ಕೋವಿಡ್ 19 ದಿಂದ ಇಡೀ ದೇಶ ಸ್ತಬ್ಧವಾಗಿದೆ. ಸಾಕಷ್ಟು ಉದ್ದಿಮೆಗಳು ಮಕಾಡೆ ಮಲಗಿವೆ. ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟ ಉಂಟಾಗಿದೆ. ಮತ್ತೆ ಆರ್ಥಿಕ ಸದೃಢತೆ ಸಾಧಿಸಲು ಸಾಕಷ್ಟು ತಿಂಗಳುಗಳೇ ಬೇಕು. ಕೋವಿಡ್ 19 ಪ್ರತಿ ಕ್ಷೇತ್ರಕ್ಕೂ ದೊಡ್ಡ ಹೊಡೆತವನ್ನು ಕೊಟ್ಟಿದೆ. ಇದರಿಂದ ಚಿತ್ರರಂಗ ಕೂಡಾ ಹೊರತಲ್ಲ. ಈಗಾಗಲೇ ಚಿತ್ರರಂಗಕ್ಕೆ ಕೊರೊನಾದಿಂದಾಗಿ ಕೋಟಿಗಟ್ಟಲೇ ನಷ್ಟವಾಗಿದೆ. ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ.
ಮುಂದೆಯೂ ಚಿತ್ರರಂಗ ಚೇತರಿಸಿಕೊಳ್ಳಲು ಸಾಕಷ್ಟು ಸಮಯವೇ ಬೇಕಾಬಹುದು. ಹೀಗಿರುವಾಗ ಈಗ ಒಂದು ಪ್ರಶ್ನೆ ಎದ್ದಿದೆ. ಅದೇನೆಂದರೆ ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣ ಕಡಿಮೆಯಾಗಲಿದೆಯಾ ಎಂಬುದು. ಜೊತೆಗೆ ಸಿನಿಮಾ ಕಲಾವಿದರ ಹಾಗೂ ತಂತ್ರಜ್ಞರ ಸಂಭಾವನೆಗೆ ಹೊಡೆತ ಬೀಳಲಿದೆಯಾ ಎಂಬುದು.
ಹೀಗೊಂದು ಪ್ರಶ್ನೆ ಸಹಜವಾಗಿಯೇ ಚಿತ್ರರಂಗದಲ್ಲಿ ಎದ್ದಿದೆ. ಕನ್ನಡ ಚಿತ್ರರಂಗ ವರ್ಷಪೂರ್ತಿ ಚಟುವಟಿಕೆಯಲ್ಲಿರಲು ಮುಖ್ಯ ಕಾರಣ ಹೊಸಬರು. ವರ್ಷಕ್ಕೆ ಸ್ಟಾರ್ಗಳ ಐದಾರು ಸಿನಿಮಾಗಳು ಬಿಡುಗಡೆಯಾದರೆ ಮಿಕ್ಕಂತೆ ಇಡೀ ವರ್ಷ ಸುದ್ದಿಯಲ್ಲಿರೋರು, ಚಿತ್ರರಂಗವನ್ನು ಸದಾ ಚಟುವಟಿಕೆಯಲ್ಲಿ ಇಡೋರು ಹೊಸಬರು. ಈ ಹೊಸಬರ ಸಿನಿಮಾಗಳನ್ನು ನಿರ್ಮಿಸುವವರು ಕೂಡಾ ಹೊಸಬರೇ. ಇವರೆಲ್ಲಾ ಗಾಂಧಿನಗರದ ರೆಗ್ಯುಲರ್ ನಿರ್ಮಾಪಕರಲ್ಲ. ಸಿನಿಮಾ ಪ್ಯಾಶನ್ನಿಂದಾಗಿ, ಒಳ್ಳೆಯ ಕಥೆಗೆ ಸಾಥ್ ನೀಡುವ ಉದ್ದೇಶದಿಂದ ಸಿನಿಮಾ ನಿರ್ಮಾಣಕ್ಕೆ ಬರುತ್ತಾರೆ. ಮೊದಲೇ ಹೇಳಿದಂತೆ ಇವರಿಗೆ ಸಿನಿಮಾ ಒಂದು ಪ್ಯಾಶನ್. ದುಡಿಮೆಗಾಗಿ ತಮ್ಮದೇ ಆದ ಒಂದು ಬಿಝಿನೆಸ್ ಇಟ್ಟುಕೊಂಡಿರುತ್ತಾರೆ. ಆದರೆ, ಈ ಕೊರೊನಾ ಎಫೆಕ್ಟ್ ಬಹುತೇಕ ಬಿಝಿನೆಸ್ ಗಳನ್ನು ನುಂಗಿ ನೀರು ಕುಡಿದಿದೆ. ಬಿಝಿನೆಸ್ ನಂಬಿಕೊಂಡಿರುವವರು ತಲೆ ಮೇಲೆ ಕೈ ಹೊತ್ತುಕೊಂಡು ಕೂರುವ ಪರಿಸ್ಥಿತಿ ಬಂದಿದೆ. ಕೈಯಲ್ಲಿ ಕಾಸು ಚಲಾವಣೆಯದರೆ ತಾನೇ ಪ್ಯಾಶನ್ ಪೂರೈಸೋದು.
ಈ ಕಾರಣದಿಂದಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾದ ಬಹುತೇಕ ಮಂದಿ ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಹೊಸಬರ ಕಥೆ ಇಷ್ಟಪಟ್ಟು ಒಂದೆರಡು ತಿಂಗಳು ಬಿಟ್ಟು ಸಿನಿಮಾ ಶುರು ಮಾಡೋಣ ಎಂದು ಹೇಳಿದ್ದ ಹೊಸ ನಿರ್ಮಾಪಕರು, ಈಗ ಮುಂದೆ ನೋಡೋಣ, ಬಿಝಿನೆಸ್ ಸುಧಾರಿಸಲಿ ಎನ್ನುವಂತಾಗಿದೆ. ಹೀಗಾಗಿ ಕನಸು ಕಂಗಳೊಂದಿಗೆ ತಮ್ಮ ಸಿನಿಮಾ ಇನ್ನೇನು ಶುರುವಾಗಿಯೇ ಬಿಡ್ತು ಎಂದಿದ್ದ ಹುಮ್ಮಸ್ಸಿನ ಯುವಕರು ಕೂಡಾ ಕೊರೊನಾ ಎದುರು ಮಂಕಾಗಿದ್ದಾರೆ. ಈ ಮೂಲಕ ಈ ವರ್ಷ ನಿರ್ಮಾಣದಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆ ಕಾಣಲಿದೆ. ಈ ಮೂಲಕ ಚಿತ್ರರಂಗದಲ್ಲಿ ಚಟುವಟಿಕೆಗಳು ಕಡಿಮೆಯಾಗಲಿವೆ.
