Advertisement

ಲಾಕ್ಡೌನ್ ಪ್ರಭಾವ:ದೇಶದಲ್ಲಿ ಸೋಂಕಿತರ ಸಂಖ್ಯೆ 10,000ದಿಂದ 20,000ಕ್ಕೇರಲು ಬೇಕಾಯಿತು 8 ದಿನ

11:50 AM Apr 23, 2020 | Hari Prasad |

ಹೊಸದಿಲ್ಲಿ: ಇಡೀ ಮನುಕುಲವನ್ನೇ ನಡುಗಿಸಿ ಮನೆಗಳಿಗೆ ಸೀಮಿತಗೊಳಿಸಿದ ಕೋವಿಡ್ 19 ವೈರಸ್‌ ಭಾರತದಲ್ಲೂ ತನ್ನ ಕಬಂಧಬಾಹುಗಳನ್ನು ಚಾಚುತ್ತಿರುವ ನಡುವೆಯೇ ಸಮಾಧಾನಕರ ಸುದ್ದಿಯೊಂದಿದೆ.

Advertisement

ಅದೇನೆಂದರೆ, ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ, ಸೋಂಕಿನ ಏರಿಕೆಯ ದರವು ಗಣನೀಯವಾಗಿ ಕಡಿಮೆಯಾಗಿರುವುದು, ದೇಶವ್ಯಾಪಿ ನಿರ್ಬಂಧದ ಕ್ರಮ ಫಲಿಸಿದೆ ಎಂಬುದನ್ನು ಸಾಬೀತುಮಾಡಿದೆ.

ಲಾಕ್‌ ಡೌನ್‌ ಘೋಷಣೆಗೂ ಹಿಂದಿನ ಪರಿಸ್ಥಿತಿ ಹಾಗೂ ಇಂದಿನ ಸ್ಥಿತಿಗೆ ಹೋಲಿಕೆ ಮಾಡಿದರೆ ಈ ಲೆಕ್ಕಾಚಾರ ಅರ್ಥವಾಗುತ್ತದೆ. ಈಗಿನ ಸ್ಥಿತಿ ನೋಡಿದರೆ, ದೇಶದಲ್ಲಿ ಪ್ರಕರಣಗಳ ಸಂಖ್ಯೆ 10 ಸಾವಿರದಿಂದ 20 ಸಾವಿರಕ್ಕೆ ಏರಿಕೆಯಾಗಲು 8 ದಿನಗಳು ಬೇಕಾದವು. ಆದರೆ, ಲಾಕ್‌ಡೌನ್‌ ಘೋಷಣೆಗೂ ಮುನ್ನ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು.

ಆರಂಭದಲ್ಲಿ 3 ಪ್ರಕರಣಗಳಿಂದ 100 ಪ್ರಕರಣಗಳಿಗೆ ಏರಲು 2 ವಾರಗಳು ಬೇಕಾದವು. ಅನಂತರದ ಎರಡೇ ವಾರಗಳಲ್ಲಿ ಸೋಂಕಿತರ ಸಂಖ್ಯೆ ಒಂದು ಸಾವಿರಕ್ಕೇರಿತು. ಮತ್ತೆರಡು ವಾರದಲ್ಲಿ 10 ಸಾವಿರ ತಲುಪಿತು. ಇದೇ ಪ್ರಮಾಣದಲ್ಲಿ ಪ್ರಕರಣಗಳ ಸಂಖ್ಯೆ ಏರುತ್ತಾ ಹೋಗಿದ್ದರೆ, ಪ್ರಸಕ್ತ ಮಾಸಾಂತ್ಯಕ್ಕೆ ಒಟ್ಟು ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟುತ್ತಿತ್ತು. ಆದರೆ, ಸರಕಾರ ಕೈಗೊಂಡ ಲಾಕ್‌ ಡೌನ್‌ ನಿರ್ಧಾರ ಹಾಗೂ ಇತರೆ ಸಮರ್ಪಕ ಕ್ರಮಗಳಿಂದಾಗಿ, ಎಪ್ರಿಲ್‌ ಮಾಸಾಂತ್ಯಕ್ಕೆ ಸೋಂಕಿತರ ಸಂಖ್ಯೆ ಹೆಚ್ಚೆಂದರೆ 30 ಸಾವಿರಕ್ಕೇರಬಹುದು ಅಷ್ಟೆ.

