Advertisement

ರಂಗಭೂಮಿಯಿಂದ ಸಂಸ್ಕೃತಿ ಉನ್ನತಿ

05:03 PM Jul 19, 2018 | Team Udayavani |

ಕಲಬುರಗಿ: ರಂಗ ಎನ್ನುವ ಮಾಧ್ಯಮ ಜಾತ್ಯತೀತ ಹಾಗೂ ಕಾಲಾತೀತವಾಗಿದೆಯಲ್ಲದೇ ಸಂಸ್ಕಾರ ಮತ್ತು ಸಂಸ್ಕೃತಿ ಉಳಿದು ಬೆಳೆಯುವ ಕಾರ್ಯ ರಂಗಭೂಮಿಯಲ್ಲಿಯೇ ಅಡಕವಾಗಿದೆ ಎಂದು ಹಿರಿಯ ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಹೇಳಿದರು.

Advertisement

ಬುಧವಾರ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರಂಗಸಂಗಮ ಕಲಾವೇದಿಕೆ ವತಿಯಿಂದ ಆಯೋಜಿಸಿದ್ದ ಎಸ್‌.ಬಿ. ಜಂಗಮಶೆಟ್ಟಿ ಸ್ಮರಣಾರ್ಥ ರಂಗ ಪುರಸ್ಕಾರ ಸಮಾರಂಭದಲ್ಲಿ ವೃತ್ತಿ ರಂಗಭೂಮಿಯ ಸಾಧಕಿ ಸರಸ್ವತಿ ಉರುಫ್‌ ಜುಲೇಖಾ ಬೇಗಂ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸಮಾಜವನ್ನು ಒಂದು ಮಾಡುವಂತಹ ಕಾರ್ಯ ನಾಟಕಗಳಿಂದ ಆಗುತ್ತದೆಯಲ್ಲದೇ ಕಲಾಸಕ್ತರು ಹಿಂದೆಂದಿಗಿಂತಲೂ ನಾಟಕದ ಕಡೆಗೆ ಮುಖ ಮಾಡಬೇಕು ಎಂದರು.

ಕರ್ನಾಟಕ ರಂಗಭೂಮಿಯ ತವರು ನೆಲ. ಇಲ್ಲಿ ಅನೇಕ ರಂಗ ಕಲಾವಿದರಿಗೆ ಆಶ್ರಯ ನೀಡಲಾಗಿದೆ. ಹೀಗಾಗಿ ರಂಗಭೂಮಿ ವಿಶ್ವವಿದ್ಯಾಲಯವಾಗಿತ್ತು. ಮನುಷ್ಯನನ್ನು ದೊಡ್ಡದನ್ನಾಗಿ ತೋರಿಸುವ ಸಿನಿಮಾಕ್ಕೂ, ಮನುಷ್ಯನನ್ನು ಚಿಕ್ಕವನನ್ನಾಗಿ ತೋರಿಸುವ ಟಿವಿಗೂ ಮತ್ತು ಇದ್ದ ಮನುಷ್ಯನನ್ನು ಇದ್ದಂತೆ ನೋಡುವ ರಂಗಭೂಮಿಗೂ ವ್ಯತ್ಯಾಸವಿದೆ ಎಂದು ಹೇಳಿದರು. 

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ ಮುಖ್ಯ ಅತಿಥಿಯಾಗಿ ಮಾತನಾಡಿ, ವೃತ್ತಿರಂಗಭೂಮಿ ಅನನ್ಯ ಲೋಕ. ಕರ್ನಾಟಕ ಸಾಂಸ್ಕೃತಿಕ ಬದುಕಿಗೆ ರೂಪು ಕೊಟ್ಟಿದ್ದೆ ವೃತ್ತಿರಂಗಭೂಮಿ. ಇದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಹೇಳಿದರು.

