Advertisement

ಮುಂಬೈ ನಿವಾಸಿಗೆ ಚಾಮರಾಜನಗರದಲ್ಲಿ ಕೋವಿಡ್‍ ದೃಢ: ಹಸಿರು ವಲಯದಲ್ಲಿ ಮುಂದುವರಿದ ಜಿಲ್ಲೆ

05:50 PM Jun 09, 2020 | keerthan |

ಚಾಮರಾಜನಗರ: ಮಹಾರಾಷ್ಟ್ರದ ಮುಂಬೈಯ ನಿವಾಸಿಯಾದ ವೈದ್ಯಕೀಯ ವಿದ್ಯಾರ್ಥಿಯೋರ್ವ ಜಿಲ್ಲೆಗೆ ಬಂದಿದ್ದು, ಆತನಿಗೆ ಕೋವಿಡ್‍19 ಪಾಸಿಟಿವ್‍ ದೃಢಪಟ್ಟಿದೆ. ಆದರೆ ಆತ ಮುಂಬೈ ನಿವಾಸಿಯಾದ್ದರಿಂದ ಜಿಲ್ಲೆಯವನು ಎಂದು ಪರಿಗಣಿಸಲಾಗುವುದಿಲ್ಲ. ರಾಜ್ಯದಲ್ಲಿರುವ ಜಿಲ್ಲಾವಾರು ಕೋವಿಡ್‍ ಪ್ರಕರಣಗಳ ಪಟ್ಟಿಯಲ್ಲಿ ಇದು ‘ಇತರೆ’ ವರ್ಗಕ್ಕೆ ಸೇರುತ್ತದೆ. ಹಾಗಾಗಿ ಚಾಮರಾಜನಗರ ಜಿಲ್ಲೆ ಈಗಲೂ ಹಸಿರು ವಲಯವಾಗಿಯೇ ಉಳಿದಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್‍. ರವಿ ಸ್ಪಷ್ಟಪಡಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಮಾಹಿತಿಯನ್ನು ನೀಡಿದರು.

ಮಹಾರಾಷ್ಟ್ರದಲ್ಲಿ ಕೋವಿಡ್‍ ಪ್ರಕರಣ ಹೆಚ್ಚಿರುವುದರಿಂದ, ಜಿಲ್ಲೆಯ ಮಾರ್ಟಳ್ಳಿಯ ಪಾಲಿಮೇಡು ಗ್ರಾಮಕ್ಕೆ ಈ ವೈದ್ಯಕೀಯ ವಿದ್ಯಾರ್ಥಿ ಬಂದಿದ್ದ.

ಮುಂಬೈನಿಂದ ಬೆಂಗಳೂರು ಮಾರ್ಗವಾಗಿ ಹೊರಟು ಶುಕ್ರವಾರ ರಾತ್ರಿ ಮಾರ್ಟಳ್ಳಿಯ ಪಾಲಿಮೇಡು ಗ್ರಾಮಕ್ಕೆ ತಾಯಿ ಮತ್ತು ಇಬ್ಬರು ಗಂಡು  ಮಕ್ಕಳು ಬಂದಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಮುಂಬೈಯಲ್ಲಿ, ಇವರು ನಮ್ಮ ಜಿಲ್ಲೆಯವರಲ್ಲ. ಮುಂಬೈಯ ಆಧಾರ್‍ ಕೂಡ  ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇವರು ಜಿಲ್ಲೆಗೆ ಬರುವಾಗ ಸರ್ಕಾರದ ನಿಯಮದ ಪ್ರಕಾರ ಸೇವಾ ಸಿಂಧುವಿನಲ್ಲಿ ರಿಜಿಸ್ಟರ್‍ ಮಾಡಿಕೊಳ್ಳಬೇಕು. ಹಾಗೆ ಮಾಡದೇ ರೈಲಿನಲ್ಲಿ ಬಂದಿದ್ದಾರೆ. ರೈಲ್ವೆಯಿಂದಲೂ ಜಿಲ್ಲೆಗೆ ಮಾಹಿತಿ ನೀಡಿಲ್ಲ.

