Advertisement

ನಿರ್ಲಕ್ಷ್ಯ ತಂದ ಆಪತ್ತು: ಊರೇ ಬಿಟ್ರು ಜನ!

12:45 PM Jun 25, 2020 | Suhan S |

ಬಾಗಲಕೋಟೆ: ಸುಶಿಕ್ಷಿತ ಕುಟುಂಬದ ನಿರ್ಲಕ್ಷ್ಯದಿಂದ ಇಡೀ ಎರಡು ಗ್ರಾಮಗಳ ಜನರು ಸದ್ಯ ಕೋವಿಡ್ ವೈರಸ್‌ನ ತೀವ್ರ ತೆರನಾದ ಭೀತಿ ಎದುರಿಸುವಂತಾಗಿದೆ. ರೈಲ್ವೆ ಇಲಾಖೆಯ ಟಿಕೆಟ್‌ ತಪಾಸಣಾಧಿಕಾರಿಯ ಸಾವು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

Advertisement

ಹೌದು, ಕಳೆದ ಜೂ. 10ರಿಂದ ಮೂರು ದಿನಗಳ ಕಾಲ ಹುಬ್ಬಳ್ಳಿ-ಮೀರಜ್‌ ರೈಲ್ವೆಯಲ್ಲಿ ಟಿಕೆಟ್‌ ತಪಾಸಣಾ ಅಧಿಕಾರಿ ಕಾರ್ಯ ನಿರ್ವಹಿಸಿ, ನೇರವಾಗಿ ತಮ್ಮೂರಿಗೆ ಬಂದಿದ್ದೇ ಈಗ ಎಡವಟ್ಟಾಗಿದೆ. ಮಹಾರಾಷ್ಟ್ರಕ್ಕೆ ಹೋಗಿ ಬಂದ ರೈಲಿನಲ್ಲಿ ಕೆಲಸ ಮಾಡಿದ ಅಧಿಕಾರಿ, ನೇರವಾಗಿ ಊರಿಗೆ ಬರದೇ, ಕ್ವಾರಂಟೈನ್‌ ಆಗಿದ್ದರೆ, ಮುಂಜಾಗ್ರತೆಯಾಗಿ ತಪಾಸಣೆಗೆ ಒಳಪಟ್ಟಿದ್ದರೆ ಅವರ ಜೀವ ಉಳಿಯುತ್ತಿತ್ತೇನೋ ಎಂಬ ಮಾತು ಈಗ ಕೇಳಿ ಬರುತ್ತಿವೆ.

ನಿರ್ಲಕ್ಷ್ಯ ತಂದ ಆಪತ್ತು: ರೈಲ್ವೆ ಇಲಾಖೆಯ ಉದ್ಯೋಗಿಯೇ ಕೋವಿಡ್ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಎಷ್ಟು ಸರಿ ಎಂಬ ಬೇಸರದ ಮಾತು ಗ್ರಾಮಸ್ಥರಿಂದ ಕೇಳಿ ಬರುತ್ತಿವೆ. ಆ ಅಧಿಕಾರಿ, ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದು, ಗ್ರಾಮದ ಹಿರಿಯರ ಮುಂಜಾಗ್ರತೆಯಿಂದ ಇನ್ನಷ್ಟು ಆಗಬಹುದಾದ ನಿರ್ಲಕ್ಷ್ಯ ತಡೆದಿದ್ದಾರೆ. ಈ ಅಧಿಕಾರಿ ಗ್ರಾಮಕ್ಕೆ ಮರಳಿದ ಬಳಿಕ ಮೂರು ದಿನದಿಂದ ಜ್ವರದಿಂದ ಬಳುತ್ತಿದ್ದರು. ಅದಕ್ಕಾಗಿ ಗ್ರಾಮದ ಸ್ಥಳೀಯ ಇಬ್ಬರು ವೈದ್ಯರ ಬಳಿ, ತಪಾಸಣೆ ನಡೆಸಿ, ಜ್ವರಕ್ಕೆ ಸಂಬಂಧಿಸಿದ ಮಾತ್ರೆ ತೆಗೆದುಕೊಂಡು ಸುಮ್ಮನಾಗಿದ್ದರು. ಒಂದು ವೇಳೆ ಅವರು, ಜ್ವರವನ್ನು ನಿರ್ಲಕ್ಷ್ಯ ಮಾಡದೇ, ಕೋವಿಡ್‌-19 ತಪಾಸಣೆಗೆ ಒಳಪಟ್ಟಿದ್ದರೆ, ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿತ್ತು. ಮುಖ್ಯವಾಗಿ ಆ ಊರಿನ ಜನರಿಗೆ ಆತಂಕ ತರುವುದಾಗಲಿ, ಚಿಕ್ಕಮ್ಯಾಗೇರಿ, ಹಿರೇಮ್ಯಾಗೇರಿ ಎರಡೂ ಗ್ರಾಮಗಳ ಜನರು ತೀವ್ರ ಆತಂಕಪಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಗ್ರಾಮದ ಹಿರಿಯರು ಹೇಳುತ್ತಿದ್ದಾರೆ.

