Advertisement

ಸೂರು ಕಟ್ಟಿಕೊಂಡವರಿಗೆ ಬಿಕ್ಕಟ್ಟು

12:08 PM Jul 31, 2019 | Team Udayavani |

ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿ ಗ್ರಾಮದ ಹೊಸಕೇರಿ ಪ್ಲಾಟ್‌ನಲ್ಲಿ ಕಳೆದ 35 ವರ್ಷಗಳಿಂದ ನಿವೇಶನ ಹಕ್ಕು ಪತ್ರಗಳನ್ನು ಹೊಂದಿರುವ ನಿವಾಸಿಗಳಿಗೆ ಭೂ ಮಾಲೀಕರಿಂದ ಮುಕ್ತಿ ಸಿಗದ್ದರಿಂದ 40ಕ್ಕೂ ಹೆಚ್ಚು ಕುಟುಂಬಗಳ ಸ್ಥಿತಿ ‘ಅತ್ತದರಿ ಇತ್ತ ಪುಲಿ’ ಎನ್ನುವಂತಾಗಿದೆ.

Advertisement

1985ರಲ್ಲಿ ಗ್ರಾಮದ ಹೂಗಾರ ಕುಟುಂಬದವರಿಗೆ ಸೇರಿದ್ದು ಎನ್ನಲಾದ ರಿ.ಸ.ನಂ 33/1/2 ಸೇರಿ ಒಟ್ಟು 35 ಗುಂಟೆ ಜಾಗೆಯಲ್ಲಿ ಮಂಡಳ ಪಂಚಾಯಿತಿ ನಿವೇಶನ ಗುರುತಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಿಕೊಟ್ಟಿತ್ತು. 41 ಕುಟುಂಬಗಳಿಗೆ ತಹಸೀಲ್ದಾರ್‌ರಿಂದ ಹಕ್ಕು ಪತ್ರವನ್ನೂ ನೀಡಲಾಗಿತ್ತು. ಆ ಸಂದರ್ಭದಲ್ಲಿ ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿ ಮನೆಗಳನ್ನೂ ನಿರ್ಮಿಸಿಕೊಡಲಾಗಿತ್ತು. ಕಾಲ ಕ್ರಮೇಣ ಇಲ್ಲಿನ ನಿವಾಸಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆಗಳನ್ನು ವಿಸ್ತರಿಸಿ ಅಭಿವೃದ್ಧಿಪಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಗ್ರಾಪಂನವರು ಇದೂವರೆಗೂ ಭೂಮಾಲಿಕರಿಂದ ಸ್ವಾಧೀನಪಡಿಸಿಕೊಂಡ ನಿವೇಶನ ಕಾಗದ ಪತ್ರಗಳನ್ನು ತಿದ್ದುಪಡಿ ಮಾಡಿಕೊಳ್ಳದ್ದರಿಂದ ಈಗ ಬಿಕ್ಕಟ್ಟು ಎದುರಾಗಿದೆ. ಈಗ ಈ ಜಾಗೆಯ ಮೂಲ ಭೂ ಮಾಲೀಕರು ತಗಾದೆ ತೆಗೆಯುತ್ತಿರುವುದರಿಂದ ಇಲ್ಲಿನ ನಿವಾಸಿಗರು ತಮ್ಮ ಹಳೆಯದಾದ, ಬೀಳುವ ಸ್ಥಿತಿಯಲ್ಲಿರುವ ಮನೆಗಳನ್ನು ಮರು ನಿರ್ಮಿಸಿಕೊಳ್ಳಲು ಮುಂದಾದರೆ ಭೂಮಾಲಿಕರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ.

ಸರ್ಕಾರ ಸರ್ವರಿಗೂ ಸೂರು ಕಲ್ಪಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಈ ಸ್ವತ್ತು ಉತಾರ ಲಭ್ಯವಾಗದ್ದರಿಂದ ತಮ್ಮ ಹೊಸ ಮನೆ ಕನಸು ನನಸಾಗುತ್ತಿಲ್ಲ ಎಂಬುದು ಇಲ್ಲಿಯ ನಿವಾಸಿಗರ ಅಸಮಾಧಾನ.

