Advertisement

ಕೋವಿಡ್ ನಿಯಮಪಾಲನೆ : ಅನಿವಾರ್ಯ ವೇದನೆ

12:38 PM Jan 07, 2022 | Team Udayavani |

ಹೌದು, ಕೊರೊನಾ ನಿಯಮಪಾಲನೆ ಎನ್ನುವ ವಿಷಯ ಅಷ್ಟು ಸುಲಭವಲ್ಲ. ಅದು ಎಲ್ಲರೂ ಪಾಲಿಸಲೇಬೇಕಾದ ನಿಯಮವಾದರೂ ಎಲ್ಲರಿಗೂ ಸಾಧ್ಯವಿಲ್ಲ. ಈ ನಿಯಮ ಪಾಲನೆ ಎಂದರೆ ಅದೊಂದು ಮಡಿವಂತಿಗೆ, ಅದೊಂದು ತಪಸ್ಸು, ಅದೊಂದು ವೈರಾಗ್ಯ.

Advertisement

ಮಡಿ ಮೈಲಿಗೆಯ ಆಚರಣೆ ಮಾಡುವವರು ಇಂದು ಎಷ್ಟು ಜನರಿದ್ದಾರೆ? ಕೊರೊನಾ ಕಾಲದಲ್ಲಿ ಕೈಕಾಲು ಮುಖ ತೊಳೆಯುವುದು, ಸ್ಯಾನಿಟೈಸರ್‌ ಬಳಕೆ, ಸಾಮಾಜಿಕ ಅಂತರ ಕಾಪಾಡುವುದು ಇತ್ಯಾದಿ ಸಮಾಜದ ಬಹುತೇಕರಿಗೆ ಶಿಕ್ಷೆಯಂತೆ ಭಾಸವಾಗಿರುವುದು ಸುಳ್ಳಲ್ಲ. ಹೀಗೆಂದು ಈ ಮಡಿವಂತಿಕೆಯನ್ನು ಎಲ್ಲ ಕಡೆಯೂ ಆಚ ರಿಸಬೇಕೆಂದಿಲ್ಲ, ಅದರ ಅಗತ್ಯವೂ ಇಲ್ಲ. ನಮ್ಮ ಮನೆಯೊಳಗಿರುವಾಗ ಯಾವುದೇ ನಿಯ ಮಪಾಲನೆಯ ಆವಶ್ಯಕತೆ ಇಲ್ಲ. ಆದರೆ ಮನೆ ಯಿಂದ ಹೊರಬಿದ್ದೊಡನೆ ಮಡಿವಂತಿಕೆ ಆರಂಭ ವಾಗಬೇಕು. ಸಾಮಾಜಿಕ ಅಂತರ ಕಾಪಾಡುವುದು, ಬೇರೆಯವರು ಸೇವಿಸಿರುವ ಎಂಜಲು ಆಹಾರ ವನ್ನು ಸೇವಿಸದಿರುವುದು, ಒಂದೇ ಲೋಟದಲ್ಲಿ ಇಬ್ಬರು ನೀರು ಕುಡಿಯದಿರುವುದು, ಮಾಸ್ಕ್ ಧರಿಸದವನಿಂದ ದೂರವಿರುವುದು ಇವೆಲ್ಲ ವಿಚಾರಗಳು ಕೊರೊನಾದ ಮಡಿವಂತಿಕೆಯಲ್ಲಿ ಬರುತ್ತವೆ. ಇವೆಲ್ಲವನ್ನು ಎಲ್ಲರೂ ಆಚರಿಸಿದಾಗ ಮಾತ್ರ ಕೊರೊನಾದ ನಿರ್ಮೂಲನೆ ಸಾಧ್ಯ.