4 ರಾಜ್ಯಗಳಲ್ಲೇ ಅತ್ಯಧಿಕ
24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 49 ಮಂದಿ ಮೃತಪಟ್ಟಿದ್ದು, 1486 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಹೊಸದಾಗಿ ಪತ್ತೆಯಾದ ಪ್ರಕರಣಗಳನ್ನು ಗಮನಿಸಿದರೆ ಕೇವಲ 4 ರಾಜ್ಯಗಳಲ್ಲೇ ಅತ್ಯಧಿಕ ಸೋಂಕು ಕಾಣಿಸಿಕೊಂಡಿದೆ.

Advertisement

ಒಂದೇ ದಿನದಲ್ಲಿ ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ ಮತ್ತು ಉತ್ತರಪ್ರದೇಶದಲ್ಲಿನ ಸೋಂಕಿತರ ಪ್ರಮಾಣವು ದೇಶದ ಒಟ್ಟಾರೆ ಹೊಸ ಪ್ರಕರಣಗಳ ಶೇ.75ರಷ್ಟಿವೆ. ಇನ್ನೂ 4 ರಾಜ್ಯಗಳ ಸಂಖ್ಯೆಯನ್ನು ಇದಕ್ಕೆ ಸೇರಿಸಿದರೆ (ತಮಿಳುನಾಡು, ದೆಹಲಿ, ಮಧ್ಯಪ್ರದೇಶ ಮತ್ತು ತೆಲಂಗಾಣ), ಈ ಪ್ರಮಾಣ ಶೇ.90ರಷ್ಟಾಗಲಿದೆ.

ಈ ರಾಜ್ಯಗಳಲ್ಲೇ ಅತ್ಯಧಿಕ ಸಾವು ಕೂಡ ಸಂಭವಿಸಿವೆ. ಮಹಾರಾಷ್ಟ್ರವೊಂದರಲ್ಲೇ 24 ಗಂಟೆಯ ಅವಧಿಯಲ್ಲಿ 19 ಮಂದಿ ಸಾವಿಗೀಡಾಗಿ ದ್ದಾರೆ. ಗುಜರಾತ್‌ ನಲ್ಲಿ 12, ಮಧ್ಯಪ್ರದೇಶದಲ್ಲಿ 13 ಮತ್ತು ಉ.ಪ್ರದೇಶದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

6 ನಗರಗಳಲ್ಲೇ ಶೇ.45 ಪ್ರಕರಣ
ಬುಧವಾರದವರೆಗೆ ದೇಶದ 430 ಜಿಲ್ಲೆಗಳಲ್ಲಿ ಕೋವಿಡ್ 19 ವೈರಸ್ ವ್ಯಾಪಿಸಿದೆ. ಏ.2ರಂದು ಒಟ್ಟು 211 ಜಿಲ್ಲೆಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ವಿಶೇಷವೆಂದರೆ, 6 ಪ್ರಮುಖ ನಗರಗಳಲ್ಲೇ ಅತ್ಯಧಿಕ ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಪೈಕಿ ಶೇ.45ರಷ್ಟು ಮಂದಿ ಈ 6 ನಗರಗಳಿಗೆ ಸೇರಿದವರು ಎಂದು ಅಧಿಕೃತ ಅಂಕಿಅಂಶ ಹೇಳಿದೆ. ಮುಂಬಯಿಯಲ್ಲಿ ಅತ್ಯಧಿಕ ಅಂದರೆ 3 ಸಾವಿರ ಪ್ರಕರಣಗಳು, ದಿಲ್ಲಿಯಲ್ಲಿ 2,081, ಅಹ್ಮದಾಬಾದ್‌ನಲ್ಲಿ 1,298, ಇಂದೋರ್‌ ನಲ್ಲಿ 915, ಪುಣೆಯಲ್ಲಿ 660 ಮತ್ತು ಜೈಪುರದಲ್ಲಿ 537 ಸೋಂಕಿತರಿದ್ದಾರೆ.

