Advertisement

ದೇಶ ಬಾಲಂಗೋಚಿ ಇಲ್ಲದ ಪಟ: ದೇವನೂರು

01:09 PM Oct 23, 2017 | Team Udayavani |

ಮೈಸೂರು: ಪ್ರಸ್ತುತ ದೇಶದಲ್ಲಿ ಆಳ್ವಿಕೆ ನಡೆಸುವವರು ಉದ್ಯೋಗ ಆಕಾಂಕ್ಷಿಗಳೇ ಉದ್ಯೋಗದಾತರಾಗಲಿ ಎಂದು ಹೇಳುತ್ತಿದ್ದು, ಇದು ಹೊಟ್ಟೆಗೆ ಹಿಟ್ಟಿಲ್ಲದವರು, ಊಟ ಬಡಿಸಲಿ ಎಂಬಂತಾಗಿದೆ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯ ಹಾಗೂ ಸಾಹಿತಿ ದೇವನೂರು ಮಹದೇವ ಕಳವಳ ವ್ಯಕ್ತಪಡಿಸಿದರು.

Advertisement

ಸ್ವರಾಜ ಇಂಡಿಯಾ ಪಕ್ಷದಿಂದ ನಗರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಕ್ರಿಯಾಶೀಲ ಕಾರ್ಯಕರ್ತರ ಸಮಾಲೋಚನಾ ಸಭೆ ಹಾಗೂ ನಗರ, ಗ್ರಾಮಾಂತರ ಘಟಕ ಉದ್ಘಾಟನೆಯಲ್ಲಿ ಮಾತನಾಡಿದರು.

ದಯನೀಯ ಸ್ಥಿತಿ: ಸಮಾಜದಲ್ಲಿ ಕೆಲವೇ ಮಂದಿ ಶ್ರೀಮಂತರು ಬಿಳಿರಕ್ತಕಣದಂತೆ ಮೆರೆಯುತ್ತಿದ್ದು, ಬಡವರು ಕೆಂಪುರಕ್ತ ಕಣದಂತೆ ದಯನೀಯವಾಗಿ ಬದುಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಉದ್ಯೋಗವೇ ಅಭಿವೃದ್ಧಿಯಾಗಬೇಕಿದ್ದು ಇದೇ ಹೊಸ ಮಾನದಂಡವಾಗಬೇಕಿದೆ. ಆಳ್ವಿಕೆ ನಡೆಸುವವರ ಹೇಳಿಕೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಈ ದೃಷ್ಟಿಕೋನ ಕ್ರೌರ್ಯದ ಪರಮಾವಧಿಯಾಗಿರುವುದರಿಂದ ನಾವು ಇದಕ್ಕೆ ಮುಖಾಮುಖೀಯಾಗಬೇಕಾಗಿದೆ ಎಂದರು.

ದುಡ್ಡುಮಾಡುವ ದಂಧೆ: ಇತ್ತೀಚಿಗೆ ರಾಜಕಾರಣ ಎಂಬುದು ದುಡ್ಡು ಸುರಿದು ದುಡ್ಡು ಮಾಡುವ ದಂಧೆಯಾಗಿದ್ದು, ಜೀವಗಳಿಗೆ ಬೆಲೆ ಇಲ್ಲದಂತಾಗಿದೆ. ಅಲ್ಲದೆ ಇಂದು ಮಾತಲ್ಲೇ ಮನೆಕಟ್ಟುವ ರಾಜಕಾರಣ ಚಾಲ್ತಿಯಲ್ಲಿದ್ದು, ಈಗಿನ ರಾಜಕಾರಣಿಗಳು ವಿವಿಧ ವೇಷಭೂಷಣ ಹಾಕಿದ ಸ್ಪರ್ಧಿಗಳಂತೆ ಗೋಚರಿಸುತ್ತಿದ್ದಾರೆ. ಇದರಿಂದಾಗಿ ದೇಶ ಬಾಲಾಂಗೋಚಿಯಿಲ್ಲದ ಪಟದಂತಾಗಿದೆ ಎಂದು ಹೇಳಿದರು.

ಸಮಾಜ ಪರಿವರ್ತನಾ ಸಂಸ್ಥೆಯ ಎಸ್‌.ಆರ್‌.ಹಿರೇಮಠ, ಜೆಸಿಬಿ (ಜೆ-ಜೆಡಿಎಸ್‌, ಸಿ-ಕಾಂಗ್ರೆಸ್‌ ಮತ್ತು ಬಿ-ಬಿಜೆಪಿ) ಪಕ್ಷಗಳು ರಾಜಕೀಯ ವ್ಯವಸ್ಥೆಯನ್ನು ಹೈಜಾಕ್‌ ಮಾಡಿದ್ದು ಈ ಲೂಟಿಕೋರ ಪಕ್ಷಗಳ ಅಂಟುರೋಗವನ್ನು ಸಮಾಜದಿಂದ ಹೋಗಲಾಡಿಸಬೇಕಿದೆ ಎಂದು ಹೇಳಿದರು.

