Advertisement

Crime: ಅತ್ತೆ ಕೊಂದು ಹೃದಯಾಘಾತ ಕಥೆ ಕಟ್ಟಿದ ಸೊಸೆ!

10:47 PM Oct 17, 2023 | Team Udayavani |

ಬೆಂಗಳೂರು: ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಅತ್ತೆಯನ್ನು ನಿದ್ದೆ ಮಾತ್ರೆ ಹಾಕಿ ಕೊಲೆಗೈದು, ಹೃದಯಾಘಾತ ಎಂದು ಬಿಂಬಿಸಿದ ಸೊಸೆಯ “ಸಂಚು” ವಾಟ್ಸ್‌ಆ್ಯಪ್‌ ಚಾಟ್‌ನಿಂದ ಬಯಲಾಗಿದೆ.

Advertisement

ಈ ಸಂಬಂಧ ಬ್ಯಾಡರಹಳ್ಳಿ ವಿನಾಯಕನಗರ ನಿವಾಸಿ, ಪ್ರಮುಖ ಆರೋಪಿ ರಶ್ಮಿ (30), ಆಕೆಯ ಪ್ರಿಯಕರ, ಕುಂದಾಪುರ ಮೂಲದ ಅಕ್ಷಯ್‌(35) ಮತ್ತು ಈತನ ಸ್ನೇಹಿತ ಪುರುಷೋತ್ತಮ್‌(35) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಅ.5ರಂದು ಲಕ್ಕಮ್ಮ(52) ಎಂಬುವರನ್ನು ಕೊಲೆಗೈದಿದ್ದರು. ಈ ಸಂಬಂಧ ಲಕ್ಕಮ್ಮ ಪುತ್ರ ಮಂಜುನಾಥ್‌ ಕೊಲೆ ಪ್ರಕರಣ ದಾಖಲಿಸಿದ್ದರು.
ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಮಂಜುನಾಥ್‌ ಕೆಲ ವರ್ಷಗಳ ಹಿಂದೆ ರಶ್ಮಿ ಜತೆ ಮದುವೆಯಾಗಿದ್ದು, ಬ್ಯಾಡರಹಳ್ಳಿಯ ವಿನಾಯಕನಗರದಲ್ಲಿ 3 ಅಂತಸ್ತಿನ ಕಟ್ಟಡವೊಂದಿದ್ದು, ಕೆಳ ಮಹಡಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಮಂಜುನಾಥ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ರಶ್ಮಿ ಮತ್ತು ಅತ್ತೆ ಲಕ್ಕಮ್ಮ ಚೀಟಿ ಹಾಗೂ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದರು.