ಕಡಿಮೆ ವೆಚ್ಚದ ‘ಫೆಲುದಾ’ ಟೆಸ್ಟ್‌ ಸಾಧನ
ಭಾರತೀಯ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನೆ ಮಂಡಳಿಯ (ಸಿಎಸ್‌ಐಆರ್‌) ವಿಜ್ಞಾನಿಗಳು ಕಡಿಮೆ ಖರ್ಚಿನಲ್ಲಿ ಕೋವಿಡ್ 19 ವೈರಸ್ ಸೋಂಕು ಪತ್ತೆ ಹಚ್ಚುವ ವೈದ್ಯಕೀಯ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ‘ಫೆಲುದಾ’ ಎಂದು ಹೆಸರಿಟ್ಟಿದ್ದಾರೆ.

ಪ್ರಸಿದ್ಧ ಚಿತ್ರ ನಿರ್ದೇಶಕ ಸತ್ಯಜಿತ್‌ ರೇ ಅವರ ಕಥೆಗಳಲ್ಲಿ ಬರುವ ಪಾತ್ರದ ಹೆಸರು ಇದಾಗಿದೆ. ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯದಡಿ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನೆ ಮಂಡಳಿ ಕಾರ್ಯನಿರ್ವಹಿಸಲಿದೆ. ಸೋಂಕು ಪತ್ತೆ ಹಚ್ಚುವ ಈ ಸಾಧನ ಯಶಸ್ವಿಯಾದರೆ ಸ್ಥಳೀಯ ಪ್ರಯೋಗಾಲಯದಲ್ಲೂ ಪರೀಕ್ಷಿಸಬಹುದಾಗಿದೆ.

ಈ ಸಾಧನಕ್ಕೆ ‘ಫೆಲುದಾ’ ಎಂದು ಹೆಸರಿಟ್ಟಿರುವುದರ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ವಿಜ್ಞಾನಿ ಅನುರಾಗ್‌ ಅಗರ್‌ವಾಲ್‌, ಪತ್ತೆ ಹಚ್ಚುವ ಕಾರ್ಯಕ್ಕೆ ಡಿಟೆಕ್ಟರ್‌, ಶೆರ್ಲೋಕ್‌ ಎಂದು ಕರೆಯಲಾಗುವುದು. ಭಾರತೀಯ ಹೊಸ ರೂಪಾಂತರವಾಗಿ ‘ಫೆಲುದಾ’ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನೆರೆ ರಾಷ್ಟ್ರಗಳಿಗೆ ಕಾರ್ಯಪಡೆ
ಕೋವಿಡ್ 19 ವೈರಸ್ ವಿರುದ್ಧ ಹೋರಾಡಲು ನೆರೆಯ ಸ್ನೇಹಿ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್‌, ಶ್ರೀಲಂಕಾ, ಅಫ್ಘಾನಿಸ್ಥಾನಗಳಿಗೆ ಕ್ಷಿಪ್ರ ಕಾರ್ಯ ಪ್ರತಿಸ್ಪಂದನಾ ಪಡೆಯನ್ನು ಕಳುಹಿಸಲು ಭಾರತ ಸಿದ್ಧತೆ ನಡೆಸಿದೆ.

14 ಜನರ ಕ್ಷಿಪ್ರ ಕಾರ್ಯಸ್ಪಂದನಾ ತಂಡವೊಂದನ್ನು ಕಳೆದ ತಿಂಗಳು ಮಾಲ್ಡೀವ್ಸ್‌ಗೆ ಕಳುಹಿಸಿಕೊಡಲಾಗಿದ್ದು, ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವಲ್ಲಿ, ಸ್ಥಳೀಯ ವೈದ್ಯಕೀಯ ತಂಡಕ್ಕೆ ತರಬೇತಿ ನೀಡುವಲ್ಲಿ ನಿರತವಾಗಿದೆ.

