Advertisement

ಕರಾವಳಿ ಭಾಗದ ಅಪರಾಧ ಸುದ್ದಿಗಳು

12:20 AM Aug 23, 2022 | Team Udayavani |

ದ್ವಿಚಕ್ರ ವಾಹನಗಳೆರಡು ಢಿಕ್ಕಿ: ಓರ್ವ ಸಾವು
ವಿಟ್ಲ: ಕೊಳ್ನಾಡು ಗ್ರಾಮದ ಕುಡ್ತಮುಗೇರಿನಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಸಹ ಸವಾರನೋರ್ವ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮಂಕುಡೆ ಅಮೈ ನಿವಾಸಿ ಸಂಜೀವ ಶೇಖ ಅವರ ಪುತ್ರ ಅಂಗಲವಿಕಲರಾಗಿದ್ದ ಚಂದ್ರಹಾಸ ಶೇಖ (50) ಮೃತಪಟ್ಟವರು.

Advertisement

ವಿಟ್ಲದ ಕುಡ್ತಮುಗೇರು ಸಮೀಪ ಅಪಘಾತ ಸಂಭವಿಸಿದ್ದು, ಸಹಸವಾರ ಚಂದ್ರಹಾಸ ಶೇಖ ಗಂಭೀರ ಗಾಯಗೊಂಡಿದ್ದರು. ತತ್‌ಕ್ಷಣ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಬೆಳ್ತಂಗಡಿ: ನಡ ಗ್ರಾಮದ ಬೋಜಾರ ನಿವಾಸಿ ಬೌತೀಶ್‌ ಡಿ’ಸೋಜಾ (71) ಅವರು ಜೀವನದಲ್ಲಿ ಜುಗುಪ್ಸೆಗೊಂಡು ಆ. 21ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ದನದ ಕೊಟ್ಟಿಗೆ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಈ ಕುರಿತು ಜೋಸೆಫ್‌ ಡಿ’ಸೋಜಾ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬೆಳ್ಳಾರೆ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ; ಪ್ರಕರಣ ದಾಖಲು
ಸುಳ್ಯ: ಬೆಳ್ಳಾರೆ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕರು ಗಸ್ತು ತಿರುಗುತ್ತಿದ್ದ ವೇಳೆ ಐವರ್ನಾಡು ಜಂಕ್ಷನ್‌ ಬಳಿಯ ಸಾರ್ವಜನಿಕ ಸ್ಥಳವಾದ ಕಣ್ಣ ಎನ್ನುವವರ ಅಂಗಡಿಯಲ್ಲಿ ಕಣ್ಣ (61), ಕುಸುಮಾಧರ (32), ಗಂಗಾಧರ (42), ಕೆ.ಪಿ. ಅಣ್ಣಪ್ಪ (42) ಎಂಬವರು ಮದ್ಯ ಸೇವನೆ ಮಾಡುತ್ತಿದ್ದರು. ಪೊಲೀಸರು ಮದ್ಯ ಹಾಗೂ ಇತರ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಕಾರು
ಸುಳ್ಯ: ಮಂಗಳೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ನುಗ್ಗಿದ ಘಟನೆ ಬೊಳುಬೈಲು ಎಂಬಲ್ಲಿ ಆ. 22ರಂದು ಮುಂಜಾನೆ ಸಂಭವಿಸಿದೆ.

Advertisement

ಸುಳ್ಯ ಗಾಂಧಿನಗರ ನಿವಾಸಿ ಅಶ್ರಫ್ ಅವರು ತಮ್ಮ ಕಾರಿನಲ್ಲಿ ಕುಟುಂಬದವರ ಜತೆ ಮಂಗಳೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದ ವೇಳೆ ಬೊಳುಬೈಲಿನ ದೇವ ರಬ್ಬರ್‌ ನರ್ಸರಿ ಬಳಿ ತಲುಪುತ್ತಿದ್ದಂತೆ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಟಕ್ಕೆ ನುಗ್ಗಿದೆ. ಕಾರು ಜಖಂಗೊಂಡಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾ ಗಿದ್ದಾರೆ ಎಂದು ತಿಳಿದುಬಂದಿದೆ.

ಹೃದಯಾಘಾತದಿಂದ ಬಿಜೆಪಿ ಬೂತ್‌ ಸಮಿತಿ ಅಧ್ಯಕ್ಷ ಸಾವು
ಪುತ್ತೂರು: ಪ್ರಭು ಕ್ಯಾಟರರ್ಸ್‌ ಮಾಲಕ, ಚಿಕ್ಕಮುಟ್ನೂರು ಬಿಜೆಪಿ ಬೂತ್‌ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು (39) ಅವರು ಆ. 22ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಸಂಜೆ ವೇಳೆಗೆ ಲೈನ್‌ಗೆ ತೆರಳಲು ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ.

ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಹತ್ತಿದ ಕಾರು
ಪುತ್ತೂರು: ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಹತ್ತಿದ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೃಷ್ಣನಗರದಲ್ಲಿ ಆ. 22ರಂದು ಸಂಭವಿಸಿದೆ. ಟಯರ್‌ ಪಂಕ್ಚರ್‌ ಆಗಿದ್ದ ಕಾರಣ ಕಾರು ನಿಯಂತ್ರಣ ಕಳೆದುಕೊಂಡಿತ್ತು.

ಹಂದಾಡಿ: ಬಾವಿಗೆ ಬಿದ್ದು ವ್ಯಕ್ತಿ ಸಾವು
ಬ್ರಹ್ಮಾವರ: ಹಂದಾಡಿ ಗ್ರಾಮ ಕಂಬಳಕಟ್ಟಿನ ಭಾಸ್ಕರ (47) ಅವರು ರವಿವಾರ ಸಂಜೆಯಿಂದ ಸೋಮವಾರ ಬೆಳಗಿನ ಅವಧಿಯಲ್ಲಿ ಮನೆಯ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಅವರಿಗೆ 7 ವರ್ಷಗಳಿಂದ ತಲೆ ಸುತ್ತು ಬರುತ್ತಿದ್ದು, ನೀರು ಎತ್ತಲು ಹೋದಾಗ ತಲೆ ಸುತ್ತಿನಿಂದ ಅಥವಾ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಡ್ಕೂರು: ಸಂಶಯಾಸ್ಪದವಾಗಿ ಯುವಕ ಸಾವು
ಬೆಳ್ಮಣ್‌: ಮುಂಡ್ಕೂರು ಅರದಾಲು ಬಳಿಯ ಅಭಿಷೇಕ್‌ (19) ಸೋಮವಾರ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದಾರೆ.

ದೀಪಕ್‌ ಅವರ ಪುತ್ರ ಅಭಿಷೇಕ್‌ ನಿಟ್ಟೆಯಲ್ಲಿ ಡಿಪ್ಲೊಮಾ ಓದುತ್ತಿದ್ದು, ಅಜ್ಜಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಅಪರಿಚಿತ ಯುವಕರಿಬ್ಬರು ಅವರನ್ನು ಹುಡುಕಿಕೊಂಡು ಬಂದಿದ್ದರು ಹಾಗೂ ಇತರ ಸಂಶಯಗಳಿಂದಾಗಿ ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲು ಪೊಲೀಸರು ನಿರ್ದೇಶನ ನೀಡಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸರು ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಅಭಿಷೇಕ್‌ ಅವರು ಕ್ರೀಡೆ, ನೃತ್ಯ ಹಾಗೂ ಇತರ ಕ್ಷೇತ್ರಗಳಲ್ಲಿ ಚುರುಕಾಗಿದ್ದರು. ಅವರು ತಂದೆ, ತಾಯಿ, ಅಣ್ಣ ಹಾಗೂ ತಂಗಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next