Advertisement

ಕೋವಿಡ್ ದಿಂದ ಬಳಲಿದ ಶಿಕ್ಷಣ ವ್ಯವಸ್ಥೆ

01:20 AM Jan 16, 2021 | Team Udayavani |

ಶಿಕ್ಷಣ ಪ್ರತಿಯೊಬ್ಬ ಮಾನವನ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನುಷ್ಯನನ್ನು ಸುಶಿಕ್ಷಿತನಾಗಿಸುವ ಜತೆಯಲ್ಲಿ ಆತನ ಬದುಕಿಗೆ ಒಂದು ರೂಪ ಕೊಡುವುದೇ ಶಿಕ್ಷಣ. ಓರ್ವ ವ್ಯಕ್ತಿ ಬೆಳೆದು ಬಂದ ಪರಿಸರ, ಸಂಸ್ಕೃತಿ, ಸಂಸ್ಕಾರಗಳು ಆತನ ಒಟ್ಟಾರೆ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆಯಾದರೂ ಆತ ಶಿಕ್ಷಿತನಾಗಿದ್ದಲ್ಲಿ ಮಾತ್ರವೇ ಅವುಗಳ ಸಾಧಕ, ಬಾಧಕಗಳನ್ನು ಅರಿತುಕೊಂಡು ಬಾಳಿ ನಲ್ಲಿ ಅಳವಡಿಸಿಕೊಂಡಾಗ ಮಾತ್ರವೇ ಆತನ ವ್ಯಕ್ತಿತ್ವ ಪರಿಪೂರ್ಣತೆಯನ್ನು ಪಡೆಯಲು ಸಾಧ್ಯ.

Advertisement

ಮಗುವಿಗೆ ಮನೆಯೇ ಮೊದಲ ಪಾಠಶಾಲೆಯಾದರೂ ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಸಿಗುವ ಶಿಕ್ಷಣ ಅತೀ ಮುಖ್ಯವಾದುದಾಗಿದೆ. ಮಕ್ಕಳು ಶಾಲೆಗೆ ಹೋಗಿ ಕಲಿಯುತ್ತಿ ದ್ದಾರೆಂದರೆ ಹೆತ್ತವರಿಗೆ ನೆಮ್ಮದಿ. ಇಂತಹ ಒಂದು ಕಲಿಕಾ ಪದ್ಧತಿ ದೇಶದಲ್ಲಿ ಹಿಂದಿನಿಂದಲೂ ಅತ್ಯಂತ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿದೆ. ಆದರೆ 2019ರ ಅಂತ್ಯದಲ್ಲಿ ಚೀನದಲ್ಲಿ ಕಾಣಿಸಿಕೊಂಡ ಕೋವಿಡ್ ಮಹಾಮಾರಿ ಇಡೀ ವಿಶ್ವದಲ್ಲಿಯೇ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತು. ಈ ವೈರಸ್‌ ಶೈಕ್ಷಣಿಕ ವರ್ಷವನ್ನು ಅಕ್ಷರಶಃ ಹಾಳುಗೆಡವಿದೆ.

