Advertisement

ಕಾರ್ಯಪಾಲಕ ಎಂಜಿನಿಯರ್‌ಗೆ 6 ವರ್ಷ ಸಜೆ, 2.50 ಕೋಟಿ ರೂ. ದಂಡ

01:15 AM Jul 13, 2022 | Team Udayavani |

ಮಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣದಲ್ಲಿ ಕಿರು ನೀರಾವರಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಎಂಜಿನಿ ಯರ್‌ ಎನ್‌.ಟಿ. ರಾಜಗೋಪಾಲ್‌ಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು 6 ವರ್ಷಗಳ ಸಾದಾ ಸಜೆ ಹಾಗೂ 2.50 ಕೋ.ರೂ. ದಂಡ ವಿಧಿಸಿದ್ದಾರೆ.

Advertisement

ಉಡುಪಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ಮಂಗಳೂರಿನ ಕಿರು ನೀರಾವರಿ ಇಲಾಖೆಯಲ್ಲಿ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದ ಎನ್‌. ಟಿ. ರಾಜಗೋಪಾಲ್‌ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ್ದ ಬಗ್ಗೆ ಮಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ 2010ರ ಮಾ. 17ರಂದು ಪ್ರಕರಣ ದಾಖಲಾಗಿತ್ತು.

ಲೋಕಾಯುಕ್ತ ಪೊಲೀಸ್‌ ಉಪಾಧೀಕ್ಷಕ ಸದಾನಂದ ಎಂ. ವರ್ಣೇಕರ್‌ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾ ರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಜು. 12ರಂದು ತೀರ್ಪು ನೀಡಿದ್ದಾರೆ. ಅಪರಾಧಿಗೆ ಲಂಚ ನಿರೋಧ ಕಾಯ್ದೆ 1988 ಕಲಂ 13(1)(ಇ) ಹಾಗೂ 13(2)ರಂತೆ 6 ವರ್ಷಗಳ ಸಾದಾ ಸಜೆ ಹಾಗೂ 2.50 ಕೋ.ರೂ. ದಂಡ ವಿಧಿಸಿದ್ದಾರೆ.

ಒಂದು ವೇಳೆ ದಂಡ ಕಟ್ಟಲು ವಿಫ‌ಲವಾದರೆ ಮತ್ತೆ 1 ವರ್ಷ, 6 ತಿಂಗಳ ಸಾದಾ ಸಜೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸರಕಾರದ ಪರ ಮಂಗಳೂರಿನ ಕರ್ನಾಟಕ ಲೋಕಾಯುಕ್ತದ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಅವರು ವಾದ ಮಂಡಿಸಿದ್ದಾರೆ. ಆರೋಪಿ ಎನ್‌.ಟಿ. ರಾಜಗೋಪಾಲ್‌ 2016ರ ಅ. 30ರಂದು ಯಾದಗಿರಿ ಜಿಲ್ಲೆಯ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಸೇವೆಯಿಂದ ನಿವೃತ್ತಿಗೊಂಡಿದ್ದು, ಪ್ರಸ್ತುತ ಮಂಗಳೂರು ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next