Advertisement

ಮುಂದುವರಿದ ಮಳೆ ಆರ್ಭಟ

11:46 AM Oct 12, 2017 | |

ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಬಿಟ್ಟೂ ಬಿಡದಂತೆ ಕಾಡುತ್ತಿರುವ ಮಳೆರಾಯ, ಬುಧವಾರ ಕೂಡ ತನ್ನ ಆರ್ಭಟ ತೋರಿದ್ದಾನೆ. ನಗರದ ಬಹುತೇಕ ಭಾಗಗಳಲ್ಲಿ ಬುಧವಾರ ಸಂಜೆ ಆರಂಭವಾದ ಮಳೆ ರಾತ್ರಿಯಾದರೂ ನಿಂತಿರಲಿಲ್ಲ. ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಾತ್ರಿ ಕೂಡ ಮಳೆ ಸುರಿದಿದೆ.

Advertisement

ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ರೂಪೇನ ಅಗ್ರಹಾರ, ಕೃಪಾನಿಧಿ ಜಂಕ್ಷನ್‌, ವಿಪ್ರೋ ಜಂಕ್ಷನ್‌, ಆಡುಗೋಡಿ, ಕೋರಮಂಗಲ, ಬೆಳ್ಳಂದೂರು, ಕೆ.ಆರ್‌.ಪುರಂ, ಆನಂದ್‌ ರಾವ್‌ ವೃತ್ತ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ.

ಇನ್ನು ಹುಳಿಮಾವು, ಶಶಿಗಾರ್ಮೆಂಟ್ಸ್‌, ಬೆಳಕಳ್ಳಿ, ಶಾಲಿನಿ ಜಂಕ್ಷನ್‌ ಚೌಡಯ್ಯ ರಸ್ತೆ ಮತ್ತು ಈಜಿಪುರದ ಸೋನಿ ವಲ್ಡ್‌ ಕಡೆಗಳಲ್ಲಿ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ರಸ್ತೆಗಳಲ್ಲಿ ನೀರು ತುಂಬಿದ್ದು, ವಾಹನ ಸಂಚಾರ ದಟ್ಟವಾಗಿದೆ. ಸುಗಮ ಸಂಚಾರಕ್ಕಾಗಿ ಸಂಚಾರ ಪೊಲೀಸರು ಹರಸಾಹಸ ಪಟ್ಟರು. ದಕ್ಷಿಣ ವಿಭಾಗದ ಪೊಲೀಸರ ಕಾರ್ಯಾಚರಣೆ ದರೋಡೆ,

ಮಳೆಗೆ ಕೊಚ್ಚಿ ಹೋದ ಯುವಕ

ಕನಕಪುರ: ಸ್ನೇಹಿತರೊಂದಿಗೆ ಕನಕಪುರ ಪಟ್ಟಣಕ್ಕೆ ತೆರಳಿದ್ದ ಬೆಂಗಳೂರಿನ ಯುವಕನೊಬ್ಬ ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಮಂಗಳವಾರ ತಡರಾತ್ರಿ ಗಂಟಕನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಘಟನೆ ವೇಳೆ ಯುವಕನ ಜತೆಗಿದ್ದ ಇಬ್ಬರು ಯುವತಿಯರು ಸೇರಿದಂತೆ ಮೂವರು ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಬನಶಂಕರಿ ಎರಡನೇ ಹಂತದ ನಿವಾಸಿ
ಸಂತೋಷ್‌ (26) ನೀರಲ್ಲಿ ಕೊಚ್ಚಿಹೋದ ಯುವಕ. ಸಂತೋಷ್‌, ತನ್ನ ಸ್ನೇಹಿತ ವಿನಯ್‌ ಹಾಗೂ ಇಬ್ಬರು ಯುವತಿಯರ ಜತೆ ಮಂಗಳವಾರ ಆಟೋ ಒಂದರಲ್ಲಿ ಕನಕಪುರಕ್ಕೆ ತೆರಳಿದ್ದ. ನಾಲ್ಕೂ ಮಂದಿ ಬೆಳಗಿನಿಂದ ಸಂಜೆವರೆಗೆ ಪಟ್ಟಣ ಹಾಗೂ ಸುತ್ತಲ ಪ್ರದೇಶಗಳಲ್ಲಿ ಸುತ್ತಾಡಿದ್ದಾರೆ.

Advertisement

ಕನಕಪುರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರಾತ್ರಿ ಮಳೆ ಆರಂಭವಾಗಿದೆ. ಆದರೆ ಮಳೆಯನ್ನು ಲೆಕ್ಕಿಸದ ಸಂತೋಷ್‌
ಹಾಗೂ ಸ್ನೇಹಿತರು, ರಾತ್ರಿ 12 ಗಂಟೆ ಸಮಯದಲ್ಲಿ ಆಟೋದಲ್ಲೇ ಬೆಂಗಳೂರಿಗೆ ವಾಪಾಸ್‌ ಹೊರಟಿದ್ದಾರೆ. ಈ ವೇಳೆ ತಾಲೂಕಿನ ಗಂಟಕನದೊಡ್ಡಿ ಬಳಿ ಹೋಗುವಾಗ ರಸ್ತೆ ಮೇಲೆ ಮಳೆ ನೀರು ರಭಸವಾಗಿ ಹರಿಯುತ್ತಿತ್ತು. ಆದರೆ ಅದನ್ನು ಲೆಕ್ಕಿಸದೆ ಆಟೋ ಚಾಲನೆ ಮಾಡಿದಾಗ ನೀರಿನ ರಭಸಕ್ಕೆ ಆಟೋ ಮಗುಚಿ, ಸಂತೋಷ್‌ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಉಳಿದ ಮೂವರು
ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂತೋಷ್‌ಗಾಗಿ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ
ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲದಂತೆ ಕ್ರಮಕ್ಕೆ ಸೂಚನೆ

