Advertisement

ಕೊರೊನಾ ವೈರಸ್‌- ಅಸ್ವಾಭಾವಿಕ ಆಹಾರ ಪದ್ಧತಿಯ ಕೊಡುಗೆ

12:37 AM Feb 01, 2020 | mahesh |

ನಮ್ಮ ದೇಶದಲ್ಲಿ ಚೀನಿ ಭೋಜ್ಯ ಖಾದ್ಯಗಳು ದೊಡ್ಡ ಚರಿತೆಯನ್ನೇ ನಿರ್ಮಿಸಿವೆ. ಈ ಸುದೀರ್ಘ‌ ಇತಿಹಾಸ 18ನೆಯ ಶತಮಾನದಷ್ಟು ಹಳೆಯದು. ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪೆನಿಯ ಕಾರುಬಾರಿನ ದಿನಗಳಲ್ಲೇ ಕೆಲ ವ್ಯವಹಾರ ಚತುರ ಚೀನಿ ಪ್ರಜೆಗಳು ಕೋಲ್ಕತಾಕ್ಕೆ ಬಂದು ತಮ್ಮ ತವರಿನ ಪಾಕ ವಿಶೇಷಗಳನ್ನು ಮಾರತೊಡಗಿದ್ದರು. ಅದು ಜಾತಿ-ಪಂಥಗಳ ಮಡಿ – ಮೈಲಿಗೆಯ ಯುಗವಾಗಿದ್ದರೂ ಚೀನಿ ಖಾದ್ಯಗಳಿಗೆ ಇಲ್ಲಿ ಭಾರೀ ಬೇಡಿಕೆಯಿತ್ತು.

Advertisement

ಚೀನದಲ್ಲಿ ಈಗ ಉದ್ಭವಿಸಿರುವ ಕೊರೊನಾ ವೈರಸ್‌ ಕಾಯಿಲೆ ಚೀನಿಯರ ಅಸ್ವಾಭಾವಿಕ ಆಹಾರ ಕ್ರಮದ ದುಷ್ಪರಿಣಾಮ ಎನ್ನುವುದು ಬಹುತೇಕ ಸ್ಪಷ್ಟವಾಗಿದೆ. ಚೀನದ ಕೆಲವೊಂದು ಭಾಗಗಳಲ್ಲಿ ಚಾಲ್ತಿಯಲ್ಲಿರುವ ಕಾಡುಪ್ರಾಣಿಗಳ ಮಾಂಸ ಭಕ್ಷಣ ಪದ್ಧತಿಯೇ ಈ ಸಾಂಕ್ರಾಮಿಕ ರೋಗಕ್ಕೆ ಹಾದಿ ಮಾಡಿಕೊಟ್ಟಿದೆ ಎನ್ನುತ್ತಿವೆ ವರದಿಗಳು.

ಚೀನ ನಮ್ಮ ಭಾರತದಂತೆಯೇ ಜನಬಾಹುಳ್ಯವಿರುವ ರಾಷ್ಟ್ರ. ನಮ್ಮಂತೆಯೇ ಅಲ್ಲಿಯೂ ಆಹಾರಪದ್ಧತಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತ ಸಾಗುತ್ತದೆ. ಆದರೆ ಒಟ್ಟಾರೆಯಾಗಿ ಹೇಳುವುದಾದರೆ ಹಂದಿ ಮಾಂಸ, ಕೋಣದ ಮಾಂಸ, ಹಾಗೂ ನಾವು ಬಾಲ್ಯದಲ್ಲಿ ಓದುತ್ತಿದ್ದ ಭೂಗೋಳ ಪಠ್ಯಗಳಲ್ಲಿ ಉಲ್ಲೇಖೀತವಾದ ತರಹೇವಾರಿ ಪ್ರಾಣಿಪಕ್ಷಿಗಳ, ಜೀವಜಂತುಗಳ ಮಾಂಸವನ್ನು ಬಳಸಿಕೊಂಡು ತಯಾರಿಸಲಾಗುವ ಭೋಜ್ಯ, ಖಾದ್ಯ ವಸ್ತುಗಳನ್ನೊಳಗೊಂಡಿದೆ!