ಹಿರಿಯ ಸಾಹಿತಿ ಪ್ರೊ| ವಸಂತ ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಪುರಸ್ಕೃತೆ ಸರಸ್ವತಿ ಉರುಫ್‌ ಜುಲೇಖಾ ಬೇಗಂ ಅವರ ಕುರಿತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಡಾ| ಅಪ್ಪಗೆರೆ ಸೋಮಶೇಖರ ಮಾತನಾಡಿದರು. ಎಸ್‌.ಬಿ.ಜಂಗಮಶೆಟ್ಟಿ ಕುರಿತು ಪತ್ರಕರ್ತ, ಸಾಹಿತಿ ಶಿವರಂಜನ್‌ ಸತ್ಯಂಪೇಟೆ ಮಾತನಾಡಿ, ಪ್ರವೃತ್ತಿಯಲ್ಲಿ ಸಾಹಿತ್ಯ, ಸಂಗೀತ, ರಂಗಭೂಮಿ ಪೋಷಕರಾಗಿದ್ದರು ಎಂದರು.

Advertisement

ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೆಟ್‌ ಸದಸ್ಯ ಚಂದ್ರಶೇಖರ್‌ ನಿಟ್ಟೂರೆ, ಸುಭದ್ರಾದೇವಿ ಜಂಗಮಶೆಟ್ಟಿ, ರಂಗಸಂಗಮ ವೇದಿಕೆ ಉಪಾಧ್ಯಕ್ಷೆ ಚಿನ್ನಾದೇವಿ ಶರಣು ಕಮರಡಗಿ ಹಾಜರಿದ್ದರು.

ರಂಗಸಂಗಮ ವೇದಿಕೆ ಕಾರ್ಯದರ್ಶಿ ಡಾ| ಸುಜಾತಾ ಜಂಗಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು. ಬಿ.ಎಚ್‌.ನಿರಗುಡಿ ವಂದಿಸಿದರು.

ಡಾ| ಛಾಯಾ ಭರತನೂರ ಮತ್ತು ಸಂಗಡಿಗರಿಂದ ಪ್ರಾರ್ಥನಾ ಗೀತೆ, ಸಂಗೀತ ಕಾರ್ಯಕ್ರಮ ನಡೆಯಿತು. ಹಿರಿಯರಾದ ಅನಂರ ಹರಸೂರ, ಪ್ರಭಾಕರ ಸಾತಖೇಡ, ಎಲ್‌.ಬಿ.ಕೆ. ಆಲ್ದಾಳ, ಗವೀಶ ಹಿರೇಮಠ, ಮಿಲಿಂದ ಮಡಕಿ, ರಂಗಾಯಣ ನಿರ್ದೇಶಕ ಮಹೇಶ ಪಾಟೀಲ್‌, ರಂಗಕರ್ಮಿ ಪ್ರಭಾಕರ ಜೋಶಿ, ಝರಣಪ್ಪ ಚಿಂಚೋಳಿ, ಭೀಮಣ್ಣ ಬೋನಾಳ, ರವೀಂದ್ರ ಶಾಬಾದಿ, ಡಾ| ಮೀನಾಕ್ಷಿ ಬಾಳಿ ಮುಂತಾದವರಿದ್ದರು.

ಎಸ್‌.ಬಿ. ಜಂಗಮಶೆಟ್ಟಿ ರಂಗ ಪುರಸ್ಕಾರಕ್ಕೆ ಭಾಜನರಾದ ಸರಸ್ವತಿ ಉರುಫ್‌ ಜುಲೇಖಾಬೇಗಂ ಅವರಿಗೆ ಸತ್ಕಾರ, ಮೊಮೆಂಟೊ ಹಾಗೂ 10 ಸಾವಿರ ರೂ. ನಗದು ಪುರಸ್ಕಾರ ಮತ್ತು ಎರಡು ಕೆಜಿ ತೊಗರಿ ಬೇಳೆ ನೀಡುವ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next