Advertisement

ಸಮರ್ಪಕ ಬರ ಪರಿಹಾರ ಕಾರ್ಯಕ್ಕೆ ಸಿಪಿಐ ಆಗ್ರಹ

05:42 PM Jul 16, 2019 | Team Udayavani |

ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮರ್ಪಕವಾಗಿ ಬರ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ(ಸಿಪಿಐ) ಮುಖಂಡರು, ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಅಶೋಕ ರಸ್ತೆಯಲ್ಲಿನ ಸಿಪಿಐ ಕಚೇರಿಯಿಂದ ಎಸಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಮಳೆಗಾಲದಲ್ಲೇ ಭೀಕರ ಬರಗಾಲದ ವಾತಾವರಣ ಇದೆ. ಜೂನ್‌ ತಿಂಗಳಲ್ಲಿ ಮಳೆಯಾಗದೆ ರೈತರು ಬಿತ್ತನೆ ಮಾಡಲಿಕ್ಕೆ ಆಗಿಯೇ ಇಲ್ಲ. ಜುಲೈನಲ್ಲೂ ಅಂತಹ ಪ್ರಮಾಣದ ಮಳೆ ಆಗುತ್ತಿಲ್ಲ. ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆಯ ಕೊರತೆಯಿಂದ ಜಲಾಶಯ ತುಂಬದೇ ಈಗಲೇ ಮುಂದಿನ ದಿನಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ವಾತಾವರಣ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಪ್ರತಿಭಟನಾಕಾರರು ದೂರಿದರು. ರಾಜ್ಯದ 156 ತಾಲೂಕಿನಲ್ಲಿ ಬರಗಾಲ ತಾಂಡವವಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಮರೋಪಾದಿ ಬರ ಪರಿಹಾರ ಮಾಡಬೇಕಿತ್ತು. ರಾಜ್ಯ ಸಮ್ಮಿಶ್ರ ಸರ್ಕಾರ ಕುರ್ಚಿ ಉಳಿಸಿಕೊಳ್ಳಲು, ವಿಪಕ್ಷ ಬಿಜೆಪಿ ಕುರ್ಚಿಗೇರುವ ಆಸೆಯಲ್ಲಿ ಜಿದ್ದಿಗೆ ಬಿದ್ದಂತೆ ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತೆ ನಡೆದುಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಬರ ಅಧ್ಯಯನ ತಂಡ ಬರ ನಿರ್ವಹಣೆಗೆ 30 ಸಾವಿರ ಕೋಟಿ ಅನುದಾನ ಬೇಕು ಎಂಬ ವರದಿ ನೀಡಿದೆ. ಆದರೆ ಕೇಂದ್ರ ಬರೀ 950 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಈ ತಾರತಮ್ಯ ನೀತಿ ಅತ್ಯಂತ ಖಂಡನೀಯ ಎಂದು ದೂರಿದರು. ಸಮರ್ಪಕವಾಗಿ ಬರ ಪರಿಹಾರ ಕಾಮಗಾರಿ ನಡೆಸಬೇಕು ಮತ್ತು ಖಾತರಿ ಯೋಜನೆಯ ಮೂಲಕ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಬೇಕು ಎಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ, ಆನಂದರಾಜ್‌, ಆವರಗೆರೆ ಚಂದ್ರು, ಆವರಗೆರೆ ವಾಸು, ಎಂ.ಬಿ. ಶಾರದಮ್ಮ, ರಂಗನಾಥ್‌, ಸರೋಜಾ, ಲಕ್ಷ್ಮಣ, ಟಿ.ಎಸ್‌. ನಾಗರಾಜ್‌, ಎನ್‌.ಟಿ. ಬಸವರಾಜ್‌, ರಮೇಶ್‌, ರೇವಣಸಿದ್ದಪ್ಪ, ಚಮನ್‌ಸಾಬ್‌, ಏಳುಕೋಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next