ಸಂಭಾವನೆಗೆ ಹೊಡೆತ : ಸಿನಿಮಾ ಮಂದಿಯ ಸಂಭಾವನೆಗೂ ಕೊರೊನಾ ಹೊಡೆತ ಕೊಡುವ ಸಾಧ್ಯತೆ ಇದೆ. ಅದು ಸ್ಟಾರ್ಗಳಿಂದ ಹಿಡಿದು ಈಗಷ್ಟೇ ಬೇಡಿಕೆಗೆ ಬರುತ್ತಿರುವ ನಟರವರೆಗು, ಜೊತೆಗೆ ಟೆಕ್ನಿಷಿಯನ್ಸ್, ಸ್ಟುಡಿಯೋ … ಎಲ್ಲದರ ಮೇಲೂ ಕೋವಿಡ್ 19 ಎಫೆಕ್ಟ್ ಜೋರಾಗಿರಲಿದೆ. ಏಕೆಂದರೆ ಮುಂದಿನ ದಿನಗಳಲ್ಲಿ ಲಾಕ್ ಡೌನ್ ತೆರವಾಗಿ ಸಿನಿಮಾ ಪ್ರದರ್ಶನ ಆರಂಭವಾದರೂ ಏಕಾಏಕಿ ಜನ ಚಿತ್ರಮಂದಿರಕ್ಕೆ ನುಗ್ಗಿ ಬರುತ್ತಾರೆಂಬ ಯಾವ ನಂಬಿಕೆಯೂ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಸಿನಿಮಾಗಳ ಕಲೆಕ್ಷನ್ ಮೇಲೂ ದೊಡ್ಡ ಹೊಡೆತ ಬೀಳಲಿದೆ. ಕೋಟಿಗಟ್ಟಲೆ ಸಂಭಾವನೆಗೆ, ಮತ್ತೂಂದಿಷ್ಟು ಕೋಟಿ ಮೇಕಿಂಗ್ಗೆಂದು ಖರ್ಚು ಮಾಡಿದ ನಿರ್ಮಾಪಕರು ಹಾಕಿದ ಹಣ ಬಾರದೇ ಹೋದಾಗ ಮಂಕಾಗಬಹುದು. ಈ ನಿಟ್ಟಿನಲ್ಲಿ ಕಲಾವಿದರು, ತಂತ್ರಜ್ಞರ ಸಂಭಾವನೆಯ ಮೇಲೂ ಹೊಡೆತ ಬೀಳುವ ಸಾಧ್ಯತೆ ಇದೆ.
ಎಲ್ಲ ಕ್ಷೇತ್ರಗಳಲ್ಲೂ ಆಗಿರುವಂತೆ ಸಿನಿಮಾರಂಗದ ಮೇಲೂ ಕೋವಿಡ್ 19 ಎಫೆಕ್ಟ್ ಜೋರಾಗಿಯೇ ಆಗಿದೆ. ಈಗಾಗಲೇ ಅನೇಕ ಸಿನಿಮಾಗಳ ಶೂಟಿಂಗ್ ಅರ್ಧಕ್ಕೆ ನಿಂತಿದೆ. ಕೆಲವು ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ, ಇನ್ನೂ ಕೆಲವು ಪ್ರೀ-ಪ್ರೊಡಕ್ಷನ್ ಮುಗಿಸಿ ಶೂಟಿಂಗ್ಗೆ ರೆಡಿಯಾಗಿವೆ. ಇಂಥ ಸಮಯದಲ್ಲಿ ಅನಿರೀಕ್ಷಿತವಾಗಿ ಇಡೀ ಚಿತ್ರರಂಗ ಲಾಕ್ ಡೌನ್ ಆಗಿದೆ. ಇದೆಲ್ಲದರಿಂದ ಮೊದಲು ತೊಂದರೆಯಾಗುವುದು ನಿರ್ಮಾಪಕರಿಗೆ. ಸದ್ಯದ ಮಟ್ಟಿಗಂತೂ ಸಿನಿಮಾವನ್ನೆ ನಂಬಿಕೊಂಡ ನಿರ್ಮಾಪಕರು ಮುಂದೇನು? ಎಂಬ ಚಿಂತೆಯಲ್ಲಿದ್ದಾರೆ. ಇಂಥ ಸಮಯದಲ್ಲಿ ಎಲ್ಲ ಕಲಾವಿದರು, ತಂತ್ರಜ್ಞರು ನಿರ್ಮಾಪಕರ ಬೆನ್ನಿಗೆ ನಿಲ್ಲಬೇಕಿದೆ. ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಂಡು, ತಮ್ಮ ಡೇಟ್ಸ್ ನೀಡಿ ಕೆಲಸ ಮಾಡಿಕೊಟ್ಟರೆ ಇದರಿಂದ ನಿರ್ಮಾಪಕರು ಉಳಿಯುತ್ತಾರೆ. ಮುಂದೆ ಬರುವ ಸಿನಿಮಾಗಳ ಸಂಖ್ಯೆಯಲ್ಲೂ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ, ಈ ಬಗ್ಗೆ ಆದಷ್ಟು ಬೇಗ ನಿರ್ಮಾಪಕರ ಜೊತೆ ಚರ್ಚಿಸಿ, ಕಲಾವಿದರು, ತಂತ್ರಜ್ಞರಿಗೆ ಮನವಿ ಮಾಡಿಕೊಳ್ಳಲಾಗುವುದು. ಒಬ್ಬ ನಿರ್ಮಾಪಕ ಸೋತರೆ, ಮುಂದೆ ಅವನಿಂದ ಮುಂದೆ ಬರುವಂಥ ಹತ್ತಾರು ಸಿನಿಮಾಗಳು ನಿಂತು ಹೋಗುತ್ತವೆ. ಇಂಥ ಸಮಯದಲ್ಲಿ ಎಲ್ಲರೂ ಪರಸ್ಪರ ಸಹಕಾರದ ಮೇಲೆ ಕೆಲಸ ಮಾಡಿಕೊಂಡು ಹೋಗಬೇಕು.
