Advertisement

ಕೊವಿಶೀಲ್ಡ್‌ ಸುರಕ್ಷಿತ; ಹಿಂಜರಿಕೆ ಬೇಡ : ಕೇಂದ್ರ ಸರಕಾರ ಸ್ಪಷ್ಟನೆ

11:25 PM Mar 24, 2021 | Team Udayavani |

ಹೊಸದಿಲ್ಲಿ: ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ತಯಾರಿಸಿರುವ ಆಕ್ಸ್‌ಫ‌ರ್ಡ್‌-ಆಸ್ಟ್ರಜೆನೆಕಾದ ಕೊವಿಶೀಲ್ಡ್‌ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಹೀಗಾಗಿ ಹಿಂಜರಿಕೆಯಿಲ್ಲದೇ ಎಲ್ಲರೂ ಲಸಿಕೆಯನ್ನು ಸ್ವೀಕರಿಸಬಹುದು.

Advertisement

ಹೀಗೆಂದು ಕೇಂದ್ರ ಸರಕಾರ ಬುಧವಾರ ಸ್ಪಷ್ಟಪಡಿಸಿದ್ದು, ದೇಶದಲ್ಲಿ ಲಸಿಕೆ ವಿತರಣೆ ಸರಾಗವಾಗಿ ಮುಂದುವರಿಯಲಿದೆ ಎಂದು ಹೇಳಿದೆ.

ಕೊವಿಶೀಲ್ಡ್‌ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆಯಂಥ ಅಡ್ಡ ಪರಿಣಾಮಗಳು ತಲೆದೋರಿವೆ ಎಂದು ಆರೋಪಿಸಿದ್ದ ಸುಮಾರು 10 ಐರೋಪ್ಯ ದೇಶಗಳು, ಲಸಿಕೆಯ ಬಳಕೆಗೆ ನಿಷೇಧ ಹೇರಿವೆ. ಈ ಹಿನ್ನೆಲೆಯಲ್ಲಿ ಬುಧವಾರ ಸ್ಪಷ್ಟನೆ ನೀಡಿದ ನೀತಿ ಆಯೋಗದ ಸದಸ್ಯ ಡಾ| ವಿ.ಕೆ. ಪೌಲ್‌, ಇತರ ದೇಶಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಂಥ ಸಮಸ್ಯೆ ತಲೆದೋರಿರುವ ಮಾಹಿತಿಯಿದೆ. ಆದರೆ ನಾವು ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಅಂತಹ ಯಾವುದೇ ಸಮಸ್ಯೆಯು ನಮ್ಮ ತಜ್ಞರ ಗಮನಕ್ಕೆ ಬಂದಿಲ್ಲ. ಹೀಗಾಗಿ ಹಿಂಜರಿಕೆಯಿಲ್ಲದೇ ಕೊವಿಶೀಲ್ಡ್‌ ಪಡೆಯಬಹುದು’ ಎಂದಿದ್ದಾರೆ.

ಹಬ್ಬಗಳ ವೇಳೆ ನಿರ್ಬಂಧ ಹೇರಿ: ರಾಜ್ಯಗಳಿಗೆ ಕೇಂದ್ರ
ದೇಶಾದ್ಯಂತ ಕೊರೊನಾ ಸೋಂಕು ಪ್ರಕರಣಗಳು ದಿನೇದಿನೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆಯಿಟ್ಟಿರುವ ಕೇಂದ್ರ ಸರಕಾರ, ಮುಂಬರುವ ಹಬ್ಬಗಳ ದಿನಗಳಲ್ಲಿ ಸೋಂಕು ವ್ಯಾಪಿಸುವಿಕೆ ತಡೆಗಾಗಿ ಸ್ಥಳೀಯ ಮಟ್ಟದಲ್ಲಿ ನಿರ್ಬಂಧಗಳನ್ನು ಹೇರುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಿದೆ.

ಸದ್ಯದಲ್ಲೇ ಹೋಳಿ, ಶಬೇ ಬರಾತ್‌, ಯುಗಾದಿ, ಬಿಹು, ಈಸ್ಟರ್‌, ಈದುಲ್‌ ಫಿತರ್‌ ಸೇರಿದಂತೆ ಹಲವು ಹಬ್ಬಗಳು ಬರಲಿದ್ದು, ಜನರು ಕೊರೊನಾ ಮಾರ್ಗಸೂಚಿಗಳನ್ನು ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡತೊಡಗಿದರೆ ಸೋಂಕಿನ ವ್ಯಾಪಿಸುವಿಕೆ ತಡೆಯಲು ಸಾಧ್ಯವೇ ಇಲ್ಲ. ಆದ್ದರಿಂದ ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಮಟ್ಟದಲ್ಲಿ ನಿರ್ಬಂಧ ಹೇರಿಯಾದರೂ ಸೋಂಕಿನ ಪ್ರಸರಣ ತಡೆಯಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಆಡಳಿತಾಧಿಕಾರಿಗಳಿಗೆ ಕೇಂದ್ರ ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳು ಪತ್ರ ಬರೆದಿದ್ದಾರೆ.

Advertisement

ಇದನ್ನೂ ಓದಿ :ಓರ್ಲಿನ್ಸ್‌ ಮಾಸ್ಟರ್’ ಬ್ಯಾಡ್ಮಿಂಟನ್ : ದ್ವಿತೀಯ ಸುತ್ತಿಗೆ ಸೈನಾ ನೆಹ್ವಾಲ್‌

ಟಾಪ್‌ 10 ಜಿಲ್ಲೆಗಳಲ್ಲಿ ಬೆಂಗಳೂರು
ಅತೀ ಹೆಚ್ಚು ಸಕ್ರಿಯ ಸೋಂಕು ಪ್ರಕರಣಗಳಿರುವ ಟಾಪ್‌ 10 ಜಿಲ್ಲೆಗಳಲ್ಲಿ ಬೆಂಗಳೂರು ನಗರವೂ ಸ್ಥಾನ ಪಡೆದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರದ ಪುಣೆ, ನಾಗ್ಪುರ, ಮುಂಬಯಿ, ಥಾಣೆ, ನಾಸಿಕ್‌, ಔರಂಗಾಬಾದ್‌, ನಾಂದೇಡ್‌, ಜಲಗಾಂವ್‌ ಮತ್ತು ಅಕೋಲಾದಲ್ಲಿ ಹಾಗೂ ಕರ್ನಾಟಕದ ಬೆಂಗಳೂರು ನಗರದಲ್ಲಿ ಗರಿಷ್ಠ ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯ ಹೇಳಿದೆ. ಮಹಾರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ಸ್ಥಿತಿ ಗಂಭೀರವಾಗಿದ್ದು, ಭಾರೀ ಸಂಖ್ಯೆಯಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದೂ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next