Advertisement

ಚಿಂತೆ ಬೇಡ, ಚಿಂತನೆ ಮಾಡೋಣ

06:10 PM Jul 02, 2020 | Hari Prasad |

ಕೋವಿಡ್.. ಕೋವಿಡ್.. ಕೋವಿಡ್…ಈ ಶಬ್ದವನ್ನು ಬಹುಶಃ ಎಲ್ಲರೂ ಕೇಳಿದ್ದೀರಿ. ಸದ್ಯಕ್ಕಂತೂ ಈ ಶಬ್ದ ಸರ್ವತ್ರ ವ್ಯಾಪಿಸಿದೆ. ಬರೀ ಶಬ್ದವಷ್ಟೇ ಅಲ್ಲ. ಮನುಷ್ಯನ ಮನಸ್ಥಿತಿ ಮೇಲೆ ಇದರ ಕರಾಳ ಛಾಯೆಯೂ ಮೂಡಿದೆ.

Advertisement

ಅವರು ಮಧ್ಯವಯಸ್ಕ ಗೃಹಿಣಿ. ಧಾರವಾಡದ ಪ್ರತಿಷ್ಠಿತ ಆಸ್ಪತ್ರೆಗೆ ಓಡುತ್ತ ತೇಗುತ್ತ ಭಯಭೀತರಾಗಿ ಬಂದರು.ಅವರನ್ನು ವೈದ್ಯರು ಕೇಳಿದರೆ ಆಶ್ಚರ್ಯ ಕಾದಿತ್ತು. ಅದರರ್ಥ ಅವರಿಗೆ ಏನೂ ಆಗಿರಲಿಲ್ಲ.

ಆದರೆ ಅವರು ತುಂಬಾನೇ ಭಯಗೊಂಡಿದ್ದರು.ಅವರ ಭಯಕ್ಕೆ ಕಾರಣ ಕೋವಿಡ್ 19. ಹೌದು ಅವರ ಪತಿ ಮೊಬೈಲ್‌ನಲ್ಲಿ ಯಾರದೋ ಜತೆ ಮಾತನಾಡುವಾಗ ಇನ್ಯಾರಿಗೋ ಕೋವಿಡ್ 19 ಬಂದಿದೆ ಎಂಬ ಸಂಭಾಷಣೆ ಕೇಳಿದ್ದೇ ತಡ ಇವರು ಆ ಮಟ್ಟಕ್ಕೆ ಬೆಚ್ಚಿ ಬಿದ್ದಿದ್ದರು. ತನ್ನ ಪತಿ ಅಥವಾ ತನಗೆ ಎಲ್ಲಿ ಈ ಮಹಾಮಾರಿ ಬರುವುದೋ ಎಲ್ಲಿ ತನ್ನ ಹಾಗೂ ತನ್ನವರ ಜೀವಕ್ಕೆ ಹಾನಿಯಾಗುವುದೋ ಎನುವ ಆತಂಕಭರಿತ ಆಲೋಚನೆ ಇವರದ್ದಾಗಿತ್ತು.

ಇದು ಒಂದು ಉದಾಹರಣೆ ಅಷ್ಟೇ. ಇಂತಹ ಅನೇಕ ಪ್ರಕರಣಗಳು ಇಂದು ನಮ್ಮ ಮಧ್ಯೆ ಸಾಕಷ್ಟಿವೆ. ಕೋವಿಡ್ 19 ಸೃಷ್ಟಿಸಿದ ಭಯ ಅಷ್ಟೊಂದು ತೀವ್ರವಾಗಿದೆ. ಸಮಾಜದ ಅನೇಕರಲ್ಲಿ ಈ ತರಹದ ಭಯ ಮನೆ ಮಾಡಿದೆ.

ಡಿಸೆಂಬರ್‌ 2019ರಲ್ಲಿ ಕೋವಿಡ್ 19 ವೈರಸ್‌ ಮೊದಲ ಬಾರಿಗೆ ಪತ್ತೆಯಾಯಿತು. ನಾವು ಕಣ್ಮುಚ್ಚಿ ತೆಗೆಯುವುದರೊಳಗೆ ವಿಶ್ವವ್ಯಾಪಿ ಸಾವಿರಾರು ಜನರನ್ನು ಬಲಿ ಪಡೆದಿದೆ. ಈ ವೈರಾಣುವಿಗೆ ಯಾವುದೇ ಜಾತಿ-ಮತ-ಪಂಥವಿಲ್ಲ, ದೇಶಗಳ ಗಡಿಯಿಲ್ಲ.

