Advertisement

ಪಾಲಿಕೆ ಅಧಿಕಾರಿಗೆ ನಾಲ್ಕು ವರ್ಷ ಜೈಲು, ಒಂದು ಕೋಟಿ ರೂ. ದಂಡ

01:13 AM Oct 15, 2022 | Team Udayavani |

ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ್ದ ಪ್ರಕರಣದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ನೈರ್ಮಲ್ಯ ನಿರೀಕ್ಷಕ ಶಿವಲಿಂಗ ಕೊಂಡಗುಳಿ ಅವರಿಗೆ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಹಾಗೂ ಒಂದು ಕೋಟಿ ರೂ. ದಂಡ ವಿಧಿಸಿದೆ.

Advertisement

ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸರು ದಾಳಿ ನಡೆಸಿ ಆರೋಪಿ ವಿರುದ್ಧ 2013ರ ಫೆ. 15ರಂದು ಲಂಚ ನಿರೋಧ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಶುಕ್ರವಾರ ತೀರ್ಪು ನೀಡಿದ್ದಾರೆ.
ಆರೋಪಿಗೆ ಲಂಚ ನಿರೋಧ ಕಾಯ್ದೆ 1988 ಕಲಂ 13(1) (ಇ), 13(2) ನಂತೆ 4 ವರ್ಷಗಳ ಕಾಲ ಸಜೆ ಮತ್ತು 1 ಕೋ.ರೂ. ದಂಡ ವಿಧಿಸಿದ್ದಾರೆ. ಆರೋಪಿ ದಂಡ ಪಾವತಿಸಲು ವಿಫ‌ಲನಾದರೆ ಮತ್ತೆ 1 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಲೋಕಾಯುಕ್ತ ಉಪಾಧೀಕ್ಷಕ ಉಮೇಶ್‌ ಜಿ. ಶೇಟ್‌ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತದ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರಕಾರದ ಪರ ವಾದ ಮಂಡಿಸಿದ್ದಾರೆ.

ಎಷ್ಟಿತ್ತು ಹೆಚ್ಚಿನ ಆಸ್ತಿ?
ನಿರೀಕ್ಷಕರ ಗಳಿಕೆಯ ಒಟ್ಟು ಆದಾಯಕ್ಕಿಂತ 76 ಲಕ್ಷ ರೂ. ಅಧಿಕ ಪ್ರಮಾಣದ ಆಸ್ತಿ ಪತ್ತೆಯಾಗಿತ್ತು ಎಂದು ಲೋಕಾಯುಕ್ತ ಪೊಲೀಸರು ದೋಷಾರೋಪಣೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next