ಬೆಂಗಳೂರು: ಮಳೆಯಿಂದ ಜನತೆ ತೊಂದರೆ ಅನುಭವಿಸುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿದ ಮೇಯರ್‌ ಸಂಪತ್‌ರಾಜ್‌, ಕೂಡಲೇ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬುಧವಾರ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಚರಂಡಿಗಳಿಗೆ ಸಮರ್ಪಕವಾಗಿ ನೀರು ಹರಿಯದಿರುವ ಕಾರಣ ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಚರಂಡಿ ಕಿಂಡಿಗಳಲ್ಲಿ ಸೇರಿಕೊಂಡಿರುವ ತ್ಯಾಜ್ಯವನ್ನು ತೆರವುಗೊಳಿಸಿದರೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಹೀಗಾಗಿ ಕೂಡಲೇ ಅಧಿ 
ಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದರು.

ಮೊದಲಿಗೆ ಚಾಲುಕ್ಯ ವೃತ್ತದ ಬಳಿ ರಸ್ತೆಯಲ್ಲಿ ನೀರು ನಿಂತಿರುವ ಪ್ರದೇಶ ಪರಿಶೀಲಿಸಿದ ಅವರು, ರಸ್ತೆಯಲ್ಲಿ ನೀರು ನಿಂತು ರಸ್ತೆಯ ಮೇಲ್ಪದರ ಹಾಳಾಗಿರುವುದ್ದು, ಕೂಡಲೇ ಡಾಂಬರೀಕರಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಸ್ಯಾಂಕಿ ರಸ್ತೆಯಲ್ಲಿರುವ ಅಂಡರ್‌ ಪಾಸ್‌ನಲ್ಲಿ ಹೆಚ್ಚಿನ ಪ್ರಮಾಣದ ನೀರು ಶೇಖರಣೆಯಾಗಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಯಾವುದೇ ಕಾರಣಕ್ಕೂ ಅಂಡರ್‌ಪಾಸ್‌ನಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು. ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೂಡಲೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಬೇಕು ಹಾಗೂ 2 ತಿಂಗಳಲ್ಲಿ ಕಾಮಗಾರಿ ಮುಗಿಸಬೇಕು ಪಾಲಿಕೆಯ ಎಂಜಿನಿಯರ್‌ಗಳಿಗೆ ಆದೇಶಿಸಿದರು.

ನಂತರ ಶಿವಾನಂದ ವೃತ್ತದ ಬಳಿಯ ರೈಲ್ವೆ ಅಂಡರ್‌ಪಾಸ್‌ ಬಳಿಯ ಉಕ್ಕಿನ ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದರು. ಜತೆಗೆ
ವೃತ್ತದ ಬಳಿ ನಡೆಸಲಾಗುತ್ತಿರುವ ಕಿರು ಚರಂಡಿ ಕಾಮಗಾರಿಯನ್ನ ಸಂಚಾರಕ್ಕೆ ತೊಂದರೆಯಾಗದಂತೆ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮೇಖ್ರೀ ವೃತ್ತದ ಬಳಿಯ ವೈಮಾನಿಕ ವಿಮಾನಯಾನ ತರಬೇತಿ ಸಂಸ್ಥೆಗೆ ಆವರಣದಿಂದ ಮಳೆಯ ನೀರು ರಸ್ತೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ತರಬೇತಿ ಸಂಸ್ತೆಗಳಿ ಭೇಟಿ ನೀಡಿದ ಸಂಪತ್‌ರಾಜ್‌ ಸಂಸ್ಥೆಯ ಮುಖ್ಯಸ್ಥ ಕ್ಯಾಪ್ಟನ್‌ ಅನಂತ್‌ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ 200 ಎಕರೆ ವಿಸ್ತೀರ್ಣವಿರುವ ಸಂಸ್ಥೆಯ ಆವರಣದಲ್ಲಿ ಬೃಹತ್‌ ಕಾಲುವೆ ನಿರ್ಮಿಸುವುದರಿಂದ ರಸ್ತೆ
ನೀರು ಬರುವುದು ನಿಲ್ಲುವುದರಿಂದ ಕಾಲುವೆ ನಿರ್ಮಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. 

ಮಳೆಹಾನಿ: ಇಂದು ಬಿಎಸ್‌ವೈ ಭೇಟಿ
ನಗರದಲ್ಲಿ ಮಳೆಹಾನಿಗೊಳಗಾದ ಪ್ರದೇಶಗಳಿಗೆ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರು ಭೇಟಿ ನೀಡಲಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್‌, ಮಾಜಿ ಉಪಮುಖ್ಯ ಮಂತ್ರಿ ಆರ್‌.ಅಶೋಕ್‌, ಶಾಸಕರಾದ ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಸೇರಿದಂತೆ ನಗರದ ಶಾಸಕರು, ಪಾಲಿಕೆ ಸದಸ್ಯರು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಹತ್ತು ಗಂಟೆಗೆ ನಗರ
ಪ್ರದಕ್ಷಿಣೆ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next