ಕೊರೊನಾ ನಿಯಮ ಪಾಲನೆ ಎನ್ನುವುದು ಒಂದು ತಪಸ್ಸು ಇದ್ದಂತೆ. ಅದಕ್ಕೆ ವಿಶೇಷವಾದ ಶಕ್ತಿ ಮತ್ತು ತನ್ಮಯತೆಯ ಅಗತ್ಯವಿದೆ. ತಪಸ್ಸು, ಒಂದೆರಡು ದಿನಗಳಲ್ಲಿ ಮುಗಿಯುವ ವಿಷಯವಲ್ಲ. ದೇವರು ಇಂದೇ ಒಲಿಯುತ್ತಾನೆ, ನಾಳೆಯೇ ಒಲಿಯುತ್ತಾನೆ ಎನ್ನುವ ಯಾವ ನಿರ್ದಿಷ್ಟ ಭರವಸೆಯೂ ತಪಸ್ಸು ಮಾಡುವ ಋಷಿಗಳಲ್ಲಿ ಇರುವುದಿಲ್ಲ. ಆದರೆ ಶುದ್ಧ ಮನಸ್ಸಿ ನಿಂದ, ಶಿಸ್ತಿನಿಂದ, ಮಾಡಬೇಕಾದ ರೀತಿಯಲ್ಲಿ ತಪಸ್ಸು ಮಾಡಿದರೆ ದೇವರು ಆದಷ್ಟು ಬೇಗ ಒಲಿಯುತ್ತಾನೆ. ಅದೇ ರೀತಿಯಲ್ಲಿ ಕೊರೊನಾ ನಿರ್ಮೂಲನೆಗಾಗಿ ಜಗತ್ತಿನ ಎಲ್ಲರೂ ಒಂದು ನಿರ್ದಿಷ್ಟ ಸಮಯದವರೆಗೆ ಶಿಸ್ತುಬದ್ಧ ಜೀವನ ವನ್ನು ನಡೆಸಬೇಕು. ಈ ವಿಚಾರದಲ್ಲಿ ಎಲ್ಲರೂ ಋಷಿಗಳಾಗಲೇ ಬೇಕು. ಇಲ್ಲಿ ಕೆಲವೇ ಕೆಲವರು ಎಷ್ಟು ಕಠೊರ ತಪಸ್ಸನ್ನಾಚರಿಸಿದರೂ ಪ್ರಯೋಜನ ವಿಲ್ಲ. ಇದೊಂದು ಸಾಮೂಹಿಕ ತಪಸ್ಸು ಎನ್ನು ವುದನ್ನು ಪ್ರತಿಯೊಬ್ಬರೂ ತಿಳಿದಿರಬೇಕು.

ಮೂರನೆಯ ವಿಷಯ ವೈರಾಗ್ಯ. ಹೌದು, ಕೊರೊನಾ ನಿರ್ಮೂಲನೆಗಾಗಿ ಪ್ರತಿಯೊಬ್ಬನೂ ಒಂದು ನಿರ್ದಿಷ್ಟ ಅವಧಿಯವರೆಗೆ ವೈರಾಗ್ಯವನ್ನು ತಾಳಲೇ ಬೇಕು. ಇದು ಋಷಿಮುನಿಗಳು ತಾಳಿದಂಥ ವೈರಾಗ್ಯವೇ. ಇಲ್ಲಿ ಒಬ್ಬಂಟಿಯಾಗಿ ಬದುಕುವ ಧೈರ್ಯ ಬೇಕು. ಮನೆಯವರನ್ನಾಗಲೀ ಕುಟುಂಬವರ್ಗ, ಸ್ನೇಹಿತರನ್ನಾಗಲೀ ಒಂದು ನಿರ್ದಿಷ್ಟ ಸಮಯದವರೆಗೆ ಅಥವಾ ಒಂದೆರಡು ವರ್ಷಗಳವರೆಗೆ ಭೇಟಿಯಾಗದೆ ಉಳಿಯುತ್ತೇನೆ ಎನ್ನುವ ವೈರಾಗ್ಯ ಬೇಕು. ಯಾರು ಏನೇ ಹೇಳಲಿ, ಮಾಸ್ಕ್ ಧರಿಸದ ಜನ ಸೇರುವಲ್ಲಿಗೆ ಹೋಗಲಾರೆ ಎನ್ನುವ ಛಲ ಬೇಕು. ಎಷ್ಟೇ ಕಷ್ಟವಾದರೂ ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಹೋಗಲಾರೆ ಎನ್ನುವ ಶಿಸ್ತು ಬೇಕು. ಇದು ಇಲ್ಲದಿದ್ದರೆ ಕೊರೊನಾ ವನ್ನು ಹೋಗಲಾಡಿಸಲು ಬಹಳ ಕಷ್ಟವಿದೆ.

