Advertisement

ಕರಾವಳಿ ಅಪರಾಧ ಸುದ್ದಿಗಳು

12:45 PM May 20, 2019 | keerthan |

ಏಟು ತಿಂದ ಬೋರ್‌ವೆಲ್‌ಮೇಲ್ವಿಚಾರಕ
ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಹಂಡೇಲು ಶಾಲೆಯ ಬಳಿ ಸರಕಾರಿ ಜಾಗದಲ್ಲಿ ಬೋರ್‌ವೆಲ್‌ ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿದ್ದ ಬೋರ್‌ವೆಲ್‌ ದುರಸ್ತಿದಾರ , ಪುತ್ತಿಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ರ ಮೇಲೆ ಐದಾರು ಮಂದಿ ಹಲ್ಲೆ ನಡೆಸಿದ ಪ್ರಕರಣ ಮೇ 16ರಂದು ನಡೆದಿದೆ.

Advertisement

ಜಿ.ಪಂ. ಟಾಸ್ಕ್ ಫೋರ್ಸ್‌ನ ಅನುದಾನದಿಂದ ಶಾಲೆಯ ಬಳಿ ಬೋರ್‌ವೆಲ್‌ ತೋಡುವ ಕಾಮಗಾರಿಯ ಮೇಲುಸ್ತುವಾರಿ ನಡೆಸುತ್ತಿದ್ದ ಪುತ್ತಿಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ಉಮಾನಾಥ ಕರ್ಕೇರಾ ಅವರು ಬೋರ್‌ವೆಲ್‌ನಲ್ಲಿ ನೀರು ಗೋಚರಿಸದ ಕಾರಣ ರಾತ್ರಿ ಗಂ. 10.30ರ ವೇಳೆಗೆ ಕೆಲಸ ನಿಲ್ಲಿಸಿ ತಮ್ಮ ಮನೆಯ ಕಡೆಗೆ ಸಾಗುವಷ್ಟರಲ್ಲಿ ಜಮೀನಿನ ಬಳಿಯ, ಆರೋಪಿಗಳಾದ ಭಾಸ್ಕರ ಕೋಟ್ಯಾನ್‌, ಸತೀಶ ಕೋಟ್ಯಾನ್‌, ಮನೋಹರ ನಾಯಕ್‌, ಶರತ್‌ ಬೆಳುವಾಯಿ, ಮನೋಜ್‌, ಆಶಿಕ್‌ ಲಾಡಿ ಇವರು ಉಮಾನಾಥ ಕರ್ಕೇರಾ ಅವರಿಗೆ ಕೈಯಿಂದ ಹೊಡೆದು, ಕಾಲಲ್ಲಿ ಒದ್ದರೆಂದೂ ಇದನ್ನು ತಡೆಯಲು ಬಂದ ಗ್ರಾ.ಪಂ. ಸದಸ್ಯ ದಿನೇಶ್‌ ಗೌಡ, ಕಿಶೋರ್‌ ನಾಯಕ್‌ ಅವರನ್ನೂ ಅವಾಚ್ಯವಾಗಿ ನಿಂದಿಸಿ, ಬೆದರಿಸಿದರೆಂದೂ ಉಮಾನಾಥ ಕರ್ಕೇರಾ ತಮ್ಮ ದೂರಿನಲ್ಲಿ ತಿಳಿದ್ದಾರೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*
ಹಳೆಯಂಗಡಿಯಲ್ಲಿ ಕಾರು ಢಿಕ್ಕಿ
ಪ್ರಗತಿಪರ ಕೃಷಿಕ ರುಕ್ಕಯ್ಯ ಮೂಲ್ಯ ಸಾವು
ಹಳೆಯಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿಯಲ್ಲಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಪಾವಂಜೆ ನಿವಾಸಿ ಪ್ರಗತಿಪರ ಕೃಷಿಕ ರುಕ್ಕಯ್ಯ ಮೂಲ್ಯ (96) ಸಾವನ್ನಪ್ಪಿದ ಘಟನೆ ಮೇ 19ರಂದು ನಡೆದಿದೆ.
ತನ್ನ ಮನೆಯ ಮುಂಭಾಗದಲ್ಲಿ ರಸ್ತೆಯನ್ನು ದಾಟುತ್ತಿದ್ದಾಗ ಅತಿ ವೇಗದಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಕಾರು ಏಕಾಏಕಿ ಢಿಕ್ಕಿ ಹೊಡೆ
ಯಿತು. ರಸ್ತೆಗೆ ಬಿದ್ದ ರುಕ್ಕಯ್ಯ ಅವರನ್ನು ತತ್‌ಕ್ಷಣ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ತಲೆಗೆ ಮತ್ತು ಕೈಗೆ ಗಂಭೀರ ಗಾಯವಾಗಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ ಸಹ ತೀವ್ರ ಹೃದಯಾಘಾತಕ್ಕೊಳಗಾದರು ಎಂದು ವೈದ್ಯರು ತಿಳಿಸಿದ್ದಾರೆ. ಮಂಗಳೂರು ಉತ್ತರ ವಲಯದ ಸಂಚಾರಿ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಜನಾನುರಾಗಿಯಾಗಿದ್ದರು;  ಪಾವಂಜೆ ಬಳಿಯ ರುಕ್ಕಯ್ಯ ಮೂಲ್ಯ ಕೃಷಿ ಬದುಕಿನ ಚಿತ್ರಣವಾಗಿದ್ದರು ಪ್ರತಿ ದಿನವು ಅವರು ಹೆದ್ದಾರಿ ಬಳಿಯ ಕೃಷಿ ಗದ್ದೆಗೆ ನಡೆದುಕೊಂಡು ಹೋಗುತ್ತಿದ್ದರು.  ಜನಾನುರಾಗಿಯಾಗಿದ್ದ ಅವರನ್ನು ಅನೇಕ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ವಿಶೇಷವಾಗಿ ಸಮ್ಮಾನಿಸಿ ಗೌರವಿಸಿತ್ತು. ಇಳಿವಯಸ್ಸಿನಲ್ಲಿಯೂ ಕೃಷಿಕಾರ್ಯದ ಶಿಸ್ತಿನ ಸಿಪಾಯಿಯಂತಿದ್ದರು. ಅವರು ಪತ್ನಿ, ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ

*
ಬೈಕ್‌ ಸ್ಕಿಡ್‌: ಸವಾರ ಸಾವು
ಉಡುಪಿ: ಸಂತೆಕಟ್ಟೆ ಜಂಕ್ಷನ್‌ ಬಳಿಯ ರಾ.ಹೆ. 66ರಲ್ಲಿ ಮೇ 19ರಂದು ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಸುಬ್ರಹ್ಮಣ್ಯ (23) ಸ್ಥಳದಲ್ಲಿ ಮೃತಪಟ್ಟಿದ್ದು, ಸಹ ಸವಾರ ಹಿತೇಶ್‌(19) ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುಬ್ರಹ್ಮಣ್ಯ ಅವರು ಹಿತೇಶ್‌ ಎಂಬವರನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಹಳೆಯಂಗಡಿಯಲ್ಲಿರುವ ಗೆಳೆಯನ ಮೆಹಂದಿ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಸಂತೆಕಟ್ಟೆ ಜಂಕ್ಷನ್‌ ಸಮೀಪ ಅವಘಡ ಸಂಭವಿಸಿತು. ಸುಬ್ರಹ್ಮಣ್ಯ ಅವರು ಬೈಕ್‌ ಅನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದರು.
ಈ ಸಂದರ್ಭ ಬೈಕ್‌ ನಿಯಂತ್ರಣ ತಪ್ಪಿ ಸವಾರರು ರಸ್ತೆಯ ಪಕ್ಕ ಬಿದ್ದರೆನ್ನಲಾಗಿದೆ. ಸುಬ್ರಹ್ಮಣ್ಯ ಅವರು ಸ್ಥಳದಲ್ಲಿ ಮೃತಪಟ್ಟಿದ್ದು, ಸಹ ಸವಾರ ಹಿತೇಶ್‌ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಸುಬ್ರಹ್ಮಣ್ಯ ಅವರು ಖಾಸಗಿ ಸಂಸ್ಥೆಯಲ್ಲಿ ಕೆಲಸದಲ್ಲಿದ್ದರು. ತಾಯಿಗೆ ಇವರೊಬ್ಬರೇ ಮಗನಾಗಿದ್ದು ಮನೆಯ ಆಧಾರಸ್ತಂಭವಾಗಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*

Advertisement

ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ:  ಮುಖ್ಯ ಆರೋಪಿಗೆ ನ್ಯಾಯಾಂಗ ಬಂಧನ
ಮಂಗಳೂರು: ಮಂಗಳಾದೇವಿಯ ಅಮರ್‌ ಆಳ್ವ ರಸ್ತೆಯ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜೋನಸ್‌ ಜೂಲಿನ್‌ ಸ್ಯಾಮನ್ಸ್‌ ನನ್ನು ಶನಿವಾರ ರಾತ್ರಿ ನ್ಯಾಯಾಧೀಶರ ಸಮಕ್ಷಮ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಮೇ 29ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣದಲ್ಲಿ ಸಹಕಾರ ನೀಡಿದ ಜೋನಸ್‌ ಪತ್ನಿ ವಿಕ್ಟೋರಿಯಾ ಮಥಾಯಿಸ್‌ (46) ಮತ್ತು ಆಶ್ರಯ ನೀಡಿದ (ಶ್ರೀಮತಿ ಶೆಟ್ಟಿಯ ಮೃತ ದೇಹವನ್ನು ತುಂಡರಿಸಿ ಬೇರೆ ಕಡೆ ಎಸೆದು ವಿಲೆವಾರಿ ಮಾಡಿದ ಬಳಿಕ ಆರೋಪಿ ಜೋನಸ್‌ತನ್ನ ದ್ವಿಚಕ್ರ ವಾಹನವನ್ನು ಸ್ನೇಹಿತ ರಾಜು ಮನೆಯಲ್ಲಿ ಇರಿಸಿದ್ದನು) ಜೋನಸ್‌ನ ಸ್ನೇಹಿತ ಕಾವೂರು ಮರಕಡದ ರಾಜು (35) ನ‌ನ್ನು ಮೇ 15ರಂದು ಬಂಧಿಸಲಾಗಿದ್ದು, ಅವರಿಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next