Advertisement

ಕಾಪಿ ಚಿರಾಯು; Copy ವೀರರ  3 ಮಜಭರಿತ ಕತೆಗಳು

03:45 AM Mar 21, 2017 | |

ಕಾಪಿ ಹೊಡೆಯುವ ಪಾರಂಪರಿಕ ವಿಧಾನಗಳಾದ ವಾರೆಕಣ್ಣಿನ ನೋಟ ಮತ್ತು ಚೀಟಿಗಳಿಂದ ಬೇಸತ್ತ ಕಾಪಿವೀರರು ಆಧುನಿಕ ಜಗತ್ತಿನ ಆವಿಷ್ಕಾರ, ತಂತ್ರಜ್ಞಾನಗಳನ್ನು ಬಳಸುವುದರಲ್ಲಿಯೂ ಹಿಂದೆ ಬಿದ್ದಿಲ್ಲ. ನಾಗರಹಾವು ಸಿನಿಮಾದಲ್ಲಿ ಚೀಟಿ ಇಟ್ಟು ಸಿಕ್ಕಿಬಿದ್ದ ನಟ ವಿಷ್ಣುವರ್ಧನ್‌ನಿಂದ ಮೊದಲಾಗಿ, ಮುನ್ನಾಭಾಯಿ ಎಂಬಿಬಿಎಸ್‌ ಸಿನಿಮಾದಲ್ಲಿ ಮೆಡಿಕಲ್‌ ಪರೀಕ್ಷೆಯಲ್ಲಿ ಕಾಪಿ ಮಾಡಲು ನಟ ಸಂಜಯ್‌ ದತ್‌ ಮೊಬೈಲ್‌ ಬಳಸುವಲ್ಲಿಯವರೆಗೆ ಕಾಪಿವೀರರು ಅಪ್‌ಡೇಟ್‌ ಆಗಿದ್ದಾರೆ. ಏನೇ ಹೇಳಿ, ಇಷ್ಟೆಲ್ಲಾ ಕಸರತ್ತುಗಳನ್ನು ಮಾಡುವ ಬದಲು ಶ್ರದ್ಧೆಯಿಂದ ಓದುವುದೇ ಪಾಸಾಗಲು ಇರುವ ಸುಲಭಮಾರ್ಗ ಎನ್ನುವ ಮಾತೂ ಇದೆ! ಏನೇ ಇರಲಿ, ಜಗತ್ತಿನ ಅಸಂಖ್ಯ ಕಾಪಿ ವೀರರ ಕತೆಗಳಲ್ಲಿ ಮಜಭರಿತವೆನಿಸಿದ ಮೂರನ್ನು ಇಲ್ಲಿ ನೀಡಿದ್ದೇವೆ.