ಬಾಗಲಕೋಟೆ ತಾಲೂಕಿನ ಚಿಕ್ಕಮ್ಯಾಗೇರಿ ಮತ್ತು ಹಿರೇಮ್ಯಾಗೇರಿ ಎರಡೂ ಗ್ರಾಮಗಳು ಒಂದಕ್ಕೊಂದು ಕೂಡಿಕೊಂಡಿವೆ. ಚಿಕ್ಕಮ್ಯಾಗೇರಿ ಗ್ರಾಮ ವ್ಯಾಪ್ತಿಯಲ್ಲಿ ಹಿರೇಮ್ಯಾಗೇರಿ ಕೂಡ ಇದ್ದು, ಮಂಗಳವಾರ ನಸುಕಿನ ಜಾವ ಮೃತಪಟ್ಟ ರೈಲ್ವೆ ಇಲಾಖೆಯ ಅಧಿಕಾರಿ, ಮೂಲತಃ ಬೊಮ್ಮಣಗಿಯವರು. ಅವರು ತಮ್ಮ ಕುಟುಂಬ ಸಮೇತ, ಹಿರೇಮ್ಯಾಗೇರಿಯಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದಾರೆ. ಎರಡು ವರ್ಷಗಳ ಹಿಂದೆ ಅವರು ಆರೋಗ್ಯ ಸಮಸ್ಯೆ ಎದುರಿಸಿದ್ದರು. ಗುಣಮುಖರಾಗಿ ಮರಳಿ ಇಲಾಖೆಯ ಸೇವೆಗೆ ಹಾಜರಾಗಿದ್ದರು. ಹುಬ್ಬಳ್ಳಿ-ಮೀರಜ್‌ ರೈಲ್ವೆಯಲ್ಲಿ ಟಿಕೆಟ್‌ ಪರೀಕ್ಷಕರಾಗಿ ಕೆಲಸ ಮಾಡುತ್ತಿದ್ದರು.

