Advertisement

ಶನಿವಾರ ಸಸ್ಯಕಾಶಿಗೆ ಹರಿದುಬಂದ ಜನಸಾಗರ

01:16 AM Aug 11, 2019 | Lakshmi GovindaRaj |

ಬೆಂಗಳೂರು: ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಲಾಲ್‌ಬಾಗ್‌ನ ಡಾ.ಎಂ.ಎಚ್‌.ಮರಿಗೌಡ ಸ್ಮಾರಕ ಸಭಾಂಗಣದಲ್ಲಿ ಎರಡು ದಿನಗಳ ಪೂರಕ ಕಲೆಗಳ ಪ್ರದರ್ಶನಕ್ಕೆ ಶನಿವಾರ ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ರಮೇಶ್‌ ಚಾಲನೆ ನೀಡಿದರು.

Advertisement

ಈ ಪ್ರದರ್ಶನಲ್ಲಿ ಬಿಡಿಎ, ಬಿಬಿಎಂಪಿ, ರಕ್ಷಣಾ ಇಲಾಖೆ ಸಂಸ್ಥೆಗಳು, ವಿವಿಧ ಬ್ಯಾಂಕ್‌ಗಳು, ಖಾಸಗಿ ಹೋಟೆಲ್‌ಗ‌ಳು, ಕೈಗಾರಿಕಾ ಸಂಸ್ಥೆಗಳು, ಆಸ್ಪತ್ರೆಗಳು, ಶಾಲಾ ಕಾಲೇಜುಗಳು, ವಿಪ್ರೊ, ಸಿಸ್ಕೊ, ಇನ್ಫೋಸಿಸ್‌ ರೀತಿಯ ಸಂಸ್ಥೆಗಳ ತೋಟಗಾರಿಕಾ ವಿಭಾಗಗಳು ಭಾಗವಹಿಸಿ ವಿವಿಧ ಹಣ್ಣುಗಳು, ತರಕಾರಿ ಹಾಗೂ ಹೂವುಗಳನ್ನು ಬಳಸಿ ವಿಶೇಷ ಕಲಾಕೃತಿಗಳನ್ನು ಪ್ರದರ್ಶಿಸಿದವು.

ಪೂರಕ ಕಲೆಗಳ ಪ್ರದರ್ಶನದಲ್ಲಿ 400ಕ್ಕೂ ಹೆಚ್ಚು ಕಲಾಕೃತಿಗಳಿದ್ದು, ಪುಷ್ಪ ಜೋಡಣೆ, ಇಕೆಬಾನ, ಬೋನ್ಸಾಯ್‌, ತರಕಾರಿ ಕೆತ್ತನೆ, ಡಚ್‌ ಮಾದರಿ ವಿನ್ಯಾಸ ಹಾಗೂ ಒಣ ಹೂವಿನ ಜೋಡಣೆ, ಥಾಯ್‌ ಆರ್ಟ್‌ ಪ್ರಮುಖ ಆಕರ್ಷಣೆಯಾಗಿದ್ದವು. ಮುಖ್ಯವಾಗಿ ಕೇಸರಿ, ಬಿಳಿ, ಹಸಿರು ಬಣ್ಣದ ಹೂವುಗಳನ್ನು ಜೋಡಿಸಿ ಭಾರತ ಭೂಪಟ ಮಾದರಿಯನ್ನು ಸಿದ್ಧ ಪಡೆಸಿದ್ದು ಇದು ಎಲ್ಲರಿಗೂ ಸ್ವಾತಂತ್ರ್ಯದಿನಾಚರಣೆಯ ಶುಭಾಶಯಗಳನ್ನು ಕೋರುವಂತಿತ್ತು.

ಹೊಂಬಾಳೆಯಲ್ಲಿ ಅರಳಿದ ಲಕ್ಷ್ಮೀ, ಬಾಳೆಗೊನೆಯ ತುಳಸಿ ಕಟ್ಟೆ ಹಾಗೂ ಸಸಿ, ತೆಂಗಿನಗರಿಯ ಮಹಿಳಾ ಉಡುಪುಗಳು, ವಿವಿಧ ಹೂವು, ಎಲೆಗಳಿಂದ ನಿರ್ಮಾಣಗೊಂಡಿದ್ದ ಕಳಸ, ಹಣ್ಣಿನಿಂದ ಅರಳಿದ ಹೆಣ್ಣು-ಗಂಡಿನ ಮೂರ್ತಿ, ಕಲ್ಲಂಗಡಿ ಹಣ್ಣಿನಲ್ಲಿ ಹೂಬುಟ್ಟಿ, ತೆಂಗಿನ ಗರಿಗಳಲ್ಲಿ ಕಲ್ಯಾಣ ಮಂಟಪ ಹೀಗೆ ಬಗೆ ಬಗೆಯ ಹಣ್ಣು-ತರಕಾರಿಗಳಿಂದ ಹಲವು ಪ್ರಕಾರದ ಕಲೆಗಳು ನಿರ್ಮಿಸಿದ್ದು, ಎಲ್ಲವು ಆಕರ್ಷಕವಾಗಿವೆ. ಈ ಪ್ರದರ್ಶನದಲ್ಲಿ ಕಲಾವಿದರ ಕೈಚಳಕವನ್ನು ಕಂಡು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.

