Advertisement

ಚಿತ್ರ ಪ್ರದರ್ಶನಕ್ಕೆ ಅನುಮತಿ ಕೊಟ್ಟರೂ ತಪ್ಪದ ಆತಂಕ

12:52 PM Oct 13, 2020 | Suhan S |

ದೇವನಹಳ್ಳಿ: ಕೇಂದ್ರ ಸರ್ಕಾರ ಅನ್‌ಲಾಕ್‌ 5.0ದಲ್ಲಿ ಆ.15ರಿಂದ ಚಿತ್ರಮಂದಿರಗಳ ಪ್ರಾರಂಭಕ್ಕೆ ಅನುಮತಿ ನೀಡಿದ್ದರೂ ಚಲನಚಿತ್ರ ಪ್ರದರ್ಶಕರ ಹಲವು ಬೇಡಿಕೆ ಈಡೇರಿಸುವ ತನಕ ಚಿತ್ರಮಂದಿರಗಳು ತೆರೆಯುವುದು ವಿಳಂಬವಾಗುವ ಸಾಧ್ಯತೆಯಿದೆ.

Advertisement

ಕೋವಿಡ್ ತಡೆಯಲು ಲಾಕ್‌ಡೌನ್‌ ಜಾರಿಗೊಳಿಸಿರುವ ಪರಿಣಾಮ ಚಿತ್ರಮಂದಿರಗಳನ್ನು ಇಡೀ ರಾಜ್ಯಾದ್ಯಂತ ಸರ್ಕಾರ ಬಂದ್‌ ಘೋಷಿಸಲಾಗಿತ್ತು. ಸುಮಾರು7 ತಿಂಗಳ ನಂತರ ಚಿತ್ರ ಮಂದಿರಗಳ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.ಆದರೆ, ರಾಜ್ಯ ಸರ್ಕಾರ ನಿರ್ದಿಷ್ಠ ಪ್ರಮಾಣದ ಆದೇಶವನ್ನು ಇನ್ನೂ ನೀಡಿಲ್ಲ. ಚಿತ್ರ ಮಂದಿರಗಳು ಇಷ್ಟೊಂದು ಸುದೀರ್ಘ‌ ಅವಧಿಯಲ್ಲಿ ಮುಚ್ಚಿದ ಉದಾಹರಣೆಗಳೇ ಇಲ್ಲ.ಕೊರೊನಾ ಅಬ್ಬರಿಸುತ್ತಿರುವ ಸಂದರ್ಭದಲ್ಲಿ ಪ್ರೇಕ್ಷಕರು ಈ ಹಿಂದಿನಂತೆ, ನಿರ್ಭೀತಿಯಿಂದ ಚಿತ್ರಮಂದಿರಗಳಿಗೆ ಬರುವುದು ಕನಸಾಗಿದೆ.

ಜಿಲ್ಲೆಯಲ್ಲಿರುವ ಚಿತ್ರಮಂದಿರಗಳ ಸಂಖ್ಯೆ: ದೊಡ್ಡಬಳ್ಳಾಪುರ 3, ಹೊಸಕೋಟೆ4, ವಿಜಯಪುರ 2 ಒಟ್ಟು 9 ಚಿತ್ರಮಂದಿರಗಳಿವೆ. ದೇವನಹಳ್ಳಿಯಲ್ಲಿ 2 ಚಿತ್ರಮಂದಿರಗಳಿದ್ದು ಮುಚ್ಚಲಾಗಿದೆ. ನೆಲಮಂಗಲದಲ್ಲಿ 2 ಚಿತ್ರಮಂದಿರಗಳು ಮುಚ್ಚಿವೆ.

ಮತ್ತಷ್ಟು ಸಮಸ್ಯೆ: ಈಗಾಗಲೇ ಕೋವಿಡ್ ಲಾಕ್‌ ಡೌನ್‌ನಿಂದಾಗಿ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದವರು ಜೀವನ ನಡೆಸಲು ಬೇರೆ ಬೇರೆ ಕೆಲಸಗಳಿಗೆ ಹೋಗಿದ್ದಾರೆ. ಲಾಕ್‌ಡೌನ್‌ ಸಂಕಷ್ಟದಂತಹ ಕೆಲಸಗಾರರಿಗೆ ಸಂಬಳ ನೀಡಲೂ ಕಷ್ಟವಾಗುತ್ತಿದೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಅನುಭವಿಸುವ ಪರಿಸ್ಥಿತಿ ಇದೆ. ಸರ್ಕಾರ ಇದನ್ನು ಗಮನಿಸಬೇಕು. ಚಿತ್ರ ಮಂದಿರದ ಸಾಮರ್ಥ್ಯದಲ್ಲಿ ಈಗಾಗಲೇ ಪ್ರೇಕ್ಷಕರ ಕೊರತೆಯಿಂದ ಸಮಸ್ಯೆಯಲ್ಲಿರುವ ಚಿತ್ರಮಂದಿರಗಳಿಗೆ ಇದು ಮತ್ತಷ್ಟು ಸಮಸ್ಯೆ ತಂದೊಡ್ಡುವಂತಿದೆ. ಸಾಮಾನ್ಯ ಚಿತ್ರಗಳು ಬಿಡುಗಡೆಯಾದಾಗ ಅಷ್ಟೊಂದು ಸಮಸ್ಯೆಆಗಲಾರದು. ದೊಡ್ಡ ನಟರ ಭಾರೀ ಬಜೆಟ್‌ ಗಾತ್ರದ ಸಿನಿಮಾ ಬಿಡುಗಡೆಯಾದಾಗ ಬಹಳ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಮಾಲಿಕರು ಹೇಳುತ್ತಿದ್ದಾರೆ.