ಸೇನಾಪಡೆಯ ಆರೋಗ್ಯ ಕಾರ್ಯಕರ್ತರ 15 ಜನರ ಕ್ಷಿಪ್ರ ಕಾರ್ಯಸ್ಪಂದನಾ ಪಡೆಯನ್ನು ಕುವೈಟ್‌ಗೆ ಕಳುಹಿಸಿಕೊಡಲಾಗಿದೆ. 3 ವಾರದ ಹಿಂದೆ ಅಗತ್ಯ ವೈದ್ಯಕೀಯ ಉಪಕರಣಗಳುಳ್ಳ 10 ಟನ್‌ ಸರಕನ್ನು ಶ್ರೀಲಂಕಾಗೆ ಕಳುಹಿಸಿಕೊಡಲಾಗಿತ್ತು. ಅಲ್ಲದೆ, 55 ರಾಷ್ಟ್ರಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್‌ನ್ನು ಕಳುಹಿಸಿ ಕೊಡಲಾಗಿದೆ.

ಶಾ ಅಭಯ; ಸಾಂಕೇತಿಕ ಪ್ರತಿಭಟನೆ ಕೈ ಬಿಟ್ಟ ವೈದ್ಯರು
ದೇಶದಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಮಾರಣಾಂತಿಕ ಹಲ್ಲೆ ಖಂಡಿಸಿ ಹಮ್ಮಿಕೊಂಡಿದ್ದ ಸಾಂಕೇತಿಕ ಪ್ರತಿಭಟನೆಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಧ್ಯಪ್ರವೇಶದಿಂದ ವೈದ್ಯರು ಅರ್ಧಕ್ಕೆ ಕೈಬಿಟ್ಟಿದ್ದಾರೆ.

ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವಿಷಯ ಗಮನಕ್ಕೆ ಬರುತ್ತಲೇ ಅಮಿತ್‌ ಶಾ ಅವರು ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಜತೆಗೂಡಿ ಪ್ರತಿಭಟನಾ ನಿರತ ವೈದ್ಯರ ಜತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚರ್ಚಿಸಿ ಅವರೆಲ್ಲರ ಸಮಸ್ಯೆಯನ್ನು ಆಲಿಸಿದರು.

ಈ ವೇಳೆ ಮಾತನಾಡಿದ ಅಮಿತ್‌ ಶಾ, “ವೈದ್ಯರು ಕೆಲಸ ಮಾಡುವ ಜಾಗದಲ್ಲಿ ಅವರ ಸುರಕ್ಷತೆ ಹಾಗೂ ಘನತೆ ಕಾಪಾಡುವುದು ನಮ್ಮೆಲ್ಲರ ಸಂಘಟಿತವಾದ ಹೊಣೆಯಾಗಿದೆ. ಎಲ್ಲ ಸಂದರ್ಭದಲ್ಲೂ ನಿಮಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುವ ಭರವಸೆಯನ್ನು ಮೋದಿ ಸರಕಾರದ ವತಿಯಿಂದ ನೀಡುತ್ತಿದ್ದೇವೆ. ದಯವಿಟ್ಟು ನಿಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳಿ’ ಎಂದು ಮನವಿ ಮಾಡಿದರು.

ಇದಾದ ಬಳಿಕ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳಲು ಐಎಂಎ ನಿರ್ಧರಿಸಿತು. ಮಧ್ಯಪ್ರದೇಶ, ಉತ್ತರ ಪ್ರದೇಶ, ಬೆಂಗಳೂರು ಸೇರಿ ವಿವಿಧ ಕಡೆ ಆರೋಗ್ಯ ಕಾರ್ಯಕರ್ತರ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ನಡೆಸಿದ್ದು ದೇಶವ್ಯಾಪಿ ಚರ್ಚೆಯಾಗಿತ್ತು.

