Advertisement

ಲೋಪಗಳನ್ನು ಸರಿಪಡಿಸಿ; ಟೀಕೆ-ಅಪಹಾಸ್ಯಕ್ಕೆ ಒಳಗಾದ ನಿಯಮ

01:21 AM Sep 05, 2019 | Sriram |

ಸಾರಿಗೆ ನಿಯಮವನ್ನು ಉಲ್ಲಂಘಿ ಸಿದರೆ ಭಾರೀ ಮೊತ್ತದ ದಂಡ ತೆರಬೇಕಾದ ಹೊಸ ಮೋಟಾರು ವಾಹನ ಕಾಯಿದೆ ಸೆ.1ರಿಂದ ಹಲವು ರಾಜ್ಯಗಳಲ್ಲಿ ಜಾರಿಗೆ ಬಂದಿದೆ. ಕರ್ನಾಟಕವೂ ಬುಧವಾರದಿಂದ ಈ ನಿಯಮವನ್ನು ಜಾರಿಗೆ ತಂದಿದೆ. ಆದರೆ ಜಾರಿಯಾದ ನಾಲ್ಕೇ ದಿನಗಳಲ್ಲಿ ಹೊಸ ಕಾಯಿದೆಯ ಲೋಪ ದೋಷಗಳು ಬೆಳಕಿಗೆ ಬರಲಾರಂಭಿಸಿವೆ.

Advertisement

ಅದರಲ್ಲೂ ದಂಡದ ಮೊತ್ತಕ್ಕೆ ಸಂಬಂಧಪಟ್ಟಂತೆ ತೀವ್ರ ಟೀಕೆ ಎದು ರಾ ಗಿ ದೆ. ಗುರುಗ್ರಾಮದಲ್ಲಿ ಓರ್ವ ಸ್ಕೂಟರ್‌ ಸವಾರನಿಗೆ ಈ ನಿಯಮದ ಪ್ರಕಾರ ಪೊಲೀಸರು 23,000 ರೂ. ದಂಡ ವಿಧಿಸಿದ್ದಾರೆ. ಆತ ದಂಡ ಕಟ್ಟುವ ಬದಲು ತನ್ನ ವಾಹನವನ್ನು ಪೊಲೀಸರ ಬಳಿ ಬಿಟ್ಟು ಹೋಗಿದ್ದಾನೆ. ಅವನ ಸೆಕೆಂಡ್‌ಹ್ಯಾಂಡ್‌ ಸ್ಕೂಟರ್‌ಗಿರುವುದು ಹೆಚ್ಚೆಂದರೆ 15,000 ರೂ. ಬೆಲೆ. ಇದಕ್ಕೂ ಹೆಚ್ಚಿನ ದಂಡ ಮೊತ್ತ ಕಟ್ಟಲು ಅವನು ಸಿದ್ಧನಿಲ್ಲ. ಇದೇ ಗುರುಗ್ರಾಮದಲ್ಲಿ ಓರ್ವ ರಿಕ್ಷಾ ಚಾಲಕನಿಗೆ 32,500 ರೂ.,ಟ್ರ್ಯಾಕ್ಟರ್‌ಗೆ 59,000 ರೂ. ಮತ್ತು ಭುವನೇಶ್ವರದಲ್ಲಿ ರಿಕ್ಷಾ ಚಾಲಕನಿಗೆ 47,500 ರೂ. ದಂಡ ವಿಧಿಸಿರುವ ವರದಿಗಳು ಬಂದಿವೆ. ಈ ದುಬಾರಿ ದಂಡದ ಬಗ್ಗೆ ಸಾಮಾ ಜಿಕ ಮಾಧ್ಯಮಗಳಲ್ಲಿ ವ್ಯಂಗ್ಯದ ಪ್ರತಿಕ್ರಿಯೆಗಳು ಹರಿದಾಡುತ್ತಿವೆ.