Advertisement

ಈ ಹಿನ್ನೆಲೆಯಲ್ಲಿ ಸ್ವರಾಜ ಇಂಡಿಯಾ ಮುಖ್ಯಧಾರೆಯ ರಾಜಕಾರಣದ ಮುಂಚೂಣಿಗೆ ಬರುವ ಮೂಲಕ ಸಮಗ್ರ ಚಳವಳಿಗೆ ನಾಂದಿ ಹಾಡಿ, ಜನರ ಪ್ರಭುತ್ವವನ್ನು ಮರು ಸ್ಥಾಪಿಸಬೇಕಿದೆ ಎಂದರು. ಪತ್ರಕರ್ತ ಸುಗತ ಶ್ರೀನಿವಾಸರಾಜು, ಜನಮುಖೀ ಚಿಂತನೆ ಮೇಲೆ ನಡೆಯುತ್ತಿರುವ ಸ್ವರಾಜ್‌ ಇಂಡಿಯಾ ಪರ್ಯಾಯ ರಾಜಕಾರಣವನ್ನು ಕೈಬಿಟ್ಟು, ಮುಖ್ಯಧಾರೆಯಲ್ಲಿ ಸಾಗುವ ಮೂಲಕ ಪ್ರಮುಖ ರಾಜಕೀಯ ಪಕ್ಷಗಳಿಗೆ ತಕ್ಕ ಪ್ರತಿಕ್ರಿಯೆ ನೀಡಲು ಸಜಾjಗಬೇಕು ಎಂದು ಹೇಳಿದರು.

ಇದೇ ವೇಳೆ ಪರ್ಯಾಯ ರಾಜಕಾರಣಕ್ಕಾಗಿ ಸ್ವಾಗತ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ, ಪಕ್ಷದ ಸಂಚಾಲಕ ಅಮ್ಜದ್‌ ಪಾಷಾ, ಮುಖಂಡರಾದ ದೊಡ್ಡಿಪಾಳ್ಯ ನರಸಿಂಹಮೂರ್ತಿ, ಬಡಗಲಪುರನಾಗೇಂದ್ರ, ಕೆ.ಪಿ.ಸಿಂಗ್‌, ಪುಷ್ಪಾ, ಕೆ.ಟಿ.ಗಂಗಾಧರ, ಅಭಿರುಚಿ ಗಣೇಶ್‌ ಮತ್ತಿತರರಿದ್ದರು.
 
ಧರ್ಮ-ಜಾತಿ ರಾಜಕಾರಣದ ಗುರುತಾಗಿದೆ…
ಪ್ರಸ್ತುತ ದಿನಗಳಲ್ಲಿ ಧರ್ಮ ಮತ್ತು ಜಾತಿಯೇ ರಾಜಕಾರಣದ ಐಡೆಂಟಿಟಿ ಆಗಿದೆ. ಈ ಅಂಶಗಳ ಮೇಲೆ ರಾಜಕೀಯ ಪಕ್ಷಗಳು ರಾಜಕಾರಣ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ವಿಚಾರ, ಸಂವಿಧಾನದ ಆಶಯಗಳಿಗೆ ಬದ್ಧರಾದವರು ಮುಖ್ಯ ರಾಜಕಾರಣ ವ್ಯವಸ್ಥೆಯಲ್ಲಿರಬೇಕು. ಆದರೆ, ಇಂದು ಸದಾ ಪ್ರಜಾಪ್ರಭುತ್ವದ ಮೌಲ್ಯವನ್ನು ಉಲ್ಲಂಘನೆ ಮಾಡುವ ಪಕ್ಷಗಳೇ ಮುಖ್ಯವಾಹಿನಿಯಲ್ಲಿ ರಾರಾಜಿಸುತ್ತಿವೆ ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ವಿಷಾದಿಸಿದರು.

ಸ್ವರಾಜ್‌ ಇಂಡಿಯಾ ಕೇವಲ ರಾಜಕಾರಣ ಮಾತ್ರವಲ್ಲದೆ, ಧ್ಯೇಯಬದ್ಧ ನಡೆ ಮತ್ತು ಪಡೆ ಆಗಿದೆ. ಚುನಾವಣಾ ರಾಜಕಾರಣದ ಜತೆಗೆ ಜನಪರ ಹೋರಾಟ, ಅಂತರಂಗದ ಸಮತ್ವವೂ ರಾಜಕಾರಣವಾಗಿದೆ. ಸಹನೆ, ಪ್ರೀತಿ, ಸಹಬಾಳ್ವೆ, ಸಮಾನತೆಯೇ ಪಕ್ಷದ ಮೊದಲ ಹೆಜ್ಜೆ. ಈ ತತ್ವಗಳಿಗೆ ಬದ್ಧವಾದ ರಾಜಕಾರಣ ನಮ್ಮದಾಗಿದೆ.
-ದೇವನೂರು ಮಹದೇವ, ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next