Advertisement

ಈ ಮಾರಣಾಂತಿಕ ಸಾಂಕ್ರಾಮಿಕ ವೈರಸ್‌ ನಮ್ಮ ದೇಶವನ್ನೂ ಪ್ರವೇಶಿಸಿ ಈವರೆಗೆ ಸಾಕಷ್ಟು ಸದ್ದು ಮಾಡಿದೆ. ನಮ್ಮ ರಾಜ್ಯವೊಂದರಲ್ಲೇ ಸಾಕಷ್ಟು ಸೋಂಕಿತರು ಪತ್ತೆಯಾಗಿದ್ದಾರೆ. ಆ ಮೂಲಕ ಜನರಲ್ಲಿ ಇದರ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಆತಂಕದ ಮಡುವಿನಲ್ಲಿ ಮುಳುಗದೇ ಚಿಂತೆಗೊಳಗಾಗದೇ ಚಿಂತನೆ ಮಾಡಿ ಸಾಗಿದರೆ ಎಲ್ಲವೂ ಸುರಳಿತ.

ಜಗತ್ತು ಬಹುಶಃ ಇಂತಹ ಒಂದು ಬೃಹತ್‌ ಮಾರಣಾಂತಿಕ ಸೋಂಕಿನ ಬಗ್ಗೆ ಊಹಿಸಿರಲಿಲ್ಲ ಮತ್ತು ಮೇಲಾಗಿ ಮಾನಸಿಕವಾಗಿ ಇದನ್ನು ಎದುರಿಸುವ ಬಗ್ಗೆ ಸಿದ್ಧತೆಯೂ ಇರಲಿಲ್ಲ. ಇಂತಹ ಒಂದು ಸಂದಿಗ್ಧ ಸಂದರ್ಭದಲ್ಲಿ ಎಲ್ಲರಲ್ಲೂ ಆತಂಕ ಸಹಜ.

ಆತಂಕದ ಜತೆಗೆ ಇದು ಎಲ್ಲ ಕ್ಷೇತ್ರಗಳ ಮೇಲೆ ಬೀರುವ ಪರಿಣಾಮ ಅಷ್ಟಿಷ್ಟಲ್ಲ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ  ವ್ಯವಸ್ಥೆ ಜತೆಗೆ ಆರೋಗ್ಯದ ಮೇಲೂ ಭಾರಿ ಪ್ರಮಾಣದ ಪರಿಣಾಮ ಬೀರಿರುವುದಂತೂ ಸತ್ಯ. ವಿದ್ಯಾರ್ಥಿಗಳಿಗೆ ಓದಿನ ಹಾಗೂ ಪರೀಕ್ಷೆಯ ಚಿಂತೆ, ಉದ್ಯೋಗಸ್ಥರಿಗೆ ಕೆಲಸದ ಚಿಂತೆ ಇದೆಲ್ಲಕ್ಕಿಂತ ಮಿಗಿಲಾಗಿ ಆರೋಗ್ಯದ ಚಿಂತೆ.

ಈಗಾಗಲೇ ಎಲ್ಲೆಡೆ ಕೋವಿಡ್ 19 ವೈರಸ್‌ ಬಗ್ಗೆ ಭಯ ಸೃಷ್ಟಿಯಾದ ಹಿನ್ನೆಲೆಯಲ್ಲಿ ಈ ವೈರಸ್‌ ಇನ್ನೆಷ್ಟು ದಿನ ಇರುತ್ತದೆ? ಹೊರಗೆ ಹೋದರೆ ಎಲ್ಲಿ ನನಗೆ ಸೋಂಕು ತಗುಲುವುದೋ? ಕಚೇರಿಗೆ ಹೋದರೆ ಬಾಧಿ ತನಾಗುವೆನೋ? ಮುಖಗವಸು (ಮಾಸ್ಕ್) ಧರಿಸದೇ ಇರುವುದರಿಂದ‌ ಸೋಂಕು ತಗುಲುವುದೋ ಹೀಗೆ ನೂರೆಂಟು ಆತಂಕಭರಿತ ಆಲೋಚನೆಗಳು ಬಹುತೇಕರಲ್ಲಿ ಕಾಡುವುದು ಸಹಜ.

ಇನ್ನು ಕೆಲವರಲ್ಲಿ ಕೈಅಶುದ್ಧವಾಯಿತು, ಕೊಳೆಯಾಯಿತು ಎನ್ನುವ ಗೀಳು ವಿಚಾರ ಇರುತ್ತದೆ. ಅಂಥವರಿಗೆ ಈ ಸನ್ನಿವೇಶದಿಂದ ಗೀಳುರೋಗ ಮತ್ತಷ್ಟು ಉಲ್ಬಣಿಸುವ ಸಾಧ್ಯತೆ ದಟ್ಟವಾಗಿರುತ್ತದೆ.