‌ಚಲನಚಿತ್ರ ಪ್ರದರ್ಶಕರ ಮಹಾ ಮಂಡಳಿ ಬೇಡಿಕೆಗಳೇನು? :

  • ಪರವಾನಗಿ ನವೀಕರಣಶುಲ್ಕ 5 ವರ್ಷಕ್ಕೆ 5 ಸಾವಿರ ರೂ. ಇದ್ದು, ಅದನ್ನು 1 ಲಕ್ಷ 25 ಸಾವಿರಕ್ಕೆ ಹೆಚ್ಚಿಸಿರುವುದರಿಂದ ಬಹಳಷ್ಟು ತೊಂದರೆ ಆಗುತ್ತಿದೆ.
  • ಸಿಬ್ಬಂದಿಗೆ ಪಿಪಿಇ ಕಿಟ್‌ ಕಡ್ಡಾಯ ಮಾಡಿದ್ದು, ಅದರ ವೆಚ್ಚ ದುಬಾರಿ. ಇದಕ್ಕೆ ಸರ್ಕಾರವಿನಾಯ್ತಿ ನೀಡಬೇಕು.
  • ವಿದ್ಯುತ್‌ ಶುಲ್ಕ, ಎಸ್‌ಒಪಿ, ಆನ್‌ ಲೈನ್‌ಟಿಕೆಟ್‌ಖರೀದಿ ವ್ಯವಸ್ಥೆ ಕೈಬಿಡಬೇಕು.
  • ಚಲನಚಿತ್ರ ನಿರ್ಮಾಪಕರಿಂದ ಚಲನಚಿತ್ರಗಳಬಿಡುಗಡೆಗೆ ಸಂಬಂಧಿಸಿದಂತೆ, ನಿರ್ದಿಷ್ಟವಾದ ತೀರ್ಮಾನ ಪ್ರಕಟಿಸಬೇಕು.
  • ಕೋವಿಡ್ ತಡೆಗೆ ಮಾರ್ಗಸೂಚಿ ಕಡ್ಡಾಯ ಪಾಲನೆ ಮಾಡಲಾಗುತ್ತಿದೆ. ಜನ ಸಂದಣಿ ತಪ್ಪಿಸಲು ಮುಂಗಡವಾಗಿ ಆನ್‌ ಲೈನ್‌ಟಿಕೆಟ್‌ ವ್ಯವಸ್ಥೆ ಮಾಡಬೇಕೆಂಬ ನಿಯಮ ಪಾಲನೆ ಕಷ್ಟ.
  • ಸಮಯ ಕಳೆಯಲೆಂದೇ ಚಿತ್ರಮಂದಿರಕ್ಕೆ ಬರಲಿದ್ದಾರೆ. ಶೋ… ಪ್ರಾರಂಭವಾದ ನಂತರವೂ ಚಿತ್ರ ಮಂದಿರಕ್ಕೆ ಬರುವವರನ್ನು ವಾಪಸ್‌ ಕಳುಹಿಸಲು ಆಗದು. ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂಬ ಪ್ರಶ್ನೆ ಚಿತ್ರ ಮಾಲಿಕರಲ್ಲಿ ಕಾಡುತ್ತಿದೆ.
  • ಸರ್ಕಾರದ ನಿಯಮದ ಪ್ರಕಾರ 1 ಸಾವಿರ ಸೀಟು ಚಿತ್ರಮಂದಿರದಲ್ಲಿದ್ದರೆ, 500 ಸೀಟುಗಳಿಗೆ ಮಾತ್ರ ಅವಕಾಶ ಇರುತ್ತದೆ. ಅದರಲ್ಲೂ ಜನಬರದಿದ್ದರೆ, ಚಲನಚಿತ್ರ ಪ್ರದರ್ಶನಕ್ಕೆ ಅತೀ ಅವಶ್ಯಕವಾದ ವಿದ್ಯುತ್‌ಬಿಲ್‌, ಒಂದು ಪ್ರದರ್ಶನಕ್ಕೆ 12 ಸಾವಿರ ರೂ. ಖರ್ಚು ಹಾಗೂಇನ್ನಿತರೆ ಶುಲ್ಕಗಳು ತಲೆ ಮೇಲೆಬೀಳುತ್ತದೆ.ಈ ರೀತಿ ಇರುವಾಗ ಚಿತ್ರಮಂದಿರಗಳನ್ನು ನಡೆಸುವುದಾದರೂ ಹೇಗೆ?.
  • ಕಟ್ಟಡ ಶುಲ್ಕ ಸೇರಿ ನಮ್ಮ ಎಲ್ಲಾಬೇಡಿಕೆ ಈಡೇರಿಸುವ ತನಕ ಚಲನಚಿತ್ರ ಮಂದಿರಗಳನ್ನು ತೆರೆಯುವುದು ಸೂಕ್ತವಲ್ಲ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾ ಮಂಡಳಿ ಅಭಿಪ್ರಾಯಪಟ್ಟಿದೆ.
Advertisement

