Advertisement

ಆಸ್ತಿ ವಿಚಾರಕ್ಕೆ ತಂದೆಯ ಕೊಲೆಗೆ ಮಕ್ಕಳಿಂದಲೇ ಸುಪಾರಿ: ಶಿವಮೊಗ್ಗದಲ್ಲೊಂದು ಘಟನೆ

01:12 PM Dec 12, 2022 | Team Udayavani |

ಶಿವಮೊಗ್ಗ: ಮಕ್ಕಳಿಗಾಗಿ ಆಸ್ತಿ ಮಾಡಿಬೇಡಿ, ಬದಲಾಗಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎನ್ನುವುದು ಜನಪ್ರಿಯ ನುಡಿ. ಆದರೆ ಇದಕ್ಕೆ ಅಪವಾದ ಎಂಬಂತೆ ಆಸ್ತಿಕೊಡದ ಅಪ್ಪನನ್ನು ಮಕ್ಕಳೇ ಸುಪಾರಿ ನೀಡಿ ಕೊಲೆ ಮಾಡಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Advertisement

ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಈ ಘಟನೆ ನಡೆದಿದ್ದು, ಕೆಎಸ್ಆರ್ಪಿಯ ನಿವೃತ್ತ ಎಆರ್ ಎಸ್ಐ ನಾಗೇಂದ್ರಪ್ಪ ಅವರು ಕೊಲೆಯಾದ ವ್ಯಕ್ತಿ.

ಏನಿದು ಘಟನೆ?

ಕಳೆದ ನವೆಂಬರ್ 29 ರಂದು ಶಿರಾಳಕೊಪ್ಪದಲ್ಲಿ ಚರಂಡಿಯಲ್ಲಿ ಶವವೊಂದು ಸಿಕ್ಕಿತ್ತು. ಕೆಎಸ್ಆರ್ಪಿಯ ನಿವೃತ್ತ ಎಆರ್ ಎಸ್ಐ, ಶಿವಮೊಗ್ಗದ ಶಿರಾಳಕೊಪ್ಪದ ಭೋಗಿ ಗ್ರಾಮದ ನಾಗೇಂದ್ರಪ್ಪ ಅವರ ಶವ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಶಿರಾಳಕೊಪ್ಪ ಠಾಣೆ ಪೊಲೀಸರು ಇದರ ಹಿಂದಿನ ರಹಸ್ಯವನ್ನು ಬಯಲಿಗೆಳೆದಿದ್ದಾರೆ.

ನಾಗೇಂದ್ರಪ್ಪ ಅವರು ವಾಸದ ಮನೆಯನ್ನು 2ನೇ ಹೆಂಡತಿ ಹೆಸರಿಗೆ ಮಾಡಿದ್ದರು. ಬಳಿಕ ಜಮೀನನ್ನು ಕೂಡಾ 2ನೇ ಹೆಂಡತಿ- ಮಗುವಿಗೆ ವರ್ಗಾವಣೆ ಮಾಡುತ್ತಾರೆ ಎಂದು ಮೊದಲ ಹೆಂಡತಿ ಮಕ್ಕಳಾದ ಮಂಜುನಾಥ್, ಉಮೇಶ್ ಅವರು ತಂದೆಯನ್ನೇ ಕೊಲೆ ಮಾಡಲು ಮುಂದಾಗಿದ್ದಾರೆ. ಭೋಗಿ ಗ್ರಾಮದ ರಿಜ್ವಾನ್, ಹಬೀಬುಲ್ಲಾ, ಸುಹೇಲ್ ಎಂಬುವರಿಗೆ ಸುಪಾರಿ ನೀಡಿದ ಮಂಜುನಾಥ್ ಮತ್ತು ಉಮೇಶ್ ಕೃತ್ಯವೆಸಗಿದ್ದಾರೆ.

Advertisement

ಇದನ್ನೂ ಓದಿ:‘ಗುಜರಾತ್ ಬಿಡಿ, ಕರ್ನಾಟಕ ನೋಡಿ..’: ಖರ್ಗೆ ನಿವಾಸದಲ್ಲಿಂದು ಕಾಂಗ್ರೆಸ್ ಮಹತ್ವದ ಸಭೆ

ನಾಗೇಂದ್ರಪ್ಪ ಅವರು ಭದ್ರಾವತಿ ಕೋರ್ಟ್ ಗೆ ಹೋಗಿ, ವಾಪಾಸ್ ಶಿಕಾರಿಪುರಕ್ಕೆ ಬರುತ್ತಿದ್ದ ವೇಳೆ ಆರೋಪಿಗಳು ಅವರನ್ನು ತಮ್ಮ ಆಟೋದಲ್ಲಿ ಹತ್ತಿಸಿಕೊಂಡಿದ್ದರು. ಪುಣೇದಹಳ್ಳಿ ಗ್ರಾಮದ ಬಳಿ ಕರೆದೊಯ್ದು, ಬಲವಂತದಿಂದ ನಶೆ ಬರುವ ಔಷಧಿ ಕುಡಿಸಿದ್ದಾರೆ. ಬಳಿಕ ಉಸಿರುಗಟ್ಟಿಸಿ ಸಾಯಿಸಿ, ಅದೇ ಆಟೋದಲ್ಲಿ ಶವ ಸಾಗಾಟ ಮಾಡಿದ್ದಾರೆ.

ಬಳಿಕ ಆರೋಪಿಗಳು ಉಡುಗಣಿ ಗ್ರಾಮದಿಂದ ಕುಸ್ಕೂರು ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆಯ ಪಕ್ಕದಲ್ಲಿನ ಚರಂಡಿಗೆ ಶವ ಎಸೆದಿದ್ದಾರೆ.

ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ. ಮಂಜುನಾಥ್, ಉಮೇಶ್, ರಿಜ್ವಾನ್, ಹಬೀಬ್ ಉಲ್ಲಾ ಹಾಗೂ ಸುಹೇಲ್ ಬಾಷಾ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಹಿಂದೆಯೂ ನಡೆದಿತ್ತು ಕೊಲೆಯತ್ನ

ಕಳೆದ ನವೆಂಬರ್ 9 ರಂದು ಮೊದಲು ಬಾರಿಗೆ ನಾಗೇಂದ್ರಪ್ಪ ಕೊಲೆ ಯತ್ನ ನಡೆದಿತ್ತು. ಲಗೇಜ್ ಆಟೋದಿಂದ ನಾಗೇಂದ್ರಪ್ಪ ಬೈಕ್ ಗೆ ಢಿಕ್ಕಿ ಹೊಡೆಸಲಾಗಿತ್ತು ಈ ವೇಳೆ ನಾಗೇಂದ್ರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಘಟನೆ ಬಗ್ಗೆ ದೂರು ಸಹ ದಾಖಲಾಗಿರಲಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next