Advertisement

ಯುವಕನ ಸೋದರ ಮಾವ ಮೂವರನ್ನೂ ಬೆಂಗಳೂರಿನಿಂದ ಶುಕ್ರವಾರ ಕರೆತಂದಿದ್ದಾರೆ. ಯುವಕನ ತಾಯಿಯ ಮನೆ ಪಾಲಿಮೇಡುನಲ್ಲಿದ್ದು ಶುಕ್ರವಾರ ರಾತ್ರಿ ಇದ್ದು, ಶನಿವಾರ ಕೊಳ್ಳೇಗಾಲದ ಫೀವರ್ ಕ್ಲಿನಿಕ್‍ ನಲ್ಲಿ ಪರೀಕ್ಷಿಸಿ ನಂತರ ಹನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗಿದೆ.

ಕೋವಿಡ್‍ ಪರೀಕ್ಷೆಯಲ್ಲಿ ತಾಯಿ ಮತ್ತು ಹಿರಿಯ ಮಗನಿಗೆ ನೆಗೆಟಿವ್‍ ಫಲಿತಾಂಶ ಬಂದಿದ್ದು, 22 ವರ್ಷದ ಕಿರಿಯ ಪುತ್ರನಿಗೆ ಪಾಸಿಟಿವ್‍ ದೃಢಪಟ್ಟಿದೆ. ಈತನಿಗೆ ಪ್ರಸ್ತುತ ಚಾಮರಾಜನಗರದ ಕೋವಿಡ್‍ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಆರಾಮದಿಂದ ಇದ್ದಾನೆ ಎಂದು ಡಿಸಿ ತಿಳಿಸಿದರು.

ಯುವಕನ ತಾಯಿ, ತಮ್ಮ, ಮತ್ತು ಮಾವ ಪ್ರಾಥಮಿಕ ಸಂಪರ್ಕ ಹೊಂದಿದ್ದು   ಇವರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿದೆ. ಮಾವನ ಕುಟುಂಬದವರು ದ್ವಿತೀಯ ಸಂಪರ್ಕದವರಾಗಿದ್ದು ಅವರನ್ನು ಸಹ ಕ್ವಾರಂಟೈನ್‍ ನಲ್ಲಿರಿಸಲಾಗಿದೆ ಎಂದರು.

ಚಾಮರಾಜನಗರ ಈಗಲೂ ಹಸಿರು ವಲಯ: ಬೇರೆ ರಾಜ್ಯದಿಂದ ಮತ್ತು ಹೊರ ದೇಶದಿಂದ ಬಂದವರು ಆ ಜಿಲ್ಲೆಗೆ ಸೇರಿದವರು ಎಂದು ಪರಿಗಣಿಸಲಾಗುವುದಿಲ್ಲ. ತಾಯಿಯನ್ನು ಬಿಟ್ಟು ಹೋಗಲು ಬಂದಾಗ ಈ ರೀತಿಯಾಗಿದೆ. ಈ ಪ್ರಕರಣ ರಾಜ್ಯದ ಪಟ್ಟಿಯಲ್ಲಿ ಚಾಮರಾಜನಗರ ಜಿಲ್ಲೆಗೆ ಸೇರುವುದಿಲ್ಲ ಇತರ ವಿಭಾಗಕ್ಕೆ ಸೇರುತ್ತದೆ ಎಂದು ಡಾ. ರವಿ ಸ್ಪಷ್ಟಪಡಿಸಿದರು.

ನಮ್ಮ ಜಿಲ್ಲೆಯ ಯಾರಿಗೂ ಸೋಂಕು ತಗುಲಿಲ್ಲ. ಈ ರೀತಿಯ ಗಂಡಾಂತರ ಎದುರಿಸುತ್ತಲೇ ಬಂದಿದ್ದೇವೆ. ಈಗಲೂ ನಮ್ಮ ಜಿಲ್ಲೆ ಹಸಿರಾಗಿಯೇ ಉಳಿದಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಅಂತಾರಾಜ್ಯದಿಂದ ಬರುವವರು ಸೇವಾಸಿಂಧು ರಿಜಿಸ್ಟರ್‍ ಮಾಡಬೇಕು. ಇವರು ರಿಜಿಸ್ಟರ್‍ ಮಾಡಿಸದೇ ಬಂದದ್ದರಿಂದ ಈ ಅಚಾತುರ್ಯ ನಡೆದಿದೆ. ಜಿಲ್ಲೆಯಲ್ಲಿ 70 ಜನ ಕ್ವಾರಂಟೈನ್‍ ನಲ್ಲಿದ್ದಾರೆ. ಇದರಲ್ಲಿ ಮಹಾರಾಷ್ಟ್ರ, ತಮಿಳುನಾಡಿನವರಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next