Advertisement

ಕೋವಿಡ್ ಹೊತ್ತು ಬಂದ ಮಹಾ ವಲಸಿಗರು!

05:36 AM May 21, 2020 | Suhan S |

ರಾಯಚೂರು: ಜಿಲ್ಲೆಯಿಂದ ಮಹಾರಾಷ್ಟ್ರದ ವಿವಿಧ ಪ್ರದೇಶಗಳಿಗೆ ವಲಸೆ ಹೋಗಿದ್ದ ಜನ ಕೋವಿಡ್ ಹೊತ್ತು ಬಂದಿದ್ದು, ದಿನಕ್ಕೊಂದು ಕೋವಿಡ್ ಪಾಸಿಟಿವ್‌ ಪ್ರಕರಣಗಳು ದೃಢಪಡುತ್ತಿವೆ. ಬುಧವಾರ ಮತ್ತೆ ನಾಲ್ವರು ಮಹಿಳೆಯರಲ್ಲಿ ಕೋವಿಡ್ ಪಾಸಿಟಿವ್‌ ದೃಢಪಟ್ಟಿದ್ದು, ಅಲ್ಲಿಗೆ ಒಟ್ಟು 11 ಜನರಿಗೆ ಸೋಂಕು ತಗುಲಿದಂತಾಗಿದೆ.

Advertisement

ವಿವಿಧ ರಾಜ್ಯಗಳಿಗೆ ಜಿಲ್ಲೆಗೆ 9547ಕ್ಕೂ ಅಧಿಕ ಕಾರ್ಮಿಕರು ಆಗಮಿಸಿದ್ದಾರೆ. ಅದರಲ್ಲಿ ಮುಂಬೈನಿಂದ 3200ಕ್ಕೂ ಅಧಿಕ ಕಾರ್ಮಿಕರು ಆಗಮಿಸಿದ್ದಾರೆ. ಆದರೆ, ಇಷ್ಟು ದಿನಗಳ ಕಾಲ ಇಲ್ಲದ ಕೊರೊನಾ ಈಗಲೇ ಬಂದಿರುವುದಕ್ಕೆ ವಲಸೆ ಕಾರ್ಮಿಕರು ಕಾರಣ ಎನ್ನುವುದು ಒಂದೆಡೆಯಾದರೆ; ಆ ರಾಜ್ಯಗಳು ಸರಿಯಾಗಿ ತಪಾಸಣೆ ಮಾಡದೆ ಕಾರ್ಮಿಕರನ್ನು ಕಳುಹಿಸುತ್ತಿರುವುದು ಮತ್ತೂಂದು ಕಾರಣ. ಪಾಸ್‌ ಪಡೆದು ವೈಯಕ್ತಿಕ ವಾಹನಗಳಲ್ಲಿ ಬಂದ ಸಾಕಷ್ಟು ಜನ ನೇರವಾಗಿ ಮನೆ ಸೇರಿಕೊಂಡಿದ್ದಾರೆ. ಅವರು ಅಲ್ಲಿ ತಪಾಸಣೆಗೆ ಒಳಪಟ್ಟಿಲ್ಲ. ಇಲ್ಲಿ ಪರೀಕ್ಷಿಸಿದಾಗ ಪಾಸಿಟಿವ್‌ ಇರುವುದು ದೃಢಪಡುತ್ತಿದೆ. ಇದು ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿದೆ.