ಸಮಾಜ ಇಂದು ಎದುರಿಸುತ್ತಿರುವ ಬಹು ದೊಡ್ಡ ಸಮಸ್ಯೆ ಎಂದರೆ ಕಾರ್ಯ ಬಾಹುಳ್ಯದಿಂದ ಮಾನಸಿಕ ಖಿನ್ನತೆ. ಅಂತಹದರಲ್ಲಿ ಇಂತಹ ಸಮಸ್ಯೆ ಎದುರಾದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುವ ಪ್ರಮಾಣ ಹೆಚ್ಚಿರುತ್ತದೆ. ಖಿನ್ನತೆಗೊಳಗಾದವರಿಗೆ ಕೆಲಸದಲ್ಲಿ ತೊಡಗಲು ಸೂಚನೆ ಇರುವಾಗ ಇಂತಹ ಸಂದರ್ಭ ಬಂದಾಗ‌ ನಾಲ್ಕು ಗೋಡೆಗಳ ಮಧ್ಯೆಯೇ ಜೀವನ ನಡೆಸುವ ಸ್ಥಿತಿ ಬಂದಲ್ಲಿ ಮನಸ್ಸಿನಲ್ಲಿ ನೂರಾರು ಆಲೋಚನೆಗಳು ಬರೋದು ಸಹಜ.

ಇಂದಿನ ಈ ಪರಿಸ್ಥಿತಿಯಲ್ಲಿ ಯಾರಿಗಾದರೂ ಭಯ ಉಂಟಾಗುವುದು ಸಹಜ. ಅದರಲ್ಲೂ ಮುಂಚಿನಿಂದಲೇ ಸೂಕ್ಷ್ಮ ಸ್ವಭಾವದವರೂ ಅಥವಾ ಖನ್ನತೆ, ಆತಂಕಕ್ಕೊಳಗಾದವರಿಗೆ ಖಿನ್ನತೆಯ ಲಕ್ಷಣಗಳು ಉಲ್ಬಣಗೊಳ್ಳಬಹುದು.ನಮ್ಮ ಸಮಾಜದ ಶೇ.10 ರಿಂದ 15 ಜನರಲ್ಲಿ ತೀವ್ರವಾದ ಖಿನ್ನತೆಯ ಲಕ್ಷಣಗಳು ಇರುತ್ತದೆ. ಇನ್ನೂ ಶೇ.10 ಜನರಲ್ಲಿ ಅಲ್ಪಮಟ್ಟದ ಖಿನ್ನತೆಯ ಲಕ್ಷಣಗಳು ಇರುತ್ತವೆ.

ಮನಸ್ಸಿಗೆ ನೋವು, ಅಸಮಾಧಾನ, ನಿದ್ರಾ ಹೀನತೆ ಲಕ್ಷಣಗಳಿಂದ ವೈದ್ಯರಲ್ಲಿಗೆ ಭೇಟಿ ನೀಡುತ್ತಾರೆ. ಇನ್ನು ಕೆಲ ಜನರು ಈ ಅಸಹಾಯಕತೆಯನ್ನು ತಾಳಲಾರದೇ ಆತ್ಮಹತ್ಯೆ ವಿಚಾರ ಮಾಡುತ್ತಾರೆ. ಸಾಮಾನ್ಯವಾಗಿ ಆತ್ಮಹತ್ಯೆ ವಿಚಾರ ಜನರಿಗೆ ಹೆದರಿಸಲು ಹೇಳುತ್ತಾರೆ ಎನ್ನುವ ತಪ್ಪುಗ್ರಹಿಕೆ ನಮ್ಮ ಸಮಾಜದಲ್ಲಿದೆ. ಯಾರಾದರೂ ಆತ್ಮಹತ್ಯೆ ವಿಚಾರವನ್ನು ವ್ಯಕ್ತಪಡಿಸಿದರೆ ಅದನ್ನೂ ಹಗುರವಾಗಿ ನೋಡಬಾರದು.