Advertisement

1. ಪ್ರೀತಿಗಾಗಿ ಕಾಪಿ
ತಮ್ಮ ಪ್ರಿಯತಮೆಗಾಗಿ ಹುಡುಗರು ಏನನ್ನೂ ಮಾಡಲು ತಯಾರಿರುತ್ತಾರೆಂಬ ವಿಷಯ ಗೊತ್ತಿರುವುದೇ. ಒಮ್ಮೆ ಕಝಕಿಸ್ತಾನದಲ್ಲೇನಾಯ್ತು ಗೊತ್ತಾ? ಪ್ರಿಯತಮೆಯೊಬ್ಬಳು ಪರೀಕ್ಷೆಯಿಂದ ಕಂಗೆಟ್ಟಿದ್ದಳು. ವಧು ಪರೀಕ್ಷೆಯಲ್ಲ. ಅದಾಗಿದ್ದಿದ್ದರೆ ಹೇಗೋ ಪಾರಾಗಿಬಿಡಬಹುದಿತ್ತು. ಆದರೆ ಆಕೆಯನ್ನು ಚಿಂತೆಗೀಡು ಮಾಡಿದ್ದು ಯುನಿವರ್ಸಿಟಿ ಪರೀಕ್ಷೆ. ಒಂದಕ್ಷರವನ್ನೂ ಓದದ ಕಾರಣ ಫೇಲಾಗಿಬಿಡುತ್ತೇನೆಂಬ ಭಯ ಆಕೆಯನ್ನು ಕಾಡತೊಡಗಿತು. ಆಗ ಅವಳ ಕೈ ಹಿಡಿದದ್ದು, ಮುಂದಿನ ಏಳೇಳು ಜನ್ಮಕ್ಕೂ ಕೈಹಿಡಿಯುತ್ತೇನೆ ಎಂದಿದ್ದ ಅವಳ ಪ್ರಿಯಕರ. ಆತ ಹೂಡಿದ ಉಪಾಯ ಕೇಳಿದರೆ “ಚಾಚಿ 420’ಯ ಕಮಲ್‌ಹಾಸನ್‌ ಕೂಡ ನಾಚಬೇಕು. ಈ ಪ್ರಿಯಕರ ಮಹಾಶಯ ತನ್ನ ಮುಖ, ಕೈ ಕಾಲುಗಳನ್ನು ಶೇವ್‌ ಮಾಡಿಕೊಂಡು ಪ್ರಿಯತಮೆಯ ವೇಷದಲ್ಲಿ ಅವಳದೇ ವಸ್ತ್ರ ತೊಟ್ಟು ಪರೀಕ್ಷೆ ಬರೆಯಲು ಹೋಗಿದ್ದಾನೆ. ಸಿಕ್ಕಿಬಿದ್ದಿದ್ದಾನೆ. ಇಲ್ಲಿ ಎರಡು ವಿಷಯಗಳಿಗೆ ಹೆಮ್ಮೆಯೆನಿಸುತ್ತದೆ. ಸಹಾಯ ಮಾಡುವ ಗುಣ ಮತ್ತು ಓದದೆ ಪರೀಕ್ಷೆ ಬರೆದರೂ ಪಾಸಾಗುತ್ತೇನೆ ಎನ್ನುವ ಆತನ ಕಾನ್ಫಿಡೆಂಟು! ಇಷ್ಟೆಲ್ಲಾ ಮಾಡಿದರೂ ಹುಡುಗರಿಗೆ ಜವಾಬ್ದಾರಿ ಇಲ್ಲ ಅನ್ನುತ್ತಾರೆ! ಏನು ಹೇಳುವುದು?!

