Advertisement

ಕ್ರೈಂ –ಕಾಮಿಡಿ ಕುಷ್ಕ ರೆಡಿ

09:53 AM Mar 07, 2020 | mahesh |

“ಇದೊಂದು ಕೇಪರ್‌ ಕಾಮಿಡಿ…’
– ಹೀಗೆ ಹೇಳಿ ಕನ್ನಡಕವನ್ನೊಮ್ಮೆ ಸರಿಪಡಿಸಿಕೊಂಡರು ನಿರ್ದೇಶಕ ವಿಕ್ರಮ್‌ ಯೋಗಾನಂದ್‌. ಅವರು ಹೇಳಿದ್ದು “ಕುಷ್ಕ’ ಸಿನಿಮಾ ಬಗ್ಗೆ. ಇದು ಅವರ ಎರಡನೇ ಚಿತ್ರ. ಹಿಂದೆ “ಹೀಗೊಂದು ದಿನ’ ಮಾಡಿದ್ದರು. ಈಗ “ಕುಷ್ಕ’ ರುಚಿ ಉಣಬಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮಾ.13 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ತಮ್ಮ ಸಿನಿಮಾ ಕುರಿತು ಒಂದಷ್ಟು ಹೇಳಲೆಂದೇ ಚಿತ್ರತಂಡದ ಜೊತೆ ಬಂದಿದ್ದರು ನಿರ್ದೇಶಕ ವಿಕ್ರಮ್‌ ಯೋಗಾನಂದ್‌.

Advertisement

ಮೊದಲು ಮಾತಿಗಿಳಿದ ವಿಕ್ರಮ್‌ ಯೋಗಾನಂದ್‌ ಹೇಳುತ್ತಾ ಹೋದರು. “ಕಳೆದ ಒಂದೂವರೆ ವರ್ಷದಿಂದಲೂ ಕಾದು ಈಗ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದೇವೆ. ಐರಾ ಫಿಲಂಸ್‌ ಚಿತ್ರವನ್ನು ವಿತರಣೆ ಮಾಡುತ್ತಿದೆ. “ಕುಷ್ಕ’ ಕುರಿತು ಹೇಳ್ಳೋದಾದರೆ, ಇದೊಂದು ಕ್ರೈಮ್‌ ಕಾಮಿಡಿ ಸಿನಿಮಾ. ಇಲ್ಲಿರುವ ಪ್ರತಿ ಪಾತ್ರಗಳೂ ಕ್ರೈಮ್‌ ಮಾಡಿದಾಗ, ಏನೆಲ್ಲಾ ಅನಾಹುತ ಆಗುತ್ತೆ ಎಂಬುದು ಕಥೆ. ಇಲ್ಲಿ ರೆಗ್ಯುಲರ್‌ ಫಾರ್ಮುಲಾ ಬಿಟ್ಟು ಹೊಸ ಪ್ರಯತ್ನ ಮಾಡಿದ್ದೇವೆ. ವಜ್ರದ ಹಿಂದೆ ಬೀಳುವ ವ್ಯಕ್ತಿಗಳ ಕಥೆ ಇಲ್ಲಿದೆ. “ಕುಷ್ಕ’ ಶೀರ್ಷಿಕೆಗೆ ಸಿನಿಮಾದಲ್ಲೇ ಉತ್ತರ ಸಿಗಲಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಇಲ್ಲಿ ನಾಯಕ, ನಾಯಕಿ ಅಂತೇನೂ ಇಲ್ಲ. ಗುರುಪ್ರಸಾದ್‌ ಆಕರ್ಷಣೆ’ ಎಂದರು ವಿಕ್ರಮ್‌.

ನಿರ್ಮಾಪಕ ಮಧುಗೌಡ ಅವರಿಗೆ ಇದು ಮೊದಲ ಅನುಭವ. ಅವರು ಪ್ರತಾಪ್‌ ರೆಡ್ಡಿ ಜೊತೆ ಸೇರಿ “ಕುಷ್ಕ’ ತಯಾರಿಸಿದ್ದಾರಂತೆ. ಹೊಸ ಬಗೆಯ ಕಥೆ ಈಗಿನ ಟ್ರೆಂಡ್‌ಗೆ ತಕ್ಕಂತೆ ಮಾಡಲಾಗಿದೆ. ನಿಮ್ಮೆಲ್ಲರ ಸಹಕಾರ ಇದ್ದರೆ, ಮುಂದೆ “ಬಿರಿಯಾನಿ’ ಮಾಡ್ತೀವಿ’ ಅಂದರು ಮಧುಗೌಡ.

