Advertisement

ಕೋಸ್ಟಲ್‌ವುಡ್‌ನ‌ಲ್ಲಿ “ಅತಳ ವಿತಳ ಶೂರ’!

11:57 PM Jan 29, 2020 | mahesh |

ಭೋಜರಾಜ್‌ ವಾಮಂಜೂರು ನಾಟಕ, ಸಿನೆಮಾದಲ್ಲಿ ನಗಿಸುವ ಜತೆಗೆ, ಹಾಡಿನ ಮೂಲಕವೂ ಮೋಡಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಯಕ್ಷಗಾನದಲ್ಲಿಯೂ ವೇಷ ಹಾಕಿ ಭೋಜರಾಜ್‌ ಶಹಬ್ಟಾಸ್‌ಗಿರಿ ಪಡೆದಿದ್ದರು. ಭಾಗವತಿಕೆಯಲ್ಲಿಯೂ ಅವರು ಮೋಡಿ ಮಾಡಿದ್ದರು. ಇಂತಹ ನವರಸ ನಾಯಕ ವಾಮಂಜೂರು ಇದೀಗ ವಿಭಿನ್ನ ಹಾಡಿನ ಮೂಲಕ ಸುದ್ದಿಯಲ್ಲಿದ್ದಾರೆ.

Advertisement

ಸೋಶಿಯಲ್‌ ಮೀಡಿಯಾದಲ್ಲಿ ವಾಮಂಜೂರು ಅವರ ಗಾನ ಬಜಾನ ಸಖತ್‌ ಡಿಮ್ಯಾಂಡ್‌ ಪಡೆದಿದೆ. ವಿಭಿನ್ನ ಮ್ಯಾನರಿಸಂನ ಹಾಡಿಗೆ ಧ್ವನಿ ನೀಡಿದ ಭೋಜಣ್ಣ ಈಗ ಕೋಸ್ಟಲ್‌ವುಡ್‌ನ‌ಲ್ಲಿ ಭರ್ಜರಿ ಮೆಚ್ಚುಗೆ ಪಡೆದಿದ್ದಾರೆ.

ಸದ್ಯ “ಅತಳ ವಿತಳ ಶೂರ, ಮರ್ವಾಯಿ ಮಗಧೀರಾ… ಉಗುರುಡು ನೆಲ ಕೀರ.. ಕುಲಶೇಖರ’ ಹಾಡಿನದ್ದೇ ಸುದ್ದಿ. ಸದ್ಯದಲ್ಲೇ ಬಿಡುಗಡೆ ಆಗಲಿರುವ “ಪೆಪ್ಪೆರೆರೆ ಪೆರೆರೆರೆ’ ಸಿನೆಮಾದ ಈ ಹಾಡು ಸದ್ಯ ಕೋಸ್ಟಲ್‌ವುಡ್‌ ಅಂಗಳದಲ್ಲಿ ಹೊಸ ಆಕರ್ಷಣೆ ಹುಟ್ಟುಹಾಕಿದೆ. ಯುವ ನಿರ್ದೇಶಕ ಶೋಭರಾಜ್‌ ಪಾವೂರು ನಿರ್ದೇಶನದ ಈ ಸಿನೆಮಾದ ಈ ಹಾಡು ಕೆಲವು ದಿನದ ಹಿಂದೆ ರಿಲೀಸ್‌ ಆಗಿ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

ಉಮೇಶ್‌ ಮಿಜಾರ್‌ (ಚೋಟು) ಬರೆದಿರುವ ಈ ಹಾಡಿಗೆ ಭೋಜರಾಜ್‌ ಕಂಠಸಿರಿ ಹಾಗೂ ಗುರು ಬಾಯಾರ್‌ ಸಂಗೀತವಿದೆ. “ತಪಲೆ ಮಂಡೆದ ಕುಪುಲುಗು ಮದಿಮಾಲೊಂಜಿ ಬೋಡುಗೆ’ ಎಂಬ ಧ್ವನಿಯೊಂದಿಗೆ ಆರಂಭವಾಗುವ ಈ ಹಾಡಿನಲ್ಲಿ ಅರವಿಂದ ಬೋಳಾರ್‌, ನವೀನ್‌ ಡಿ.ಪಡೀಲ್‌, ಭೋಜರಾಜ್‌ ವಾಮಂಜೂರು, ಸಾಯಿಕೃಷ್ಣ ಮುಂತಾದವರು ನೃತ್ಯ ಮಾಡಿದ್ದಾರೆ. ಸದ್ಯ ಈ ಹಾಡು ಸ್ಪರ್ಧೆಯನ್ನೂ ಹುಟ್ಟುಹಾಕಿದೆ. ಮದುವೆ-ಶುಭ ಕಾರ್ಯಕ್ರಮದಲ್ಲಿಯೂ ಇದೇ ಹಾಡು ಕೇಳಲಾರಂಭಿಸಿದೆ.