ಜಿಲ್ಲೆಯಿಂದ ನೆರೆಯ ತೆಲಂಗಾಣ, ಆಂಧ್ರ ಮಾತ್ರವಲ್ಲದೇ ಮಹಾರಾಷ್ಟ್ರದ ಮುಂಬೈ, ಪುಣೆ, ಸೊಲ್ಲಾಪುರ ಸೇರಿದಂತೆ ವಿವಿಧೆಡೆ ದುಡಿಯಲು ವಲಸೆ ಹೋಗಿದ್ದರು. ಆದರೆ, ಈಗ ಅಲ್ಲಿ ಕೆಲಸವಿಲ್ಲದೇ ಜೀವನ ನಿರ್ವಹಣೆಯೇ ನಿಂತು ಹೋಗಿದ್ದರಿಂದ ವಿಧಿ ಇಲ್ಲದೇ ಮರಳಿ ಊರಿಗೆ ಬರುತ್ತಿದ್ದಾರೆ. ಇಷ್ಟು ದಿನ ಸರ್ಕಾರ ಅಂತಾರಾಜ್ಯಗಳಿಗೆ ಪ್ರವೇಶ ನಿರ್ಬಂಧಿಸಿದ ಕಾರಣ ಜನರನ್ನು ಗಡಿ ದಾಟಲು ಬಿಟ್ಟಿರಲಿಲ್ಲ. ಈಗ ಸರ್ಕಾರ ಅನುಮತಿ ನೀಡಿದ್ದು, ನಿತ್ಯ ಬರುವವರ ಸಂಖ್ಯೆ ಹೆಚ್ಚಾಗಿದೆ. ಹಾಗೆ ಬಂದವರಲ್ಲಿಯೇ ಕೋವಿಡ್ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ.

ಮತ್ತೆ ಪ್ರವೇಶ ನಿರ್ಬಂಧ : ಯಾವಾಗ ಬೇಕಾಬಿಟ್ಟಿಯಾಗಿ ವಲಸೆ ಕಾರ್ಮಿಕರು ರಾಜ್ಯಕ್ಕೆ ಬರುವುದು ಶುರುವಾಯಿತೋ ಆಗಿನಿಂದಲೇ ಕೋವಿಡ್ ಶರವೇಗದಲ್ಲಿ ಹಬ್ಬುತ್ತಿದೆ. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ತಾತ್ಕಾಲಿಕವಾಗಿ ನೆರೆ ರಾಜ್ಯಗಳ ಕಾರ್ಮಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಪಾಸ್‌ ಪಡೆದವರನ್ನು ಮಾತ್ರ ಬಿಡುತ್ತಿದ್ದು, ಚೆಕ್‌ಪೋಸ್ಟ್‌ ಗಳಲ್ಲಿಯೇ ತಪಾಸಣೆ ಮಾಡಲಾಗುತ್ತಿದೆ. ಪಾಸ್‌ ಇದ್ದವರಿಗೆ ಮಾತ್ರ ಜಿಲ್ಲೆಗೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಎಚ್ಚೆತ್ತಕೊಳ್ಳದ ಜನ : ಇಷ್ಟು ದಿನ ನೆಗೆಟಿವ್‌ ಪ್ರಕರಣಗಳಿದ್ದಾಗ ಹೆಚ್ಚು ಓಡಾಡದ ಜನ ಈಗ ಪಾಸಿಟಿವ್‌ ಬಂದಿದೆ ಎಂದರೂ ಲೆಕ್ಕಿಸುತ್ತಿಲ್ಲ. ಮಂಗಳವಾರ ಲಾಕ್‌ಡೌನ್‌ ಇದ್ದ ಕಾರಣ ಜನಸಂಚಾರ ಇಲ್ಲದೇ ನಗರ ಬಿಕೋ ಎಂದರೆ, ಬುಧವಾರ ಗಿಜಗನ ಗೂಡಿನಂತಾಗಿತ್ತು. ಮಾರುಕಟ್ಟೆಯಲ್ಲಿ ಜನಜಂಗುಳಿಯೇ ನೆರೆದಿತ್ತು. ಅದರಲ್ಲೂ ಬಟ್ಟೆ ಬಜಾರ್‌ ಮತ್ತು ಚಿನ್ನದ ಅಂಗಡಿಗಳ ವಹಿವಾಟು ಜೋರಾಗಿತ್ತು. ಸಾಮಾಜಿಕ ಅಂತರ ಕಾಪಾಡುವಂತೆ, ಮಾಸ್ಕ್ ಧರಿಸುವಂತೆ ಹೇಳಿದರೂ ಜನ ಪಾಲಿಸದೇ ಮನಬಂದಂತೆ ಓಡಾಡುತ್ತಿದ್ದಾರೆ. ಈಗಾಗಲೇ ಪಾಸಿಟಿವ್‌ ಹೊಂದಿರುವವರ ಪ್ರಥಮ, ದ್ವಿತೀಯ ಸಂಪರ್ಕದಲ್ಲಿ 369 ಜನ ಎಂದು ಗುರುತಿಸಲಾಗಿದೆ. ಮಂಗಳವಾರ ದೃಢಪಟ್ಟ ಪ್ರಕರಣದ ವ್ಯಕ್ತಿಯೊಂದಿಗೆ ಎಷ್ಟು ಸಂಪರ್ಕಗಳಾಗಿದೆ ಎಂಬ ಮಾಹಿತಿ ಇಲ್ಲ. ಆದರೂ ರೋಗದ ಭಯವಿಲ್ಲದೇ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.

