Advertisement

“ಜಿಲ್ಲೆಯಲ್ಲಿ ಕೀಟಜನ್ಯ ರೋಗಗಳು ನಿಯಂತ್ರಣದಲ್ಲಿ’

09:48 AM May 25, 2020 | mahesh |

ಉಡುಪಿ: ಜಿಲ್ಲೆಯಲ್ಲಿ ಕೀಟಜನ್ಯ ರೋಗಗಳು ನಿಯಂತ್ರಣದಲ್ಲಿವೆ. ರೋಗಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚಲು ಬೇಕಾದ ಎಲ್ಲ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಮತ್ತು ಆರೋಗ್ಯ ಅಧಿಕಾರಿ ಡಾ| ಪ್ರಶಾಂತ್‌ ಭಟ್‌ ತಿಳಿಸಿದರು.

Advertisement

ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಕೀಟಜನ್ಯ ರೋಗಗಳ ನಿಯಂತ್ರಣ ಕುರಿತ ಮಾಹಿತಿ ಕಾರ್ಯಾ ಗಾರದಲ್ಲಿ ಅವರು ಮಾತನಾಡಿದರು. 2012ರಲ್ಲಿ 2,217 ಇದ್ದ ಮಲೇ ರಿಯಾ ಪ್ರಕರಣಗಳು 2019 ರ ಡಿಸೆಂಬರ್‌ ಅಂತ್ಯದವರೆಗೆ 150 ಪ್ರಕರಣಗಳಿಗೆ (14 ಪಟ್ಟು) ಇಳಿಕೆ ಯಾಯಿತು. 2019ರ ಎಪ್ರಿಲ್‌ವರೆಗೆ 28 ಪ್ರಕರಣಗಳಿದ್ದರೆ 2020ರ ಎಪ್ರಿಲ್‌ವರೆಗೆ 17 ಪ್ರಕರಣಗಳಿವೆ ಎಂದು ಡಾ| ಪ್ರಶಾಂತ ಭಟ್‌ ತಿಳಿಸಿದರು.

“ಫೈಲೇರಿಯಾ ಮುಕ್ತ ಜಿಲ್ಲೆ’ ಗರಿ ನಿರೀಕ್ಷೆ
ಜಿಲ್ಲೆಯಲ್ಲಿ ಹಲವು ವರ್ಷ ಗಳಿಂದ ಸ್ಥಳೀಯವಾಗಿ ಫೈಲೇರಿಯಾ ಪ್ರಕರಣಗಳು ವರದಿಯಾಗಿಲ್ಲ. ಇನ್ನು ಎರಡು ವರ್ಷ ಪ್ರಕರಣ ದಾಖಲಾಗದೆ ಇದ್ದರೆ “ಫೈಲೇರಿಯಾ ಮುಕ್ತ ಜಿಲ್ಲೆ’ ಎಂಬ ಪ್ರಮಾಣಪತ್ರ ಉಡುಪಿ ಜಿಲ್ಲೆಗೆ ಸಿಗಲಿದೆ. ಆದರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಡಾ| ಪ್ರಶಾಂತ ಭಟ್‌ ತಿಳಿಸಿದರು.

2019ರ ಜುಲೈನಲ್ಲಿ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ 1,800 ಬೋಟುಗಳಲ್ಲಿ, ಒಣಮೀನು ತೊಟ್ಟಿಗಳಲ್ಲಿ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿ ಹೆಚ್ಚಾಗಿತ್ತು. ಸೆಪ್ಟೆಂಬರ್‌- ಅಕ್ಟೋಬರ್‌ನಲ್ಲಿ ಉಡುಪಿ ಶಿರಿಬೀಡು ವಾರ್ಡ್‌ ನಲ್ಲಿ ವಲಸೆ ಕಾರ್ಮಿಕರ ತಂಗುವಿಕೆ, ಹತ್ತಿರದಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡ ಕಾಮಗಾರಿಯಿಂದಾಗಿ ಹೆಚ್ಚು ಪ್ರಕರಣ ದಾಖಲಾಗಿತ್ತು. ಈಗ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದರು.

ಡೆಂಗ್ಯೂ ಪ್ರಕರಣ
2018ರಲ್ಲಿ 228 ಡೆಂಗ್ಯೂ, 2019ರಲ್ಲಿ 280 ಡೆಂಗ್ಯೂ ಪ್ರಕರಣಗಳಿದ್ದವು. 2019ರ ಎಪ್ರಿಲ್‌ ವರೆಗೆ 43 ಪ್ರಕರಣಗಳಿದ್ದರೆ 2020ರ ಎಪ್ರಿಲ್‌ ವರೆಗೆ 48 ಪ್ರಕರಣ ದಾಖಲಾಗಿವೆ. ಈಗ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದರು.

Advertisement

ಮೆದುಳು ಜ್ವರ
ವರ್ಷದಲ್ಲಿ ಮೆದುಳು ಜ್ವರದ ನಾಲ್ಕೈದು ಪ್ರಕರಣಗಳು ವರದಿಯಾಗುತ್ತಿವೆ. 2018ರಲ್ಲಿ 6 ಪ್ರಕರಣ, ಎರಡು ಸಾವು, 2019ರಲ್ಲಿ ಐದು ಪ್ರಕರಣ, ನಾಲ್ಕು ಸಾವು ಉಂಟಾಗಿತ್ತು. 2020ರ ಎಪ್ರಿಲ್‌ವರೆಗೆ 2 ಪ್ರಕರಣಗಳು ಕಂಡಿವೆ ಎಂದರು.  ರೋಗಗಳ ನಿಯಂತ್ರಣಕ್ಕೆ ಬೇಕಾದ ಟೆಸ್ಟ್‌ ಕಿಟ್‌, ಔಷಧಿ, ರಾಸಾಯನಿಕ, ಉಪಕರಣಗಳು ಸುಸ್ಥಿತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದಾಸ್ತಾನು ಇವೆ. ರೋಗಗಳು ನಿಯಂತ್ರಣದಲ್ಲಿದ್ದು ಆತಂಕ ಪಡುವ ಅಗತ್ಯವಿಲ್ಲ. ಆದರೂ ಯಾವುದೇ ರೀತಿಯ ಜ್ವರ, ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಕಂಡು ಬಂದರೆ ಕೂಡಲೇ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌, ಎಸ್ಪಿ ವಿಷ್ಣುವರ್ಧನ್‌, ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next