Advertisement

UV Fusion: ಸಂಸ್ಕೃತಿ ಸಂಭ್ರಮ: ಮಾಯವಾಗುತ್ತಿದೆ ಗರತಿಯ ಹಾಡು

03:20 PM Jan 23, 2024 | Team Udayavani |

ಭಾರತ ಕಲೆ, ಸಂಸ್ಕೃತಿಯ ತವರೂರು. ಅನೇಕತೆಯಲ್ಲಿ ಏಕತೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ರಾಷ್ಟ. ವಿವಿಧ ಸಂಸ್ಕೃತಿ, ಭಾಷೆ, ಧರ್ಮ, ವೇಷ-ಭೂಷಣ ಮತ್ತು ಜಾನಪದ ಶೈಲಿ, ಜೀವನ-ಕಸುಬು ಹೀಗೆ ವೈವಿಧ್ಯಮಯ ಮತ್ತು ವೈಶಿಷ್ಯಪೂರ್ಣ ಸಮೃದ್ಧ ಪವಿತ್ರ ಭೂಮಿ ನಮ್ಮದು.

Advertisement

ಅದರಲ್ಲಿ ವಿಶೇಷವಾಗಿ ಭವ್ಯ ಪರಂಪರೆ, ಇತಿಹಾಸ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆಯನ್ನು ಹೊಂದಿದ ನಮ್ಮ ಕರ್ನಾಟಕದಲ್ಲಿ ಸೋಬಾನ ಪದ, ಲಾಲಿ ಹಾಡು, ಬೀಸುವ ಕಲ್ಲಿನ ಪದ, ಹಂತಿ ಪದ, ಗೀಗಿ ಪದ, ಮದುವೆ, ಸೀಮಂತ ಮತ್ತು ತೊಟ್ಟಿಲು ಕಾರ್ಯಕ್ರಮದಲ್ಲಿ ಹಾಡುವ ಅನೇಕ ಗರತಿಯ ಹಾಡುಗಳು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ.

ಗರತಿಯ ಹಾಡುಗಳು ನಮ್ಮ ನಾಡಿನ ಹೆಣ್ಣು ಮಕ್ಕಳ ಹೃದಯದ ಪಡಿಗನ್ನಡಿ ಇದ್ದಂತೆ. ಅದರಲ್ಲಿ ತಾಯಿ-ಮಗಳ, ಅಣ್ಣ-ತಮ್ಮಂದಿರ ನಡುವಿನ ಮಮತೆಯ ಮಾಧುರ್ಯ, ಗಂಡ-ಹೆಡಿರ ಸರಸ-ವಿರಸ ಮತ್ತು ಪ್ರೇಮ ಸತ್ವವು ಹಾಗೂ ಹೆಣ್ಣಿನ ತ್ಯಾಗ-ಬುದ್ಧಿಯು ತುಂಬಿ ತುಳುಕುತ್ತಿರುತ್ತದೆ. ಕೌಟುಂಬಿಕ ರಸವು ಪರಿಪಾಕಗೊಂಡಿರುತ್ತದೆ. ಗರತಿಯ ಹಾಡುಗಳು ಹೆಣ್ಣಿನ ಜೀವನ ಜೀವಾಳವಾಗಿದೆ.

ಯಾವುದೋ ಕಾಲದಿಂದ ಒಬ್ಬರಿಂದೊಬ್ಬರ ಬಾಯಿಯಿಂದ ಬಾಯಿಗೆ ಪಸರುತ್ತಾ ಬಂದಿರುವ ಈ ಗರತಿಯ ಹಾಡುಗಳು ಇಂದಿನ ಪಾಶ್ಚಾತ್ಯ ಸಂಸ್ಕೃತಿ, ಸಮೂಹ ಮಾಧ್ಯಮಗಳು, ಟಿವಿ, ಮೋಬೈಲ್‌, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮಾಯವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಹೆಣ್ಣು ಸಂಸ್ಕೃತಿಯ ಪ್ರತಿಬಿಂಬ.

ಆಕೆ ಮದುವೆಯಾದ ಅನಂತರ ತವರುಮನೆ, ಗಂಡನ ಮನೆಯಲ್ಲಿ ಹೇಗೆ ಸಂಸಾರ ಮಾಡಬೇಕೆಂಬ ಬಗ್ಗೆ ಹಾಡುಗಳ ಮೂಲಕ ಕಿವಿಮಾತು ಹೇಳುತ್ತಾ, ಆಕೆಗಿರುವ ಸ್ಥಾನಮನ, ಗೌರವಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಗರತಿಯ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಈ ಮೂಲಕ ಸ್ತ್ರೀ ಸಮಾಜದಲ್ಲಿ ಹೇಗೆ ಬಾಳಿ ಬದುಕಬೇಕೆಂಬ ಸೂಕ್ಷ್ಮವಿಷಯಗಳನ್ನು ವಿವರಿಸಿ ಸ್ತ್ರೀಗೆ ಗೌರವಯುತ ಜೀವನ-ಸಂಸಾರ ನಡೆಸಿ ಸಮಾಜದ ಕಟ್ಟಳೆಗಳನ್ನು ಮನವರಿಕೆ ಮಾಡಲಾಗುತ್ತಿತ್ತು.