ಸಮಾಜದ ಎಲ್ಲ ಜನರಿಗೂ ಮಡಿವಂತಿಕೆ, ತಪಸ್ಸು ಮತ್ತು ವೈರಾಗ್ಯದ ಗುಣಗಳನ್ನು ಕಲಿಸುವುದಕ್ಕಾಗಿಯೇ ದೇವರು ಸೃಷ್ಟಿ ಮಾಡಿದ ವೈರಾಣುವಾಗಿರಬೇಕು ಈ ಕೊರೊನಾ. ಈ ವಿಚಾರದಲ್ಲಿ ವಿಜ್ಞಾನ ಎಷ್ಟೇ ಮುಂದುವರಿದರೂ ಪ್ರಯೋಜನವಿಲ್ಲ. ಜನರಲ್ಲಿ ಶಿಸ್ತು, ಸಂಯಮವಿದ್ದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ. “ನಾನೊಬ್ಬ ರಾಜ, ನಾನು ಏನು ಮಾಡಿದರೂ ನಡೆಯುತ್ತದೆ’ ಎನ್ನುವವರಿಗೆ ದೇವರು ಒಲಿಯಲಾರ. ಹಾಗೆಯೇ ಎಷ್ಟೇ ಹಣವಿರಲಿ ಅದು ಕೊರೊನಾದ ವಿಷಯಕ್ಕೆ ಬಂದಾಗ ವ್ಯರ್ಥವೇ ಸರಿ. ರಾಜ, ಮಂತ್ರಿ, ಪ್ರಜೆ, ಸೇವಕರೆಲ್ಲರೂ ನಿಯಮಪಾಲನೆ ಮಾಡಲೇ ಬೇಕು. ಇಲ್ಲವಾದರೆ ಯಾರೂ ಸುರಕ್ಷಿತರಲ್ಲ. ಕೆಲವೇ ಕೆಲವು ರಾಕ್ಷಸರು ಹೇಗೆ ಋಷಿಗಳು ಮಾಡುತ್ತಿದ್ದ ತಪಸ್ಸನ್ನು ಭಂಗಗೊಳಿಸುತ್ತಿದ್ದರೋ ಅದೇ ರೀತಿಯಲ್ಲಿ ಇಂದಿನ ಸಮಾಜದಲ್ಲೂ ನಿಯಮಪಾಲನೆ ಮಾಡದೆ ಲೋಕಕಂಟಕರಾಗುತ್ತಿರುವ ಅಧಮರಿದ್ದಾರೆ. ಅಂಥವರನ್ನು ನಿಯಂತ್ರಿಸದೆ ಕೊರೊನಾದ ನಿರ್ಮೂಲನೆ ಅಸಾಧ್ಯ.

