Advertisement

“ವಿದ್ಯಾಗಮ’ದಿಂದ ಶಿಕ್ಷಕ ದಂಪತಿಗೆ ಕೋವಿಡ್

01:51 AM Oct 14, 2020 | mahesh |

ಮಂಗಳೂರು: ಸರಕಾರದ ವಿದ್ಯಾಗಮ ಯೋಜನೆಯಡಿ ವಿವಿಧ ಕಡೆಗಳಿಗೆ ಪಾಠ ಮಾಡಲು ಹೋಗುತ್ತಿದ್ದ ತಾಯಿ ಕೋವಿಡ್ ದೃಢಪಟ್ಟು ಇದೀಗ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ತಂದೆಯೂ ಕೊರೊನಾದಿಂದ ಬಳಲುತ್ತಿದ್ದು, ಕುಟುಂಬಕ್ಕೆ ಒದಗಿ ಬಂದ ಸಂಕಷ್ಟವನ್ನು ಪುತ್ರಿಯೋರ್ವರು ಸಾಮಾಜಿಕ ತಾಣದಲ್ಲಿ ಬರೆದುಕೊಂಡು ಸಹಾಯ ಯಾಚಿಸಿದ್ದಾರೆ.

Advertisement

ಮೂಡುಬಿದಿರೆ ನೆಹರೂ ಮಕ್ಕಿ ಅನುದಾನಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಪದ್ಮಾಕ್ಷಿ ಎನ್‌. ಅವರು ವಿದ್ಯಾಗಮ ಯೋಜನೆಯಡಿ ಮಕ್ಕಳಿಗೆ ಪಾಠ ಮಾಡಲು ವಿವಿಧೆಡೆಗಳಿಗೆ ಹೋಗುತ್ತಿದ್ದರು. ಯೋಜನೆ ಆರಂಭಕ್ಕೆ ಮುನ್ನ ಎಲ್ಲಿಯೂ ಹೋಗಿಲ್ಲ. ಅವರಿಗೆ ಇತರ ಯಾವುದೇ ಕಾಯಿಲೆಯೂ ಇಲ್ಲ. ಇದೀಗ ಪಾಠ ಮಾಡಲು ಹೊರ ಹೋದ ಬಳಿಕ ಕಳೆದ 15 ದಿನಗಳ ಹಿಂದೆ ಸೆ. 29ಕ್ಕೆ ತಾಯಿಗೆ ಕೊರೊನಾ ದೃಢಪಟ್ಟಿದ್ದು, ಆರಂಭದಿಂದಲೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರ ಯೋಗಕ್ಷೇಮ ವಿಚಾರಿಸುವುದಕ್ಕೂ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ತಂದೆಗೂ ಪಾಸಿಟಿವ್‌
ತಾಯಿಗೆ ಕೊರೊನಾ ದೃಢಪಟ್ಟ ಬೆನ್ನಲ್ಲೇ ಶಿಕ್ಷಕ ವೃತ್ತಿ ನಿರ್ವಹಿಸುತ್ತಿರುವ ತಂದೆಯವರಿಗೂ ಕೊರೊನಾ ದೃಢಪಟ್ಟಿದೆ. ಇದರಿಂದ ನಮಗೆ ದಾರಿ ಕಾಣದಾಗಿದೆ. ವಿದ್ಯಾಗಮ ಯೋಜನೆಯಡಿ ಹೆತ್ತವರಿಬ್ಬರೂ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ್ದಾರೆ. ಸರಕಾರ ನಮ್ಮ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸ ಬಹುದೆಂಬ ಭರವಸೆಯಲ್ಲಿ ದಿನಗಳೆಯುತ್ತಿದ್ದೇವೆ ಎಂದು ಐಶ್ವರ್ಯಾ “ಉದಯವಾಣಿ’ಗೆ ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಸಚಿವರಾದ ಎಸ್‌. ಸುರೇಶ್‌ ಕುಮಾರ್‌, ಡಾ| ಕೆ. ಸುಧಾಕರ್‌ ಮೊದಲಾದವರಿಗೆ ಟ್ಯಾಗ್‌ ಮಾಡಿದ್ದು, ಈ ಪೈಕಿ ಕೆಲವು ಜನಪ್ರತಿನಿಧಿಗಳು, ಜತೆಗಾರರು ಐಶ್ವರ್ಯಾ ಅವರಿಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next