ಹಾವು, ಜೇಡ, ಕೋತಿಯ ಮಿದುಳು, ಚೇಳು, ಜಿರಳೆ, ದುಂಬಿ, ನಾಯಿಮಾಂಸ ಭಕ್ಷಣೆಯಂಥ ವಿಚಿತ್ರ ವಿಲಕ್ಷಣ ಆಹಾರಾಭ್ಯಾಸವಿರುವ ಜನರ ಬಗ್ಗೆ ಹೀಗಲ್ಲದೆ ಇನ್ನು ಬೇರೆ ಯಾವ ರೀತಿ ಹೇಳಲು ಸಾಧ್ಯ? ಚೀನೀ ಉತ್ಪನ್ನಗಳ ಬಗ್ಗೆ ನಮ್ಮ ದೇಶದ ಕೆಲವರಲ್ಲಿ ವಿಚಿತ್ರ ಆಕರ್ಷಣೆ ಇದೆಯೆನ್ನುವುದು ನಿಜವೇ ಆದರೂ ಆಹಾರಪದ್ಧತಿಯಂಥ ಕೆಲವೊಂದು ವಿಷಯಗಳಲ್ಲಿ ಚೀನಿ ಜನರು ನಮಗಿಂತಲೂ “ಕಡಿಮೆ ನಾಗರಿಕರು’ ಎಂಬ ಮಾತನ್ನು ಹೇಳಲೇಬೇಕಾಗುತ್ತದೆ. ಒಂದು ದೇಶದ ಜನರ ಆಹಾರ ಪದ್ಧತಿಯನ್ನು ನೋಡಿ ಅವರ ಸಂಸ್ಕೃತಿ ಯಾವ ತೆರನಾದುದೆಂದು ಸ್ಪಷ್ಟವಾಗಿ ಅರಿತುಕೊಳ್ಳಬಹುದಂತೆ. ಈ ನಡುವೆ, ಮೇಲೆ ಹೇಳಲಾಗಿರುವ ಕೆಲವು ಭೋಜ್ಯ/ಖಾದ್ಯಗಳು ಚೀನಿ ಜನರ ವಿಶೇಷ ಸಂದರ್ಭಗಳ ಪಾಕ ವಿಶೇಷಗಳಷ್ಟೆ; ಅವು ನಿತ್ಯದ ಭೋಜನದಲ್ಲಿ ಇರುವುದಿಲ್ಲ ಎಂದು ವಾದಿಸುವವರೂ ಇರಬಹುದು. ಹಾಗೆ ನೋಡಿದರೆ ನಮ್ಮ ಈಶಾನ್ಯ ಭಾರತದ ಕೆಲವೆಡೆಗಳಲ್ಲಿ ನಾಯಿ ಮಾಂಸದ ಅಡುಗೆ ಕ್ರಮವೂ ಇದೆ; ಇದು ಟಿಬೆಟಿನ ಹಾಗೂ ಮಂಗೋಲಿಯನ್‌ ಪದ್ಧತಿಯ ಪ್ರಭಾವ ಎನ್ನಬಹುದು. ಒಟ್ಟಾರೆಯಾಗಿ ಇಡೀ ಭಾರತದ ಖಾದ್ಯ ಸಂಸ್ಕೃತಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಹೇಳುವುದಾದರೆ ಮೇಲೆ ಹೇಳಿದಂತೆ ವಿಲಕ್ಷಣ ಆಹಾರ ಆಭ್ಯಾಸಗಳ ಬಗ್ಗೆ ಯೋಚಿಸಲೂ ನಮಗೆ ಸಾಧ್ಯವಿಲ್ಲ; ನಮ್ಮ ಪಾಲಿಗೆ ನಿಜಕ್ಕೂ ಅಸಹ್ಯಕರವಾದ ಆಹಾರಪದ್ಧತಿ ಇದು.

ನಮ್ಮಲ್ಲಿನ ಮಾಂಸಾಹಾರ ಕ್ರಮ ಸಸ್ಯಾಹಾರಿ ಪ್ರಾಣಿಗಳ ಮಾಂಸ ಹಾಗೂ ಮೀನಿನಡುಗೆ – ಇವುಗಳನ್ನು ಆಧರಿಸಿದೆ. ಹಾಗೆ ನೋಡಿದರೆ ಕಾಡಿನಲ್ಲಿರುವ ಸಸ್ಯಾಹಾರಿ ಪ್ರಾಣಿಗಳ ಮಾಂಸ ಕೂಡ ನಿಷಿದ್ಧವೇ. ಅದೇ ರೀತಿ ಕುದುರೆ ಮಾಂಸ ಕೂಡ. ನಮ್ಮ ಹಿರಿಯ ತಲೆಮಾರಿನವರು ಕೆಲ ತರಕಾರಿಗಳ ಮೇಲೆ ಸ್ವಪ್ರೇರಿತ ನಿಷೇಧ ಹೇರಿಕೊಂಡಿದ್ದರು; ಉದಾಹರಣೆಗೆ ಟೊಮೇಟೋ. ಅದು ಕೆಂಪು ಬಣ್ಣದ ತರಕಾರಿಯೆಂಬ ಕಾರಣಕ್ಕೆ ನಿಷಿದ್ಧ! ಇನ್ನು ನಮ್ಮ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕುಟುಂಬಕ್ಕೆ ಬೆಳ್ಳುಳ್ಳಿ ಬಿಡಿ, ಈರುಳ್ಳಿ ಕೂಡ ದೂರವೇ. ಶಾಲಾ ಮಕ್ಕಳ ಮಧ್ಯಾಹ್ನದೂಟದ ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸುವ ವಿಷಯದಲ್ಲಿ ಹರೇಕೃಷ್ಣ ಪಂಥದ ಭೋಜನ ತಯಾರಕರನ್ನು ಮಣಿಸುವುದು ನಮ್ಮ ಕರ್ನಾಟಕ ಸರಕಾರಕ್ಕೆ ಕೊನೆಗೂ ಸಾಧ್ಯವಾಗಲೇ ಇಲ್ಲ. ಯಾರೋ ಮೊಸಳೆ ಮಾಂಸ ತಿನ್ನುತ್ತಾರಂತೆ ಎಂದರೆ ಸಾಕು, ನಮಗೆ ವಾಕರಿಕೆ ಬಂದಂತಾಗುವುದು. ಜುಗುಪ್ಸೆಯಿಂದ ಒದ್ದಾಡುವಂತಾಗುತ್ತದೆ. ಭಾರತದಲ್ಲಿ ಯಾವ ಆಹಾರ ನಿಷಿದ್ಧವೋ ಅದು ಚೀನಾದಲ್ಲಿ ಸವಿಸವಿ ಖಾದ್ಯ. ಚೀನವನ್ನೀಗ ಹಿಂಡಿ ಹಿಪ್ಪೆ ಮಾಡುತ್ತಿರುವ ಕೊರೊನಾ ವೈರಸ್‌ಪಿಡುಗಿನ ಪರಿಣಾಮವಾಗಿ ಅಲ್ಲಿನ ಜನರು ಇನ್ನಾದರೂ ಇಂಥ ವಿಲಕ್ಷಣ ಆಹಾರಪದ್ಧತಿಯನ್ನು ಕೈ ಬಿಡಲಿ ಎಂದೇ ಆಶಿಸುವಂತಾಗಿದೆ.

