Advertisement

ಢಾಣಕಶಿರೂರಲ್ಲಿ ಕೋವಿಡ್ 19 ಢಣ ಢಣ

02:06 PM May 07, 2020 | Suhan S |

ಬಾಗಲಕೋಟೆ: ಕೇವಲ 250 ಕುಟುಂಬಗಳಿರುವ ಗ್ರಾಮ ಢಾಣಕಶಿರೂರ. ರಾಜ್ಯದಲ್ಲೇ ಅತಿ ಹೆಚ್ಚು ಜನ ಕೋವಿಡ್ 19  ಸೋಂಕಿತರು ಈ ಗ್ರಾಮದಲ್ಲಿ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದಲ್ಲೇ ಬರೋಬ್ಬರಿ 13 ಜನರಿಗೆ ಈ ಮಹಾಮಾರಿ ವ್ಯಾಪಿಸಿಕೊಂಡಿದೆ. ಬುಧವಾರ ಒಂದೇ ದಿನ ಈ ಹಳ್ಳಿಯಲ್ಲಿ 12 ಜನರಿಗೆ ಸೋಂಕು ಖಚಿತಪಟ್ಟಿದೆ.

Advertisement

ಸೀಮಂತ ಕಾರ್ಯ ತಂದ ಸಂಕಷ್ಟ!: ಗ್ರಾಮಕ್ಕೆ ಈ ಸೋಂಕು ಹೇಗೆ ಬಂತು ಎಂಬುದು ಇನ್ನೂ ನಿಗೂಢವಾಗಿದೆ. ಏ. 27ರಂದು ಚಿಕ್ಕ ಸೀಮಂತ ಕಾರ್ಯ ಮಾಡಿಕೊಂಡು, ಮನೆಯ ಅಕ್ಕ-ಪಕ್ಕದ ಮನೆಯವರಿಂದ ಉಡಿ ತುಂಬಿಕೊಂಡು, ತವರು ಮನೆ ಸೇರಿದ್ದ 23 ವರ್ಷದ ಆ ಮಹಿಳೆಗೆ, ಜ್ವರ ಕಾಣಿಸಿಕೊಂಡಿತ್ತು. ರೋಣ ಪಟ್ಟಣದ ವಾರ್ಡ್‌ನಂ.20ರ ಕೃಷ್ಣಾಪುರ ಏರಿಯಾದಲ್ಲಿರುವ ತವರು ಮನೆಯಿಂದ ಆಸ್ಪತ್ರೆಗೆ ಹೋಗಿದ್ದಳು. ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಿಂದ ಮಹಿಳೆಯ ಗಂಟಲು ದ್ರವ ಮಾದರಿ ಕಳುಹಿಸಿದ್ದು, ಕೋವಿಡ್ 19   ಖಚಿತಪಟ್ಟಿತ್ತು.

ಹುಬ್ಬಳ್ಳಿಯಲ್ಲಿ ತಮ್ಮೂರ ಸೊಸೆಗೆ ಕೋವಿಡ್ 19  ಇದೆ ಎಂಬುದು ಗೊತ್ತಾಗಿದ್ದೇ ತಡ, ಇತ್ತ ಢಾಣಕಶಿರೂರ ಗ್ರಾಮಸ್ಥರ ಎದೆ ಢವ ಢವ ಎಂದು ಹೊಡೆದುಕೊಳ್ಳುತ್ತಿತ್ತು. ಆ ಮಹಿಳೆಯ ಪತಿ, ಅತ್ತೆ-ಮಾವ ಸಹಿತ ಒಟ್ಟು 9 ಜನ ಸೇರಿದಂತೆ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ 112 ಜನರ ಗಂಟಲು ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಮಹಿಳೆಯ ಮನೆಯ ಎಲ್ಲ ಸದಸ್ಯರ ವರದಿಯೂ ನೆಗೆಟಿವ್‌ ಬಂದಿವೆ. ವಿಚಿತ್ರವೆಂದರೆ, ಆ ಮಹಿಳೆಗೆ ಉಡಿ ತುಂಬಿ-ಸೀಮಂತ ಕಾರ್ಯ ನಡೆಸಿಕೊಟ್ಟಿದ್ದ ಪಕ್ಕದ ಮನೆಯ ಮೂರು ಕುಟುಂಬದ 12 ಜನರಿಗೆ ಸೋಂಕು ಖಚಿತಪಟ್ಟಿದೆ.