ನವೀನ್‌ ಡಿ ಪಡೀಲ್‌, ಅರವಿಂದ್‌ ಬೋಳಾರ್‌, ಭೋಜರಾಜ್‌ ವಾಮಂಜೂರು, ಸತೀಶ್‌ ಬಂದಲೆ, ಸಾಯಿಕೃಷ್ಣ ಕುಡ್ಲ, ದೀಪಕ್‌ ರೈ ಪಾಣಾಜೆ, ಸುನೀಲ್‌ ನೆಲ್ಲಿಗುಡ್ಡೆ, ಉಮೇಶ್‌ ಮಿಜಾರ್‌, ಬಂಟ್ವಾಳ ಜಯರಾಮ ಆಚಾರ್ಯ, ಜೆ.ಪಿ. ತೂಮಿನಾಡು, ತಿಮ್ಮಪ್ಪ ಕುಲಾಲ್‌, ಶೋಭರಾಜ್‌ ಪಾವೂರು, ಸುರೇಶ್‌ ಕುಲಾಲ್‌, ದಿನೇಶ್‌ ಕೋಡಪದವು, ಪ್ರಶಾಂತ್‌ ಅಂಚನ್‌, ಪ್ರಶಾಂತ್‌ ಸಿ.ಕೆ., ಚೈತ್ರಾ ಶೆಟ್ಟಿ, ಮೈತ್ರಿ ಕಶ್ಯಪ್‌, ಪಿಂಕಿರಾಣಿ, ನಮಿತಾ ಕೂಳೂರು, ಸುನೀತಾ ಎಕ್ಕೂರು ಈ ಸಿನೆಮಾದಲ್ಲಿದ್ದಾರೆ.

Advertisement

ವಿಶೇಷ ಪಾತ್ರದಲ್ಲಿ ದೇವದಾಸ್‌ ಕಾಪಿಕಾಡ್‌ ಅಭಿನಯಿಸಿದ್ದಾರೆ. ನಿಶಾನ್‌ ವರುಣ್‌ ಮೂವೀಸ್‌ ಬ್ಯಾನರ್‌ನ ಈ ಸಿನೆಮಾದ ರಚನೆ, ನಿರ್ದೇಶನದ ಜವಾಬ್ದಾರಿ ಶೋಭರಾಜ್‌ ಪಾವೂರು ಅವರದ್ದು. ನಿರ್ಮಾಣ ಮಾಡಿದ್ದು ನಿಶಾನ್‌ ಹಾಗೂ ವರುಣ್‌. ಛಾಯಾಗ್ರಹಣದಲ್ಲಿ ಪ್ರಶಾಂತ್‌ ಪಾಟೀಲ್‌, ಶಶಿರಾಜ್‌ ಕಾವೂರು ಹಾಗೂ ಉಮೇಶ್‌ ಮಿಜಾರ್‌ ಗೀತ ರಚನೆ ಮಾಡಿದ್ದಾರೆ.

ಎ.3ಕ್ಕೆ 3 ಸಿನೆಮಾ; ಈಗ ದಿನಾಂಕ ಬದಲಾವಣೆ !
ಎ. 3ರಂದು ಮೂರು ತುಳು ಸಿನೆಮಾಗಳು ತೆರೆಗೆ ಬರಲಿದೆ ಎಂಬ ವಿವಾದದ ಸುದ್ದಿ ಸದ್ಯಕ್ಕೆ ಬಗೆಹರಿದಿದೆ. ಮೂರೂ ಸಿನೆಮಾ ನಿರ್ಮಾಪಕರು ನಡೆಸಿದ ಮಾತುಕತೆಯ ಕಾರಣದಿಂದ ಮೂರು ಸಿನೆಮಾದವರು ಬೇರೆ ಬೇರೆ ದಿನಾಂಕದತ್ತ ಮನಸ್ಸು ಮಾಡಿದ್ದಾರೆ.

