ನವದೆಹಲಿ: ವಿಶ್ವವನ್ನೇ ಕಾಡುತ್ತಿರುವ ಕೋವಿಡ್ 19 ವೈರಸ್ ಮಹಾಮಾರಿಯ ಕಾಟಕ್ಕೆ ಭಾರತವೂ ನಲುಗುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಕ್ರೀಡಾ ಧಿಗ್ಗಜರೊಂದಿಗೆ ಇಂದು ವಿಡಿಯೋ ಕಾನ್ಫೆರೆನ್ಸ್ ಸಂವಾದ ನಡೆಸಿದರು. ಕ್ರಿಕೆಟ್, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್ ಕ್ರೀಡಾ ತಾರೆಗಳು ಸೇರಿದಂತೆ ಸುಮಾರು 40 ಜನ ಕ್ರೀಡಾ ಕ್ಷೇತ್ರದ ಧಿಗ್ಗಜರೊಂದಿಗೆ ಪ್ರಧಾನಿ ಮೋದಿ ಅವರು ಈ ಸಂವಾದವನ್ನು ನಡೆಸಿದರು.
ಭಾರತದ ಜನಜೀವನದಲ್ಲಿ ಕ್ರೀಡೆ ಹಾಸು ಹೊಕ್ಕಾಗಿದೆ ಮತ್ತು ಭಾರತೀಯರ ಜೀವನಶೈಲಿಯನ್ನು ಪ್ರಭಾವಿಸುವ ಸಾಮರ್ಥ್ಯವನ್ನು ಕ್ರೀಡಾಪಟುಗಳು ಹೊಂದಿದ್ದಾರೆ.
ಇದನ್ನು ಮನಗಂಡಿರುವ ಪ್ರಧಾನಿ ಮೋದಿ ಅವರು ಕೋವಿಡ್ 19 ಮಹಾ ಮಾರಿಯನ್ನು ದೂರೀಕರಿಸಲು ಜನಭಾಗೀದಾರಿಕೆ ಅಗತ್ಯವಾಗಿರುವುದರಿಂದ ಜನರಿಗೆ ಸೂಕ್ತ ಮಾಹಿತಿ ಮತ್ತು ಅರಿವು ಮೂಡಿಸುವಲ್ಲಿ ಕ್ರೀಡಾ ಧಿಗ್ಗಜರ ಸಹಕಾರವನ್ನು ನಮೋ ಬಯಸಿದ್ದಾರೆ.
ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಮೇರಿ ಕೋಮ್, ಪಿ.ಟಿ. ಉಷಾ, ಪುಲ್ಲೇಲ ಗೋಪಿಚಂದ್, ವಿಶ್ವನಾಥನ್ ಆನಂದ್, ಹಿಮಾ ದಾಸ್, ಭಜರಂಗ್ ಪೂನಿಯಾ, ಪಿ.ವಿ.ಸಿಂಧು, ರೋಹಿತ್ ಶರ್ಮಾ, ಯುವರಾಜ್ ಸಿಂಗ್ ಮತ್ತು ಚೇತೇಶ್ವರ ಪುಜಾರ ಸೇರಿದಂತೆ ಒಟ್ಟು 40 ಜನ ಕ್ರೀಡಾಪಟುಗಳು ಪ್ರಧಾನಿ ಜೊತೆಗಿನ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಭಾಗವಹಿಸಿದ್ದಾರೆ.
Related Articles
ಕ್ರೀಡೆಯಲ್ಲಿ ಅಗತ್ಯವಾಗಿರುವ ಶಿಸ್ತು, ಕ್ಷಮತೆ, ಟೀಂ ವರ್ಕ್ ಮತ್ತು ಹೋರಾಟದ ಮನೋಭಾವ ಅಗತ್ಯವಿರುತ್ತದೆ ಅದೇ ರೀತಿಯಾಗಿ ಈ ಸಂಕಷ್ಟದ ಸಂದರ್ಭದಲ್ಲಿ ದೇಶದ ಜನತೆಯೂ ಸಹ ಒಬ್ಬ ಕ್ರೀಡಾಪಟುವಿನ ಗುಣಗಳನ್ನೇ ಅಳವಡಿಸಿಕೊಳ್ಳಬೇಕಾದ ಅಗತ್ಯವಿರುವುದರಿಂದ ನಿಮ್ಮೆಲ್ಲರ ಮಾರ್ಗದರ್ಶನ ಮತ್ತು ಸಲಹೆಗಳು ಉಪಯುಕ್ತವಾಗಿವೆ ಎಂದು ಮೋದಿ ಅವರು ಈ ಸಂದರ್ಭದಲ್ಲಿ ಹೇಳಿದರು.
ಬಳಿಕ, ಕ್ರೀಡಾ ಪಟುಗಳು ದೇಶದ ಜನತೆಗ ತಮ್ಮ ಸಂದೇಶವನ್ನು ನೀಡುವ ಸಂದರ್ಭದಲ್ಲಿ ಪ್ರಮುಖವಾಗಿ ಐದು ಅಂಶಗಳ ಕಡೆಗೆ ಒತ್ತ ನೀಡುವಂತೆ ತಿಳಿಸಿದ್ದಾರೆ. ಆ ಪಂಚ ಸೂತ್ರಗಳು ಯಾವುದೆಂದರೆ, ಸಂಕಲ್ಪ, ಸಂಯಮ, ಸಕಾರತ್ಮಕತೆ, ಸಮ್ಮಾನ ಮತ್ತು ಸಹಯೋಗ.
ಕೋವಿಡ್ 19 ವಿರುದ್ಧ ಹೋರಾಡುವ ‘ಸಂಕಲ್ಪ’, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ‘ಸಂಯಮ’, ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುವ ‘ಸಕಾರಾತ್ಮಕತೆ’, ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಯೋಧರ ಕಡೆಗೆ ‘ಸಮ್ಮಾನ’ ಮನೋಭಾವ ಹಾಗೂ ಪಿಎಂ ಕೇರ್ಸ್ ನಿಧಿಗೆ ವೈಯಕ್ತಿಕ ಹಾಗೂ ರಾಷ್ಟ್ರಮಟ್ಟದಲ್ಲಿ ಕೊಡುಗೆ ನೀಡುವ ಮೂಲಕ ‘ಸಹಯೋಗ’ – ಎಂಬೀ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳಲು ದೇಶದ ಜನರಿಗೆ ತಮ್ಮ ಸಂದೇಶದಲ್ಲಿ ಕರೆ ನೀಡಬೇಕು ಎಂದು ಪ್ರಧಾನಿ ಮೋದಿ ಅವರು ದೇಶದ ಕ್ರೀಡಾ ಧಿಗ್ಗಜರಿಗೆ ಮನವಿ ಮಾಡಿಕೊಂಡಿದ್ದಾರೆ.
ದೈಹಿಕ ಮತ್ತು ಮಾನಸಿಕ ಸದೃಢತೆಯ ಮಹತ್ವವನ್ನು ಹಾಗೂ ಆಯುಷ್ ಇಲಾಖೆ ಬಿಡುಗಡೆಗೊಳಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಹೆಚ್ಚು ಪ್ರಚಾರ ಮಾಡುವಂತೆಯೂ ಪ್ರಧಾನಿಯವರು ಈ ಕ್ರೀಡಾಪಟುಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.