Advertisement

ಕೊನೆಗೂ ಕೋಲಾರಕ್ಕೆ ಕಾಲಿಟ್ಟ ಕೋವಿಡ್-19

09:13 AM May 13, 2020 | Lakshmi GovindaRaj |

ಕೋಲಾರ: ಕಳೆದ ಒಂದು ವಾರದಿಂದಲೂ ನದಿ ದಡ ಆಟ ಆಡಿಸುತ್ತಲೇ ಇದ್ದ ಕೋವಿಡ್-19 ಕೊನೆಗೂ ಜಿಲ್ಲೆಗೆ ಕಾಲಿಟ್ಟು ಖಚಿತಪಡಿಸಿದ್ದು, ಮಂಗಳವಾರ ಒಮ್ಮೆಗೆ ಐದು ಕೋವಿಡ್-19 ಸೋಂಕಿತ ಪ್ರಕರಣ ಪತ್ತೆಯಾಗಿ ಇಡೀ ಜಿಲ್ಲೆಯನ್ನು ಆತಂಕದಲ್ಲಿ ಮುಳುಗಿಸಿದೆ. ಕಳೆದ 45ಕ್ಕೂ ಹೆಚ್ಚು ದಿನಗಳಿಂದ ಹಸಿರು ವಲಯದಲ್ಲಿ ಬೀಗುತ್ತಿದ್ದ ಕೋಲಾರ ಮಂಗಳ ವಾರ ಒಮ್ಮೆಗೆ ಸೋಂಕಿತ ಜಿಲ್ಲೆಯಾಗಿ ಮಾರ್ಪ ಟ್ಟಿತು. ಮುಳಬಾಗಿಲು ತಾಲೂಕಿನ ಐವರಿಗೆ ಸೋಂಕು ತಗುಲಿದ್ದನ್ನು ಮಂಗಳವಾರದ ಸಂಜೆ ಕೋವಿಡ್-19 ಬುಲೆಟಿನ್‌ ಖಚಿತಪಡಿಸಿದ್ದು, 906 ರಿಂದ 910 ರವರೆಗಿನ ಸಂಖ್ಯೆಯನ್ನು ಸೋಂಕಿತರ ಗುರುತಿಗೆ ನೀಡಲಾಗಿದೆ.

Advertisement

ಕೇಸ್‌ ನಂಬರ್‌ 906: 22 ವರ್ಷದ ವಿದ್ಯಾರ್ಥಿನಿ ಮುಳಬಾಗಿಲು ತಾಲೂಕು ವಿ. ಹೊಸಹಳ್ಳಿಯವರಾಗಿದ್ದು, ಈಕೆ ಹುಮ್ನಾಬಾದ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಗ್ರಾಮಕ್ಕೆ ವಾಪಸ್ಸಾಗಿದ್ದು, ಈಕೆಯ ಗಂಟಲು  ದ್ರಾವಣ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಕೇಸ್‌ ನಂಬರ್‌ 907: ಸೋಂಕಿತ 70 ವರ್ಷದ ಮಹಿಳೆ ಬೆಂಗಳೂರಿನ ಜೆ.ಪಿ. ನಗರದಲ್ಲಿ ಮನೆಕೆಲಸ ಮಾಡಿಕೊಂಡಿದ್ದು, ಈಕೆ ಇತ್ತೀಚೆಗೆ ಸ್ವಂತ ಗ್ರಾಮವಾದ ಮುಳಬಾಗಿಲು ತಾಲೂಕು ಬೂಸಾಲಕುಂಟೆ ಗ್ರಾಮಕ್ಕೆ ಬಂದಿದ್ದ ಕಾರಣ ಈಕೆಯನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿತ್ತು.

ಕೇಸ್‌ ನಂಬರ್‌ 908: 22 ವರ್ಷ ಮತ್ತು ಪಿ-909, 27 ವರ್ಷದ ಇಬ್ಬರು ಮುಳ ಬಾಗಿಲು ತಾಲೂಕು ಬೆಳಗಾನಹಳ್ಳಿ ಯವ ರಾಗಿದ್ದು, ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಒಡಿಶಾಗೆ ಹೋಗಿ ಬಂದಿದ್ದರು ಎನ್ನಲಾಗಿದ್ದು,  ಇವರ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.