ಚಿತ್ರ ಮಂದಿರ ತೆರೆಯುವುದು ಸೂಕ್ತವಲ್ಲ :

ಸರ್ಕಾರದ ಕೋವಿಡ್ ಮಾರ್ಗಸೂಚಿ ಅನುಸರಿಸುತ್ತೇವೆ. ಸಿಬ್ಬಂದಿಗೆ ಪಿಪಿಇ ಕಿಟ್‌ ಧರಿಸಿ ಗೇಟ್‌ನಲ್ಲಿ ನಿಲ್ಲಿಸಿದರೆ, ಬರುವ ಜನರೂ ಬರುವುದಿಲ್ಲ. ಸರ್ಕಾರ ಇಂತಹ ನಿರ್ಧಾರ ಕೈಬಿಟ್ಟು, ಚಿತ್ರಮಂದಿರ ಸದಸ್ಯರೊಂದಿಗೆ ಚರ್ಚಿಸಬೇಕು. ನಮ್ಮ ಅನೇಕ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಪತ್ರ ನೀಡಲಾಗಿದೆ. ಕೂಡಲೇ ಚಲನಚಿತ್ರ ನಿರ್ಮಾಪಕರು ಸೂಕ್ತ ತೀರ್ಮಾನ ಪ್ರಕಟಿಸಬೇಕು. ಎಸ್‌ಒಪಿಯನ್ನು ಸರ್ಕಾರ ಪ್ರಕಟಿಸಬೇಕು. ಚಲನಚಿತ್ರ ಮಾಲಿಕರು ಅನೇಕ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಅಂತಹವರ ಸಂಕಷ್ಟಕ್ಕೆ ಸರ್ಕಾರ ಧಾವಿಸಬೇಕು. ಪ್ರಸ್ತುತ ಚಲನಚಿತ್ರ ಮಂದಿರ ತೆರೆಯುವುದು ಸೂಕ್ತವಲ್ಲ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾ ಮಂಡಳಿ ರಾಜ್ಯಾಧ್ಯಕ್ಷರಾದ ಆರ್‌.ಆರ್‌.ಓದುಗೌಡ ತಿಳಿಸಿದ್ದಾರೆ.

ಚಿತ್ರ ಮಂದಿರಗಳ ಪ್ರಾರಂಭಕ್ಕೆ ಅನುಮತಿ ನೀಡಿರುವ ಸರ್ಕಾರ ಮಾರ್ಗಸೂಚಿಗಳ ಪಾಲನೆ ಮತ್ತು ನಿರ್ವಹಣೆ ಚಿತ್ರ ಮಂದಿರ ಮಾಲಿಕರಿಗೆ ಹೆಚ್ಚಿನ ಹೊರೆಯಾಗಲಿದೆ. ಸದ್ಯದ ಕಲೆಕ್ಷನ್‌ ನೋಡಿದರೆ, ಮಾಲೀಕರು ಬಾಡಿಗೆದಾರರಿಗೆ ಹೊರೆ ಆಗುತ್ತಿದೆ. ಚಲನಚಿತ್ರ ಪ್ರದರ್ಶಕರ ಮಹಾಮಂಡಳಿಯ ರಾಜ್ಯಾಧ್ಯಕ್ಷ ಓದುಗೌಡಯಾವ ರೀತಿ ತೀರ್ಮಾನ ಕೈಗೊಳ್ಳುತ್ತಾರೆಯೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಎಂ.ಸತೀಶ್‌ಕುಮಾರ್‌, ಗೌರಿಶಂಕರ್‌ ಚಿತ್ರಮಂದಿರ ಮಾಲಿಕರು, ವಿಜಯಪುರ

 

ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next