2. ಕಾನೂನು ಪ್ರಕಾರ ನಕಲು ಮಾಡಲು ಹೊರಟವ!
ಜರ್ಮನಿಯಲ್ಲೊಬ್ಬ ಭೂಪನಿದ್ದಾನೆ. ಭಾರತದಲ್ಲಿ ಹುಟ್ಟಬೇಕಿದ್ದ ಈ ಮನುಷ್ಯ ಎಲ್ಲೋ ಲೆಕ್ಕ ತಪ್ಪಿ ಜರ್ಮನಿಯಲ್ಲಿ ಹುಟ್ಟಿಬಿಟ್ಟಿದ್ದಾನೆ. ಆತನಿಗೆ ಪರೀಕ್ಷೆ ಎಂದರೆ ಅಲರ್ಜಿ (ಯಾರಿಗೆ ತಾನೇ ಇಲ್ಲ?). ಅಂತಿಮ ಪರೀಕ್ಷೆಯನ್ನು ಆತ ಪಾಸು ಮಾಡಲೇಬೇಕು. ಮಾಡು ಇಲ್ಲವೆ ಮಡಿ ಎನ್ನುವ ಪರಿಸ್ಥಿತಿ. ನಕಲು ಅಥವಾ ಮೋಸದಂತಹ ಕಾನೂನಿಗೆ ವಿರುದ್ಧವಾದ ಮಾರ್ಗಗಳನ್ನು ಹಿಡಿಯಲು ಆತನಿಗೆ ಮನಸ್ಸಿಲ್ಲ. ಅದಕ್ಕೇ ಕಾನೂನಿನ ವ್ಯಾಪ್ತಿಯೊಳಗೇ ಪಾಸಾಗಲು ಏನು ಮಾಡಬಹುದೆಂದು ಯೋಚಿಸಿದಾಗ ಹೊಳೆದಿದ್ದು ಈ ಮಾಸ್ಟರ್‌ಪ್ಲಾನ್‌. ನಮ್ಮಲ್ಲಿ ಮಾಹಿತಿ ಹಕ್ಕು ಕಾಯ್ದೆ(ಆರ್‌.ಟಿ.ಐ) ಇರುವುದು ನಿಮಗೆ ಗೊತ್ತೇ ಇರುತ್ತದೆ. ಅದೇ ರೀತಿ ಜರ್ಮನಿಯಲ್ಲಿಯೂ ಫ್ರೀಡಂ ಆಫ್ ಇನ್‌ಫಾರ್ಮೇಶನ್‌ ಅನ್ನೋ ಕಾಯ್ದೆ ಇದೆ. ಪರೀಕ್ಷೆ ಶುರುವಾಗುವುದಕ್ಕೆ ಒಂದೆರಡು ವಾರ ಇರುವ ಹಾಗೆ ಆತ ಆ ಕಾಯ್ದೆಯಡಿ ಮಾಹಿತಿ ಕೋರಿ ಅರ್ಜಿ ಹಾಕಿದ್ದಾನೆ. ಏನಂತ? ಎರಡು ವಾರಗಳ ನಂತರ ಶುರುವಾಗುವ ಕಾಲೇಜು ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಯಾವೆಲ್ಲಾ ಪ್ರಶ್ನೆಗಳು ಬರಲಿವೆ ಎಂಬ ಮಾಹಿತಿ ಬೇಕು ಅಂತ. ಆಗಲೇ ಕಾನೂನು ಪಂಡಿತರಿಗೆ ಗೊತ್ತಾಗಿದ್ದು ಆ ಕಾಯ್ದೆಯಲ್ಲಿ ಕೆಲ ಲೋಪಗಳಿವೆ ಅಂತ. ಹೀಗೆ ಒಬ್ಬ ಪ್ರಾಮಾಣಿಕ ವ್ಯಕ್ತಿಯೊಬ್ಬನಿಂದ ಕಾನೂನಿನ ಹುಳುಕು ಪತ್ತೆಯಾಯಿತು. ಕಾನೂನು ಪ್ರಕಾರವಾಗಿ ಆ ಮಾಹಿತಿಯನ್ನು ಸರಕಾರ ಆ ಮಹಾಶಯನಿಗೆ ಕೊಡಬೇಕಿತ್ತು. ಆದರೆ ಕೊಡಲಿಲ್ಲ. ಆದಕ್ಕೆ ಬದಲಾಗಿ ಲೋಪ ಸರಿಪಡಿಸಲು ಕಾಯ್ದೆಗೆ ತಿದ್ದುಪಡಿ ತರಲಾಯಿತು. 