ಒಂದು ಪ್ರಜ್ಞಾವಂತ ಸಮಾಜವಾಗಿ ಧೈರ್ಯ ತುಂಬುವ ಕೆಲಸವನ್ನು ನಾವು ಮಾಡಬೇಕು. ಹತ್ತಿರದ ಮನೋವೈದ್ಯರ ಸಲಹೆ-ಸೂಚನೆ ಪಡೆದರೆ ಅನಾಹುತ ತಡೆಯಬಹುದು. ಈ ಅನಿವಾರ್ಯತೆ ಮಧ್ಯೆ ಕೆಲಸ ನಿರ್ವಹಿಸುವುದು ಜಾಣತನ. ಹಾಗಂತ ಎಲ್ಲ ಕೆಲಸ ಮತ್ತು ಜವಾಬ್ದಾರಿಗಳಿಂದ ವಿಮುಖರಾಗುವುದು ಪರಿಹಾರವಲ್ಲ.

ಇರುವ ಸೌಲಭ್ಯಗಳನ್ನೇ ಬಳಸಿ ಯಾವುದೇ ಕೆಲಸ ನಿಲ್ಲದಂತೆ ಸಂವಹನ ಮೂಲಕ ಕರ್ತವ್ಯ ನಿಭಾಯಿಸುವುದು ಸೂಕ್ತ. ಸಮಾಜದ ಪ್ರತಿಯೊಬ್ಬರು ತನ್ನ ಜವಾಬ್ದಾರಿಯನ್ನು ಅರ್ಥೈಸಿಕೊಳ್ಳಬೇಕು. ಯಾರೋ ಹೇಳುತ್ತಾರೆ ಅಂಥಲ್ಲ ಅದು ನಮ್ಮ ಮತ್ತು ನಮ್ಮ ದೇಶದ ಒಳಿತಿಗಿರುವ ಸಾಮಾಜಿಕ ಜವಾಬ್ದಾರಿಯಾಗಿದೆ. ಇನ್ನು ಒತ್ತಡ ಕಡಿಮೆ ಮಾಡಿಕೊಳ್ಳುವುದರ ಜತೆಗೆ ಕುಟುಂಬ ಸದಸ್ಯರೊಡನೆ ಬೆರೆಯಲು ಇದೊಂದು ಉತ್ತಮ ಅವಕಾಶ.

ಇದು ಜನಸಾಮಾನ್ಯರ ಮಾತಾದರೆ ಇನ್ನು ಕೋವಿಡ್ 19 ಸೋಂಕಿತರದ್ದು ಇನ್ನೊಂದು ತರಹದ ಕಳವಳ ಹಾಗೂ ತಳಮಳ. ಗುಣಮುಖರಾದ ಮೇಲೂ ಸಮಾಜ ತನ್ನನ್ನು ಹೇಗೆ ಸ್ವೀಕರಿಸುತ್ತದೆ? ಎಲ್ಲಿ ಬಹಿಷ್ಕಾರಕ್ಕೆ ಒಳಗಾಗುವೆನೋ ಎಂಬ ದುಗುಡ ಮನೆ ಮಾಡಿರುತ್ತದೆ. ಸೋಂಕಿತ ವ್ಯಕ್ತಿಗೂ ಸಾಮಾಜಿಕ ಹಾಗೂ ಕೌಟುಂಬಿಕ ಜವಾಬ್ದಾರಿಗಳು ಇರುತ್ತವೆ. ಇವುಗಳ ನಿರ್ವಹಣೆ ಕೂಡ ಸವಾಲಿನ ಕೆಲಸ.

ಆಗ ಇವರೊಟ್ಟಿಗೆ ಇವರ ಸಮಸ್ಯೆ ಮತ್ತು ಸ್ಥಿತಿ ಅರ್ಥೈಸಿಕೊಂಡು ಧೈರ್ಯ ತುಂಬುವ ಕೆಲಸ ಸಮಾಜ ಹಾಗೂ ಕುಟುಂಬ ಸದಸ್ಯರಿಂದ ಆಗಬೇಕು. ಏಕೆಂದರೆ ಯಾರೂ ಸೋಂಕನ್ನು ಅಪೇಕ್ಷಿಸಿ ಪಡೆದಿರಲ್ಲ. ಸೋಂಕಿತರ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗಬೇಕು. 21ನೇ ಶತಮಾನದಲ್ಲಿರುವ ನಮಗೆ ವಾಸ್ತವ ಅಂಶದ ಬಗ್ಗೆ ವೈಜ್ಞಾನಿಕ ಅರಿವು ಅಗತ್ಯ. ಅದರ ಬದಲು ಏನೋ ಭಾರಿ ಅನಾಹುತ ಸಂಭವಿಸಿದೆ ಎಂದು ತಲೆ ಮೇಲೆ ಕೈ ಇಟ್ಟುಕೊಂಡು ಕೂರುವ ಜಾಯಮಾನ ಸಲ್ಲದು.