Advertisement

ಹೀಗೆಂದ ಮಾತ್ರಕ್ಕೆ ನಮ್ಮ ದೇಶದಲ್ಲಿ ಆಹಾರಕ್ಕಾಗಿ ವನ್ಯಜೀವಿಗಳನ್ನು ಕೊಲ್ಲುವ ಖಯಾಲಿ ಇಲ್ಲ ಎಂದರ್ಥವಲ್ಲ. ನಮ್ಮಲ್ಲಿ ಕೂಡ ಆಹಾರಕ್ಕಾಗಿ ಜಿಂಕೆಗಳನ್ನು, ಕಾಡುಹಂದಿಗಳನ್ನು ಕೊಲ್ಲುವವರಿದ್ದಾರೆ. ದುರದೃಷ್ಟ ವಶಾತ್‌ ನಮ್ಮ ಕೆಲ ರಾಜ್ಯಗಳು ನೀಲ್‌ಗಾಯ್‌ ಜಿಂಕೆ, ಉತ್ತರ ಭಾರತದ ಚಿಕ್ಕ ಬಾಲದ ಪುಟ್ಟ ಗಾತ್ರದ ಕೋತಿ (ರಿಸಸ್‌), ಕಾಡುಹಂದಿಗಳನ್ನು “ಉಪದ್ರವಕಾರಿ’ ಗಳೆಂದು ಘೋಷಿಸಿ ಇವುಗಳ ಹತ್ಯೆಗೆ ಅನುಮತಿ ನೀಡಿವೆ. ಇಂದು ಸುಮಾರು ಶೇ. 65ರಷ್ಟು ಕಾಡುಪ್ರಾಣಿಗಳನ್ನು ಆಹಾರಕ್ಕಾಗಿ ಕೊಲ್ಲಲಾಗುತ್ತಿದೆ ಎಂದು ಡೆಹ್ರಾಡೂನಿನಲ್ಲಿರುವ ಭಾರತೀಯ ವನ್ಯಜೀವಿ ಸಂಸ್ಥೆ ಅಂದಾಜು ಲೆಕ್ಕ ಹಾಕಿದೆ. ಇನ್ನು ಕೆಲವು ಪ್ರಾಣಿಗಳನ್ನು ವಿನೋದಕ್ಕಾಗಿ, ಖಯಾಲಿಗಾಗಿ ಹತ್ಯೆಗೈಯಲಾಗುತ್ತಿದೆ. ಹಿಂದಿ ಚಿತ್ರನಟ ಸಲ್ಮಾನ್‌ಖಾನ್‌ ರಾಜಸ್ಥಾನದಲ್ಲಿ ಚಿನ್‌ಕಾರಾ ತಳಿಯ ಜಿಂಕೆಯನ್ನು ಬೇಟೆಯಾಡಿದ್ದು, ಈ ಕೃತ್ಯಕ್ಕಾಗಿ ಐದು ವರ್ಷಗಳ ಜೈಲುವಾಸದ ಶಿಕ್ಷೆಗೆ ಗುರಿಯಾದುದು ತಿಳಿದೇ ಇದೆ. 2016ರಲ್ಲಿ ರಾಜಾಸ್ಥಾನ ಉಚ್ಚ ನ್ಯಾಯಾಲಯ ಈ ಶಿಕ್ಷೆಯನ್ನು ರದ್ದು ಮಾಡಿತು. ದೇಶದ ಮೂವರು ಪ್ರಖ್ಯಾತ ಚಲನಚಿತ್ರ ಖಾನ್‌ಗಳಲ್ಲಿ ಒಬ್ಬರಾದ ಸಲ್ಮಾನ್‌, ಬಹುಶಃ ನಮ್ಮ ಭೂತಪೂರ್ವ ರಾಜಕುಮಾರರ ಶೈಲಿಯಲ್ಲಿ ಮೃಗಯಾ ವಿಹಾರ ಕೈಗೊಂಡಿರಬೇಕು.ಚೀನದಲ್ಲಿ ಭುಗಿಲೆದ್ದಿರುವ ಕೊರೊನಾವೈರಸ್‌ ಕಾಯಿಲೆ ಒಂದು ಮುಖ್ಯ ಕಟುವಾಸ್ತವ ಅಂಶವನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಅದೆಂದರೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೂಡ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದಕ್ಕೆ ಶಕ್ತವಾಗಿಲ್ಲವೆನ್ನಬಹುದು. ಉದಾಹರಣೆಗೆ “ಸಾರ್ಸ್‌’ (ಸಿವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಮ್‌ – ಅತ್ಯಂತ ತೀವ್ರ ಉಸಿರಾಟದ ತೊಡಕಿನ ರೋಗ ಲಕ್ಷಣ) ಭುಗಿಲೆದ್ದುದು ಚೀನದಲ್ಲೇ. ಆ ಕಾಯಿಲೆ ಕೂಡ ಕಾಡುಪ್ರಾಣಿಗಳ ಮಾಂಸದ ಅಡುಗೆಯ ಪರಿಣಾಮವೇ. 1918ರಲ್ಲಿ ಭುಗಿಲೆದ್ದ ಇನ್‌ಫ‌ುಯೆನ್ಸಾ ಸಾಂಕ್ರಾಮಿಕ ಸುಮಾರು ಎರಡುಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು; ಇದು ಮೊದಲಿಗೆ ತಲೆಯೆತ್ತಿದ್ದು ಸ್ಪೆಯ್ನ ಹಾಗೂ ಇತರ ಐರೋಪ್ಯ ರಾಷ್ಟ್ರಗಳಲ್ಲಿ. ವಿಸ್ಮತಿಗೆ ಸಂದ ಸಾಂಕ್ರಾಮಿಕ ಎಂಬ ಹೆಸರನ್ನು ಪಡೆದುಕೊಂಡ ಈ ರೋಗ ಮೊದಲ ಮಹಾಯುದ್ಧದ ಪ್ರಸಾದವೆಂಬಂತೆ ಉದ್ಭವಿಸಿ, ಪ್ರಪಂಚಾದ್ಯಂತ ಹರಡಿ, ಯುದ್ಧದಲ್ಲಿ ಮಡಿದವರಿಗಿಂತಲೂ ಹೆಚ್ಚಿನ ಸಂಖ್ಯೆಯ ಜನರನ್ನು ಬಲಿತೆಗೆದುಕೊಂಡಿತು. ಈ ಕಾಯಿಲೆ ಭುಗಿಲೇಳಲು ಒಂದು ಮುಖ್ಯ ಕಾರಣವೆಂದರೆ, ಜರ್ಮನ್‌ ಸೇವೆ ಹಾಗೂ ಮೈತ್ರಿ ಸೇನೆಗಳಿಂದ ನಡೆದ ವಿಷಾನಿಲ (ಕ್ಲೋರಿನ್‌ ಅನಿಲ)ದ ಅನಿಯಂತ್ರಿತ ಬಳಕೆ ಈ ವಿಷಾನಿಲದ ಪ್ರಯೋಗಭೂಮಿಗಳಲ್ಲಿ ಒಂದು ನಮ್ಮ ದೇಶಕ್ಕೆ ಅತಿಸನಿಹದ ದೇಶವಾದ ಮೆಸಪೊಟೇಮಿಯಾ (ಇಂದಿನ ಇರಾಕ್‌) ; ಅಲ್ಲಿನ ಕಂದಕಗಳಲ್ಲಿ ಅನೇಕ ಸೈನಿಕರ ವಿಷಾನಿಲಕ್ಕೆ ಬಲಿಯಾಗಿ ಹೋದರು. ಇನುಫ‌ುಯೆನಾ ನಮ್ಮ ದೇಶದಲ್ಲಿ ಮೊದಲಿಗೆ ಕಾಣಿಸಿಕೊಂಡುದು ಬಾಂಬೆಯಲ್ಲಿ 1918ರ ಜೂನ್‌ನಲ್ಲಿ. ಆ ವರ್ಷದ ಸೆಪ್ಟೆಂಬರ್‌ ಹೊತ್ತಿಗೆ ಅದು ದೇಶದ ಇತರ ಕಡೆಗಳಿಗೂ ಹಬ್ಬಿತು.