ರಾಹುಕಾಲ ಗುಳಿಗಕಾಲ, ಇಂಗ್ಲೀಷ್‌ ಮತ್ತು ಕಾರ್ನಿಕದ ಕಲ್ಲುರ್ಟಿ ಕಲ್ಕುಡೆ ಸಿನೆಮಾ ಎ.3ರಂದು ತೆರೆಗೆ ಬರುವ ಬಗ್ಗೆ ಸಿದ್ದತೆ ನಡೆಸಲಾಗಿತ್ತು. ಇದೇ ವೇಳೆಗೆ “ರಾಹುಕಾಲ ಗುಳಿಗಕಾಲ’ ಮತ್ತು “ಇಂಗ್ಲೀಷ್‌’ ಸಿನಿಮಾದ ನಿರ್ಮಾಪಕರು ಜತೆಯಾಗಿ ಕುಳಿತುಕೊಂಡು ಎ.3ರಂದು “ಇಂಗ್ಲಿಷ್‌’ ಸಿನೆಮಾ ತೆರೆಗೆ ಬರುವ ಬಗ್ಗೆ ಕಳೆದ ವಾರ ಮಾತುಕತೆ ನಡೆಸಿದ್ದರು. ಬಳಿಕವೇ ರಾಹುಕಾಲನ ಎಂಟ್ರಿ ಎಂದು ನಿರ್ಧರಿಸಿದ್ದಾರೆ. ಹೀಗಾಗಿ ಒಂದು ವಿವಾದ ತಣ್ಣಗಾಗಿತ್ತು.

ಅಷ್ಟರಲ್ಲಿ, ತಿಂಗಳ ಹಿಂದೆಯೇ ಸೆನ್ಸಾರ್‌ ಆಗಿದ್ದ “ಕಾರ್ನಿಕದ ಕಲ್ಲುರ್ಟಿ’ ಸಿನೆಮಾವನ್ನು ಎ. 3ರಂದೇ ತೆರೆಗೆ ತರುವುದಾಗಿ ಸಿನೆಮಾ ನಿರ್ಮಾಪಕರು ತಿಳಿಸಿದರು. ಹೀಗಾಗಿ ಇಂಗ್ಲೀಷ್‌ ಹಾಗೂ ಕಾರ್ನಿಕದ ಕಲ್ಲುರ್ಟಿ ಒಂದೇ ದಿನ ಬರಲಿದೆಯೇ? ಎಂಬ ಕುತೂಹಲವಿತ್ತು. ವಿವಾದ ಮತ್ತೆ ಕಾಣಿಸಲಿದೆಯೇ ಎಂಬ ಆತಂಕವೂ ಕೋಸ್ಟಲ್‌ವುಡ್‌ಗೆ ಕಾಡಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ ಎರಡೂ ಸಿನೆಮಾ ನಿರ್ಮಾಪಕರು ಮಾತುಕತೆ ನಡೆಸಿದ ಪರಿಣಾಮ ಸಿನೆಮಾ ರಿಲೀಸ್‌ ಡೇಟ್‌ನಲ್ಲಿ ಬದಲಾವಣೆಯಾಗಿದೆ.

ಮೂಲಗಳ ಪ್ರಕಾರ; ನಿಗದಿತ ದಿನಾಂಕದಿಂದ ಮೊದಲೇ ಇಂಗ್ಲೀಷ್‌ ರಿಲೀಸ್‌ ಮಾಡುವ ಸಿದ್ಧªತೆ ನಡೆಯುತ್ತಿದೆ. ಅದರಂತೆ ಬಹುತೇಕ ಮಾ. 20ಕ್ಕೆ ಇಂಗ್ಲೀಷ್‌ಗೆ ದಿನ ಫಿಕ್ಸ್‌ ಮಾಡಲಾಗಿದೆ. ಈಗಾಗಲೇ ಸಿನೆಮಾದ ಆಡಿಯೋ ರಿಲೀಸ್‌ ಕೂಡ ಆಗಿರುವುದರಿಂದ ಸಿನೆಮಾ ಬಿಡುಗಡೆ ಅದೇ ದಿನಾಂಕಕ್ಕೆ ನಡೆಯುವುದು ಬಹುತೇಕ ನಿಚ್ಚಳವಾಗಿದೆ.

ಹೀಗಾಗಿ ಮುಂದೆ, ಫೆ. 14ರಂದು “ಎನ್ನ” ಸಿನೆಮಾ ಬಿಡುಗಡೆಗೊಳ್ಳಲಿದೆ. ಮಾ. 20ರಂದು “ಇಂಗ್ಲೀಷ್‌’ ತೆರೆಕಾಣಲಿದೆ. ಎ. 3ಕ್ಕೆ “ಕಾರ್ನಿಕದ ಕಲ್ಲುರ್ಟಿ’ ಸಿನೆಮಾ ಬಿಡುಗಡೆಗೊಳ್ಳಲಿದೆ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next