Advertisement

ಅಂಧೇರಿಯಿಂದ ಬಂದರು.. : ಜಿಲ್ಲೆಯಲ್ಲಿ ಬುಧವಾರ ಕೂಡ ನಾಲ್ಕು ಪಾಸಿಟಿವ್‌ ಪ್ರಕರಣ ದಾಖಲಾಗಿದ್ದು, ಈ ನಾಲ್ವರು ಮಹಾರಾಷ್ಟ್ರದ ಮುಂಬೈನ ಅಂಧೇರಿಯಿಂದ ರಾಯಚೂರಿಗೆ ಬಂದಿದ್ದಾರೆ. ಎಲ್ಲ ಸೋಂಕಿತರನ್ನು ನಗರದ ಓಪೆಕ್‌ನಲ್ಲಿರುವ ಕೋವಿಡ್‌-19 ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ರಾಯಚೂರು ತಾಲೂಕಿನ ವಡೂರು ಗ್ರಾಮಕ್ಕೆ ಸೇರಿದ 26 ವರ್ಷದ ಮಹಿಳೆ (ಪಿ-1459), 40 ವರ್ಷದ ಮಹಿಳೆ (ಪಿ-1460), 12 ವರ್ಷದ ಬಾಲಕಿ (ಪಿ-1461) ಹಾಗೂ 30 ವರ್ಷದ ಮಹಿಳೆಗೆ (ಪಿ-1462) ಸೋಂಕು ಹರಡಿರುವುದು ದೃಢಪಟ್ಟಿದೆ. ಕೋವಿಡ್‌ -19 ವೈರಸ್‌ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

ಬೇರೆ ರಾಜ್ಯಗಳಿಂದ ಬಂದ ಕಾರ್ಮಿಕರಲ್ಲಿಯೇ ಕೋವಿಡ್ ಪಾಸಿಟಿವ್‌ ಪತ್ತೆಯಾಗುತ್ತಿದೆ. ಆ ರಾಜ್ಯಗಳು ಸರಿಯಾಗಿ ತಪಾಸಣೆ ಮಾಡಿ ಕಳುಹಿಸುತ್ತಿಲ್ಲ. ಕೆಲವರು ಖಾಸಗಿ ವಾಹನಗಳ ಮೂಲಕ ಆಗಮಿಸುತ್ತಿದ್ದರೆ, ಅನೇಕರು ಸಾರಿಗೆ ವಾಹನಗಳ ಮೂಲಕ ಆಗಮಿಸಿದ್ದಾರೆ. ಅವರೆಲ್ಲರನ್ನು ತಪಾಸಣೆ ಮಾಡಲಾಗುತ್ತಿದೆ. ಪಾಸ್‌ ಇದ್ದವರನ್ನು ಮಾತ್ರ ಜಿಲ್ಲೆಯೊಳಗೆ ಬಿಡಲಾಗುತ್ತಿದೆ.  ಸಂತೋಷ ಎಸ್‌. ಕಾಮಗೌಡ, ಸಹಾಯಕ ಆಯುಕ್ತ, ರಾಯಚೂರು

Advertisement

Udayavani is now on Telegram. Click here to join our channel and stay updated with the latest news.

Next