ಅಂದಿನ ದಿನಗಳ ವೈದ್ಯಕೀಯ ಕ್ಷೇತ್ರದ ಉದ್ಯೋಗಿಗಳಿಗೆ ಈ ಕಾಯಿಲೆಯ ಸೈದ್ಧಾಂತಿಕ ಜ್ಞಾನವಷ್ಟೇ ಇತ್ತು. ಹಾಗಿದ್ದರೂ ಇದು ಕೆಲ ವೈದ್ಯಕೀಯ ತಜ್ಞರು ಇದು ಬ್ಯಾಕ್ಟೀರಿಯಾ ಜನಿತ ಕಾಯಿಲೆಯೆಂದು ಲೆಕ್ಕ ಹಾಕಿದ್ದರು ಹಾಗೂ ನಂಬಿದ್ದರು. ಅಹ್ಮದಾಬಾದಿನಲ್ಲಿ ಈ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಮಹಾತ್ಮಾ ಗಾಂಧಿಯವರು ಕೂಡ “ಬದುಕಿನಲ್ಲಿ ಆಸಕ್ತಿಯೇ ಹೊರಟು ಹೋಗಿತ್ತು’ ಎಂದು ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಔಷಧಿಯೆಂಬುದೇ ಇಲ್ಲ ಎಂಬ ಪರಿಸ್ಥಿತಿಯಲ್ಲಿ ವೈದ್ಯ ಸಮುದಾಯ ದಿಕ್ಕು ತೋಚದೆ ಅಸಹಾಯಕವಾಗಿ ಕೈಚೆಲ್ಲಬೇಕಾಗಿ ಬಂದಿತ್ತು.

ಮುಂದೆ ಔಷಧಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಪರ ಕೆಲಸಗಳಾದರೂ 1957ರ ಹೊತ್ತಿಗೆ ಇನ್ನೊಂದು ತೆರನ ಇನ್‌ಫ‌ುಯೆನಾ ಭುಗಿಲೆದ್ದು ಅನೇಕ ಜೀವಗಳನ್ನು ಬಲಿತೆಗೆದುಕೊಂಡಿತು. ಕರ್ನಾಟಕದಲ್ಲಿ ಕೆಲ ದಿನಗಳ ಕಾಲ ಶಾಲೆ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಇಂದಿಗೂ ದೇಶ ರೋಗಗಳಿಗೆ ಪಕ್ಕಾಗುವಂಥ ಸ್ಥಿತಿಯಲ್ಲೇ ಇದೆ. ಇಂದಿಗೂ ಹಕ್ಕಿಜ್ವರ, ಜಪಾನಿ ಮಿದುಳು ಜ್ವರ, ಡೆಂಗ್ಯೂ ಅಥವಾ ಚಿಕುನ್‌ಗುನ್ಯಾದಂಥ ಸಾಂಕ್ರಾಮಿಕ ಕಾಯಿಲೆಗಳಿಂದ ನಾವು ಮುಕ್ತರಾಗಿಲ್ಲ. ದುರಂತಗಳು ಸಂಭವಿಸುತ್ತಲೇ ಇರುತ್ತವೆ. 1918ರ ದುರಂತವನ್ನು ನಾವು ಮರೆತಿದ್ದೇವೆಂದರೆ, ಅದಕ್ಕೆ ಕಾರಣ, ಅಂಕಿಅಂಶಗಳ ದೃಷ್ಟಿಯಲ್ಲಷ್ಟೇ ಪ್ರಾಮುಖ್ಯವೆಂದು ಪರಿಗಣಿತವಾಗಿದ್ದ ಸಾಮೂಹಿಕ ಸಾವಿನ ಪ್ರಕರಣಗಳು.

ಅದೃಷ್ಟವಶಾತ್‌ ವಿಶ್ವ ಆರೋಗ್ಯ ಸಂಸ್ಥೆ ಅಥವಾ ಇತರ ಸಂಘಟನೆಗಳ ಪ್ರಯತ್ನದ ಫ‌ಲಶ್ರುತಿಯೆಂಬಂತೆ ಜಗತ್ತಿನ ವಿವಿಧ ದೇಶಗಳು ಇಂದು ತಮ್ಮಲ್ಲಿ ತಲೆಯೆತ್ತಿದ್ದ ಕಾಯಿಲೆಗಳು ಗಡಿಯಾಚೆಗೆ ಹರಡದಂತೆ ತಡೆಗಟ್ಟಲು ಬೇಕಾದ ಸಿದ್ಧತೆಗಳನ್ನು ಹಿಂದೆಂದಿಗಿಂತಲೂ ಉತ್ತಮ ರೀತಿಯಲ್ಲಿ ಮಾಡಿಕೊಂಡಿವೆ. 1918ರಲ್ಲಿ ಇನ್‌ಫ‌ುÉಯೆನಾj ಸೋಂಕಿಗೆ ತುತ್ತಾದ ಲಕ್ಷಗಟ್ಟಲೆ ಜನರ ಜೀವಹಾನಿಗೆ ಹೋಲಿಸಿದರೆ, ಈಗ ತಲೆಯೆತ್ತಿರುವ ಕೊರೊನಾ ವೈರಸ್‌ ಕಾಯಿಲೆಗೆ ಬಲಿಯಾದವರ ಸಂಖ್ಯೆ ತೀರಾ ನಗಣ್ಯ ಎನ್ನಬಹುದು.