ಪತ್ರಕರ್ತರ ಆರೋಗ್ಯದ ಬಗ್ಗೆಯೂ ನಿಗಾ ಇರಲಿ
ಕೋವಿಡ್ 19 ವೈರಸ್ ಸಂಬಂಧಿತ ಸುದ್ದಿಗಳನ್ನು ವರದಿ ಮಾಡುವ ಪತ್ರಕರ್ತರ ಆರೋಗ್ಯದ ಬಗ್ಗೆ ಮಾಧ್ಯಮ ಸಂಸ್ಥೆಗಳು ನಿಗಾವಹಿಸಬೇಕೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮುದ್ರಣ, ದೃಶ್ಯ ಮಾಧ್ಯಮಗಳ ಆಡಳಿತ ಮಂಡಳಿಗಳಿಗೆ ಸಲಹೆ ನೀಡಿದೆ.

ಹಲವು ಪತ್ರಕರ್ತರಿಗೆ ಸೋಂಕು ಕಾಣಿಸಿಕೊಂಡಿರುವ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮ ಸಂಸ್ಥೆಗಳು ಕ್ಷೇತ್ರ ಭೇಟಿಗೆ ಹೋಗುವ, ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ಬಗ್ಗೆ ಕಾಳಜಿ ವಹಿಸಿದೆಯೇ ಎಂದು ಪ್ರಶ್ನಿಸಿದೆ. ಮುದ್ರಣ ಹಾಗೂ ದೃಶ್ಯ ಮಾಧ್ಯಮದ ವರದಿಗಾರರು, ಕ್ಯಾಮರಾಮನ್‌, ಫೋಟೋಗ್ರಾಫರ್‌ ಸೋಂಕಿತರ ಮನೆ, ಅವರ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಇದು ಅಗತ್ಯ ಕೆಲಸ ಕೂಡ. ಹೀಗಾಗಿ ಆಡಳಿತ ಮಂಡಳಿಗೆ ಅವರ ಆರೋಗ್ಯದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದೆ.

ಪುಸ್ತಕ ಮಾರಾಟ, ರಿಚಾರ್ಜ್‌ಗೆ ಅವಕಾಶ
ಶೈಕ್ಷಣಿಕ ಪುಸ್ತಕ, ಎಲೆಕ್ಟ್ರಿಕ್‌ ಫ್ಯಾನ್‌ ಮಾರಾಟ ಮಳಿಗೆಗಳು, ಹಿರಿಯ ನಾಗರಿಕರಿಗೆ ಸಹಾಯಕರ ಸೇವೆ ಒದಗಿಸುವ ಸಂಸ್ಥೆಗಳು ಹಾಗೂ ಪ್ರೀಪೇಯ್ಡ ಮೊಬೈಲ್‌ ರಿಚಾರ್ಜ್‌ ಮಾಡುವ ಮಳಿಗೆಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ನಗರದಲ್ಲಿ ಬ್ರೆಡ್‌ ಕಾರ್ಖಾನೆ ಗಳು, ಹಿಟ್ಟಿನ ಗಿರಣಿಗಳು, ಹಾಲು ಸಂಸ್ಕರಣೆ ಘಟಕಗಳು, ಬೇಳೆ ಮಿಲ್‌ಗ‌ಳು ಸಹ ತಮ್ಮ ಚಟುವಟಿಕೆ ಪುನರಾರಂಭಿಸಬಹುದು. ಪ್ಯಾಕ್‌ ಹೌಸ್‌ಗಳು, ಬಿತ್ತನೆ ಬೀಜ, ತೋಟ ಗಾರಿಕೆ ಉತ್ಪನ್ನಗಳ ಪರಿಶೀಲನೆ ಮತ್ತು ಉಪಚಾರ ಘಟಕಗಳು, ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಸಂಶೋಧನಾ ಕೇಂದ್ರಗಳು, ಸಸಿ ನೆಡುವಿಕೆ, ಜೇನು ಉತ್ಪಾದನೆಗೆ ಸಂಬಂಧಿ ಸಿದ ಸಾಮಗ್ರಿಗಳ ಅಂತಾರಾಜ್ಯ ಸಾಗಣೆ, ಅರಣ್ಯ ಇಲಾಖೆ ಕಚೇರಿಗಳು ಅರಣ್ಯ ಪ್ರದೇಶದಲ್ಲಿ ಗಿಡ ನೆಡುವಿಕೆ ಚಟುವಟಿಕೆಗಳಿಗೂ ವಿನಾಯಿತಿ ನೀಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next