1988ರ ಮೋಟಾರು ವಾಹನ ಕಾಯಿದೆ ಅನೇಕ ಕುಂದು ಕೊರತೆಗಳಿಂದ ಕೂಡಿತ್ತು ನಿಜ. ಬೃಹತ್‌ ಗಾತ್ರಕ್ಕೆ ಬೆಳೆಯುತ್ತಿರುವ ಆರ್ಥಿಕತೆ, ಸಾಮಾಜಿಕ ವ್ಯವಸ್ಥೆಯಲ್ಲಾಗಿರುವ ಪರಿವರ್ತನೆ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಇತ್ಯಾದಿ ಆಯಾಮಗಳಿಂದ ನೋಡುವುದಾದರೆ ಹಳೆ ಕಾಯಿದೆ ಪ್ರಸ್ತುತ ಪರಿಸ್ಥಿತಿಗೆ ಸರಿ ಹೊಂದುತ್ತಿರಲಿಲ್ಲ. ಅದರಲ್ಲೂ ಹೆಚ್ಚುತ್ತಿರುವ ಅಪಘಾತಗ‌ಳಿಗೆ ಹಳೆ ನಿಯಮಗಳಲ್ಲಿರುವ ಲೋಪದೋಷಗಳೇ ಬಹುತೇಕ ಕಾರಣವಾಗಿತ್ತು. ಹೆಚ್ಚಿನ ಅಪಘಾತಗಳಿಗೆ ಚಾಲಕರು ಸಾರಿಗೆ ನಿಯಮಗಳನ್ನು ಪಾಲಿಸುವಲ್ಲಿ ತೋರಿಸು ತ್ತಿರುವ ದಿವ್ಯ ನಿರ್ಲಕ್ಷ್ಯವೇ ಕಾರಣ ಎನ್ನುವುದೂ ನಿಜವೇ. ಹಳೆ ಕಾಯಿದೆಯಲ್ಲಿ ಇಂಥ ಚಾಲಕರನ್ನು ದಂಡಿಸಲು ಅಗತ್ಯವಿರುವ ಕಠಿನ ಅಂಶಗಳು ಇರಲಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಎನ್‌ಡಿಎ ಸರಕಾರ ಹಿಂದಿನ ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ಮಾಡಿ ಜಾರಿಗೆ ತಂದಿದೆ.

ಎಲ್ಲಾ ಪ್ರಕಾರದ ಸಾರಿಗೆ ನಿಯಮಗಳ ದಂಡದ ಮೊತ್ತವನ್ನು ಅತಿ ಎನ್ನುವಷ್ಟು ಹೆಚ್ಚಿಸಲಾಗಿದೆ. ಸಾಮಾನ್ಯ ನಿಯಮ ಉಲ್ಲಂಘನೆಯ ಮೊತ್ತವೂ ಹತ್ತು ಪಟ್ಟು ಹೆಚ್ಚಾಗಿದೆ. ಹೀಗಾಗಿ ಸೀಟ್‌ಬೆಲ್ಟ್ ಧರಿಸದಂತಿರುವ ತಪ್ಪುಗಳಿಗೂ ಈಗ ರೂ. 100ರ ಬದಲು 1000 ರೂ. ಪಾವತಿಸಬೇಕು. ವಿಪರೀತ ದಂಡ ಬೀಳುತ್ತದೆ ಎಂಬ ಹೆದರಿಕೆಯಿಂದಲಾದರೂ ಜನರು ರಸ್ತೆ ನಿಯಮಗಳನ್ನು ಪಾಲಿಸಿ ಯಾರು. ಈ ಮೂಲಕ ಅಪಘಾತಗಳ ಸಂಖ್ಯೆಯನ್ನು ತಗ್ಗಿಸಬಹುದು ಎಂಬ ಎಣಿಕೆ ಸರಕಾರದ್ದಾಗಿತ್ತು. ಆದರೆ ವಿಪರೀತ ದಂಡದ ಮೊತ್ತದಿಂದ ಸೃಷ್ಟಿಯಾ ಗಬಹುದಾದ ಇನ್ನೊಂದು ಪರಿಸ್ಥಿತಿಯನ್ನು ಊಹಿಸುವಲ್ಲಿ ನಿಯಮಗಳ ಸೃಷ್ಟಿಕರ್ತರು ವಿಫ‌ಲರಾಗಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಒಬ್ಬ ಸಾಮಾನ್ಯ ರಿಕ್ಷಾ ಚಾಲಕ ಅಥವಾ ದ್ವಿಚಕ್ರ ವಾಹನ ಸವಾರ ಸದಾ ತನ್ನ ಜೇಬಿನಲ್ಲಿ ಸಾವಿರಾರು ರೂಪಾಯಿ ಇಟ್ಟುಕೊಂಡು ಓಡಾಡುತ್ತಾನೆ ಎಂಬ ಕಲ್ಪನೆಯೇ ಅಸಂಗತ.