ಈಗ ನಾವು ನಮ್ಮ ದೇಶದಲ್ಲಿ ವಿಶೇಷವಾಗಿ ಮಕ್ಕಳಿಗೆ ಹಾಗೂ ಯುವಕ ಯುವತಿಯರಿಗೆ ಗೀಳು ಹಿಡಿಸಿದ ತಥಾಕಥಿತ ಚೀನಿ ಖಾದ್ಯಗಳತ್ತ ಹೊರಳ್ಳೋಣ. ಚೀನಿಯರ ಪೈಕಿ ಎಲ್ಲರೂ ಅಲ್ಲದಿದ್ದರೂ ಕೆಲವರಾದರೂ ತಯಾರಿಸಿ ತಿನ್ನುತ್ತಿರುವ ವಿಲಕ್ಷಣ ಖಾದ್ಯಗಳ ಬಗ್ಗೆ ಹೇಳಿದರೆ ಅಥವಾ ಆ ಬಗ್ಗೆ ನೆನಪು ಮಾಡಿದರೂ ಸಾಕು, ಚೀನಿ ಖಾದ್ಯ ಖಯಾಲಿಯವರೆಲ್ಲ ತಲೆಸುತ್ತಿ ಬಿದ್ದಾರು! ನಮ್ಮ ರೆಸ್ಟೋರೆಂಟ್‌ಗಳಲ್ಲಿ ತಯಾರಿಸಲಾಗುವ ಅಥವಾ ನಮ್ಮ ಅಡುಗೆಮನೆಗಳಲ್ಲಿ ಚೀನಿ ಖಾದ್ಯಗಳೆಂಬ ಹೆಸರಿನಲ್ಲಿ ತಯಾರಿಸುವ ಐಟಮ್‌ಗಳು ನಿಜಕ್ಕೂ ಚೀನಿ ಖಾದ್ಯ/ ಭೋಜ್ಯಗಳಲ್ಲವೇ ಅಲ್ಲ ಎಂದು ನಾವು ವಾದಿಸಬಹುದು. ಹೆಚ್ಚೆಂದರೆ ಇವು ಮಧ್ಯ ಚೀನದ ಹಕ್ಕಾ ಭಾಷಿಗರಿಗಿರುವ ಪ್ರಾಂತ್ಯಗಳಿಗೆ ಸಂಬಂಧಿಸಿದ “ಹಕ್ಕಾ ಚೈನೀಸ್‌’ ಪಾಕ ವಿಶೇಷಗಳೆನ್ನಬಹುದು. ಚಿಲೀ ಚಿಕನ್‌, ಚೌಮೀನ್‌, ನೂಡಲ್ಸ್‌, ಫ್ರೈಡ್‌ರೈಸ್‌ (ಮಂಚೂರಿಯನ್‌ ಜತೆಗೆ), ಗೋಬಿ ಮಂಚೂರಿಯನ್‌, ಚಿಕನ್‌ ಲಾಲಿಪಾಪ್‌ ಹಾಗೂ ಮಂಚೂರಿ ಸೂಪ್‌ನಂಥ ಚೀನಿ ಸ್ವಾದ ವಿಶೇಷಗಳನ್ನು ಜನಪ್ರಿಯಗೊಳಿಸಿದವರು ಕೋಲ್ಕತಾಕ್ಕೆ ವಲಸೆ ಬಂದು ನೆಲೆಸಿದ್ದ ಚೀನಿಯರು. ಕೆಲವರು ಚೈನೀಸ್‌ ಭೇಲ್‌ ಅಥವಾ ಚೈನೀಸ್‌ ದೋಸೆ ತಯಾರಿಸಿಕೊಟ್ಟಾರು. ಹಕ್ಕಾ ಚೈನೀಸ್‌ ಪಾಕ ವಿಧಾನದಲ್ಲಿ ರೈಸ್‌ಪೋರ್ಕ್‌ ಅಥವಾ ಸೋಯಾಬೀನ್‌ನಂಥ ಸ್ವಾದ ವೈವಿಧ್ಯಗಳಿರುತ್ತವೆ.