ಕಳೆದ ವರ್ಷದ ಆರಂಭದಿಂದಲೇ ಕೋವಿಡ್ ಸೋಂಕು ದೇಶದಲ್ಲಿ ಕಾಣಿಸಿಕೊಂಡಿತ್ತಾದರೂ ಅದರ ತೀವ್ರತೆ ಕಂಡು ಬಂದುದು ಮಾರ್ಚ್‌ನಲ್ಲಿ. ಶೈಕ್ಷಣಿಕ ವರ್ಷದ ಮುಕ್ತಾಯದ ಘಟ್ಟದಲ್ಲಿ. ಶಾಲಾಕಾಲೇಜುಗಳಲ್ಲಿ ವರ್ಷದ ಪಠ್ಯಕ್ರಮಗಳು, ಪೂರ್ವಸಿದ್ಧತ ಪರೀಕ್ಷೆಗಳೆಲ್ಲವೂ ಮುಗಿದು ಇನ್ನೇನು ವಾರ್ಷಿಕ ಪರೀಕ್ಷೆ ಆರಂಭವಾಯಿತು ಎನ್ನುವಷ್ಟರಲ್ಲಿ ಕೋವಿಡ್ ಎಲ್ಲದಕ್ಕೂ ತಡೆಯೊಡ್ಡಿತು. ವಾರ್ಷಿಕ ಪರೀಕ್ಷೆಗಳನ್ನು ಎದುರಿಸಿ ಫ‌ಲಿತಾಂಶ ಪ್ರಕಟವಾದ ಬಳಿಕ ರಜೆಯ ಮಜಾ ಅನುಭವಿಸುವ ಲೆಕ್ಕಾಚಾರದಲ್ಲಿದ್ದ ವಿದ್ಯಾರ್ಥಿಗಳ ಪಾಲಿಗಂತೂ ಇದು ತೀವ್ರ ಬೇಸರ ಉಂಟುಮಾಡಿತು. ರಜೆ ಘೋಷಣೆಯಾದರೂ ಪರೀಕ್ಷೆ ಇದೆಯೇ?, ಇಲ್ಲವೇ? ಎಂಬ ಗೊಂದಲದಲ್ಲಿ ಕೆಲವು ವಾರಗಳನ್ನು ವಿದ್ಯಾರ್ಥಿಗಳು ಕಳೆಯುವಂತಾಯಿತು. ಇನ್ನು ಶಿಕ್ಷಣ ಇಲಾಖೆ ಮತ್ತು ಸರಕಾರಕ್ಕೂ ಇದು ಉಭಯ ಸಂಕಟವನ್ನು ತಂದೊಡ್ಡಿತು. ಒಂದೆಡೆಯಿಂದ ದಿನೇ ದಿನೆ ಪಸರಿಸುತ್ತಿರುವ ವೈರಸ್‌, ಮತ್ತೂಂದೆಡೆಯಿಂದ ಸಂಪೂರ್ಣವಾಗಿ ಸ್ತಬ್ಧಗೊಂಡ ಶಿಕ್ಷಣ ವ್ಯವಸ್ಥೆ. ಕೊನೆಗೂ ಸರಕಾರ ಪ್ರಾಥಮಿಕ ಹಂತದ ತರಗತಿಗಳ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವ ನಿರ್ಧಾರಕ್ಕೆ ಬಂದರೆ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಡೆಸಲು ತೀರ್ಮಾನಿಸಿತು. ಹಲವಾರು ಅಡ್ಡಿ, ಆತಂಕಗಳ ಹೊರತಾಗಿಯೂ ಈ ಪರೀಕ್ಷೆಗಳನ್ನು ನಡೆಸಿ ಫ‌ಲಿತಾಂಶವನ್ನು ಪ್ರಕಟಿಸುವಲ್ಲಿ ಯಶಸ್ವಿಯಾಯಿತು.

ಪರೀಕ್ಷೆ, ಫ‌ಲಿತಾಂಶಗಳ ಗೊಂದಲಗಳೇನೋ ನಿವಾರಣೆ ಯಾದವು. ಮುಂದೆ ಎದುರಾದುದು 2021-22ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದ ಸಮಸ್ಯೆ. ಒಂದೆಡೆ ಯಿಂದ ಲಾಕ್‌ಡೌನ್‌, ಮತ್ತೂಂದೆಡೆಯಿಂದ ಕ್ಷಿಪ್ರಗತಿ ಯಲ್ಲಿ ಹೆಚ್ಚುತ್ತಿರುವ ಸೋಂಕು ಪೀಡಿತರ ಸಂಖ್ಯೆ ಇವೆಲ್ಲ ದರಿಂದಾಗಿ ಎಲ್ಲವೂ ಗೊಂದಲಮಯ. ಪ್ರತೀ ವರ್ಷ ಜೂನ್‌ನಲ್ಲಿ ಆರಂಭಗೊಳ್ಳುತ್ತಿದ್ದ ಶೈಕ್ಷಣಿಕ ವರ್ಷ ಈ ಬಾರಿ ಆರಂಭಗೊಳ್ಳುವುದೇ ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣ ವಾಯಿತು. ಒಟ್ಟಾರೆ ಸರಕಾರ, ಶಿಕ್ಷಕರು, ವಿದ್ಯಾರ್ಥಿಗಳು, ಹೆತ್ತವರು.. ಯಾರು ಏನು ಮಾಡಲಾಗದಂತಹ ಸ್ಥಿತಿಯನ್ನು ತಂದೊಡ್ಡಿತು. ಎಲ್ಲರೂ ಕಂಗಾಲು, ಎಲ್ಲವೂ ಅಸ್ತವ್ಯಸ್ತ.

ಈ ಎಲ್ಲ ಅನಿಶ್ಚಿತ ಪರಿಸ್ಥಿತಿಗಳ ನಡುವೆಯೇ ಮಕ್ಕಳು ಒಂದಿಷ್ಟು ಪಾಠಪ್ರವಚನಗಳಲ್ಲಿ ಮಗ್ನರಾಗುವಂತೆ ಮಾಡಲು ಸರಕಾರ ಆನ್‌ಲೈನ್‌ ಶಿಕ್ಷಣ, ವಿದ್ಯಾಗಮ, ರೇಡಿಯೋ, ಟಿ.ವಿ.ಯಲ್ಲಿ ಸಂವೇದಾ ಇ-ಕ್ಲಾಸ್‌ ಮತ್ತಿತರ ಉಪಕ್ರಮಗಳನ್ನು ಕೈಗೊಂಡಿತು.