ಕೇಸ್‌ ನಂಬರ್‌-910: ಮುಳಬಾಗಿಲು ತಾಲೂಕು ಬೈರಸಂದ್ರ ಗ್ರಾಮದ 21 ವರ್ಷದ ಚಾಲಕನಾಗಿದ್ದು, ಇವರು ಚೆನ್ನೈಗೆ ಹೋಗಿ ಬಂದಿದ್ದರೆನ್ನಲಾಗಿದೆ. ಇವರ ಗಂಟಲು  ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಈ ಐವರು ಸೋಂಕಿತರೆಂದು ಫಲಿತಾಂಶ ಬಂದಿದೆ. ಒಂದು ವಾರದಿಂದಲೂ ದೇವನಹಳ್ಳಿ ಮಾರ್ಗವಾಗಿ ಬಂದಿದ್ದ ಗುಜರಾತ್‌ ತಂಡ, ವಿಕೋಟ, ಪುಂಗನೂರುನಿಂದ ಬಂದಿದ್ದ ಆಂಧ್ರ ಪ್ರದೇಶದ ವ್ಯಕ್ತಿಗಳು, ತಬ್ಲಿ  ಧರ್ಮಪ್ರಚಾರಕ ತಂಡಗಳ ಆಗಮನದಿಂದ ಕೋಲಾರ ಜಿಲ್ಲೆ ಆತಂಕದ ಸುಳಿವಿನಲ್ಲಿ ಸಿಲುಕಿತ್ತು. ಆದರೆ, ಈ ಪ್ರಕರಣಗಳಿಂದ 100ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದ್ದು, ಬಹುತೇಕ ಈ ವ್ಯಕ್ತಿಗಳಿಗೆ  ಮೇಲ್ನೋಟಕ್ಕೆ ಯಾವುದೇ ಪಾಸಿಟಿವ್‌ ಲಕ್ಷಣಗಳು ಕಂಡು ಬರುತ್ತಿಲ್ಲ.

 ದೃಢಪಡಿಸಿದ ಡೀಸಿ: ಜಿಲ್ಲಾಧಿಕಾರಿ ಸಿ. ಸತ್ಯಭಾಮ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತ ನಾಡಿ, ಜಿಲ್ಲೆಯಲ್ಲಿ ಐದು ಜನರಿಗೆ ಸೋಂಕು ದೃಢಪಟ್ಟಿರುವುದನ್ನು ಖಚಿತಪಡಿಸಿದರು. ಪ್ರಾಥಮಿಕ ಸಂಪರ್ಕ ಹೊಂದಿದ 24 ಜನರನ್ನ ಕ್ವಾರಂಟೈನ್‌ ಮಾಡಲಾಗಿದೆ. ಈ ಗ್ರಾಮಗಳನ್ನ ಕಂಟೋನ್‌ಮೆಂಟ್‌ ಝೋನ್‌ಗೆ ಸೇರ್ಪಡೆ ಮಾಡಲಾಗಿದೆ. ಪಿ-906 8ರಂದು ಜಿಲ್ಲೆಗೆ ಸರ್ಕಾರಿ ಬಸ್‌ನಲ್ಲಿ ತುಮಕೂರು, ಚಿಕ್ಕಬಳ್ಳಾಪುರ ಮೂಲಕ ಬಂದಿದ್ದಾರೆ. ಪಿ-907 ಲಾಕ್‌ಡೌನ್‌ ಸಡಿಲಿಕೆಯಾದ ನಂತರ 7ರಂದು ಬಸ್‌ನಲ್ಲಿ ಬಂದಿದ್ದಾರೆ. ಸೋಂಕಿತರು ಎಲ್ಲರೂ ಆರೋಗ್ಯವಾಗಿದ್ದು, ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next