3. ಪರೋಪಕಾರಿ ಕಾಪಿ ವೀರ
ಕೆಲ ಶಿಕ್ಷಣ ಸಂಸ್ಥೆಗಳ ತರಗತಿಗಳಲ್ಲಿ ಸ್ಪೀಕರ್‌ಗಳನ್ನು ಅಳವಡಿಸಿರುತ್ತಾರೆ. ಮುಖ್ಯೋಪಾಧ್ಯಾಯರು ಸೂಚನೆಗಳನ್ನು ನೀಡುವಾಗ, ಅದರ ಮೂಲಕವೆ ಘೋಷಿಸುತ್ತಾರೆ. ಇಂಥ ಸ್ಪೀಕರ್‌ಗಳನ್ನು ಅಳವಡಿಸಿದ್ದ ಮಲೇಷ್ಯಾದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಆಗ ಧ್ವನಿವರ್ಧಕ ಗೊರ ಗೊರ ಸದ್ದು ಮಾಡಿತು. ಪ್ರಶ್ನೆಪತ್ರಿಕೆ ಬೇರೆ ಕಠಿಣವಾಗಿದೆ. ಈ ಹೊತ್ತಿನಲ್ಲಿ ಮುಖ್ಯೋಪಾಧ್ಯಾಯರು ಯಾವ ವಿಚಾರ ತಿಳಿಸಲು ಹೊರಟಿದ್ದಾರಪ್ಪಾ ಅಂತ ವಿದ್ಯಾರ್ಥಿಗಳಿಗೆಲ್ಲಾ ತಲೆ ಕೆರೆದುಕೊಂಡರು. ಎಲ್ಲರಿಗೂ ಆಶ್ಚರ್ಯವಾಗುವಂತೆ ಅಲ್ಲಿ ಕೇಳಿಬಂದಿದ್ದು ಯಾವನೋ ವಿದ್ಯಾರ್ಥಿಯ ಧ್ವನಿ. ಆತ ಪ್ರಶ್ನೆಪತ್ರಿಕೆಯಲ್ಲಿ ನೀಡಲಾಗಿದ್ದ ಪ್ರಶ್ನೆಗಳಿಗೆ ಉತ್ತರಗಳನ್ನು ಡಿಕ್ಟೇಟ್‌ ಮಾಡುತ್ತಲೇ ಹೋದ. ವಿದ್ಯಾರ್ಥಿಗಳೆಲ್ಲರೂ ಸಂತೋಷದಿಂದ ಬರೆಯುತ್ತಲೇ ಹೋದರು. ತಾನು ಕಾಪಿ ಹೊಡೆಯದಿದ್ದರೂ ಇತರರೆಲ್ಲರೂ ಕಾಪಿ ಹೊಡೆಯಲಿ ಎನ್ನುವ ಉದಾತ್ತ ಮನಸ್ಸಿರುವವರೂ ಅಪರೂಪವೆ. ನಂತರ ವಿದ್ಯಾರ್ಥಿಗಳೆಲ್ಲರೂ ಮತ್ತೂಮ್ಮೆ ಪರೀಕ್ಷೆ ಬರೆಯಬೇಕಾಗಿ ಬಂದಿದ್ದು ಬೇರೆ ವಿಷಯ!

ನಿಮ್ಮ ಕಥೆಯನ್ನೂ ಕಳಿಸಿ
 ವಿದ್ಯಾರ್ಥಿ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಎಲ್ಲರೂ ಕಾಪಿ ಮಾಡಿರುತ್ತಾರೆ. ಆ ಸಂದರ್ಭದಲ್ಲಿ ಆದ ಭಯ, ಖುಷಿ, ರೋಮಾಂಚನ, ಸಂಕಟ ಮತ್ತು ಕಾಪಿ ಮಾಡಿದ್ದರಿಂದ ಆದ ಅನುಕೂಲ/ ಅನಾನುಕೂಲ, ಕಲಿತ ಪಾಠ… ಇವುಗಳನ್ನೆಲ್ಲಾ ನೆನಪು ಮಾಡಿಕೊಂಡು ಬರೆದು ಕಳಿಸಿ. ಅತ್ಯುತ್ತಮ ಬರಹಗಳನ್ನು ಜೋಶ್‌ನಲ್ಲಿ ಪ್ರಕಟಿಸುತ್ತೇವೆ. ನಿಮ್ಮ ಲೇಖನ- ಯೂನಿಕೋಡ್‌, ಶ್ರೀಲಿಪಿ, ನುಡಿ ಅಥವಾ ಬರಹ ಫಾಂಟ್‌ನಲ್ಲಿರಲಿ. ಬರಹ 150 ಪದಗಳ ಮಿತಿಯಲ್ಲಿರಲಿ. ನಮ್ಮ ಇಮೇಲ್‌ ವಿಳಾಸ:  josh@manipalmedia.com

Advertisement

– ಹರ್ಷವರ್ಧನ್‌, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next