Advertisement

ಹಾಲುಂಡ ತರೀಗಿ ಏನೆಂದ ಹಾಡಲೆ

ಹೊಳೆದಂಡೆಯಲಿರುವ ಕರಕೀಯ

ಕುಡಿಯಂಗ ಹಬ್ಬಲಿ ಅವರ ರಸಬಳ್ಳಿ

ಎಂಬ ಸಾಲುಗಳಿಂದ ತವರುಮನೆಯ ಎಲ್ಲ ಕುಟುಂಬದ ಸದಸ್ಯರು ಸಂತೋಷದಿಂದಿರಲಿ. ಅದರ ಕೀರ್ತಿಯು ವ್ಯಾಪಕವಾಗಿ ಬಳ್ಳಿಯಂತೆ ಹಬ್ಬಲೆಂದು ಒಳ್ಳೆಯ ಬಯಕೆಯನ್ನು ನಾವು ತಿಳಿದುಕೊಳ್ಳಬಹುದು.

ಅತ್ತೀಯ ಮನಿಯಾಗ ಮುತ್ತಾಗಿ ಇರಬೇಕ

ಹೊತ್ತ ನೀಡಿದರ ಉಣಬೇಕ

ತವರೂರ ಉತ್ತಮರ ಹೆಸರ ತರಬೇಕ

ಎಂಬ ಮೇಲಿನ ಸಾಲುಗಳಿಂದ ತಾಯಿಯಾದವಳು ಮದುವೆಯಾಗಿ ಗಂಡನ ಮನೆ ಸೇರುತ್ತಿರುವ ತನ್ನ ಮಗಳಿಗೆ ಗಂಡನ ಮನೆಯಲ್ಲಿ ಗುರು-ಹಿರಿಯರಿಗೆ ಗೌರವ ನೀಡುವುದು, ಅತ್ತೆ-ಮಾವ ಮತ್ತು ಮನೆಯವರೊಂದಿಗೆ ಹೇಗೆ ನಡೆದುಕೊಳ್ಳಬೇಕು. ಗಂಡನ ಮನೆಯ ಕುಟುಂಬದ ಸದಸ್ಯರೆಲ್ಲರ ಪ್ರೀತಿಗೆ ಪಾತ್ರರಾಗಿ, ತಂದೆ-ತಾಯಿ, ತವರುಮನೆಯ ಹೆಸರು ತರಬೇಕೆಂಬ ಕಿವಿಮಾತು ಹೇಳುತ್ತಿದ್ದಳು. ಹೀಗಾಗಿ ತನ್ನ ಯಾವುದೇ ತಪ್ಪುಗಳನ್ನು ಮಾಡಿದರೆ ಆಕೆ ಗರತಿಯ ಹಾಡುಗಳ ಮೂಲಕ ಬುದ್ಧಿವಾದವನ್ನು ಹೇಳುತ್ತಾ ತನ್ನ ಗಂಡನ ವ್ಯಕ್ತಿತ್ವ ಹಾಗೂ ಸತಿಯ ಅಂದ-ಚೆದವನ್ನು ವರ್ಣನೆ ಮಾಡುತ್ತಾಳೆ.

ನಮ್ಮ ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸುವ ಗರತಿಯ ಹಾಡುಗಳು ಇಂದು ಮಾಯವಾಗುತ್ತಿರುವುದು ತೀರಾ ವಿಷಾದನೀಯ ಸಂಗತಿ. ನಮ್ಮ ಗ್ರಾಮೀಣ ಸೊಗಡು, ಜನಜೀವನ, ಜೀವನ ಶೈಲಿ, ಹಬ್ಬ-ಹರಿದಿನ, ಆಚರಣೆ, ಸಂಪ್ರದಾಯಗಳ ಬಗ್ಗೆ ಹಾಡಿನ ಮೂಲಕ ತಿಳಿಸಿಕೊಡುತ್ತಿರುವ ಗರತಿಯ ಜಾನಪದ ಹಾಡುಗಳು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ನಶಿಸಿ ಹೋಗುತ್ತಿವೆ. ಆಧುನಿಕತೆಯ ಸೋಗಿನಲ್ಲಿ ನಾವಿಂದು ನಮ್ಮ ಸಂಸ್ಕೃತಿ ಮತ್ತು ನಮ್ಮತನವನ್ನು ಮರೆತು ಬಿಡುತ್ತಿದ್ದೇವೆ. ಇದನ್ನು ನಮ್ಮ ಮುಂದಿನ ಯುವ ಜನಾಂಗಕ್ಕಾಗಿ ಉಳಿಸಿ, ಬೆಳೆಸಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ.

ಮಲ್ಲಪ್ಪ ಸಿ.

ಖೊದ್ನಪೂರ

Advertisement

Udayavani is now on Telegram. Click here to join our channel and stay updated with the latest news.

Next