Advertisement

Court Order: ಮುಡಾ ತನಿಖೆ ಚುರುಕು: ದೂರುದಾರರಿಗೆ ನೋಟಿಸ್‌

01:01 AM Oct 01, 2024 | Team Udayavani |

ಮೈಸೂರು: ಮುಡಾ ಹಗರಣ ಸಂಬಂಧ ಕೋರ್ಟ್‌ ಆದೇಶದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರರ ವಿರುದ್ಧ ಎಫ್ಐಆರ್‌ ದಾಖಲಿಸಿರುವ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್‌ ತನಿಖೆ ಚುರುಕುಗೊಳಿಸಿದ್ದು, ಪ್ರಕರಣದ ದೂರುದಾರರಾದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ.

Advertisement

ಸೋಮವಾರ ರಾತ್ರಿ ಸ್ನೇಹಮಯಿ ಕೃಷ್ಣ ಅವರಿಗೆ ಕರೆ ಮಾಡಿದ ಡಿವೈಎಸ್ಪಿ ಮಾಲತೇಶ್‌ ಅವರು, ಮಂಗಳವಾರ ಬೆಳಗ್ಗೆ 7.30ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.

ಎಡಿಜಿಪಿ ಭೇಟಿ
ಪ್ರಕರಣದ ತನಿಖೆಗೆ ನಾಲ್ಕು ತಂಡ ರಚಿಸಿದ್ದ ಲೋಕಾಯಕ್ತ ಎಸ್ಪಿ ಟಿ.ಜೆ. ಉದೇಶ್‌ ಅವರು, ಲೋಕಾಯುಕ್ತ ಎಡಿಜಿಪಿ ಮನೀಷ್‌ ಖರ್ಬೀಕರ್‌ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಸಲಹೆ ಸೂಚನೆ ಪಡೆದು ಮೈಸೂರಿಗೆ ಹಿಂದಿರುಗಿದ್ದಾರೆ.

ಸೋಮವಾರ ಬೆಳಗ್ಗೆ ಕಚೇರಿಯಲ್ಲಿ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಎಸ್‌ಪಿ, ಮೈಸೂರು ಡಿವೈಎಸ್ಪಿ ಎಸ್‌.ಮಾಲತೀಶ್‌, ಚಾಮರಾಜನಗರ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್‌ ಹಾಗೂ ಇಬ್ಬರು ಇನ್ಸ್‌ಪೆಕ್ಟರ್‌ ಅವರನ್ನು ಒಳಗೊಂಡ ತನಿಖಾ ತಂಡದೊಂದಿಗೆ ಸಭೆ ನಡೆಸಿ ತನಿಖಾ ಕ್ರಮದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

85 ದಿನಗಳಲ್ಲಿ 50 ವರ್ಷಗಳ ದಾಖಲೆ ಪರಿಶೀಲನೆ ಸವಾಲು!
ಜನಪ್ರತಿನಿಧಿಗಳ ನ್ಯಾಯಾಲಯ ತನಿಖಾ ವರದಿ ನೀಡಲು ವಿಧಿಸಿದ್ದ 3 ತಿಂಗಳ ಗಡುವಿನಲ್ಲಿ ಈಗಾಗಲೇ 5 ದಿನ ಮುಗಿದು ಹೋಗಿದ್ದು, ಇನ್ನು 85 ದಿನದಲ್ಲಿ 50 ವರ್ಷದ ದಾಖಲೆಗಳನ್ನು ಪರಿಶೀಲಿಸಿ ತನಿಖೆ ಮಾಡಬೇಕಾಗಿರುವ ಸವಾಲು ಲೋಕಾಯುಕ್ತರಿಗೆ ಎದುರಾಗಿದೆ.

Advertisement

ಇಡಿಯಿಂದ ಸ್ವೀಕೃತಿ
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಜಾರಿ ನಿರ್ದೇಶನಾಲಯಕ್ಕೆ ಶನಿವಾರ ದೂರು ನೀಡಿದ್ದು, ದೂರು ಸ್ವೀಕೃತವಾಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next