Advertisement

ಶೀಘ್ರ ಮರಣೋತ್ತರ ವರದಿ ನಿರೀಕ್ಷೆ ; ಪೊಲೀಸರಿಗೆ ಮಹತ್ವದ ದಾಖಲೆ ಲಭ್ಯ

01:31 AM Apr 19, 2022 | Team Udayavani |

ಉಡುಪಿ: ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದ ತನಿಖೆ ರಾಜ್ಯದ ಮೂಲೆ ಮೂಲೆಗಳಲ್ಲಿ ಚುರುಕು ಪಡೆದುಕೊಂಡಿದೆ.

Advertisement

ಪಾಟೀಲ್‌ ಸಂಚರಿಸಿದ್ದ ವಿವಿಧ ಜಿಲ್ಲೆಗಳ ಸಹಿತ ಉಡುಪಿಯಲ್ಲಿಯೂ ತನಿಖೆ ತೀವ್ರಗೊಂಡಿದೆ. ಪ್ರಮೋದ್‌ ಕುಮಾರ್‌ ನೇತೃತ್ವದಲ್ಲಿ ನಡೆಯುತ್ತಿ ರುವ ತನಿಖೆಯಲ್ಲಿ ಮಹತ್ವದ ದಾಖಲೆಗಳು ಲಭಿಸಿವೆ ಎನ್ನಲಾಗಿದೆ. ಪ್ರಕರಣ ದ ತೀವ್ರತೆ ಹೆಚ್ಚಿರುವ ಕಾರಣ ಸ್ವತಃ ಎಡಿಜಿಪಿ ಪ್ರತಾಪ್‌ ರೆಡ್ಡಿ ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಲಾಡ್ಜ್ ನಲ್ಲಿ ಸೋಮವಾರ 2ನೇ ಸುತ್ತಿನ ತನಿಖೆ ಆರಂಭ ಗೊಂಡಿದೆ. ತನಿಖಾಧಿಕಾರಿಗಳು ಅಲ್ಲಿನ ಸಿಬಂದಿಯನ್ನು ಹಲವು ಸುತ್ತಿನ ವಿಚಾರಣೆ ನಡೆಸಿದರು. ಪಾಟೀಲ್‌ ಜತೆಗೆ ಬಂದಿದ್ದ ಗೆಳೆಯರಾದ ಪ್ರಶಾಂತ್‌ ಶೆಟ್ಟಿ ಹಾಗೂ ಸಂತೋಷ್‌ ಮೇದಪ್ಪ ನೀಡಿರುವ ಹೇಳಿಕೆಗಳನ್ನು ಪೊಲೀಸರು ತಾಳೆ ಹಾಕುತ್ತಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಕೊಠಡಿ ಹಾಗೂ ಸ್ನೇಹಿತರು ತಂಗಿದ್ದ ಕೊಠಡಿಯಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಪ್ರಮುಖ ಸಾಕ್ಷಿಗಳಾದ ಸಿಸಿಟಿವಿ ಫೂಟೇಜ್‌ಗಳನ್ನು ಪ್ರಕರಣ ಅರಿವಿಗೆ ಬಂದ ತತ್‌ಕ್ಷಣವೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆ ರಾಜೇಶ್‌ ಎಂಬ ಹೆಸರಿನ ವ್ಯಕ್ತಿಯ ಹೆಸರು ಉಲ್ಲೇಖವಾಗಿದ್ದು, ಈತ ಯಾರು ಈ ಪ್ರಕರಣದಲ್ಲಿ ಆತನ ಪಾತ್ರವೇನು ಎಂಬ ಬಗ್ಗೆ ಹಾಗೂ ಈ ಹೆಸರು ಕೇವಲ ಕಾಲ್ಪನಿಕವೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಸಿಸಿಟಿವಿ ಫೂಟೇಜ್‌ನಲ್ಲಿಯೂ ರಾಜೇಶ್‌ ಎಂಬ ವ್ಯಕ್ತಿ ಹೊಟೇಲ್‌/ ಕೊಠಡಿಗೆ ಬಂದಿದ್ದಾನೆಯೇ ಎಂಬ ಪರಿಶೀಲನೆ ಮುಂದುವರಿದಿದೆ. ಬ್ಯಾಗ್‌ನಲ್ಲಿದ್ದ ಎಲ್ಲ ದಾಖಲೆಗಳ ಸಹಿತ ಪಾಟೀಲ್‌ ಬಳಸುತ್ತಿದ್ದ ಮೊಬೈಲ್‌ ಅನ್ನು ಎಂಎಸ್‌ಎಲ್‌ ತಂಡ ವಶಕ್ಕೆ ಪಡೆದುಕೊಂಡಿದೆ.

Advertisement

ಮಹತ್ವದ ದಾಖಲೆಗಳು
ಲಾಡ್ಜ್ ನ ಕೊಠಡಿ ಸಂಖ್ಯೆ 207ರಲ್ಲಿ ತಂಗಿದ್ದ ಸಂತೋಷ್‌ ಪಾಟೀಲ್‌ ಶವದ ಪಕ್ಕದಲ್ಲಿ ಎರಡು ಬ್ಯಾಗ್‌ಗಳು ದೊರಕಿವೆ. ಅದರಲ್ಲಿ ಅನೇಕ ಮಹತ್ವದ ದಾಖಲೆಗಳಿವೆ. 10ಕ್ಕೂ ಅಧಿಕ ವಿವಿಧ ಬ್ಯಾಂಕ್‌ಗಳ ಚೆಕ್‌ಗಳು, ಎಟಿಎಂ ಕಾರ್ಡ್‌ಗಳು, ವಿವಿಧ ರಸ್ತೆ ಕಾಮಗಾರಿಯ ದಾಖಲೆಗಳು, ಅಪಾರ ಪ್ರಮಾಣದ ದೇವರ ಪ್ರಸಾದ ಪತ್ತೆಯಾಗಿವೆ. ದಾಖಲೆಗಳಲ್ಲಿ ಯಾವುದೇ ವರ್ಕ್‌ ಆರ್ಡರ್‌ ಅಥವಾ ಟೆಂಡರ್‌ ವಿವರಗಳು ಇರಲಿಲ್ಲ ಎನ್ನಲಾಗಿದೆ.

