Advertisement

3,000 ವೈದ್ಯರು, 7,000 ನರ್ಸುಗಳು, 7,000 ಗ್ರೂಪ್ ಡಿ ಸಿಬ್ಬಂದಿ ನೇಮಕ: ಡಾ.ಅಶ್ವತ್ಥನಾರಾಯಣ

09:37 PM Aug 16, 2021 | Team Udayavani |

ಬೆಂಗಳೂರು: 3ನೇ ಅಲೆ ಮಾತ್ರವಲ್ಲ ಭವಿಷ್ಯದಲ್ಲಿ ಯಾವುದೇ ರೀತಿಯ ಆರೋಗ್ಯ ತುರ್ತು ಸಂದರ್ಭ ಬಂದರೂ ಸಶಕ್ತವಾಗಿ ಎದುರಿಸಲು ಸಾಧ್ಯವಾಗುವಂತೆ ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಆಸ್ಪತ್ರೆ, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಮೂಲಭೂತ ಸೌಲಭ್ಯಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು.

Advertisement

ಇದೇ ನಿಟ್ಟಿನಲ್ಲಿ 3,000 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇದರಲ್ಲಿ 2,000 ಮಂದಿ ತಜ್ಞ ವೈದ್ಯರಿದ್ದು, ಉಳಿದ 1,000 ಸಾಮಾನ್ಯ ವೈದ್ಯರಿದ್ದಾರೆ. ಅಲ್ಲದೆ, ಇನ್ನೂ 3,000 ವೈದ್ಯರನ್ನೂ, 7,000 ನರ್ಸುಗಳನ್ನು ಹಾಗೂ ಗ್ರೂಪ್ ಡಿ ವಿಭಾಗದಲ್ಲಿ 7,000 ಸಿಬ್ಬಂದಿಯನ್ನೂ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ವಿಜಯನಗರದ ಶ್ರೀ ಆದಿಚುಂಚನಗಿರಿ ಮಠದಲ್ಲಿ ಸೋಮವಾರ ನಡೆದ ಕೋವಿಡ್-19 ಸಂಕಷ್ಟದಲ್ಲಿ ಕೋವಿಡ್‌  ನಿಗ್ರಹ ಪಡೆಯ ಕಾರ್ಯಕರ್ತರಾಗಿ ಕೆಲಸ ಮಾಡಿದ ಗಣ್ಯರು, ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿ ಸನ್ಮಾನಿಸಿ ʼನಿಮ್ಮ ಸ್ಪಂದನೆ, ನಮ್ಮ ವಂದನೆʼ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ಐಸಿಯು, ಆಕ್ಸಿಜನ್ ಸೌಲಭ್ಯ, ವೆಂಟಿಲೇಟರ್, ಸಿಬ್ಬಂದಿ, ಪ್ರತ್ಯೇಕ ಮಕ್ಕಳ ವಿಭಾಗ ಇತ್ಯಾದಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಮುಖ್ಯವಾಗಿ ಎಲ್ಲ ಸರಕಾರಿ ಮತ್ತು ಖಾಸಗಿ ವೈದ್ಯ ಕಾಲೇಜುಗಳಲ್ಲಿ 50,000 ಕೆಎಲ್ ಸಾಮರ್ಥ್ಯದಷ್ಟು ಆಕ್ಸಿಜನ್ ಸಂಗ್ರಹಕ್ಕೆ ಅವಕಾಶ ಆಗುವಂತೆ ಸೌಕರ್ಯ ಕಲ್ಪಿಸಲಾಗುತ್ತಿದೆ. ಅದೇ ರೀತಿ ಜಿಲ್ಲಾ ಆಸ್ಪತ್ರೆಗಳಲ್ಲಿ 20,000 ಕೆಎಲ್, ತಾಲೂಕು ಆಸ್ಪತ್ರೆಗಳಲ್ಲಿ 6,000-7,000 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್‌ಗಳನ್ನು ಅಳವಡಿಸಲಾಗುತ್ತಿದೆ. ಆ ಕೆಲಸಗಳು ಈಗಾಗಲೇ ಪ್ರಗತಿಯಲ್ಲಿವೆ ಎಂದು ಸಚಿವರು ಹೇಳಿದರು.

ಅಲ್ಲದೆ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಠ 25, ಜಿಲ್ಲಾಸ್ಪತ್ರೆಗಳಲ್ಲಿ 100 ಐಸಿಯು ಬೆಡ್ಗಳ ಪ್ರತ್ಯೇಕ ವಿಭಾಗವನ್ನು ಸ್ಥಾಪನೆ ಮಾಡಲಾಗುತ್ತಿದೆ. ಯಾವುದೇ ಆಸ್ಪತ್ರೆಯಲ್ಲಿ ಐಸಿಯು ಅಥವಾ ಐಸಿಯುಯೇತರ ಯಾವುದೇ ಬೆಡ್ ಇದ್ದರೂ ಅದಕ್ಕೆ ಆಕ್ಸಿಜನ್ ಸೌಲಭ್ಯ ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

Advertisement

ಈವರೆಗೆ ಸರಕಾರದ ವೈದ್ಯಕೀಯ ವ್ಯವಸ್ಥೆಯಲ್ಲಿ 30,000 ಬೆಡ್ಗಳಿದ್ದು, ಆ ಸಂಖ್ಯೆಯನ್ನು 65,000ಕ್ಕೆ ಹೆಚ್ಚು ಮಾಡಲಾಗುತ್ತಿದೆ. 6,000 ಹೆಚ್ಚುವರಿ ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ, ಎಲ್ಲಡೆಯೂ ಸುಧಾರಿತ ತಂತ್ರಜ್ಞಾನವನ್ನೂ ಅಳವಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಅಭಿಮಾನಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಟಿ.ವೆಂಕಟೇಶ್, ಶಾಸಕ ಎನ್.ಎ.ಹ್ಯಾರೀಸ್, ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ, ಡಾ.ಸಿ.ಎನ್.ಮಂಜುನಾಥ್, ಡಾ.ಪ್ರಸನ್ನ, ಜಂಟಿ ಪೋಲೀಸ್ ಕಮಿಷನರ್ ರವಿಕಾಂತೇಗೌಡ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next