ಚಿಂತೆ ಬದಲು ಚಿಂತನೆಗಿದು ಸಕಾಲ. ಎಲ್ಲದಕ್ಕೂ ಪರಿಹಾರವಿದೆ. ಸಕಾರಾತ್ಮಕ ಚಿಂತನೆ-ವಾಸ್ತವ ಅರಿತು ನಮ್ಮ ನಡವಳಿಕೆ ಅಥವಾ ವರ್ತನೆ ರೂಪಿಸಿಕೊಳ್ಳುವುದು ಇದಕ್ಕೆ ಮದ್ದು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ವೈರಸ್‌ ಹರಡುವಿಕೆ ಮತ್ತು ಅದರ ಪರಿಣಾಮ ಬಗ್ಗೆ ನೂರೆಂಟು ವಿಷಯಗಳು, ಸಲಹೆಗಳು, ವಿಡಿಯೋಗಳು ಬರುತ್ತಿವೆ.

ಇವುಗಳಲ್ಲಿ ಯಾವುದು ಸರಿ? ಎಷ್ಟು ಅಧಿಕೃತ? ಎಂಬುದರ ಪರಾಮರ್ಶೆ ಇಂದಿನ ತುರ್ತು ಅಗತ್ಯ. ಕೊರೊನಾದಂತಹ‌ ಸಮಸ್ಯೆ ಎದುರಾದಾಗ ವೈದ್ಯರ ಸಲಹೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕೃತ ಮಾಹಿತಿ ಪಾಲಿಸುವುದು ಸರಿಯಾದ ಕ್ರಮ. ಎಂತಹ ಮಾರಿಯನ್ನಾದರೂ ಹಿಮ್ಮೆಟ್ಟಿಸಬಲ್ಲೆವು ಎಂದು ದೃಢ ಸಂಕಲ್ಪಶಕ್ತಿಯನ್ನು ಜಾಗೃತಗೊಳಿಸುವುದೂ ಅಗತ್ಯ. ಈ ವೈರಸ್‌ ಅನ್ನು ಕೂಡ ಮನೋಬಲ, ಇಚ್ಛಾಶಕ್ತಿಯ ಪ್ರದರ್ಶನ ಹಾಗೂ ಜವಾಬ್ದಾರಿಗಳ ಸಮರ್ಥ ನಿರ್ವಹಣೆ ಮೂಲಕ ಸಾಂಘಿಕವಾಗಿ ಹೊಡೆದೋಡಿಸಲು ಮುಂದಾದರೆ ಬಹುಶಃ ನಮ್ಮ ದೇಶದ ಯಾರೊಬ್ಬರಲ್ಲೂ ಈ ಆತಂಕ, ದುಗುಡ, ತಳಮಳಕ್ಕೆ ಅವಕಾಶವೇ ಇರದು.

ಯಾರಾದರೂ ಆತ್ಮಹತ್ಯೆ ವಿಚಾರವನ್ನು ವ್ಯಕ್ತಪಡಿಸಿದರೆ ಅದನ್ನೂ ಹಗುರವಾಗಿ ನೋಡಬಾರದು. ಒಂದು ಪ್ರಜ್ಞಾವಂತ ಸಮಾಜವಾಗಿ ಧೈರ್ಯ ತುಂಬುವ ಕೆಲಸವನ್ನು ನಾವು ಮಾಡಬೇಕು. ಹತ್ತಿರದ ಮನೋವೈದ್ಯರ ಸಲಹೆ-ಸೂಚನೆ ಪಡೆದರೆ ಅನಾಹುತ ತಡೆಯಬಹುದು. ಈ ಅನಿವಾರ್ಯತೆ ಮಧ್ಯೆ ಕೆಲಸ ನಿರ್ವಹಿಸುವುದು ಜಾಣತನ. ಹಾಗಂತ ಎಲ್ಲ ಕೆಲಸ ಮತ್ತು ಜವಾಬ್ದಾರಿಗಳಿಂದ ವಿಮುಖರಾಗುವುದು ಪರಿಹಾರವಲ್ಲ. ಇರುವ ಸೌಲಭ್ಯ ಬಳಸಿ ಯಾವುದೇ ಕೆಲಸ ನಿಲ್ಲದಂತೆ ಸಂವಹನ ಮೂಲಕ ಕರ್ತವ್ಯ ನಿಭಾಯಿಸುವುದು ಸೂಕ್ತ.


– ಡಾ| ಆದಿತ್ಯ ಪಾಂಡುರಂಗಿ, ಮನೋವೈದ್ಯರು, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next