ರಾಕ್‌ಲೈನ್‌ ಸುಧಾಕರ್‌ ಅವರಿಲ್ಲಿ ಕುಡುಕನ ಪಾತ್ರ ಮಾಡಿದ್ದಾರಂತೆ. “ನಾಳೆ ಶೂಟಿಂಗ್‌ ಅಂದಾಗ, ಹಿಂದಿನ ದಿನ ನಿರ್ದೇಶಕರು ಕಾಲ್‌ ಮಾಡಿ ಪಾತ್ರದ ಬಗ್ಗೆ ಹೇಳಿದ್ದರು. ಇದೊಂದು ಒಳ್ಳೆಯ ಚಿತ್ರ ಆಗುತ್ತೆ ಎಂಬ ನಂಬಿಕೆ ನನ್ನದು’ ಎಂದರು ಸುಧಾಕರ್‌.

ಸಂಗೀತ ನಿರ್ದೇಶಕ ಅಭಿಮಾನ್‌ ಗುಪ್ತ ಅವರಿಗೆ ಇದು ಎರಡನೇ ಚಿತ್ರ. “ನಿರ್ದೇಶಕ ವಿಕ್ರಮ್‌, ಕೈಲಾಶ್‌ ಇಬ್ಬರು ಗೆಳೆಯರು ಬಂದು ಕಥೆ ಹೇಳಿದಾಗ, ವಿಭಿನ್ನವಾಗಿದೆ ಎನಿಸಿತು. ಹಾಗಾಗಿ, ಇಲ್ಲಿ ಹೊಸ ಸೌಂಡ್‌ ಕೊಡಲು ಪ್ರಯತ್ನಿಸಿದ್ದೇನೆ’ ಎಂಬುದು ಅಭಿಮಾನ್‌ ಗುಪ್ತ ಅವರ ಮಾತು.

Advertisement

ಕೈಲಾಶ್‌ ಅವರು ಹಿಂದೆ ಡಾ.ಪಾಲ್‌ ಎಂಬ ವೆಬ್‌ಸೀರಿಸ್‌ ಮಾಡಿದ್ದರಂತೆ. ಅವರಿಗೆ ಇಲ್ಲಿ ಶೋಭರಾಜ್‌ ಜೊತೆ ಇರುವ ಪಾತ್ರವಾಗಿದ್ದು, ಅವರಿಲ್ಲಿ ರಜಾಕ್‌ ಎಂಬ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರಂತೆ.

ಚಿತ್ರವನ್ನು ವಿತರಣೆ ಮಾಡುತ್ತಿರುವ ನಿಹಾಲ್‌, “ಕುಷ್ಕ’ದ ಟೀಸರ್‌, ಟ್ರೇಲರ್‌ ನೋಡಿ, ಚಿತ್ರದಲ್ಲಿ ವಿಶೇಷತೆ ಇದೆ ಎಂಬ
ಕಾರಣಕ್ಕೆ ಬಿಡುಗಡೆ ಮಾಡಲು ಮುಂದಾಗಿದ್ದಾರಂತೆ.

ಶಂಕರ್‌ ನಾರಾಯಣ್‌, ಜೀವನ್‌, ಅರುಣ್‌ ಇದ್ದರು. ನಾಯಕ ಚಂದನ್‌ ಗೌಡ ಗೈರಾಗಿದ್ದರು. ನಾಯಕಿ ಸಂಜನಾ ಆನಂದ್‌ ತಡವಾಗಿ ಬಂದು ಕ್ಷಮಿಸಿ ಎಂದಷ್ಟೇ ಹೇಳಿ, ತಮ್ಮ ಪಾತ್ರ ಕುರಿತು ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next