ಇದಕ್ಕೆ ಪ್ರತಿಯಾಗಿ ಚೀನದಲ್ಲಿ ಯಾವೆಲ್ಲ ಭಾರತೀಯ ಪಾಕ ವಿಶೇಷಗಳು ಜನಪ್ರಿಯವಾಗಿವೆ ಎಂಬ ಪ್ರಶ್ನೆ ತಲೆಯೆತ್ತುವುದು ಸಹಜವೇ. ಚೀನಿಯರು ನಮ್ಮ ಕೈಗಾರಿಕೋತ್ಪನ್ನಗಳನ್ನಾಗಲಿ, ಆಹಾರ ಪದಾರ್ಥಗಳನ್ನಾಗಲಿ ಖರೀದಿಸದೆ ಉಳಿಯುವುದು ಸಾಧ್ಯವಿಲ್ಲ! 1955ರಷ್ಟು ಹಿಂದೆಯೇ, “ಪೀಪಲ್ಸ್‌ ರಿಪಬ್ಲಿಕ್‌ ಆಫ್ ಚೈನ’ದ ಪ್ರಥಮ ಪ್ರಧಾನ ಮಂತ್ರಿ ಚೌ ಎನ್‌ ಲಾೖ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಮ್ಮ ಆಗಿನ ಉಪರಾಷ್ಟ್ರಪತಿ ಎಸ್‌. ರಾಧಾಕೃಷ್ಣನ್‌ ಅವರು ದಕ್ಷಿಣ ಭಾರತದ ಸಸ್ಯಾಹಾರಿ ಪಾಕ ವಿಶೇಷಗಳನ್ನು ಉಣಬಡಿಸಿ ಉಪಚರಿಸಿದ್ದರು. ಈ ವಿಶೇಷ ಭೋಜನೋಪಚಾರ ಅಂದಿನ ವಾರ್ತಾಪತ್ರಿಕೆಗಳಲ್ಲಿ ಮುಖ್ಯ ಸುದ್ದಿಯಾಗಿ ಅಚ್ಚಾಗಿತ್ತು.

ನಮ್ಮ ದೇಶದಲ್ಲಿ ಚೀನಿ ಭೋಜ್ಯ ಖಾದ್ಯಗಳು ದೊಡ್ಡ ಚರಿತೆಯನ್ನೇ ನಿರ್ಮಿಸಿವೆ. ಈ ಸುದೀರ್ಘ‌ ಇತಿಹಾಸ 18ನೆಯ ಶತಮಾನದಷ್ಟು ಹಳೆಯದು. ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪೆನಿಯ ಕಾರುಬಾರಿನ ದಿನಗಳಲ್ಲೇ ಕೆಲ ವ್ಯವಹಾರ ಚತುರ ಚೀನಿ ಪ್ರಜೆಗಳು ಕೋಲ್ಕತಾಕ್ಕೆ ಬಂದು ತಮ್ಮ ತವರಿನ ಪಾಕ ವಿಶೇಷಗಳನ್ನು ಮಾರತೊಡಗಿದ್ದರು. ಅದು ಜಾತಿ-ಪಂಥಗಳ ಮಡಿ – ಮೈಲಿಗೆಯ ಯುಗವಾಗಿದ್ದರೂ ಚೀನಿ ಖಾದ್ಯಗಳಿಗೆ ಇಲ್ಲಿ ಭಾರೀ ಬೇಡಿಕೆಯಿತ್ತು. ಮುಂದಿನ ದಿನಗಳಲ್ಲಿ ಕೆಲ ರೇಷ್ಮೆ ವ್ಯಾಪಾರಿಗಳು, ದಂತ ವೈದ್ಯರು, ಪಾದರಕ್ಷೆ ತಯಾರಕರು/ ಮಾರಾಟಗಾರರು, ಚರ್ಮ ಹದ ಮಾಡುವ ಕಾರ್ಮಿಕರು ಮತ್ತಿತರರು ಚೀನದಿಂದ ವಲಸೆ ಬಂದು ಬಂಗಾಲದಲ್ಲಿ ನೆಲೆನಿಂತರು.ಕೋಲ್ಕತ್ತಾದಲ್ಲಿ ಸರ್ವ ಪ್ರಥಮವಾಗಿ ಆರಂಭಗೊಂಡ ಪ್ರಪ್ರಥಮ ಚೀನಿ ಹೊಟೇಲ್‌ ಎಂದರೆ “ನಾನ್‌ಕಿಂಗ್‌’ ರೆಸ್ಟೋರೆಂಟ್‌ (1924) . ಕೋಲ್ಕತ್ತಾದ ಈ ಚೀನಿಯರು ನಿಜವಾದ ಅರ್ಥದಲ್ಲಿ ಉದ್ಯಮ ಸಾಹಸಿಗಳು; ಅವರು ಭಾರತಕ್ಕೆ ಹಿಂದಿ ಸಿನಿಮಾರಂಗಕ್ಕೆ ಒಬ್ಬ ವಿಖ್ಯಾತ ತಾರೆಯನ್ನೂ ಕೊಟ್ಟಿದ್ದಾರೆ. ಈ ಜನಪ್ರಿಯ ತಾರೆಯೇ ಚಿತ್ರರಂಗದ ಮೇರುವ್ಯಕ್ತಿ ವಿ. ಶಾಂತಾರಾಮ್‌ ಅವರ ಪತ್ನಿ ಜಯಶ್ರೀ. ಕೋಲ್ಕತ್ತಾದ ಚೈನಾ ಟೌನ್‌ ಮೂಲದವರಾದ ಜಯಶ್ರೀ “ಶಕುಂತಲಾ’ (1942), “ಡಾಕ್ಟರ್‌ ಕೊಟ್ನಿಸ್‌ ಕಿ ಅಮರ್‌ ಕಹಾನಿ’ (1946) “ದಹೇಜ್‌’ (1950) ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೆ ಕಮ್ಯುನಿಸ್ಟ್‌ ಚೀನದ ನಿಲುವನ್ನು ಖಂಡಿಸುವ “ನೈಟ್‌ವೇರ್‌ ಇನ್‌ ರೆಡ್‌ ಚೈನ’ (1955) ಎಂಬ ಚಿತ್ರದಲ್ಲೂ ನಟಿಸಿದ್ದ ಆಕೆ ಆ ದಿನಗಳಲ್ಲಿ “ಹಿಂದಿ ಚೀನಿ ಭಾಯಿ ಭಾಯಿ’ ಎಂಬ ಚಿತ್ರವನ್ನೂ ನಿರ್ಮಿಸಿದ್ದರು. “ದಹೇಜ್‌’ನಂಥ ಚಿತ್ರಗಳಲ್ಲಿ ಆಕೆ ತನ್ನ ಪಾತ್ರದ ಗೀತೆಗಳನ್ನು ತಾವೇ ಹಾಡಿದ್ದರು.