ಈಗಾಗಲೇ ಪಶ್ಚಿಮ ಬಂಗಾಳ,ರಾಜಸ್ಥಾನ ಮತ್ತು ಮಧ್ಯ ಪ್ರದೇಶ ಸರ್ಕಾರಗಳು ಹೊಸ ನಿಯಮವನ್ನು “ಅಪ್ರಾಯೋ ಗಿಕ’ಎಂದು ಕರೆದು ಅದನ್ನು ಪ್ರಸಕ್ತ ರೂಪದಲ್ಲಿ ಅನುಷ್ಠಾನಕ್ಕೆ ತರಲು ನಿರಾಕರಿಸಿವೆ. ವಿಪರೀತ ಮೊತ್ತದ ದಂಡ ವಿಧಿ ಸು ವುದನ್ನು ಈ ಸರ್ಕಾರಗಳು ವಿರೋಧಿಸಿವೆ. ಉತ್ತಮ ಉದ್ದೇಶ ಇರುವ ನೀತಿ ನಿಯಮಗಳು ದೇಶದಲ್ಲಿ ಏಕೆ ಮತ್ತು ಹೇಗೆ ಗುರಿ ತಲುಪುವಲ್ಲಿ ವಿಫ‌ಲಗೊಳ್ಳುತ್ತವೆ ಎನ್ನುವುದಕ್ಕೆ ಹೊಸ ಮೋಟಾರು ವಾಹನ ಕಾಯಿದೆಯೇ ಉತ್ತಮ ಉದಾಹರಣೆಯಾಗಬಲ್ಲದು. ಜಾಗತೀಕರ ಣದ ಪರಿಣಾಮವಾಗಿ ದೇಶದ ವಾಹನ ಮಾರುಕಟ್ಟೆ ಭಾರೀ ಸ್ಥಿತ್ಯಂತರಗಳನ್ನು ಕಂಡಿದ್ದು ಈಗ ಕೆಳ ಮಧ್ಯಮ ವರ್ಗದವರೂ ಕನಿಷ್ಠ ಒಂದು ದ್ವಿಚಕ್ರವನ್ನಾದರೂ ಇಟ್ಟು ಕೊಳ್ಳುವಷ್ಟು ಸ್ಥಿತಿವಂತರಾಗಿದ್ದಾರೆ. ಹೀಗಾಗಿಯೇ ದೇಶದ ರಸ್ತೆಗಳು ವಾಹನ ಗಳಿಂದ ತುಂಬಿ ತುಳುಕುತ್ತಿವೆ. ನಿತ್ಯ ಎಂಬಂತೆ ಹೊಸ ಹೊಸ ವಾಹನ ಗಳು ಮಾರು ಕಟ್ಟೆಗೆ ಪ್ರವೇಶಿಸುತ್ತವೆ. ಈ ಭರಾಟೆಯಲ್ಲಿ ಹಳೆ ವಾಹನಗಳ ಮೌಲ್ಯ ಭಾರೀ ಇಳಿಕೆಯಾಗುತ್ತದೆ. ಮೂರ್‍ನಾಲ್ಕು ವರ್ಷ ಓಡಿಸಿದ ದ್ವಿಚಕ್ರ ವಾಹನಕ್ಕೆ ಈಗ ಅರ್ಧ ದಷ್ಟು ಬೆಲೆಯೂ ಸಿಗುವುದಿಲ್ಲ. ಹೀಗಿರುವಾಗ ಯಾರಾ ದರೂ ಹಳೆ ವಾಹನಕ್ಕೆ ಅದರ ಬೆಲೆಗಿಂತಲೂ ಹೆಚ್ಚಿನ ದಂಡ ಪಾವತಿಸಲು ತಯಾರಿರುತ್ತಾರೆಯೇ?

Advertisement

ಹೀಗೆ ಮುಂದಾಲೋಚನೆಯಿಲ್ಲದೆ ರೂಪಿಸಿದ ನೀತಿ ನಿಯಮಗಳ ಅಡ್ಡ ಪರಿಣಾಮಗಳು ಹಲವು. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲು ಅಗತ್ಯವಿರುವ ಅಂಶಗಳೂ ಇದರಲ್ಲೇ ಇವೆ. ಇದಕ್ಕೂ ಮಿಗಿಲಾಗಿ ಹೊಸ ಕಾಯಿದೆಯ ಬಗ್ಗೆ ಜನರಲ್ಲಿ ಸಾಕಷ್ಟು ಅರಿವು ಮೂಡಿಸುವ ಪ್ರಯತ್ನವಾಗಿಲ್ಲ. ಉತ್ತಮ ಆಶಯ ಹೊಂದಿರುವ ಈ ನಿಯಮ ಅನುಷ್ಠಾನದ ಲೋಪದಿಂದಾಗಿ ಜನವಿರೋಧಿ ಯಾಗಿ ಬದಲಾಗುವ ಮೊದಲು ಲೋಪಗಳನ್ನು ಸರಿಪಡಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next