Advertisement

ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ಗೆ ಹಲ್ಲೆಗೈದು 4.20 ಲ.ರೂ. ಸುಲಿಗೆ

01:38 AM Sep 29, 2021 | Team Udayavani |

ಮಂಗಳೂರು ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ಗೆ ಹಲ್ಲೆ ನಡೆಸಿ 4.20 ಲಕ್ಷ ರೂ. ಸುಲಿಗೆ ಮಾಡಿದ ಘಟನೆ ಮಂಗಳವಾರ ನಗರದ ಚಿಲಿಂಬಿಯ ಗಾಂಧಿನಗರದಲ್ಲಿ ನಡೆದಿದೆ.

Advertisement

ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ ಭೋಜಪ್ಪ (57) ಅವರು ಮಧ್ಯಾಹ್ನ 12.30ರ ವೇಳೆಗೆ ಚಿಲಿಂಬಿಯಲ್ಲಿರುವ ಬ್ಯಾಂಕ್‌ ಖಾತೆಗೆ ಜಮೆ ಮಾಡಲೆಂದು 4.20 ಲ.ರೂ.ಗಳ‌ನ್ನು ಬ್ಯಾಗಿನಲ್ಲಿರಿಸಿಕೊಂಡು ಬೈಕ್‌ನಲ್ಲಿ ಹೋಗುತ್ತಿದ್ದರು. ಚಿಲಿಂಬಿಯಲ್ಲಿ ಬೈಕನ್ನು ಯುಟರ್ನ್ ಮಾಡಿ ಬ್ಯಾಂಕ್‌ ಕಡೆಗೆ ತೆರಳುವಾಗ ಇಬ್ಬರು ತಡೆದು ನಿಲ್ಲಿಸಿ ಬ್ಯಾಟ್‌ನಿಂದ ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಭೋಜಪ್ಪ ಅವರ ತಲೆ ಮತ್ತು ಭುಜಕ್ಕೆ ಗಾಯಗಳಾಗಿವೆ.

ಮಾಹಿತಿ ಇತ್ತೆ?
ಪೆಟ್ರೋಲ್‌ ಬಂಕ್‌ನಿಂದ ಬ್ಯಾಂಕ್‌ಗೆ ಪ್ರತೀದಿನ ಕೂಡ ಹಣವನ್ನು ಕೊಂಡೊಯ್ಯುವ ಬಗ್ಗೆ ಸುಲಿಗೆಕೋರರಿಗೆ ಮೊದಲೇ ಮಾಹಿತಿ ಇದ್ದು ಅದರಂತೆ ಯೋಜನೆ ರೂಪಿಸಿ ಸುಲಿಗೆ ನಡೆಸಿರುವ ಸಂಶಯ ವ್ಯಕ್ತವಾಗಿದೆ.

ಇದನ್ನೂ ಓದಿ:ಶಿರಾಡಿ ರಸ್ತೆ ಎಲ್ಲ ವಾಹನಗಳಿಗೆ ಮುಕ್ತ

ಸರ ಕಳವು ನಡೆದಿತ್ತು
ಎರಡು ತಿಂಗಳ ಹಿಂದೆ ಚಿಲಿಂಬಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆಯರ ಸರ ಕಳವು ನಡೆದಿತ್ತು. ಮಾತ್ರವಲ್ಲದೆ ನಗರದ ಮೂರು ಕಡೆ ನಿಲ್ಲಿಸಲಾಗಿದ್ದ ಕಾರುಗಳ ಗಾಜು ಒಡೆದು ಬೆಲೆಬಾಳುವ ಸೊತ್ತುಗಳ ಕಳವು ನಡೆದಿತ್ತು. ಇದರೊಂದಿಗೆ ನಗರದ 6 ಕಡೆಗಳಲ್ಲಿ ಬೈಕ್‌ ಕಳ್ಳತನ ಘಟನೆಗಳು ಕೂಡ ನಡೆದಿದ್ದು ಕಳ್ಳರು, ದರೋಡೆಕೋರರ ಪತ್ತೆಯಾಗಿಲ್ಲ. ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇತ್ತೀಚೆಗೆ ಸುಲಿಗೆ ಪ್ರಕರಣದ ಅಣಕು ಪ್ರದರ್ಶನ ನಡೆಸಿದ್ದರು. ಕೆಲವು ದಿನಗಳಿಂದ ವಾಹನಗಳ ವಿಶೇಷ ತಪಾಸಣ ಅಭಿಯಾನ ನಡೆಸುತ್ತಿದ್ದಾರೆ. ಈ ನಡುವೆ ಮಂಗಳವಾರ ಸುಲಿಗೆ ಘಟನೆ ನಡೆದಿದೆ.

Advertisement

ಫ‌ುಡ್‌ ಡೆಲಿವರಿ ಸಂಸ್ಥೆಯ ಟಿ-ಶರ್ಟ್‌!
ಬೈಕ್‌ನಲ್ಲಿ ಬಂದಿದ್ದವರು ಫ‌ುಡ್‌ ಡೆಲಿವರಿ ಸಂಸ್ಥೆಯೊಂದರ ಸಮವಸ್ತ್ರದ ರೀತಿಯ ಟೀ ಶರ್ಟ್‌ ಧರಿಸಿದ್ದರು ಎಂದು ತಿಳಿದುಬಂದಿದೆ. ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿ ಕೆಮರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಇಬ್ಬರು ಕೂಡ ಹೆಲ್ಮೆಟ್‌ ಧರಿಸಿಯೇ ಕೃತ್ಯ ನಡೆಸಿರುವುದು ಗೊತ್ತಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next