ಈ ಪ್ರದರ್ಶನವು ಭಾನುವಾರ ಸಂಜೆ 6 ಗಂಟೆವರೆಗೂ ನಡೆಯಲಿದ್ದು, ಅತ್ಯುತ್ತಮ ಕಲಾಕೃತಿಗೆ ಆ.14ರಂದು ಗಾಜಿನಮನೆಯಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು. ಪೂರಕ ಕಲೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌, ಉಪನಿರ್ದೇಶಕ ಎಂ.ಆರ್‌. ಚಂದ್ರಶೇಖರ್‌, ಮೈಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

ವಾರಾಂತ್ಯ ಹೆಚ್ಚು ಮಂದಿ: ಸರಣಿ ರಜೆ ಹಿನ್ನೆಲೆ ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನಕ್ಕೆ ಶನಿವಾರ 25 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ಅದರಲ್ಲಿ 5 ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿದ್ದಾರೆ. ಭಾಗಶಃ ಕರ್ನಾಟಕದಲ್ಲಿ ನೆರೆ ಹಿನ್ನೆಲೆ ಮಲೆನಾಡು, ಕರಾವಳಿ ಭಾಗಗಳಿಗೆ ಪ್ರವಾಸ ತೆರಳಲು ಸಾಧ್ಯವಾಗದ ಹಿನ್ನೆಲೆ ಸಿಲಿಕಾನ್‌ ಸಿಟಿ ಜನರು ಸ್ಥಳೀಯವಾಗಿಯೇ ಸುತ್ತಾಟ ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸ್ವಾತಂತ್ರ್ಯೋತ್ಸವ ಫ‌ಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಹೆಚ್ಚು ಮಂದಿ ಲಾಲ್‌ಬಾಗ್‌ಗೆ ಭೇಟಿ ನೀಡುತ್ತಿದ್ದಾರೆ.

ಜಯಚಾಮರಾಜ ಒಡೆಯರ್‌ ಅವರ ಸಾಧನೆ ಕುರಿತ ಫ‌ಲಪುಷ್ಪ ಪ್ರದರ್ಶನವಾಗಿರುವುದರಿಂದ ಒಡೆಯರ್‌ ಕುರಿತು ಸಾಕಷ್ಟು ಮಾಹಿತಿಯನ್ನು ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ ನೀಡಿದೆ. ಹೀಗಾಗಿ ಪ್ರದರ್ಶನಕ್ಕೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

12.62 ಲಕ್ಷ ರೂ. ಶುಲ್ಕ ಸಂಗ್ರಹ: “ಫ‌ಲಪುಷ್ಪ ಪ್ರದರ್ಶನ ಉದ್ಘಾಟನೆಯಾದ ದಿನ 6,000 ವಯಸ್ಕರು ಹಾಗೂ 2,000 ಮಕ್ಕಳು ಲಾಲ್‌ಬಾಗ್‌ಗೆ ಭೇಟಿ ಕೊಟ್ಟಿದ್ದು, 3.22 ಲಕ್ಷ ರೂ.ಶುಲ್ಕ ಸಂಗ್ರಹವಾಗಿತ್ತು. ಇನ್ನು ಶನಿವಾರ 20,000 ವಯಸ್ಕರು ಹಾಗೂ 5,000 ಮಕ್ಕಳು ಭೇಟಿ ಕೊಟ್ಟಿದ್ದು, 12.62 ಲಕ್ಷ ರೂ. ಶುಲ್ಕ ಸಂಗ್ರಹವಾಗಿದೆ. ಭಾನುವಾರ ಹಾಗೂ ಸೋಮವಾರವೂ ರಜಾ ದಿನವಾಗಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ತೋಟಗಾರಿಕೆ ಇಲಾಖೆ ಲಾಲ್‌ಬಾಗ್‌ ಉದ್ಯಾನದ ಉಪನಿರ್ದೇಶಕ ಎಂ.ಆರ್‌.ಚಂದ್ರಶೇಖರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next