ಇನ್ನು ನಗರದಲ್ಲಿ ಪೇಂಟಿಂಗ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕುಂದಾಪುರ ಮೂಲದ ಅಕ್ಷಯ್‌, ಮಂಜುನಾಥ್‌ಗೆ ಸೇರಿದ ಕಟ್ಟಡದ ಮೊದಲ ಮಹಡಿಯ ಬಾಡಿಗೆ ಮನೆಯಲ್ಲಿ 6 ವರ್ಷಗಳಿಂದ ವಾಸವಾಗಿದ್ದ. ಈ ಮಧ್ಯೆ ರಶ್ಮಿ ಮತ್ತು ಅಕ್ಷಯ್‌ ನಡುವೆ ಆತ್ಮೀಯತೆ ಬೆಳೆದಿದ್ದು, ಕೆಲ ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಆದರೆ, ಇತ್ತೀಚೆಗೆ ಸೊಸೆಯ ನಡವಳಿಕೆಯಲ್ಲಿ ಅನುಮಾನಗೊಂಡ ಅತ್ತೆ ಲಕ್ಕಮ್ಮ ಮನೆ ಬಿಟ್ಟು ಹೊರಗಡೆ ಹೋಗುತ್ತಿರಲಿಲ್ಲ. ಹೀಗಾಗಿ ಪ್ರಿಯಕರನ ಜತೆ ರಶ್ಮಿ ಆತ್ಮೀಯವಾಗಿರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ನಿದ್ದೆ ಮಾತ್ರೆ ಹಾಕಿ, ಕತ್ತು ಹಿಸುಕಿ ಕೊಲೆ:
ಪ್ರಿಯಕರನ ಸೂಚನೆಯಂತೆ ಅತ್ತೆಗೆ ನಿದ್ದೆ ಮಾತ್ರೆ ಹಾಕಲು ನಿರ್ಧರಿಸಿದ್ದ ರಶ್ಮಿ, ಅ.5ರಂದು ಮಧ್ಯಾಹ್ನ ರಾಗಿ ಮುದ್ದೆಗೆ ನಿದ್ದೆ ಮಾತ್ರೆಗಳನ್ನು ಬೆರೆಸಿ ಅತ್ತೆಗೆ ಊಟ ಕೊಟ್ಟಿದ್ದಾಳೆ. ಕೆಲ ಹೊತ್ತಿನ ಬಳಿಕ ಅತ್ತೆ ನಿದ್ದೆಗೆ ಜಾರುತ್ತಿದ್ದಂತೆ ಸಂಬಂಧಿಯೊಬ್ಬರನ್ನು ಕರೆದುಕೊಂಡು ತರಕಾರಿ ತರಲು ಹೊರಗಡೆ ಹೋಗಿದ್ದಾಳೆ. ಇದಕ್ಕೂ ಮೊದಲು ಪ್ರಿಯಕನ ವಾಟ್ಸ್‌ಆ್ಯಪ್‌ಗೆ ಅತ್ತೆ ನಿದ್ದೆ ಜಾರಿರುವ ವಿಚಾರ ತಿಳಿಸಿ, ಬಾಗಿಲು ಹಾಕದೆ ಹೋಗಿದ್ದಳು. ಬಳಿಕ ಅಕ್ಷಯ್‌ ತನ್ನ ಸಹೋದ್ಯೋಗಿ ಪುರುಷೋತ್ತಮ್‌ ಜತೆ ರಶ್ಮಿ ಮನೆಗೆ ಬಂದು ಲಕ್ಕಮ್ಮರ ಕುತ್ತಿಗೆ ಹಿಸುಕಿ ಕೊಲೆಗೈದು, ಬಾಗಿಲು ಹಾಕಿಕೊಂಡು ಹೋಗಿದ್ದ. ಕೆಲ ಹೊತ್ತಿನ ಬಳಿಕ ಮನೆಗೆ ಬಂದ ರಶ್ಮಿ, ಅತ್ತೆಯನ್ನು ಎಬ್ಬಿಸುವ ನಾಟಕವಾಡಿದ್ದಾಳೆ. ಬಳಿಕ ಪತಿಗೆ ಕರೆ ಮಾಡಿ, “ನಿಮ್ಮ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ’ ಎಂದು ನಂಬಿಸಿದ್ದಾಳೆ. ಅದನ್ನು ನಂಬಿದ ಮಂಜುನಾಥ್‌, ಸಂಬಂಧಿಕರ ಜತೆ ಸೇರಿ ಕುಣಿಗಲ್‌ ತಾಲೂಕಿನ ಮುದಿಗೆರೆಯ ಶೆಟ್ಟಿಪಾಳ್ಯದ ಜಮೀನಿನಲ್ಲಿ ತಾಯಿಯ ಅಂತ್ಯ ಸಂಸ್ಕಾರ ಮಾಡಿದ್ದರು ಎಂದು ಪೊಲೀಸರು ಹೇಳಿದರು.

ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯಕ್ತ ಸತೀಶ್‌ ಕುಮಾರ್‌, ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್‌, ಕೆಂಗೇರಿ ಉಪವಿಭಾಗದ ಎಸಿಪಿ ಎಚ್‌.ಎಸ್‌.ಪರಮೇಶ್ವರ್‌, ಬ್ಯಾಡರಹಳ್ಳಿ ಠಾಣೆ ಪಿಐ ಕೆ.ಓ.ಪುಟ್ಟ ಓಬಳರೆಡ್ಡಿ, ಪಿಎಸ್‌ಐ ಶಶಿಧರ್‌, ಈ ವಣ್ಣೂರು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

Advertisement

ಸುಳಿವು ಕೊಟ್ಟ ವಾಟ್ಸ್‌ಆ್ಯಪ್‌ ಚಾಟ್‌
ಈ ಮಧ್ಯೆ ಅಕ್ಷಯ್‌ ಸ್ನೇಹಿತ ರಾಘವೇಂದ್ರನಿಗೆ ಕೊಲೆ ಪ್ರಕರಣದಲ್ಲಿ ಅನುಮಾನ ಮೂಡಿದ್ದು, ಕೆಲ ದಿನಗಳ ಬಳಿಕ ಅಕ್ಷಯ್‌ನ ಮೊಬೈಲ್‌ ಪಡೆದು ವಾಟ್ಸ್‌ಆ್ಯಪ್‌ ಪರಿಶೀಲಿಸಿದ್ದಾರೆ. ಅಕ್ಷಯ್‌ ಮತ್ತು ರಶ್ಮಿ ನಡುವಿನ ವಾಟ್ಸ್‌ಆ್ಯಪ್‌ ಚಾಟಿಂಗ್‌ ಗಮನಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಅಲ್ಲದೆ, ಅದನ್ನು ಸ್ಕ್ರೀನ್‌ ಶಾಟ್‌ ತೆಗೆದುಕೊಂಡು ಕಟ್ಟಡ ಮಾಲೀಕ ಮಂಜುನಾಥ್‌ಗೆ ತೋರಿಸಿದ್ದರು. ಈ ಸಂಬಂಧ ಮಂಜುನಾಥ್‌, ಪತ್ನಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next