Advertisement

ಇವೆಲ್ಲ ನಮ್ಮ ಕಣ್ಣ ಮುಂದಿನ ಸನ್ನಿವೇಶದ ಚಿತ್ರಣವಾದರೆ ಕೊರೊನಾ ಸದ್ದಿಲ್ಲದೆ ನಮ್ಮ ಶೈಕ್ಷಣಿಕ ವ್ಯವಸ್ಥೆಯ ದೃಷ್ಟಿ ಕೋನವನ್ನು ಒಂದಿಷ್ಟು ಆಧುನಿಕ ಉಪಕ್ರಮಗಳತ್ತ ಹೊರ ಳುವಂತೆ ಮಾಡಿತು. ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಣ ಕ್ಷೇತ್ರದ ಮಟ್ಟಿಗೆ ಮರಳುಗಾಡಿನಲ್ಲಿ ಮರೀಚಿಕೆಯಂತೆ ಕಂಡು ಬಂದದ್ದು ಆಧುನಿಕ ತಂತ್ರಜ್ಞಾನದ ಅವಿಷ್ಕಾರವಾಗಿರುವ “ಆನ್‌ಲೈನ್‌ ಕ್ಲಾಸ್‌’. ದಶಕದ ಹಿಂದೆ ಇಂಥ ಒಂದು ಪರಿಕಲ್ಪನೆಯನ್ನು ಊಹಿಸಲೂ ಸಾಧ್ಯವಿರಲಿಲ್ಲ. ಆಟ, ಪಾಠ, ಗಲಾಟೆ, ದೂರು, ಚಾಡಿ ಮಾತುಗಳು, ಮೋಜುಮಸ್ತಿ ಮತ್ತಿತರ ಚಟುವಟಿಕೆಗಳ ನಡುವೆ ಶಿಕ್ಷಣ ಪಡೆದ ನಮಗೆ ಈ ಆನ್‌ಲೈನ್‌ ಕ್ಲಾಸ್‌ಗಳ ಬಗ್ಗೆ ಅರಿವಿರಲಿಲ್ಲ. ಆದರೆ ಈ ಎಲ್ಲ ಚಟುವಟಿಕೆಗಳು ಮಕ್ಕಳ ಬೌದ್ಧಿಕ, ದೈಹಿಕ ಆರೋಗ್ಯಕ್ಕೆ ಪೂರಕ ಅಂಶಗಳಾಗಿವೆ ಎಂಬುದನ್ನು ನಾವು ಮರೆಯಲಾಗದು. ಈ ಆಧುನಿಕ ವ್ಯವಸ್ಥೆಗೆ ಒಗ್ಗಿಕೊಳ್ಳಲು ಶಿಕ್ಷಕರಿಗೂ ಕಷ್ಟವಾಗಿದೆ.

ಇನ್ನು ಆನ್‌ಲೈನ್‌ ತರಗತಿ, ವಿದ್ಯಾಗಮ ತರಗತಿಗಳು ಪರ್ಯಾಯ ವ್ಯವಸ್ಥೆಗಳಷ್ಟೇ ಹೊರತು ಎಂದಿಗೂ ಶಾಶ್ವತ ವ್ಯವಸ್ಥೆಯಾಗಲು ಸಾಧ್ಯವಿಲ್ಲ. ಕೃತಕ ಯಾವತ್ತಿದ್ದರೂ ಕೃತಕವೇ ಎಂಬುದನ್ನು ಮರೆಯಲಾಗದು.

ಒಟ್ಟಾರೆಯಾಗಿ ಈಗ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾ ರಣೆ ಕಂಡಿದ್ದರೂ ಆನ್‌ಲೈನ್‌ ತರಗತಿಯನ್ನೇ ಆಧಾರವಾಗಿ ಟ್ಟುಕೊಂಡು ಪರೀಕ್ಷೆಗಳನ್ನು ನಡೆಸಿದರೆ ಎಲ್ಲ ವಿದ್ಯಾರ್ಥಿಗಳಿಗೂ ನ್ಯಾಯ ಸಿಕ್ಕಿದಂತಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಇನ್ನುಳಿದಿ ರುವ ಸ್ವಲ್ಪ ಸಮಯವನ್ನು ಎಲ್ಲ ಪಾಠಗಳ ಪುನರ್ಮನನ, ಸಾರಾಂಶ ವಿಶ್ಲೇಷಣೆ, ಸಂಶಯಗಳನ್ನು ನಿವಾರಿಸಿ ಪರೀಕ್ಷೆಗೆ ಸಜ್ಜುಗೊಳಿಸಬೇಕಿದೆ. ಹಳಿ ತಪ್ಪಿದ ಶಿಕ್ಷಣ ವ್ಯವಸ್ಥೆ ಆದಷ್ಟು ಬೇಗ ಹಳಿಗೆ ಬರಲಿ ಎಂಬುದೇ ಎಲ್ಲರ ಆಶಯ.

 

– ಚಂದ್ರಿಕಾ ಎಂ.ಮುಳ್ಳೇರಿಯ

Advertisement

Udayavani is now on Telegram. Click here to join our channel and stay updated with the latest news.

Next