ಸ್ನಾನ ಮಾಡಿಸಿದ್ದರು: ಮೃತಪಟ್ಟ ಅಧಿಕಾರಿಯ ಶವವನ್ನು ಅವರ ಹತ್ತಿರದ ಸಂಬಂಧಿಕರು, ಮನೆಯವರು, ಕೆಲಸ ಸ್ನೇಹಿತರೇ ಸ್ನಾನ ಮಾಡಿಸಿ, ಹೊಸ ಬಟ್ಟೆ ಹಾಕಿದ್ದರು. ಬಳಿಕ ಸಂಪ್ರದಾಯದ ಪ್ರಕಾರ, ಗೋಡೆಗೆ ಕೂಡಿಸಿದ್ದರು. ಅವರು ಕೋವಿಡ್‌ ಕುರಿತು ಸಂಶಯ ವ್ಯಕ್ತಪಡಿಸಿ, ಹಿರಿಯರು ಬಾಗಲಕೋಟೆಯ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ. ಆಗ ಬಾಗಲಕೋಟೆಯ ವೈದ್ಯರು, ನರ್ಸ್‌ಗಳು ಪಿಪಿಇ ಕಿಟ್‌ ಸಹಿತ ಅಗತ್ಯ ಮುಂಜಾಗ್ರತೆಯೊಂದಿಗೆ ಗ್ರಾಮಕ್ಕೆ ತೆರಳಿ, ಶವದ ಗಂಟಲು ಮಾದರಿ ಪಡೆದು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯ ಲ್ಯಾಬ್‌ನಲ್ಲಿ ಪರೀಕ್ಷಿಸಿದ್ದರು. ಜಿಲ್ಲಾ ಲ್ಯಾಬ್‌ನಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಅದನ್ನು ಅಧಿಕೃತಗೊಳಿಸಲು ಬೆಂಗಳೂರಿಗೆ ಕಳುಹಿಸಲಾಗಿದೆ. ಬೆಂಗಳೂರಿನ ವರದಿ ಎರಡು ದಿನಗಳಿಂದ ಬಂದಿಲ್ಲ. ಹೀಗಾಗಿ ಕೋವಿಡ್‌-19 ನಿಯಮಾನುಸಾರ ಶವ ಸಂಸ್ಕಾರ ನಡೆಸಲಾಗಿದೆ.

Advertisement

ಊರು ಬಿಟ್ಟ ಜನ: ಈ ಘಟನೆಯಿಂದ ಚಿಕ್ಕಮ್ಯಾಗೇರಿ, ಹಿರೇಮ್ಯಾಗೇರಿ ಗ್ರಾಮಗಳು ಸೀಲ್‌ಡೌನ್‌ ಆಗಿವೆ. ಮೃತಪಟ್ಟ ಅಧಿಕಾರಿಯ ಮನೆ, ಸುತ್ತಲಿನ ಮನೆಗಳು ಸಹಿತ ಒಟ್ಟು 120 ಜನರನ್ನು ತಾಲೂಕು ಆಡಳಿತ, ಕ್ವಾರಂಟೈನ್‌ ಮಾಡಿದೆ. ಎರಡು ಗ್ರಾಮಗಳು ಸೀಲ್‌ ಡೌನ್‌ ಆದ ಬಳಿಕ, ಗ್ರಾಮದಲ್ಲಿ ಇರಲು ಜನರು ಮನಸ್ಸು ಮಾಡುತ್ತಿಲ್ಲ. ತಮ್ಮ ತಮ್ಮ ತೋಟದ ಮನೆಗಳಿಗೆ ಹೋಗಿ ನೆಲೆಸಿದ್ದಾರೆ. ತೋಟದಲ್ಲಿ ಮನೆ ಇಲ್ಲದವರು ಮಾತ್ರ ಅನಿವಾರ್ಯವಾಗಿ ಗ್ರಾಮದಲ್ಲಿದ್ದಾರೆ. ಆದರೆ, ಗ್ರಾಮಕ್ಕೆ ದಿನಸಿ ಸಾಮಗ್ರಿ, ಅಂಗಡಿ, ಹಾಲು ಪೂರೈಕೆ ನಿಂತಿದೆ. ಸಧ್ಯ ಮನೆಯಲ್ಲಿದ್ದ ದಿನಸಿ ಬಳಸುತ್ತಿದ್ದಾರೆ. ಇದು ಇನ್ನೂ ನಾಲ್ಕೈದು ದಿನ ಕಳೆದರೆ, ಗ್ರಾಮಸ್ಥರಿಗೆ ದಿನಸಿ, ಹಾಲು, ಇತರೆ ವಸ್ತುಗಳ ಕೊರತೆ ಉಂಟಾಗಲಿದೆ. ಇದಕ್ಕೆ ತಾಲೂಕು ಆಡಳಿತ ಅಗತ್ಯ ವ್ಯವಸ್ಥೆ ಮಾಡಬೇಕು ಎಂಬುದು ಗ್ರಾಮಸ್ಥರ ಮನವಿ.

 

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next