ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಮಿತಿ ಮೀರುತ್ತಿದ್ದು, ಮಕ್ಕಳು ಸಹ ಹಾಳಾಗುತ್ತಿದ್ದಾರೆ. ಪೋಷಕರು ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಸಲಹೆ ನೀಡಿದರು.
ನಗರ ಹೊರವಲಯದ ಖಾಸಗಿ ಸಭಾಂಗಣದಲ್ಲಿ ಇ-ಟೆಕ್ನೋ ಶಾಲೆ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ವಾರ್ಷಿಕ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಊಟ, ನಿದ್ದೆ ಬಗ್ಗೆ ಪಾಲಕರು ಗಮನ ಹರಿಸಬೇಕು. ರಾತ್ರಿ ಹೊತ್ತು ಮೊಬೈಲ್ ಬಳಕೆಗೆ ಅವಕಾಶ ನೀಡಬಾರದು. ಊಟವಾದ ಬಳಿಕ ಮಕ್ಕಳು ಕಣ್ತುಂಬ ನಿದ್ದೆ ಮಾಡಬೇಕು.
ಆದರೆ, ಬಹಳ ಜನ ಮಕ್ಕಳು ತಡರಾತ್ರಿವರೆಗೂ ಮೊಬೈಲ್ ಬಳಕೆ ಮಾಡುತ್ತಾರೆ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ನಾವು ಬಳಸುವ ಯಾವುದೇ ರೀತಿಯ ತಂತ್ರಜ್ಞಾನ ಹಲವು ಅಡ್ಡಪರಿಣಾಮ ಹೊಂದಿರುತ್ತದೆ. ಹೀಗಾಗಿ ಮೊಬೈಲ್ ಬಳಕೆಯಿಂದಲೂ ಕೂಡ ಸಾಕಷ್ಟು ಅಡ್ಡ ಪರಿಣಾಮಗಳಿವೆ ಎಂಬುದನ್ನು ಪಾಲಕರು ಅರಿತು, ಮಕ್ಕಳು ಅತಿಯಾಗಿ ಮೊಬೈಲ್ ಬಳಸದಂತೆ ನಿಯಂತ್ರಿಸಬೇಕು ಎಂದರು.
ಶಾಲೆ ಆರಂಭವಾದಾಗಿನಿಂದ ಇಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. ಪಠ್ಯಪುಸ್ತಕ ಹೊರತಾಗಿ ಕಂಪ್ಯೂಟರ್ ಶಿಕ್ಷಣ, ತಾಂತ್ರಿಕ ಶಿಕ್ಷಣ ಒಂದನೇ ತರಗತಿಯಿಂದಲೇ ಕಲಿಸಲಾಗುತ್ತಿದೆ. ಇಲ್ಲಿನ ಶಿಕ್ಷಣ ಗುಣಮಟ್ಟ ಮಕ್ಕಳನ್ನು ನೋಡಿದರೆ ತಿಳಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Related Articles
ನಮ್ಮ ಮಕ್ಕಳು ಚೆನ್ನಾಗಿ ಓದಿ ದೇಶ ಕಟ್ಟಬೇಕು. ಸಂಸ್ಕೃತಿಯನ್ನು ರಕ್ಷಿಸಬೇಕು. ದೇಶದ ಕೀರ್ತಿಯನ್ನು ಹೆಚ್ಚಿಸಬೇಕು ಎಂದ ಶಾಸಕ ಜಿ.ಸೋಮಶೇಖರರೆಡ್ಡಿ, ಇಲ್ಲಿ ಓದುವ ವಿದ್ಯಾರ್ಥಿಗಳು ದೇಶದ ವಿವಿಧ ಉನ್ನತ ಸ್ಥಾನಗಳನ್ನು ಪಡೆಯಬೇಕು. ಆ ಮೂಲಕ ದೇಶದ ಉನ್ನತಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಬೆಂಗಳೂರಿನ ಸಂಪನ್ಮೂಲ ವ್ಯಕ್ತಿ ಜಗದೀಶ್ ಮಾತನಾಡಿ, ನಾರಾಯಣ ಸಂಸ್ಥೆ ವಿದ್ಯಾರ್ಥಿ ಐಐಟಿಯಲ್ಲಿ ಇದೇ ಮೊದಲ ಬಾರಿಗೆ ದೇಶಕ್ಕೆ ಮೊದಲ ರ್ಯಾಂಕ್ ಗಳಿಸಿದ್ದಾನೆ. ವಿದ್ಯಾರ್ಥಿಗಳು ಉತ್ತಮ ರ್ಯಾಂಕ್ ಗಳಿಸಲು ಶಿಕ್ಷಣ ಸಂಸ್ಥೆಯ ಕಲಿಕಾ ವಿಧಾನವಾಗಿದೆ ಎಂದು ತಿಳಿಸಿದರು.
ಉಪ ಪ್ರಾಚಾರ್ಯೆ ಸುಷ್ಮಾ ವಾರ್ಷಿಕ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮರಿಸ್ವಾಮಿರೆಡ್ಡಿ, ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಹನುಮಂತಪ್ಪ, ಬಿಜೆಪಿ ಮುಖಂಡ ವೀರಶೇಖರರೆಡ್ಡಿ, ಶಾಖೆಯ ಎಜಿಎಂ ಲವನ್ರೆಡ್ಡಿ, ಎಜಿಎಂ ಬಾಷಾ, ಪ್ರಾಚಾರ್ಯೆ ರಜನಿ ಸೇರಿ ಹಲವರು ಇದ್ದರು. ಶಾಲೆಯ ವಿನಾಯಕ ಸ್ವಾಗತಿಸಿದರು. ಶಿಕ್ಷಕಿ ಶಫಿಯಾ, ಅಮೃತಾ ನಿರೂಪಿಸಿದರು. ಬಳಿಕ 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದವು. ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡಲಾಯಿತು.