Advertisement

ದೇವರ ಆಶೀರ್ವಾದದಿಂದ ಪುನರ್ಜನ್ಮ

01:15 AM May 21, 2021 | Team Udayavani |

ಕಾಪು: ಸಮುದ್ರ ಮಧ್ಯದಲ್ಲಿ ನಾವು ಕಳೆದ ಆ 47 ತಾಸುಗಳು ಅತ್ಯಂತ ಕರಾಳ ವಾಗಿದ್ದವು. ಅನುಭವಿಸಿದ ಯಾತನೆಯನ್ನು ನೆನಪಿಸಿಕೊಂಡರೇ ಮೈನಡುಕ ಬರುತ್ತದೆ. ಸಾವಿನ ಅಂಚಿನಲ್ಲಿದ್ದ ನಮಗೆ ದೇವರೇ ಪುನರ್ಜನ್ಮ ಕರುಣಿಸಿದ್ದಾನೆ. ಅದಕ್ಕಾಗಿ ನಾವೆಲ್ಲರೂ ದೇವರಿಗೆ ಮತ್ತು ನಮ್ಮನ್ನು ರಕ್ಷಿಸಲು ನೆರವಾದ ಎಲ್ಲರಿಗೂ ಕೃತಜ್ಞತೆ ಹೇಳುತ್ತೇವೆ.

Advertisement

ಇದುಕಾಪುಸಮೀಪದ ಕಾಪು ಪಾರ್‌ ಬಂಡೆಗೆಸಿಲುಕಿಅಪಾಯ ಕ್ಕೊಳಗಾಗಿ ನೌಕಾ ಪಡೆಯ ಐಎನ್‌ಎಸ್‌ ವರಾಹ ಮತ್ತು ಐಎನ್‌ 702 ನಡೆಸಿದ ಕಾರ್ಯಾಚರಣೆಯಿಂದಾಗಿ ಬದುಕಿ ಬಂದ ಕೋರಮಂಡಲ್‌ ಸಪೋರ್ಟರ್‌ 9 ಮಿನಿ ನೌಕೆಯಲ್ಲಿದ್ದ 9 ಮಂದಿ ಸಿಬಂದಿಯ ಪೈಕಿ ಲಕ್ಷ್ಮೀನಾರಾಯಣ್‌ ಹೇಳಿದ ಮಾತುಗಳು.

ತೌಖ್ತೆ ಚಂಡಮಾರುತದ ಮುನ್ಸೂಚನೆ ಕೇಳಿ ನಾವು ಎನ್‌ಎಂಪಿಟಿ ಬಂದರಿನ ಒಳಗೆ ಪ್ರವೇಶಕ್ಕಾಗಿ ಪ್ರಯತ್ನಿಸುವ ವೇಳೆ ನಮ್ಮ ನೌಕೆ ಚಂಡಮಾರುತದ ಸುಳಿಗೆ ಸಿಲುಕಿತು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ನೌಕೆ ಬಂದರಿನ ಹೊರ ವಲಯದ ಪ್ರದೇಶದಿಂದ ದೂರ ಸಂಚರಿಸಿಯಾಗಿತ್ತು. ಸಮುದ್ರದಲ್ಲಿ ಎದ್ದೇಳುತ್ತಿದ್ದ ಬಿರುಗಾಳಿ ಮತ್ತು ದೈತ್ಯ ಅಲೆಗಳ ನಡುವೆ ನೌಕೆಯನ್ನು ಮುಂದೆ ಚಲಾಯಿಸುವುದೇ ಕ್ಯಾಪ್ಟನ್‌ಗೆ ದೊಡ್ಡ ಸವಾಲಾಗಿತ್ತು. ಕ್ಯಾಪ್ಟನ್‌ನ ಮುಖಚರ್ಯೆಯೇ ನಾವು ಅಪಾಯದಲ್ಲಿ ಸಿಲುಕಿದ್ದೇವೆ ಎನ್ನುವುದನ್ನು ಹೇಳುವಂತಿತ್ತು.

ಪರಸ್ಪರ ಸಾಂತ್ವನ :

ಕಡಲಲ್ಲಿ ಓಲಾಡುತ್ತ ಸಾಗಿದ ನಮ್ಮ ನೌಕೆ ಶನಿವಾರ ತಡರಾತ್ರಿ ಕಾಪು ಪಾರ್‌ ಬಳಿ ಬಂಡೆಗೆ ಢಿಕ್ಕಿ ಹೊಡೆಯಿತು. ಆಗ ಬಂದ ದೊಡ್ಡ ಸದ್ದು ನಮಗೆ ಮತ್ತಷ್ಟು ಆಘಾತವನ್ನುಂಟು ಮಾಡಿತ್ತು. ಒಂದು ಕಡೆ ಧಾರಾಕಾರ ಮಳೆ, ಜೋರಾಗಿ ಬೀಸುತ್ತಿದ್ದ ಬಿರುಗಾಳಿ, ಟಗ್‌ಗೆ ಅಪ್ಪಳಿಸುತ್ತಿದ್ದ ದೈತ್ಯ ಅಲೆಗಳು, ಹೊರಗೆಲ್ಲ ಕತ್ತಲನ್ನು ಗಮನಿಸಿದಾಗ ನಾವು ಬದುಕುತ್ತೇವೆ ಎಂಬ ಆಸೆಯನ್ನೇ ಕಳೆದುಕೊಂಡೆವು.  ಆದರೂ ನಾವು 9 ಮಂದಿ ಒಬ್ಬರಿಗೊಬ್ಬರು ಸಮಾಧಾನ ಹೇಳುತ್ತ ಧೈರ್ಯ ತುಂಬಿಕೊಂಡೆವು.

Advertisement

ರವಿವಾರ ಬೆಳಗಾಗುತ್ತಲೇ ಮೊಬೈಲ್‌ ಮೂಲಕ ರಕ್ಷಣೆಗಾಗಿ ಎನ್‌ಎಂಪಿಟಿ, ನಮ್ಮ ಕೀರೋಸ್‌ ಕಂಪೆನಿಗೆ ಮಾಹಿತಿ ನೀಡಿದೆವು. ಅಪಾಯದ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿದ ನೌಕಾಪಡೆಯ ಹಡಗು ನಮ್ಮನ್ನು ಅನುಸರಿಸಿಕೊಂಡು ನಮ್ಮ ಜತೆಗೆ ಸಾಗಿ ಬಂದಿತ್ತು. ಆದರೆ ಚಂಡಮಾರುತ, ಕಡಲಬ್ಬರ ಮತ್ತು ಮಳೆಯ ಪರಿಣಾಮ ಅದಕ್ಕೆ ನಮ್ಮ ಹತ್ತಿರ ಬರಲು ಸಾಧ್ಯವಾಗಿರಲಿಲ್ಲ. ಸೋಮವಾರ ಬೆಳಗ್ಗೆ ನೌಕಾಪಡೆಯ ವರಾಹ ಹಡಗು ಮತ್ತು ಹೆಲಿಕಾಪ್ಟರ್‌ ಮೂಲಕ ರಕ್ಷಿಸಿದ್ದು ನಮಗೆ ತುಂಬು ಖುಷಿ ಕೊಟ್ಟಿದೆ ಎಂದವರು ನಡೆದ ಘಟನೆಯನ್ನು ವಿವರಿಸಿದರು.

ಐವರಿಗೆ ಕೋವಿಡ್!

ಉದಯವಾಣಿ ಜತೆ ಮಾತುಕತೆ ನಡೆಸಿದ ಪ್ರಶಾಂತ್‌ ಸುಬ್ರಹ್ಮಣ್ಯಂ ಮತ್ತು ಲಕ್ಷ್ಮೀನಾರಾಯಣ ಸೇರಿದಂತೆ ನೌಕೆಯಲ್ಲಿದ್ದ ಮೊಯ್ನುದ್ದೀನ್‌ ಮುಲ್ಲಾ ಖಾನ್‌ (ಪೈಲಟ್‌), ಗೌರವ್‌ ಕುಮಾರ್‌ (ಸೆಕೆಂಡ್‌ ಆಫೀಸರ್‌), ಶಾಂತನು, ರಾಹುಲ್‌ ಮಜುಮ್ದಾರ್‌, ತುಷಾರ್‌ ಕುಮಾರ್‌, ರಿಯಾದ್‌ ಅಹಮದ್‌ ಅವರು ಆಘಾತದಿಂದ ಚೇತರಿಸುತ್ತಿದ್ದಾರೆ. ಅವರಲ್ಲಿ ಐವರಿಗೆ ಪಾಸಿಟಿವ್‌ ಬಂದಿರುವ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನ್ನ ನೀಡಿದ ನೌಕೆ ಕೈಬಿಡಲಿಲ್ಲ :

ನಾವು ಎದುರಿಸಿದ ನೋವು, ಯಾತನೆಯನ್ನು ವರ್ಣಿಸುವಂತಿಲ್ಲ. ಅದನ್ನು ಸಜೀವ ನರಕ ದರ್ಶನವೆಂದೇ ಹೇಳಬಹುದು. ಆದರೆ ನಮಗೆ ಅನ್ನ ನೀಡುತ್ತಿದ್ದ ನೌಕೆ ಕೊನೆವರೆಗೂ ನಮ್ಮ ಕೈಬಿಡಲಿಲ್ಲ. ಬಂಡೆಗೆ ಢಿಕ್ಕಿ ಹೊಡೆದು ಅಲ್ಲೇ ನಿಲ್ಲುವ ಬದಲು ಮುಳುಗುತ್ತಿದ್ದರೆ ನಾವು ಬದುಕುಳಿಯುವ ಸಾಧ್ಯತೆ ಗಳೇ ಇರುತ್ತಿರಲಿಲ್ಲ. ನೌಕೆ ಬಂಡೆಗೆ ಅಪ್ಪಳಿಸಿದಾಗ ಬಹಳಷ್ಟು ಹಾನಿ ಗೀಡಾಗಿತ್ತು. ಜನರೇಟರ್‌ ಕೈಕೊಟ್ಟಿದ್ದರಿಂದ ಎರಡು ದಿನ ಕತ್ತಲಲ್ಲೇ ಕಳೆದೆವು. ಊಟ-ತಿಂಡಿಗೂ ತತ್ವಾರವಿತ್ತು. ನೌಕೆಯ ಬಹುಭಾಗವೂ ನೀರಿನ ಅಡಿಯಲ್ಲಿತ್ತು. ಮೇಲಿನ ಭಾಗದಲ್ಲಿ ಕುಳಿತೇ 2 ದಿನ ಕಳೆದಿದ್ದೇವೆ ಎಂದು ಪ್ರಶಾಂತ್‌ ಸುಬ್ರಹ್ಮಣ್ಯಂ ವಿವರಿಸಿದರು.

ನಾವು ಎದುರಿಸಿದ ಪರಿಸ್ಥಿತಿಯ ಬಗ್ಗೆ ನಮ್ಮ ಮನೆಯವರಿಗೆ ಈ ವರೆಗೂ ಮಾಹಿತಿ ನೀಡಿಲ್ಲ. ನಮ್ಮ ನೋವನ್ನು ನಾವೇ ಮರೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳುವಾಗ ಗದ್ಗದಿತರಾದರು.

ನಾವು ಅಪಾಯಕ್ಕೆ ಸಿಲುಕಿರುವ ಸುದ್ದಿ ತಿಳಿದ ಕೂಡಲೇ ನೌಕಾ ಪಡೆ ನಮ್ಮ ರಕ್ಷಣೆಗೆ ಧಾವಿಸಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಅವರಿಗೆ ನಮ್ಮ ಕಡೆ ಬರಲು ಸಾಧ್ಯವಾಗಿರಲಿಲ್ಲ. ಆದರೂ ಆಗಾಗ ಕರೆ ಮಾಡಿ ನಮ್ಮ ಪರಿಸ್ಥಿತಿಯನ್ನು ವಿಚಾರಿಸುತ್ತಿದ್ದರು. ಆ ಎರಡು ದಿನಗಳಲ್ಲಿ ಅವರ ಸೇವೆ ಸ್ಮರಣೀಯವಾಗಿದೆ. ನಮ್ಮ ರಕ್ಷಣೆ ಮತ್ತು ಆರೈಕೆಗೆ ಕೀರೋಸ್‌ ಕಂಪೆನಿ, ಎನ್‌ಎಂಪಿಟಿ ನೀಡಿದ ಸಹಕಾರಕ್ಕೆ ಚಿರಋಣಿಗಳಾಗಿದ್ದೇವೆ. ಪ್ರಶಾಂತ್ಸುಬ್ರಹ್ಮಣ್ಯಂ (ಸೆಕೆಂಡ್ಎಂಜಿನಿಯರ್‌)  

Advertisement

Udayavani is now on Telegram. Click here to join our channel and stay updated with the latest news.

Next