ಹೆಸರು ಬದಲಿಸಿದ ಲಾಡ್ಜ್ !
ಸಂತೋಷ್‌ ಸಾವನ್ನಪ್ಪಿದ ಶಾಂಭವಿ ಲಾಡ್ಜ್ ನ ಹೆಸರನ್ನು ಮಾಲಕರು ಬದಲಾಯಿಸಿದ್ದಾರೆ. ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಒಂದು ರೀತಿಯ ಸಂಚಲನ ಸೃಷ್ಟಿ ಮಾಡಿದ್ದ ಈ ಪ್ರಕರಣದಿಂದ ಲಾಡ್ಜ್ ನ ಹೆಸರಿಗೆ ಧಕ್ಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಲಾಡ್ಜ್ ನ ಹೆಸರನ್ನು ಬದಲಾಯಿಸಲು ಮಾಲಕರು ನಿರ್ಧರಿಸಿದ್ದು, ಅದರಂತೆ ಹೆಸರು ಬದಲಾವಣೆ ಮಾಡಲಾಗಿದೆ.

ಹಿಂಡಲಗಾ ಪಿಡಿಒ ವಿಚಾರಣೆ
ಬೆಳಗಾವಿ: ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಮೂರು ದಿನಗಳಿಂದ ಬೆಳಗಾವಿಯಲ್ಲಿಯೇ ಬೀಡು ಬಿಟ್ಟಿರುವ ಉಡುಪಿ ಠಾಣೆ ಇನ್‌ಸ್ಪೆಕ್ಟರ್‌ ಶರಣಗೌಡ ಪಾಟೀಲ ನೇತೃತ್ವದ ಪೊಲೀಸರ ತಂಡ ಸೋಮವಾರ ಹಿಂಡಲಗಾ ಗ್ರಾ.ಪಂ.ಗೆ ಭೇಟಿ ನೀಡಿ ಪಿಡಿಒ ವಸಂತಕುಮಾರಿ ಕೆ. ಅವರಿಂದ ಮಾಹಿತಿ ಪಡೆದುಕೊಂಡಿತು.

ಹಿಂಡಲಗಾ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 108 ಕಾಮಗಾರಿ ಗಳನ್ನು ನಡೆಸಿ 4 ಕೋಟಿ ರೂ.
ವೆಚ್ಚ ಮಾಡಿರುವ ಬಗ್ಗೆ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಹೇಳಿ ಕೊಂಡಿದ್ದರು.

ಗ್ರಾ.ಪಂ. ಅಧ್ಯಕ್ಷ ಗೈರು
ಅಧಿಕಾರಿಗಳ ತಂಡ ಬಂದಾಗ ಗ್ರಾಮ ಪಂಚಾಯತ್‌ ಅಧ್ಯಕ್ಷ ನಾಗೇಶ ಮನ್ನೋಳಕರ ಇರಲಿಲ್ಲ.

ನಾನಾ ಭಾಗಗಳಿಗೆ ತನಿಖಾ ತಂಡ
ಬ್ರಹ್ಮಾವರ, ಮಲ್ಪೆ, ಕುಂದಾಪುರ, ಮಣಿಪಾಲ ವೃತ್ತ ನಿರೀಕ್ಷಕರ ಮುಂದಾಳತ್ವದ 4, ತನಿಖಾಧಿಕಾರಿ ಪ್ರಮೋದ್‌ ನೇತೃತ್ವದ 1, ಕೋಟ ಎಸ್‌ಐ ಮಧು ನೇತೃತ್ವದ 1 ಮತ್ತು ನಗರ ಠಾಣೆ ಎಸ್‌ಐ ಮಹೇಶ್‌ ನೇತೃತ್ವದ 1 ತಂಡ ಹೀಗೆ ಒಟ್ಟು 7 ತಂಡಗಳು ಉಡುಪಿ ಸಹಿತ ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ತನಿಖೆ ನಡೆಸುತ್ತಿವೆ. ಪಾಟೀಲ್‌ ತಂದಿದ್ದ ಎರಡು ಬ್ಯಾಗ್‌ಗಳನ್ನು ಮನೆಯವರು ಬಿಟ್ಟು ಹೋಗಿದ್ದಾರೆ. ತಮಗೆ ಬೇಕಾದ ದಾಖಲೆಗಳನ್ನು ವಶಕ್ಕೆ ಪಡೆದ ಪೊಲೀಸರು ಕೇವಲ ಬಟ್ಟೆಗಳನ್ನು ಲಾಡ್ಜ್ ನ ಲ್ಲಿಯೇ ಬಿಟ್ಟಿದ್ದಾರೆ. ತನಿಖಾ ತಂಡಗಳು ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ದಾವಣಗೆರೆ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಗೆ ತೆರಳಿವೆ. ಪಾಟೀಲ್‌ನ ಬ್ಯಾಂಕ್‌ ಖಾತೆಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next