Advertisement

ಸಮಾಜದಲ್ಲಿನ ಹೆಚ್ಚಿನ ಜನರಿಗೆ ಕಾಡು ಪ್ರಾಣಿಗಳಂಥ ಸ್ವೇಚ್ಛಾಚಾರದ ಜೀವನ ಅಭ್ಯಾ ಸವಾಗಿದೆ. ಇದು ಪ್ರಜಾಪ್ರಭುತ್ವ, ಇಲ್ಲಿ ಏನು ಮಾಡಿದರೂ ನಡೆಯುತ್ತದೆ ಎನ್ನುವ ಮನೋ ಭಾವವಿದೆ. ಆದುದರಿಂದ ಯಾವುದೇ ನಿಯಮ ಪಾಲನೆ ಮಾಡುವುದೆಂದರೆ ಬೋನಿನೊಳಗೆ ಬಿದ್ದ ಪ್ರಾಣಿಯಂತೆ ಚಡಪಡಿಸುತ್ತಾರೆ. ಲಾಕ್‌ಡೌನ್‌ ಇದ್ದರೂ ಬೋನಿನಿಂದ ತಪ್ಪಿಸಿಕೊಂಡು ಬಂದ ಪ್ರಾಣಿಗಳಂತೆ ಬೀದಿ ಬೀದಿ ಸುತ್ತುತ್ತಾರೆ. ಆದರೆ ಇನ್ನು ಕೆಲವರಿಗೆ ಮನೆಯೊಳಗೇ ಒಂದೆರಡು ದಿನ ಕಳೆಯುವುದೂ ಸಾಧ್ಯವಿಲ್ಲದಂಥ ಪರಿಸ್ಥಿತಿ ಇದೆ. ಇಂದು ದುಡಿದರೆ ಮಾತ್ರ ಅವರಿಗೆ ಊಟ. ಇಲ್ಲವಾದರೆ ಹಸಿದೇ ಇರಬೇಕೆನ್ನುವ ಪರಿಸ್ಥಿತಿ ಇದೆ. ಅಂಥವರು ಸರಕಾರ ಯಾವ ನಿಯಮ ತಂದರೂ ಪಾಲಿಸಲಾರರು. ಇಂದು ದುಡಿದದ್ದರಲ್ಲಿ ಸ್ವಲ್ಪ ನಾಳೆಗಾಗಿ ಉಳಿಸಿದರೆ ಮಾತ್ರ ಇಂಥ ಕಾಯಿಲೆಗಳು ಬಂದ ಸಂದರ್ಭದಲ್ಲಿ ನಿಯ ಮಪಾಲನೆ ಸಾಧ್ಯ. ವಿದ್ಯಾರ್ಥಿಗಳು, ಶಿಕ್ಷಕರು, ಕಂಪ್ಯೂಟರ್‌ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆಲ್ಲ ನಿಯಮಪಾಲನೆ ಸುಲಭ. ಅವರು ಮನೆಯಲ್ಲಿದ್ದೆ ಕಲಿಯಬಹುದು, ಕಲಿಸಬಹುದು ಅಥವಾ ಗಳಿಸಬಹುದು. ಇದರಿಂದಾಗಿ ಅವರ ವೇದನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಆದರೆ ವ್ಯಾಪಾರಿಗಳು, ಕೂಲಿ ಕೆಲಸದವರು, ಕಲಾವಿದರು, ಈ ವೈರಾಣುವಿನಿಂದಾಗಿ ತಮ್ಮ ಸಂಪಾದನೆಯನ್ನು ಕಳೆದುಕೊಂಡು, ಕೂಡಿಟ್ಟದ್ದನ್ನೂ ಖರ್ಚು ಮಾಡಿ ಅಪಾರ ವೇದನೆಯನ್ನು ಅನುಭವಿಸುತ್ತಿದ್ದಾರೆ.

ಕೊರೊನಾ ನಿಯಮ ಪಾಲನೆ ಶತಮಾನದ ವೇದನೆಯೇ ಸರಿ. ಆದರೆ ಕೆಲವು ಮೂಲ ವಿಷಯ ಗಳತ್ತ ಗಮನಹರಿಸಿದರೆ ಈ ವೈರಾಣುವನ್ನು ಬಹಳಷ್ಟು ಮಟ್ಟಿಗೆ ಹತೋಟಿಯಲ್ಲಿಡಬಹುದು. ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಮಾಸ್ಕ್ ಧರಿಸಲೇ ಬೇಕು. ಅದೇನೂ ಮಾಡಲಾಗದ ಕೆಲಸವಲ್ಲ. ಸಭೆ ಸಮಾರಂಭಗಳಿಗೆ ಅತೀ ಆವಶ್ಯಕತೆ ಇದ್ದರೆ ಮಾತ್ರ ಹೋಗಬೇಕು. ಹೋದರೂ ಕೈ ಕುಲುಕು ವುದಾಗಲೀ ತುಂಬಾ ಹತ್ತಿರ ನಿಂತು ಮಾತಾಡು ವುದಾಗಲೀ ಮಾಡಬಾರದು. ವೈದ್ಯರು ಹೇಳಿದ ಲಸಿಕೆಯನ್ನು ತೆಗೆದುಕೊಂಡು ರೋಗ ನಿರೋ ಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಜೀವನ ದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೆ ಸುಂದರ ನಾಳೆಯ ಕನಸು ಕಾಣುತ್ತ ಇನ್ನಷ್ಟು ದಿನ ಕಟ್ಟು ನಿಟ್ಟಾಗಿ ನಿಯಮಪಾಲನೆ ಮಾಡಿದರೆ ಕೊರೊನಾ ವನ್ನು ಹತೋಟಿಗೆ ತರುವ ಮೂಲಕ ಈ ವರ್ಷದಲ್ಲಾದರೂ ಸಂಭ್ರಮಿಸಬಹುದು.

– ಡಾ| ಸತೀಶ ನಾಯಕ್‌ ಆಲಂಬಿ

Advertisement

Udayavani is now on Telegram. Click here to join our channel and stay updated with the latest news.

Next