ಕ್ರಮೇಣ ಇಲ್ಲಿದ್ದ ಚೀನಿಯರು ದೇಶದ ವಿವಿಧ ಭಾಗಗಳಿಗೂ ಹೋಗಿ ನೆಲೆಸಿದರು ಅವರಲ್ಲಿ ಕೆಲವರಿಗೆ ಬೆಂಗಳೂರು ತಮ್ಮ ಸ್ವಂತ ಊರೇ ಆಯಿತು. ಆದರೆ 1962ರ ಚೀನ – ಭಾರತ ಯುದ್ಧ ಅವರ ಬದುಕನ್ನೇ ಬದಲಾಯಿಸಿತು. ಅವರಲ್ಲಿ ಕೆಲವರನ್ನು ಬೇಹುಗಾರರೆಂದು ಶಂಕಿಸಿದ ಭಾರತ ಸರಕಾರ ರಾಜಸ್ಥಾನದಲ್ಲಿನ ವಲಸಿಗರ ಶಿಬಿರದಲ್ಲಿ ಇರಿಸಿತು. ಮುಂದಿನ ವರ್ಷಗಳಲ್ಲಿ ಅವರು ಕೆನಡದಂಥ ದೇಶಗಳಿಗೆ ವಲಸೆ ಹೋದರು.

ಚೀನಕ್ಕೆ ನಾವು ನಮ್ಮ ಕೈಗಾರಿಕಾ ಉತ್ಪನ್ನಗಳನ್ನು ಹಾಗೂ ತಾಂತ್ರಿಕತೆಯನ್ನು ಮಾರಾಟ ಮಾಡಿದಂತೆಯೇ ನಮ್ಮಲ್ಲಿನ ಪಾಕ ವಿಧಾನಗಳನ್ನೂ ಸಾಂಸ್ಕೃತಿಕ – ಧಾರ್ಮಿಕ ವೈಶಿಷ್ಟéಗಳನ್ನೂ ಅಲ್ಲಿನವರಿಗೆ ರಪು¤ ಮಾಡಬೇಕಿದೆ. ಅರ್ಥಾತ್‌ ಪರಿಚಯಿಸಿಕೊಡಬೇಕಿದೆ. ಭಾರತ ಚೀನಕ್ಕೆ ಇದುವರೆಗೆ ಮಾಡಿರುವ ಅತ್ಯುತ್ತಮ “ರಫ್ತು’ ಅಥವಾ “ಉಡುಗೊರೆ’ಯೆಂದರೆ ಬೌದ್ಧ ಧರ್ಮ ಹಾಗೂ ತತ್ಸಂಬಂಧಿ ಸಾಂಸ್ಕೃತಿಕ ಮೌಲ್ಯಗಳು. “ಬೌದ್ಧ ಧರ್ಮಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿದ ಹೊರತಾಗಿಯೂ ಚೀನಿಯರು ಅದನ್ನು ಸ್ವಾಗತಿಸಿ ತಮ್ಮದಾಗಿಸಿಕೊಂಡರು. ಈಚಿನ ಕಾಲ ಘಟ್ಟದಲ್ಲಿ ಚೀನ ಅತ್ಯಂತ ರಹಸ್ಯ ರೀತಿಯಲ್ಲಿ ಬೌದ್ಧ ಧರ್ಮಕ್ಕೆ ತಿಲಾಂಜಲಿಯಿತ್ತಂತಿದೆ. ಅದನ್ನು ಅದರ ಸ್ಥಾನದಿಂದ ಕಿತ್ತೆಸೆದು ಬಂಡವಾಳಶಾಹಿ ವ್ಯವಸ್ಥೆಗೆ ಮಣೆ ಹಾಕಿದಂತಿದೆ.

– ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next