ಈ ಸಮಸ್ಯೆ ಸರಿಪಡಿಸಿ ನಮ್ಮನ್ನು ನಿಶ್ಚಿಂತರನ್ನಾಗಿಸಬೇಕು ಎಂದು ಅನೇಕ ವರ್ಷಗಳಿಂದ ಗ್ರಾ.ಪಂನವರಿಗೆ, ಜನಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿಯ ನಿವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು ಜೂನ್‌ 17ರಂದು ಇಲ್ಲಿನ ನಿವಾಸಿಗರು ಈಗಿರುವ ನಿವೇಶನಗಳ ಮತ್ತು ಮನೆಗಳಿಗೆ ಈ ಸ್ವತ್ತು ಅಡಿಯಲ್ಲಿ ಉತಾರ ನೀಡುವಂತೆ ಪಟ್ಟು ಹಿಡಿದು ಗ್ರಾಪಂ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದ್ದರು. ಅಂದು ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿದ್ದ ಶಾಸಕ ರಾಮಣ್ಣ ಲಮಾಣಿ ಅವರು ಒಂದೆರಡು ತಿಂಗಳಲ್ಲಿ ಈ ಸಮಸ್ಯೆಗೆ ಶಾಸ್ವತ ಪರಿಹಾರ ಕಲ್ಪಿಸಿಕೊಡುವ ಭರವಸೆ ನೀಡಿದ್ದರು. ಆದರೆ ಶಾಸಕರು ಇತ್ತ ಗಮನ ಹರಿಸದ್ದರಿಂದ ಇಲ್ಲಿಯ ಜನರಿಗೆ ತಮ್ಮ ಅಸ್ತಿತ್ವಕ್ಕಾಗಿ ಮತ್ತೇ ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಈ ಕುರಿತು ಇಲ್ಲಿನ ನಿವಾಸಿಗಳಾದ ಗೌರಮ್ಮ ಮಠಪತಿ, ಕಮಲವ್ವ ಹತ್ತಿಕಾಳ, ಪಾರವ್ವ ನಿಂಗನಗೌಡ್ರ, ಲಕ್ಷ್ಮವ್ವ ಪಾಟೀಲ, ದುರುಗಮ್ಮ ಭಜಂತ್ರಿ, ಲಕ್ಷ್ಮವ್ವ ಕೊಲ್ಲಾರಿ, ಈರವ್ವ ಮ್ಯಾಗೇರಿ, ದುರಗವ್ವ ಮಲ್ಲೆಮ್ಮನವರ, ನಿಂಗವ್ವ ಪಿಡ್ಡನಗೌಡ್ರ, ಲಕ್ಷ್ಮವ್ವ ನಿಂಗನಗೌಡ್ರ, ಶಂಕ್ರಪ್ಪ ಮಲ್ಲಮ್ಮನವರ, ಫಕ್ಕೀರಪ್ಪ ಕೊಲ್ಲಾರಿ, ಪುಂಡಲೀಕ ಮಾಂಡ್ರೆ, ಈರಣ್ಣ ಹತ್ತಿಕಾಳ ಮತ್ತಿತರರು ಪತ್ರಿಕೆಯ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಂಬಂಧಪಟ್ಟವರು ಮೂಲ ಭೂ ಮಾಲಿಕರಿಂದ ನಮ್ಮನ್ನು ಮುಕ್ತಗೊಳಿಸಿ ಶಾಶ್ವತ ಭದ್ರತೆ ಕಲ್ಪಿಸಿಕೊಟ್ಟು ಗೋಳು ತಪ್ಪಿಸಬೇಕೆಂದು ಅವಲೊತ್ತುಕೊಂಡಿದ್ದಾರೆ.

ಯಳವತ್ತಿ ಗ್ರಾಮದ ಹೊಸಕೆರೆ ಪ್ಲಾಟ್ ಮೂಲತಃ ಇದು ಚಾಕ್ರಿ( ಪೂಜಾರಿಕೆ) ಜಮೀನಾಗಿದೆ. ಅಖಂಡ ಧಾರವಾಡ ಜಿಲ್ಲೆ ಇದ್ದಾಗ ಅಂದಿನ ಜಿಲ್ಲಾಧಿಕಾರಿಗಳು ಈ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡು ಸರ್ಕಾರಿ ಜಮೀನೆಂದು ನೋಟಿಪೈ ಮಾಡಿದ್ದಾರೆ. ಇದು ಯಾರಧ್ದೋ ಮಾಲಿಕತ್ವದ ಜಮೀನಲ್ಲ. ಆದರೆ ಮೂಲ ಪಹಣಿ ಪತ್ರಿಕೆಯಲ್ಲಿ ಮಾಲಿಕರ ಹೆಸರು ಮಾತ್ರ ಬದಲಾಗಿಲ್ಲ. ಈ ಹೆಸರು ಬದಲಾವಣೆಗಾಗಿ ಕಂದಾಯ ಇಲಾಖೆಗೆ ಸೂಕ್ತ ದಾಖಲೆಗಳೊಂದಿಗೆ ಬರೆಯಲಾಗಿದೆ. ಭೂಮಾಲಿಕರು ಅಲ್ಲಿನ ನಿವಾಸಿಗರಿಗೆ ತೊಂದರೆ ಕೊಟ್ಟರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಆರ್‌.ವೈ. ಗುರಿಕಾರ.

Advertisement

Udayavani is now on Telegram. Click here to join our channel and stay updated with the latest news.

Next