– ಪ್ರವೀಣ್ ಕುಮಾರ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ
ಚಿತ್ರರಂಗದಲ್ಲಿ ಎಲ್ಲರೂ ಪರಿಚಯವಾಗುವುದು ನಿರ್ಮಾಪಕರ ಮೂಲಕವೆ. ಇಲ್ಲಿ ಯಾರು ಏನೇ ಆಗಿದ್ರೂ ಅದಕ್ಕೆ ನಿರ್ಮಾಪಕರೂ ಕಾರಣರಾಗಿರುತ್ತಾರೆ. ಇಂಥ ಸಂದರ್ಭದಲ್ಲಿ ಎಲ್ಲ ಕಲಾವಿದರು, ತಂತ್ರಜ್ಞರು ನೈತಿಕವಾಗಿ ನಿರ್ಮಾಪಕರ ಸಹಾಯಕ್ಕೆ ನಿಲ್ಲಬೇಕು. ಚಿತ್ರರಂಗದಲ್ಲಿ ಏನೇ ಹೆಚ್ಚು- ಕಡಿಮೆಯಾದ್ರೂ ಅದರ ನೇರ ಪರಿಣಾಮವನ್ನು ಮೊದಲು ಎದುರಿಸಬೇಕಾದವರು ನಿರ್ಮಾಪಕರು. ಈಗಲೂ ಹಾಗೇ ಆಗಿದೆ. ಥಿಯೇಟರ್ಗಳು ಮುಚ್ಚಿದ್ದರಿಂದ, ಚಿತ್ರರಂಗದ ಚಟುವಟಿಕೆಗಳು ಹಠಾತ್ತಾಗಿ ಬಂದ್ ಆಗಿದ್ದರಿಂದ, ಅದರ ನೇರ ಪರಿಣಾಮ ನಿರ್ಮಾಪಕರ ಮೇಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ, ಮುಂದೆ ನಿರ್ಮಾಪಕರು ಸಿನಿಮಾ ಮಾಡೋದೆ ಕಷ್ಟವಾಗುತ್ತದೆ. ಕೆಲವರು ಬಡ್ಡಿಗೆ ದುಡ್ಡು ತಂದು ಸಿನಿಮಾ ಮಾಡುತ್ತಾರೆ ದಯಮಾಡಿ ಎಲ್ಲರೂ ಇಂಥ ವಾಸ್ತವವನ್ನು ಅರಿತುಕೊಂಡು ಮಾನವೀಯತೆ ಮೆರೆಯಬೇಕು ಅನ್ನೊದು ನನ್ನ ಮನವಿ. ನಿರ್ಮಾಪಕರು ಅನ್ನದಾತರು. ಅವರು ಉಳಿದರೆ ಚಿತ್ರರಂಗ ಉಳಿಯುತ್ತದೆ. –
ಲಹರಿ ವೇಲು, ನಿರ್ಮಾಪಕ