ಹೇಗೆ ಬಂತು?: ಮೊದಲು ಮಹಿಳೆಗೆ ಸೋಂಕು ತಗುಲಿತ್ತೇ ಇಲ್ಲವೇ ಬಾಗಲಕೋಟೆಯ ವೃದ್ಧನ ಪ್ರಕರಣದಲ್ಲಾದಂತೆ ಬುಧವಾರ ಖಚಿತಪಟ್ಟ 12 ಜನರಲ್ಲೇ ಯಾರಿಗಾದರೂ ಸೋಂಕು ಮೊದಲೇ ಇತ್ತಾ ಎಂಬುದು ನಿಗೂಢವಾಗಿದೆ. ಗರ್ಭಿಣಿಯ ತವರು ಮನೆ ಹಾಗೂ ಗಂಡನ ಮನೆಯವರಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ಹಾಗಾದರೆ, ಮಹಿಳೆಗೆ ಹೇಗೆ ಬಂತು ಎಂಬುದು ಈಗ ಇಡೀ ಗ್ರಾಮಸ್ಥರಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.

ರಾಜ್ಯದ ಮೊದಲ ಗ್ರಾಮ: ಕೋವಿಡ್ 19  ಸೋಂಕಿತರು ಅತಿಹೆಚ್ಚು ಸಂಖ್ಯೆಯಲ್ಲಿ ಪತ್ತೆಯಾದ ಹಳ್ಳಿಗಳಲ್ಲಿ ಢಾಣಕಶಿರೂರ ಗ್ರಾಮ ಮೊದಲ ಸ್ಥಾನದಲ್ಲಿದೆ. ನಗರ-ಪಟ್ಟಣಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಆದರೆ, ಗ್ರಾಮೀಣ ಭಾಗದಲ್ಲಿ ಈ ಮಹಾಮಾರಿ ಪತ್ತೆಯಾಗಿರಲಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಂತೂ ಹಳ್ಳಿಗಳಲ್ಲಿ ಕಂಡು ಬಂದಿರಲಿಲ್ಲ. ಮುಧೋಳದ ಮುಗಳಖೋಡದ ಒಬ್ಬ ಯುವಕನಿಗೆ ಸೋಂಕು ಪತ್ತೆಯಾಗಿತ್ತಾದರೂ ಆತ ಮುಧೋಳದ ಮದರಸಾದಲ್ಲಿ ಗುಜರಾತ ಧರ್ಮ ಪ್ರಚಾರಕನೊಂದಿಗೆ ಸಂಪರ್ಕದಲ್ಲಿದ್ದಾಗ ಪತ್ತೆಯಾಗಿತ್ತು.

Advertisement

ಢಾಣಕಶಿರೂರದಲ್ಲಿ ಬುಧವಾರ 12 ಜನರಿಗೆ ಸೋಂಕು ಪತ್ತೆಯಾಗಿದೆ. ಮೇ 3ರಂದು ಪಿ-607 ಮಹಿಳೆಯಿಂದ ಇದು ವಿಸ್ತರಣೆಯಾಗಿದ್ದು, ಇಡೀ ಗ್ರಾಮದಲ್ಲಿ ಸೀಲ್‌ಡೌನ್‌ ಮಾಡಿ, ಜನರಿಗೆ ಅಗತ್ಯವಸ್ತುಗಳನ್ನು ಮನೆ ಮನೆಗೆ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮಕ್ಕೆ ಸೋಂಕು ಹೇಗೆ ಬಂತು ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಕ್ಯಾ.ಡಾ| ರಾಜೇಂದ್ರ, ಜಿಲ್ಲಾಧಿಕಾರಿ

ಢಾಣಕಶಿರೂರದಲ್ಲಿ 13 ಹಾಗೂಬಾದಾಮಿ ಪಟ್ಟಣದ ಚಾಲುಕ್ಯ ನಗರದಲ್ಲಿ 1 ಸೇರಿ ಒಟ್ಟು 14 ಜನರಿಗೆ ಸೋಂಕು ಬಂದಿದೆ. ಹೀಗಾಗಿ ಇಡೀ ಕ್ಷೇತ್ರದ ನಗರ-ಪಟ್ಟಣ, ಹಳ್ಳಿಗಳಲ್ಲಿ ಕಟ್ಟೆಚ್ಚರ ವಹಿಸಲು ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ನಿರ್ದೇಶನ ನೀಡಿದ್ದಾರೆ. ಢಾಣಕಶಿರೂರ ಜನರಿಗೆ ಅಗತ್ಯ ವಸ್ತುಗಳ ತೊಂದರೆ ಆಗದಂತೆ ಅಕ್ಕಿ, ಗೋಧಿ ಹಿಟ್ಟು, ಅಡುಗೆ ಎಣ್ಣೆ, ಈರುಳ್ಳಿ, ರವೆ, ಚಹಾಪುಡಿ ಸಹಿತ ಅಗತ್ಯ ವಸ್ತುಗಳನ್ನು 300 ಕುಟುಂಬಗಳಿಗೆ ಆಗುವಷ್ಟು ಪೂರೈಸಲಾಗಿದೆ. –ಹೊಳೆಬಸು ಶೆಟ್ಟರ, ಸಿದ್ದರಾಮಯ್ಯ ಅಭಿಮಾನಿ ಬಳಗದ ಮುಖಂಡ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next