Advertisement

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

08:15 PM Aug 01, 2021 | Team Udayavani |

ವಾಡಿ (ಚಿತ್ತಾಪುರ): ಶಾಲೆಗೆ ಬೀಗ ಬಿದ್ದು ವರ್ಷ ಕಳೆದಿದೆ. ತರಗತಿ ಕೋಣೆಗಳಲ್ಲೀಗ ಮದ್ಯದ ಬಾಟಲಿ ಬಿದ್ದಿವೆ. ಆಟದ ಅಂಗಳದಲ್ಲಿ ದನ ಕರುಗಳು ಹುಲ್ಲು ಮೇಯುತ್ತಿವೆ. ಪಾಠಗಳಿಂದ ದೂರ ಉಳಿದ ವಿದ್ಯಾರ್ಥಿಗಳು ತಮ್ಮದೇ ಶಾಲೆ ಮುಂದೆ ಹಸುಗಳ ಮಧ್ಯೆ ಮೈಮರೆತಿದ್ದಾರೆ. ಬೂಟು, ಬೆಲ್ಟು, ಟಾಯ್ ಧರಿಸಿ ಪುಸ್ತಕ ಹಿಡಿದಿರುತ್ತಿದ್ದ ಗ್ರಾಮೀಣ ಮಕ್ಕಳು ಈಗ ಊಟದ ಬುತ್ತಿ ಬೆತ್ತ ಹಿಡಿದು ದನಗಳ ಹಿಂದೆ ಓಡುತ್ತಿದ್ದಾರೆ!

Advertisement

ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗವು ವಿಶೇಷವಾಗಿ ಹಳ್ಳಿಗಾಡಿನ ವಿದ್ಯಾವಂತ ಹುಡುಗರ ಬಾಳಿನ ಮೇಲೆ ಕ್ರೌರ್ಯ ಮೆರೆದಿರುವುದು ವಾಸ್ತವ ಸತ್ಯ. ಅಕ್ಷರ ಬೆಳಕು ಬಾಳಿಗೆ ಹರಡಲು ಬಾ ಮರಳಿ ಶಾಲೆಗೆ ಎನ್ನುತ್ತಿದ್ದ ಸರಕಾರ ಸೋಂಕಿನ ಭೀತಿಯಲ್ಲಿ ಶಾಲೆಗೆ ಬೀಗ ಜಡಿದಿದೆ. ಮಾರುಕಟ್ಟೆ, ಮಾಲ್, ಹಾಲ್ ಕಾರ್ಯಕ್ರಮಕ್ಕೆ ಹಾರ್ದಿಕ ಸ್ವಾಗತವಿದ್ದರೂ ಶಾಲೆಗಳು ಮಾತ್ರ ಮಕ್ಕಳ ಕರೆಗೆ ಓಗೊಡುತ್ತಿಲ್ಲ. ಶಾಲೆ, ಶಿಕ್ಷಣ ಮತ್ತು ಶಿಕ್ಷಕರಿಂದ ದೀರ್ಘ ಕಾಲ ದೂರ ಉಳಿದ ಮಕ್ಕಳ ಮಾನಸಿಕ ಸ್ಥಿತಿಮಿತಿ ಹದಗೆಟ್ಟಿದೆ. ಮಕ್ಕಳ ಕಾಳಜಿಯಿಂದ ಸೋಂಕಿಗೆ ಸರಕಾರ ಹೆದರಿದರೂ ಹಸಿವಿಗೆ ಹೆದರಿದ ಪೋಷಕರು ಮಕ್ಕಳನ್ನು ಹಸುಗಳ ಹಿಂದೆ ಕಳುಹಿಸುತ್ತಿದ್ದಾರೆ. ಆತಂಕವಿಲ್ಲದೆ ಮಳೆ, ಗಾಳಿ, ಬಿಸಿಲಿನಲ್ಲಿ ವಿದ್ಯಾರ್ಥಿಗಳು ದನ ಕಾಯುವ ಕಾಯಕ ಮುಂದುವರೆಸಿರುವ ಕಳವಕಾರಿ ಪ್ರಸಂಗಗಳು ಎಲ್ಲೆಡೆ ಕಂಡು ಬರುತ್ತಿವೆ.

