೆಪಿ ಕಾರ್ಯದರ್ಶಿ ಅನಿಲ್ ಪರಿವಾರ್ ಮತ್ತು ಅವರ ಸಹೋದರ ಅಜಿತ್ ಅವರ ಹತ್ಯೆಯಲ್ಲಿ ಶಾಮೀಲಾಗಿರುವವರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.