ಸಮರ್ಪಕವಾದ ಕಂಪೌಂಡ್ ಸೌಲಭ್ಯವಿಲ್ಲದ ಕಾರಣ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಮಕ್ಕಳ ಆಟದ ಮೈದಾನ ಅಕ್ಷರಶಃ ಗೋಮಾಳವಾಗಿ ಪರಿವರ್ತನೆಯಾಗಿದೆ. ತಾವು ಪಾಠ ಕೇಳಲು ಬರುತ್ತಿದ್ದ ಶಾಲೆಯ ಅಂಗಳದಲ್ಲಿ ತಾವೇ ದನಕಾಯುವ ಪರಸ್ಥಿತಿ ಬರುತ್ತದೆ ಎಂದು ವಿದ್ಯಾರ್ಥಿಗಳು ಕನಸು ಮನಸ್ಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಈ ಮನಕಲುಕುವ ಘಟನೆಗಳು ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಾಗಿವೆ. ಕೆಟ್ಟ ಕರಾಳ ದಿನಗಳು ವಿದ್ಯಾರ್ಥಿ ಸಮುದಾಯವನ್ನು ಕಾಡುತ್ತಿದ್ದು, ಜಾನುವಾರುಗಳಿಗೆ ಮೇವು ತಿನ್ನಿಸುವಲ್ಲಿ ಶಿಕ್ಷಣಾರ್ಥಿಗಳು ದಿನಗಳೆಯುತ್ತಿದ್ದಾರೆ. ಮನೆಯ ದನಗಳ ಜತೆಗೆ ಊರಿನ ದನಗಳನ್ನೂ ಕೂಲಿಗಾಗಿ ಕಾಯಲು ಮುಂದಾಗಿದ್ದಾರೆ. ಶಾಲೆಗಳು ಅನೈತಿಕ ಚಟುವಟಿಕೆಗಳ ತಾಣವಾಗಿರುವುದು ಒಂದೆಡೆಯಾದರೆ, ವಿದ್ಯಾರ್ಥಿಗಳು ಜೀವನೋಪಾಯಕ್ಕೆ ಅನ್ಯಮಾರ್ಗ ತುಳಿದಿರುವ ಆತಂಕ ಇನ್ನೊಂದೆಡೆ. ಒಟ್ಟಾರೆ ಹಳ್ಳಿಗಳಲ್ಲಿ ಶಾಲೆ ಮರೆತ ಹಾಲುಗಲ್ಲದ ಹಸುಳೆಗಳು ಈಗ ಹಸು ಕಾಯುವ ಜೀತದಾಳುಗಳಂತೆ ಗೋಚರಿಸುತ್ತಿದ್ದಾರೆ.

Advertisement

“ಶಾಲೆ ತರೆಯದೆ ವರ್ಷ ಕಳೆಯಿತು. ಆಟದ ಅಂಗಳದಲ್ಲಿ ಸಾಕಷ್ಟು ಹುಲ್ಲು ಮುಳ್ಳುಕಂಟಿ ಬೆಳೆದಿದೆ. ಊರಿನ ಪುಂಡ ಹುಡುಗರೆಲ್ಲ ಸಂಜೆಯಾಗುತ್ತಿದ್ದಂತೆ ಶಾಲೆಗೆ ನುಗ್ಗುತ್ತಾರೆ. ಮದ್ಯ ಕುಡಿದು ಬಾಟಲು ಬೀಸಾಡುತ್ತಾರೆ. ಪರಿಣಾಮ ಇಡೀ ಶಾಲಾ ಆವರಣದಲ್ಲಿ ಗಾಜುಗಳು ಹರಡಿಕೊಂಡಿವೆ. ಕಂಪೌಂಡ್ ನಿರ್ಮಾಣ ಅರ್ಧಂಬರ್ಧ ಆಗಿದ್ದರಿಂದ ದನಕರುಗಳು ಶಾಲೆಗೆ ಬರುತ್ತವೆ. ಶಾಲೆ ವಂಚಿತ ಮಕ್ಕಳು ಅನಿವಾರ್ಯವಾಗಿ ದನ ಕಾಯಲು ಹೋಗುತ್ತಿವೆ. ಸಣ್ಣಪುಟ್ಟ ಕೆಲಸ ಮಾಡುತ್ತ ತಂದೆ ತಾಯಿಯರಿಗೆ ನೆರವಾಗುತ್ತಿದ್ದಾರೆ. ಮಕ್ಕಳ ಪಾಲಿಗೆ ಬಹಳ ಕೆಟ್ಟ ಇನಗಳು ಬಂದಿವೆ. ಶಾಲೆಗೆ ಸೂಕ್ತ ಕಂಪೌಂಡ್ ವ್ಯವಸ್ಥೆಯಾಗಬೇಕು.”

-ಭೀಮಣ್ಣ ಕೇಸಬಳ್ಳಿ. ಎಸ್‌ಡಿಎಂಸಿ ಅಧ್ಯಕ್ಷ, ಸರಕಾರಿ ಪ್ರೌಢ ಶಾಲೆ ರಾವೂರ.

– ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next